Advertisement

ಅರ್ಧ ತ್ರಯ ಮತ್ತರ್ಧ ತಾಪತ್ರಯ

09:17 AM May 13, 2019 | Lakshmi GovindaRaj |

“ಪ್ರಪಂಚದಲ್ಲಿ ಎಲ್ಲಿಯವರೆಗೆ ಮೋಸ ಹೋಗೋರು ಇರುತ್ತಾರೋ ಅಲ್ಲಿವರೆಗೂ ನಮ್ಮಂಥ ಮೋಸ ಮಾಡೋದು ಇದ್ದೇ ಇರ್ತಾರೆ…’ ಪೊಲೀಸ್‌ ಕಾನ್ಸ್‌ಟೆಬಲ್‌ ರಂಗಾಚಾರಿ ಹೀಗೆ ಹೇಳಿ ವಿಲಕ್ಷಣವಾಗಿ ನಗುತ್ತಿದ್ದರೆ, ಜೊತೆಗಿದ್ದವರು ಅವನಿಗೆ ಸಾಥ್‌ ನೀಡಿದ ಖುಷಿಯಲ್ಲಿ ವಿಕಟಕವಾಗಿ ನಗುತ್ತಿರುತ್ತಾರೆ. ಇದು ಈ ವಾರ ತೆರೆಗೆ ಬಂದಿರುವ “ತ್ರಯ’ ಚಿತ್ರದ ದೃಶ್ಯ. ಹಾಗಾದರೆ, ಇವರ ಈ ವಿಲಕ್ಷಣ, ವಿಕಟಕ ನಗುವಿಗೆ ಕಾರಣವೇನು ಅನ್ನೋದೇ “ತ್ರಯ’ ಚಿತ್ರದ ಕ್ಲೈಮ್ಯಾಕ್ಸ್‌.

Advertisement

ಪ್ರಕೃತಿಯಲ್ಲಿ ಕೀಟವನ್ನ ಹಲ್ಲಿ ತಿನ್ನುತ್ತೆ, ಹಲ್ಲಿ-ಇಲಿಯನ್ನ ಹಾವು ತಿನ್ನುತ್ತೆ, ಹಾವನ್ನ ಹದ್ದು ತಿನ್ನುತ್ತೆ… ಹೀಗೆ ಸಮಾಜದಲ್ಲಿ ದುರ್ಬಲರನ್ನ ಪ್ರಬಲರು ದೋಚುತ್ತಾರೆ, ಪ್ರಬಲರನ್ನ ಅವರಿಗಿಂತ ಪ್ರಬಲರು ದೋಚುತ್ತಾರೆ… ಇದು ಪ್ರಕೃತಿಯ ನಿಯಮ! ಇದೇ ನಿಯಮವನ್ನ ಸಿನಿಮಾದಲ್ಲಿ ಹೇಳಿದರೆ ಹೇಗಿರುತ್ತೆ ಅಂದ್ರೆ ಅದಕ್ಕೆ “ತ್ರಯ’ ಚಿತ್ರ ನೋಡಬಹುದು.

“ತ್ರಯ’ ಚಿತ್ರದ ಕಥಾಹಂದರದಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಂದ ಹತ್ತಾರು ಚಿತ್ರಗಳ ಹೂರಣ ಚಿತ್ರದುದ್ದಕ್ಕೂ ಕಾಣುತ್ತದೆ. ಅದರಲ್ಲೂ “ತ್ರಯ’ದ ಮೊದಲರ್ಧವಂತೂ ಪ್ರೇಕ್ಷಕರಿಗೆ ನಿಜಕ್ಕೂ ತಾಪ”ತ್ರಯ’. ಒಂದೊಮ್ಮೆ ನೇರವಾಗಿ, ಮತ್ತೂಮ್ಮೆ ಹಿಮ್ಮುಖವಾಗಿ ಸಾಗುವ ಸ್ಕ್ರೀನ್‌ ಪ್ಲೇನಲ್ಲಿ ಪ್ರೇಕ್ಷಕರ ಬುದ್ದಿವಂತಿಗೆ ಪರೀಕ್ಷಿಸುವ ಭರದಲ್ಲಿ, ನಿರ್ದೇಶಕರೇ ಜಾರಿದಂತಿದೆ.

ಹಾಗಾಗಿ ಎಲ್ಲಿಯೂ ಹಿಡಿತಕ್ಕೆ ಸಿಗದ ನಿರೂಪಣೆ ಅಲ್ಲಲ್ಲಿ ಜರ್ಕ್‌ ತೆಗೆದುಕೊಳ್ಳುತ್ತಾ ಹೋಗಿ ಮಧ್ಯಂತರಕ್ಕೆ ಬಂದು ನಿಲ್ಲುತ್ತದೆ. ಅಷ್ಟರಲ್ಲಾಗಲೇ ಪ್ರೇಕ್ಷಕರು “ತ್ರಯ’ದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಆದರೆ “ತ್ರಯ’ ಚಿತ್ರದ ಅಸಲಿ ಕಥೆ ಶುರುವಾಗುವುದೇ ದ್ವಿತೀಯಾರ್ಧದಲ್ಲಿ. ಆರಂಭದಲ್ಲಿ ಶಟಲ್‌ ಗಾಡಿಯಂತೆ ಸಾಗುವ “ತ್ರಯ’, ನಂತರ ಶತಾಬ್ಧಿ ವೇಗದಲ್ಲಿ ಸಾಗುತ್ತದೆ.

ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಇಟ್ಟು ನಿರ್ದೇಶಕರು ಪ್ರೇಕ್ಷಕರನ್ನು ಮರಳಿ ಟ್ರ್ಯಾಕ್‌ಗೆ ತರಲು ಪ್ರಯತ್ನಿಸುತ್ತಾರೆ. “ತ್ರಯ’ದಲ್ಲಿ ಬೇರೇನೋ ಇರಬಹುದು ಎಂದು ಮರಳಿ ಚಿತ್ರದತ್ತ ಚಿತ್ತ ಇಡುವ ಪ್ರೇಕ್ಷಕರಿಗೆ, ದ್ವಿತೀಯಾರ್ಧ ಓಡುವ ವೇಗಕ್ಕೆ ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ. ಒಟ್ಟಾರೆ ಸರಳ ಕಥೆಯಾದರೂ, ಅದರ ಮೇಲೆ ಇನ್ನಷ್ಟು ವರ್ಕೌಟ್‌ ಮಾಡಿದ್ದರೆ, “ತ್ರಯ’ವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ತರುವ ಎಲ್ಲಾ ಸಾಧ್ಯತೆಗಳೂ ನಿರ್ದೇಶಕರಿಗಿದ್ದವು. ಆದರೆ ಅದನ್ನು ಕೈ ಚೆಲ್ಲಿದ್ದಾರೆ.

Advertisement

ಇನ್ನು ಚಿತ್ರದಲ್ಲಿ ಮೂವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹುಡುಗರ ಅಭಿನಯ ಅಷ್ಟಕ್ಕಷ್ಟೇ. ಕೆಲ ಹಿರಿಯ ಕಲಾವಿದರು ನಿರ್ದೇಶಕರು ಹೇಳಿದ್ದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಅಷ್ಟೆ. ಉಳಿದವರದ್ದು ಪೇಲವ ಎನ್ನಬಹುದಾದ ಅಭಿನಯ. ಇನ್ನು ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರ ಆರ್‌.ಕೆ ಪ್ರತಾಪ್‌ ಛಾಯಾಗ್ರಹಣ ಚಿತ್ರದ ಮೆರುಗನ್ನ ಹೆಚ್ಚಿಸಿದೆ.

ಸಂಕಲನ ಇನ್ನಷ್ಟು ಮೊನಚಾಗಿದ್ದರೆ “ತ್ರಯ’ ತಾಪ”ತ್ರಯ’ ಎನ್ನುವುದು ತಪ್ಪುತ್ತಿತ್ತು. ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಎರಡೂ ದೃಶ್ಯಗಳಿಗೆ ಪೂರಕವಾಗಿಲ್ಲ. ಕೆಲ ತಪ್ಪು-ಒಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, “ತ್ರಯ’ದಲ್ಲಿ ಹೊಸಬರು, ಹೊಸರೀತಿ ಚಿತ್ರವನ್ನು ಕಟ್ಟಿಕೊಡಲು ಒಂದಷ್ಟು ಪ್ರಯತ್ನ ಹಾಕಿರುವುದಂತೂ ಕಾಣುತ್ತದೆ.

ಚಿತ್ರ: ತ್ರಯ
ನಿರ್ಮಾಣ: ಕುಶಾಲ್‌ ಮಹಾಜನ್‌, ರಾಜೇಂದ್ರನ್‌ (2 ಸ್ಟೇಟ್ಸ್‌ ಫಿಲಂಸ್‌)
ನಿರ್ದೇಶನ: ಕೃಷ್ಣ ಸಾಯಿ
ತಾರಾಗಣ: ಸಂಯುಕ್ತ ಹೊರನಾಡ್‌, ಶಂಕರ್‌ ಶ್ರೀಹರಿ, ರಜನಿ ಭಾರಧ್ವಾಜ್‌, ಮದನ್‌ ಗೌದ, ನೀತು ಬಾಲ, ನಿಮಿಷ, ಅಮೋಘ ರಾಹುಲ್‌ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next