Advertisement

ಮೂಲ ಆಶಯ ಮರೆತ ಕನ್ನಡ ವಿವಿ?

01:55 PM Nov 15, 2021 | Team Udayavani |

ಹೊಸಪೇಟೆ: ಕನ್ನಡ ಶ್ರೇಯೋಭಿವೃದ್ಧಿಗಾಗಿ ಜನ್ಮ ತಳೆದಿರುವ ಏಕೈಕ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ ಮೂಲ ಆಶಯವನ್ನು ಮರೆತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಕನ್ನಡ ವಿವಿಯ ಈಗಿನ ಕಾರ್ಯವೈಖರಿ ಬಗ್ಗೆ ಹೊರಗಿನವರು ಹೇಳುವುದಕ್ಕಿಂತ ಸ್ವತಃ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವೇ ಈ ಕುರಿತು ಚಕಾರವೆತ್ತಿದೆ.

ನ.11ರಂದು ಸಂಘದ ಸರ್ವ ಸದಸ್ಯರಿಗೆ ಮೂರು ಪುಟದ ಪತ್ರವನ್ನು ಬರೆದಿರುವ ಸಂಘದ ಅಧ್ಯಕ್ಷ ಡಾ| ವಾಸುದೇವ ಬಡಿಗೇರ ಮತ್ತು ಕಾರ್ಯದರ್ಶಿ ಡಾ| ವಿಠಲರಾವ್‌ ಗಾಯಕ್ವಾಡ ಅವರು, ವಿವಿಯಲ್ಲಿನ ಬೆಳವಣಿಗೆ ಕುರಿತು ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ನ.16ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಭುವನ ವಿಜಯ ಕಟ್ಟಡದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಪತ್ರದಲ್ಲಿ ಕೆಲ ಗಂಭೀರ ವಿಚಾರವನ್ನೂ ಎತ್ತಲಾಗಿದೆ. ಹಾಗಾಗಿ ಕನ್ನಡ ವಿವಿ ಸ್ಥಿತಿ ಸದ್ಯ ಸರಿಯಾಗಿಲ್ಲ ಎಂಬುದು ಈ ಪತ್ರದಿಂದಲೇ ತಿಳಿಯುತ್ತದೆ. ಅಖಂಡ ಕರ್ನಾಟಕದ ಪರಿಕಲ್ಪನೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ವಿಶ್ವಕೋಶ, ದೇವಾಲಯ ಕೋಶ, ಮಹಾಕಾವ್ಯ, ಚರಿತ್ರೆ, ಶಾಸನ ಸಂಪುಟಗಳಂಥ ಅನೇಕ ಯೋಜನೆಗಳನ್ನು ನಿರ್ವಹಿಸಿ ಪ್ರಕಟಿಸುತ್ತ ಬಂದಿದೆ.

ಇದುವರೆಗೂ ಬೆಳಕು ಕಾಣದ ಅಂಶಗಳನ್ನು, ನಿರ್ಣಯಕ್ಕೆ ಬರಲು ಸಾಧ್ಯವಾಗದ ಅನೇಕ ಸಮಸ್ಯೆಗಳನ್ನು ಸಂಶೋಧನೆಯ ಮೂಲಕ ಪರಿಹರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಮಾಜ ಮುಖಿಯಾದಂತಹ ಅನೇಕ ಯೋಜನೆಗಳನ್ನು, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಸಂಸ್ಕೃತಿ ಮತ್ತು ಪ್ರತಿಭಾವಂತ ವ್ಯಕ್ತಿಗಳನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತ ಬಂದಿದೆ. ಮೇಲಿನ ಅಂಶಗಳನ್ನು ಗಮನಿಸಿದಾಗ ಈಗ ಅವೆಲ್ಲವುಗಳು ಮರೆಯಾಗಿ ಸಾಧಾರಣ ಯೋಜನೆಯನ್ನೂ ನಿರ್ವಹಿಸುವಲ್ಲಿ ಪರದಾಡುವ ಪರಿಸ್ಥಿತಿಗೆ ತಲುಪಿದೆ. ನಾಡಿನ ಓದುಗರು, ವಿದ್ಯಾರ್ಥಿ-ಸಂಶೋಧಕರ ಆಸಕ್ತಿಯನ್ನು ಹೆಚ್ಚಿಸಿದ್ದ ಪ್ರಕಟಣೆಗಳೂ ನಿಂತು ಹೋಗಿವೆ. ನ್ಯಾಕ್‌ ಮಾನ್ಯತೆಯಲ್ಲಿ ”ಎ” ಶ್ರೇಣಿಯಲ್ಲಿದ್ದ ವಿಶ್ವವಿದ್ಯಾಲಯ “”ಬಿ” ಶ್ರೇಣಿಗೆ ತಲುಪಿದೆ. ಇದನ್ನು ಹೆಚ್ಚಿಸುವ ಭರವಸೆಯನ್ನೂ ಅಧ್ಯಾಪಕರು ಕಳೆದುಕೊಳ್ಳುವಂತಾಗಿದೆ.

Advertisement

ಇದರಿಂದ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬಂದಿದ್ದ ದೂರಶಿಕ್ಷಣ ನಿರ್ದೇಶನಾಲಯವೂ ಮಾನ್ಯತೆ ಕಳೆದುಕೊಳ್ಳುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಈ ಪತ್ರದಲ್ಲಿ ಕನ್ನಡ ವಿವಿ ನಿವೃತ್ತ ನೌಕರರ ಉಪಲಬ್ದಿಗಳ ಮೊತ್ತ ಪಾವತಿ, ಮರಣ ಹೊಂದಿದ ನೌಕರರ ಕುಟುಂಬಕ್ಕೆ ಅನುಕಂಪದ ನೌಕರಿ, ಸಹ ಪ್ರಾಧ್ಯಾಪಕರ ಮುಂಬಡ್ತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ನೇಮಕಾತಿ ಮುಂದೂಡಲು ಒತ್ತಾಯ: ಈ ನಡುವೆ ಅಧ್ಯಾಪಕರ ಸಂಘದಿಂದ ನ. 12ರಂದು ಕನ್ನಡ ವಿವಿ ಕುಲಸಚಿವ ಡಾ| ಸುಬ್ಬಣ್ಣ ರೈ ಅವರಿಗೆ ಮನವಿಪತ್ರ ಕೂಡ ಸಲ್ಲಿಸಲಾಗಿದೆ. ಕನ್ನಡ ವಿವಿ 2021ರ ಸೆಪ್ಟೆಂಬರ್‌ 3ರಂದು ಬೋಧಕ ಹುದ್ದೆಗಳ ನೇಮಕಾತಿಗೆ ಅಧಿ ಸೂಚನೆ ಪ್ರಕಟಿಸಿದ್ದು, ಸರ್ಕಾರದ ನಿಯಮದನ್ವಯ ಶೇ. 50ರ ನೇರ ಮೀಸಲಾತಿ ಮತ್ತು ಸಮತಲ ಮೀಸಲಾತಿ ಹಾಗೂ ಶೇ. 33 ಮಹಿಳಾ ಮೀಸಲಾತಿ ರೋಸ್ಟರ್‌ ಪಾಲನೆಯಾಗಿರುವುದಿಲ್ಲ. ಜೊತೆಗೆ ಯುಜಿಸಿ 2018ರ ನಿಯಮದಂತೆ ನೇಮಕಾತಿ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ. ಅದಕ್ಕೆ ಸಂಬಂಸಿದ ಕನ್ನಡ ವಿಶ್ವವಿದ್ಯಾಲಯ ಅ ಧಿನಿಯಮ 1991ರ ಅಡಿ ನೇಮಕಾತಿ ಪರಿನಿಯಮವು ಪ್ರಕಟವಾಗಿರುವುದಿಲ್ಲ. ಇಷ್ಟೆಲ್ಲ ಕ್ರಮಲೋಪಗಳಿದ್ದರೂ ನ. 15ರಂದು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಈಗ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣ ಈ ಪ್ರಕ್ರಿಯೆ ನಿಲ್ಲಿಸಲು ಕೈಗೊಳ್ಳುವಂತೆ ಒತ್ತಾಯಿಸಿದೆ.

ಪರೀಕ್ಷೆ ಮುಂದೂಡಿಕೆ : ಹಂಪಿ ಕನ್ನಡ ವಿವಿಯ ಬೋಧಕ ಹುದ್ದೆಗಳ ನೇಮಕಾತಿಗೆ ನ. 15ರಂದು ಲಿಖೀತ ಪರೀಕ್ಷೆ ನಿಗದಿಯಾಗಿತ್ತು. ಕಾರಣಾಂತರದಿಂದ ನೇಮಕಾತಿ ಹುದ್ದೆಗಳ ಲಿಖೀತ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಕುಲಸಚಿವ ಡಾ| ಸುಬ್ಬಣ್ಣ ರೈ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಕೋವಿಡ್‌ ಹಿನ್ನೆಲೆ ಹಂಪಿ ಕನ್ನಡ ವಿವಿಯಲ್ಲಿ ಆರ್ಥಿಕ ಸಂಕಷ್ಟ ನಡುವೆಯೂ ಮಹನೀಯರ ಜಯಂತಿಗಳನ್ನೇ ವಿಚಾರ ಸಂಕಿರಣಗಳನ್ನಾಗಿಸಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ವಿವಿಯಲ್ಲಿ ಸದ್ಯ ವಿದ್ಯುತ್‌ ಬಿಲ್‌ ಪಾವತಿಗೂ ಹಣವಿಲ್ಲ. ಹಾಗಾಗಿ ಅಕಾಡೆಮಿಕ್‌ಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ನೇಮಕಾತಿಯನ್ನು ನಿಯಮಾನುಸಾರ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪಾಲನೆ ಮಾಡಲಾಗುತ್ತಿದೆ. ∙ಡಾ| ಸ.ಚಿ. ರಮೇಶ, ಹಂಪಿ ಕನ್ನಡ ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next