Advertisement

Hallihole: ತಾಲೂಕು ಕೇಂದ್ರಕ್ಕೆ ಹೋಗಿ ಬರಲು 180 ಕಿ.ಮೀ. ಸಂಚಾರ

02:55 PM Aug 20, 2024 | Team Udayavani |

ಹಳ್ಳಿಹೊಳೆ: ಕುಂದಾಪುರ ತಾಲೂಕಿನಿಂದ ಪ್ರತ್ಯೇಕಗೊಂಡು ಬೈಂದೂರು ತಾಲೂಕಾಗಿ ರಚನೆಯಾದ ಬಳಿಕ ಅತೀ ಹೆಚ್ಚಿನ ಸಮಸ್ಯೆ ಅನುಭವಿಸಿದ್ದು ಹಳ್ಳಿಹೊಳೆ ಗ್ರಾಮಸ್ಥರು. ಕುಂದಾಪುರವಾದರೆ ಇವರಿಗೆ ಹೋಗಿ ಬರಲು ಸುಮಾರು 100 ಕಿ.ಮೀ. ದೂರ. ಆದರೆ ಬೈಂದೂರಿಗೆ ಹೋಗಿ ಬರಲು ಬರೋಬ್ಬರಿ 180 ಕಿ.ಮೀ. ದೂರ. ಹೋಗಲು ಸರಿಯಾದ ಬಸ್‌ ವ್ಯವಸ್ಥೆಯೂ ಇಲ್ಲ. ತಾಲೂಕು ಕೇಂದ್ರಕ್ಕೆ ಹೋಗಲು 3 ಬಸ್‌, ಬರಲು 3 ಬಸ್‌ ಒಟ್ಟು 6 ಬಸ್‌ ಹತ್ತಿಳಿಯುವ ಸ್ಥಿತಿ ಹಳ್ಳಿಹೊಳೆ ಗ್ರಾಮಸ್ಥರದ್ದಾಗಿದೆ.

Advertisement

ಹೊಸ ತಾಲೂಕು ರಚನೆಯಾಗಿ ಆರೇಳು ವರ್ಷ ಕಳೆದರೂ ಇನ್ನೂ ಹಳ್ಳಿಹೊಳೆಯಿಂದ ತಾಲೂಕು ಕೇಂದ್ರವಾದ ಬೈಂದೂರಿಗೆ ನೇರ ಬಸ್‌ ಸಂಪರ್ಕವನ್ನು ಕಲ್ಪಿಸಿಲ್ಲ. ಇಲ್ಲಿನ ಗ್ರಾಮಸ್ಥರು ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟವರೆಲ್ಲರಿಗೂ ಮನವಿ ಮಾಡಿದರೂ, ಇನ್ನೂ ಬಸ್‌ ಬೇಡಿಕೆ ಮಾತ್ರ ಈಡೇರಿಲ್ಲ.

ಹಳ್ಳಿಹೊಳೆಯನ್ನು ಕುಂದಾಪುರ ತಾಲೂಕಿನಿಂದ ಬೇರ್ಪಡಿಸಿ, ಬೈಂದೂರಿಗೆ ಸೇರ್ಪಡೆಗೊಳಿಸಿರುವುದಕ್ಕೆ ಆರಂಭದಿಂದಲೂ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಆದರೆ ವಿರೋಧದ ನಡುವೆಯೂ ಕುಂದಾಪುರಕ್ಕೆ ಹತ್ತಿರವಿದ್ದ ಹಳ್ಳಿಹೊಳೆ ಗ್ರಾಮವನ್ನು ಬೈಂದೂರಿಗೆ ಸೇರಿಸಲಾಗಿತ್ತು. ಗ್ರಾಮಸ್ಥರಿಗೆ ತಾಲೂಕು ಕೇಂದ್ರಗಳಿಗೆ ತೆರಳಲು ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡಬೇಕಾದುದು ಆಳುವ ವರ್ಗದವರ ಜವಾಬ್ದಾರಿಯಾಗಿದ್ದರೂ, ಈವರೆಗೆ ಯಾರೂ ಸಹ ಈ ಬಗ್ಗೆ ಗಮನವೇ ಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ಕೊಂಕಣ ಸುತ್ತಿ ಮೈಲಾರಕ್ಕೆ…ಕುಂದಾಪುರ ಸುತ್ತಿ ಬೈಂದೂರಿಗೆ!
ಹಳ್ಳಿಹೊಳೆಯಿಂದ ಬೈಂದೂರಿಗೆ ಹೋಗಬೇಕಾದರೆ ಮುದೂರು- ಜಡ್ಕಲ್‌- ಹಾಲ್ಕಲ್‌- ಗೋಳಿಹೊಳೆ ಮೂಲಕವಾಗಿ ಹೋಗಲು 45 ಕಿ.ಮೀ. ಹಾಗೂ ಬರಲು 45 ಕಿ.ಮೀ. ದೂರ ಒಟ್ಟು ಸೇರಿ 90 ಕಿ.ಮೀ. ದೂರವಾಗುತ್ತದೆ. ಆದರೆ ಈಗ ನೇರ ಬಸ್‌ ವ್ಯವಸ್ಥೆಯಿಲ್ಲದ ಕಾರಣ, 50 ಕಿ.ಮೀ. ದೂರದ ಕುಂದಾಪುರಕ್ಕೆ ಬಂದು, ಅಲ್ಲಿಂದ 40 ಕಿ.ಮೀ. ಸೇರಿ 90 ಕಿ.ಮೀ. ಹೋಗಲು, ಮತ್ತೆ 90 ಕಿ.ಮೀ. ವಾಪಾಸು ಬರಲು ಒಟ್ಟು 180 ಕಿ.ಮೀ. ಸಂಚರಿಸಬೇಕಾಗಿದೆ. ನೇರ ಬಸ್‌ನ ಸಂಚಾರ ಇಲ್ಲದೇ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಹೆಚ್ಚುವರಿಯಾಗಿ 80-90 ಕಿ.ಮೀ. ಸಂಚರಿಸಬೇಕಾದ ಅನಿವಾರ್ಯತೆಯಿದೆ.

ಪಡಿತರ, ಕೋರ್ಟ್‌, ಕಚೇರಿ…
ಹಳ್ಳಿಹೊಳೆ ಗ್ರಾಮಸ್ಥರು ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆಗಳಿಗೆ ಬೈಂದೂರಿನ ಆಹಾರ ಇಲಾಖೆಗೆ ಹೋಗಬೇಕು. ಅದು ಒಂದು ಸಲ ಹೋಗಿ ಬಂದರೆ ಸಾಕಾಗುವುದಿಲ್ಲ. ಕೆಲವೊಮ್ಮೆ 2-3 ಸಲವೂ ಹೋಗಿ ಬರಬೇಕಾದ ಪರಿಸ್ಥಿತಿ ಇರುತ್ತದೆ. ಇನ್ನು ತಾಲೂಕು ಕಚೇರಿ ಕೆಲಸಕ್ಕೂ ಅಲ್ಲಿಗೆ ಹೋಗಬೇಕು. ಕೋರ್ಟ್‌ ವಿಚಾರಕ್ಕೂ ಈಗ ಬೈಂದೂರಿಗೆ ಹೋಗಬೇಕಾಗಿದೆ. ಆರ್‌.ಟಿ.ಸಿ. ಸರ್ವೇ, ಖಾತಾ ಬದಲಾವಣೆ ಸೇರಿದಂತೆ ಎಲ್ಲದಕ್ಕೂ ತಾಲೂಕು ಕೇಂದ್ರಕ್ಕೆ ಬರಬೇಕಿದೆ. ಅಷ್ಟು ದೂರ ಹೋಗಿ ಬರಲು ಹೆಚ್ಚಿನ ಬಸ್‌ ಸೌಲಭ್ಯವಾದರೂ ಇದ್ದರೆ ತೊಂದರೆಯಿಲ್ಲ, ಆದರೆ ನೇರ ಬಸ್‌ ಸಂಚಾರವಿಲ್ಲ. ಕುಂದಾಪುರಕ್ಕೆ ಆದರೆ ಕೆಲವಾದರೂ ಬಸ್‌ಗಳು ನಿತ್ಯ ಸಂಚರಿಸುತ್ತವೆ.

Advertisement

ಕೆಎಸ್‌ಆರ್‌ಟಿಸಿ ಬಸ್‌ ಆರಂಭಿಸಿ
ಹಳ್ಳಿಹೊಳೆಯಿಂದ ಮುದೂರು- ಜಡ್ಕಲ್‌- ಹಾಲ್ಕಲ್‌ ಮೂಲಕ ಬೈಂದೂರಿಗೆ ಹತ್ತಿರವಿದೆ. ಆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ ಆರಂಭಿಸಿದರೆ ಒಟ್ಟಾರೆ 90 ಕಿ.ಮೀ. ಅಷ್ಟೇ ದೂರವಿರುವುದು. ಹೊಸದಾಗಿ 14 ರೂಟ್‌ಗಳಲ್ಲಿ ಪರ್ಮಿಟ್‌ ನೀಡಿದ್ದು, ಅದರಲ್ಲಿ ನಮ್ಮ ಹಳ್ಳಿಹೊಳೆ ಗ್ರಾಮದ ಹೆಸರೇ ಇರಲಿಲ್ಲ, ಅತೀ ಅಗತ್ಯ ಬೇಕಾಗಿರುವುದು ಇಲ್ಲಿಗೆ. ಆದಷ್ಟು ಬೇಗ ಬೈಂದೂರಿಗೆ ನೇರ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಳ್ಳಲಿ.
– ಪ್ರದೀಪ್‌ ಕೊಠಾರಿ, ಮಾಜಿ ಅಧ್ಯಕ್ಷರು, ಹಳ್ಳಿಹೊಳೆ ಗ್ರಾ.ಪಂ.

ಮನವಿ ಬಂದಿದ್ದು, ಪ್ರಕ್ರಿಯೆಯಲ್ಲಿದೆ
ಹಳ್ಳಿಹೊಳೆಯಿಂದ ಬೈಂದೂರಿಗೆ ನೇರ ಬಸ್‌ ಸಂಪರ್ಕಿಸುವ ಬೇಡಿಕೆ ಬಗ್ಗೆ ಗಮನದಲ್ಲಿದ್ದು, ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಆರ್‌ಟಿಒ ಅವರ ಗಮನಕ್ಕೂ ತರಲಾಗಿದೆ. ಹೊಸದಾಗಿ ಬಸ್‌ ಆರಂಭಿಸುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ.
– ಉದಯ ಕುಮಾರ್‌ ಶೆಟ್ಟಿ, ಕುಂದಾಪುರ ಡಿಪ್ಪೋ ಮ್ಯಾನೇಜರ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next