Advertisement

ಸರ್ಕಾರಿ ಸೌಲಭ್ಯ ಜನರಿಗೆ ತಲುಪಲಿ

03:16 PM Aug 01, 2019 | Naveen |

ಹಳಿಯಾಳ: ಮಾಜಿ ಶಾಸಕ ಸುನೀಲ್ ಹೆಗಡೆ ಮಿನಿ ವಿಧಾನಸೌಧಕ್ಕೆ ಬಿಜೆಪಿ ತಾಲೂಕಾಧ್ಯಕ್ಷ, ಪದಾಧಿಕಾರಿಗಳು, ಪುರಸಭೆ ಬಿಜೆಪಿ ಸದಸ್ಯರ ನಿಯೋಗದೊಂದಿಗೆ ದಿಢೀರ್‌ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದರು.

Advertisement

ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಹಶೀಲ್ದಾರ್‌ ಕಚೇರಿಗೂ ಭೇಟಿ ನೀಡಿ ತಾಲೂಕಾಡಳಿತದ ಅಧಿಕಾರಿಗಳೊಂದಿಗೆ ಕ್ಷೇತ್ರದ ಅಭಿವೃದ್ಧಿ, ಯೋಜನೆಗಳ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದರು.

ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಹಾಗೂ ಪ್ರಗತಿ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕರಿಂದ ಮಾಹಿತಿ ಪಡೆದರು.

ಕೇಂದ್ರ ಸರ್ಕಾರದ ಉಜ್ವಲಾ ಯೋಜನೆ ಪ್ರಗತಿ ಬಗ್ಗೆ ಹಾಗೂ ಆಯುಷ್ಮಾನ್‌ ಯೋಜನೆಯಡಿ ನೀಡಲಾಗುವ ಸ್ಮಾರ್ಟ್‌ ಕಾರ್ಡ್‌ಗಳನ್ನು ಜಿಲ್ಲಾ ಕೇಂದ್ರ ಕಾರವಾರದಲ್ಲಿಯೇ ನೀಡಲಾಗುತ್ತಿದ್ದು ಈ ಭಾಗದ ಜನರಿಗೆ ಕಾರ್ಡ್‌ಗಳು ದೊರೆಯದೆ ಸಮಸ್ಯೆ ಆಗುತ್ತಿರುವ ಕಾರಣ, ತಾಲೂಕು ಆಸ್ಪತ್ರೆಯಲ್ಲಿಯೇ ಸ್ಮಾರ್ಟ್‌ಕಾರ್ಡ್‌ ನೀಡುವಂತೆ ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಅವರಲ್ಲಿ ಆಗ್ರಹಿಸಿದರು.

ದಿನದಯಾಳ್‌ ಉಪಾಧ್ಯಾಯ ಹಾಗೂ ಸೌಭಾಗ್ಯ ಯೋಜನೆಯಡಿ ಗ್ರಾಮಾಂತರ ಭಾಗದವರಿಗೆ ಉಚಿತ ವಿದ್ಯುತ್‌, ಎಲ್ಇಡಿ ಬಲ್ಬ್ ನೀಡುವ ಕಾರ್ಯಕ್ಕೆ ವೇಗ ನೀಡುವಂತೆಯು ಕೋರಿದರು.

Advertisement

ಇನ್ನೂ ಫಸಲ್ಬಿಮಾ ಯೋಜನೆಯಡಿ ಎಷ್ಟು ಜನ ರೈತರಿಗೆ ವಿಮೆ ಮಾಡಲಾಗಿದೆ. ಪ್ರಗತಿ ಯಾವ ಹಂತದಲ್ಲಿದೆ ಎಂದು ಕೇಳಿದ ಹೆಗಡೆ, ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಸರ್ಕಾರದ ಪ್ರತಿಯೊಂದು ಯೋಜನೆ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ಪಟ್ಟಣದಿಂದ ಊರ ಹೊರಗೆ ಹೋಗುವ ಕೊಳಚೆ ನೀರನ್ನು ಶುದ್ಧೀಕರಣಗೊಳಿಸಿ ರೈತರ ಹೊಲಗಳಿಗೆ ನೀಡುವ ಬಗ್ಗೆ ಯೋಜನೆಯ ಪ್ರಸ್ತಾಪವನ್ನು ಬಿಜೆಪಿ ಚುನಾಯಿತ ಸದಸ್ಯರೊಂದಿಗೆ ತಾವು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದ ಅವರು ಹಳಿಯಾಳಕ್ಕೆ ಕೊಳಚೆ ನೀರು ಶುದ್ಧೀಕರಣ ಘಟಕದ ಅವಶ್ಯಕತೆ ಇದ್ದು ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಇನ್ನು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಾನೂನು ಬಾಹಿರವಾಗಿ ಅಕ್ರಮವಾಗಿ ಚಿಕನ್‌ ಅಂಗಡಿಗಳು ತಲೆ ಎತ್ತಿದ್ದು ಇದರಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತಿದ್ದು, ತಕ್ಷಣ ಒಂದು ಬದಿ ಅವುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರಿಗೆ ಹೇಳಿದರು.

ತಾಪಂ ಇಒ ಡಾ| ಮಹೇಶ ಕುರಿಯವರ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ, ಅಜೋಬಾ ಕರಂಜೆಕರ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ರೂಪಾ ಗಿರಿ, ಸಂಗೀತಾ ಜಾಧವ, ರಾಜೇಶ್ವರಿ ಹಿರೇಮಠ, ಮುಖಂಡರಾದ ಉಲ್ಲಾಸ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next