Advertisement

Mysore Dasara; ಕನ್ನಡ ಭಾಷೆಗೆ ಮಿತಿಯಿದೆ, ಆದರೆ ಅದರ ಭಾವಕ್ಕೆ ಮಿತಿಯಿಲ್ಲ: ಹಂಸಲೇಖ

12:45 PM Oct 15, 2023 | Team Udayavani |

ಮೈಸೂರು: ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2023ಕ್ಕೆ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು ಕರ್ನಾಟಕ ಏಕೀಕರಣ ಆಗಿ 50 ವರ್ಷ ತುಂಬಿದೆ. ಹಾಗೆಯೇ ನನ್ನ ಕಲೆಯ ಕಾಯಕಕ್ಕೆ 50 ವರ್ಷಗಳು ತುಂಬಿದೆ. ನನ್ನ 50 ವರ್ಷಗಳ ಕಲಾ ಜೀವನದಲ್ಲಿ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನನ್ನ ಜೀವನದ ಅಮೂಲ್ಯ ಅವಕಾಶ. ನಾನು ಚಾಮುಂಡಿ ಬೆಟ್ಟದ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಉದ್ಘಾಟನೆಗೆ ಬಂದಿದ್ದೇನೆ. ಈ ಅವಕಾಶಕ್ಕೆ ಎಲ್ಲರಿಗೂ ನನ್ನ ನಮನಗಳು ಎಂದು ಸ್ಮರಿಸಿದರು.

ನಾನು ಹಚ್ಚಿದ್ದು ಕನ್ನಡ ದೀಪ, ಹಚ್ಚಿದ್ದು ನಾನೂ ಆದರೂ ಅದರ ಚೈತನ್ಯ ಈ ನಾಡಿನ ಹಿರಿಯರದ್ದು, ದಸರಾ ಎನ್ನುವುದು ಒಂದು ಜೀವಂತ ಕಥಾ ಕಾವ್ಯ. ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯ ಈ ದಸರಾ ಆಚರಣೆಗೆ ಕಥಾವಸ್ತು. ಈ ಜೀವಂತ ದಸರಾ ಮುಂದೆ ಮಹಾ ಕಾವ್ಯವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಕನ್ನಡದ ಭಾಷೆಗೆ ಮಿತಿಯಿದೆ ಆದರೆ ಅದರ ಭಾವಕ್ಕೆ ಮಿತಿಯಿಲ್ಲ. ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಕನ್ನಡದ ಶಾಂತಿ ಸಮೃದ್ಧಿಯನ್ನು ಹೆಚ್ಚಿಸಬೇಕು. ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಎಷ್ಟೋ ಜನರಿಗೆ ಕನ್ನಡ ಗೊತ್ತಿಲ್ಲ ಎಂಬ ಸಮೀಕ್ಷೆಯಾಗಿ, ಅವರಿಗೆ 30 ದಿನಗಳಲ್ಲಿ ಕನ್ನಡ ಕಲಿಸಿ, ಅವರಿಗೆ ಕನ್ನಡ ಪಟ್ಟ ಎಂಬ ಕಾರ್ಡ್ ನೀಡಬೇಕು. ಈ ಕಾರ್ಡ್ ಆಸ್ಪತ್ರೆ ಗಳಲ್ಲಿ ಬಿಪಿಎಲ್ ಕಾರ್ಡ್ ಗೆ ಸಿಗುವ ಸೌಲಭ್ಯಗಳು ಸಿಗಬೇಕು ಎಂದು ಕಾರ್ಪೊರೇಟ್ ಕಂಪನಿಗಳ ಕನ್ನಡಿಗರ ಒಂದು ತಂಡ ನನಗೆ ಸಲಹೆ ನೀಡಿ ಮನವಿ ಮಾಡಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಲು ಈ ಕಾರ್ಯ ಮಾಡುವಲ್ಲಿ ಮುಂದಾಗಬೇಕು. ಈ ಕಾರ್ಯದಲ್ಲಿ ನಾನು ಕೈ ಜೋಡಿಸುತ್ತೆನೆ. ಕುವೆಂಪು ಅವರು ಕನ್ನಡವನ್ನು ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next