Advertisement

ಅರ್ಧ ಶತಮಾನ ಗ್ರಂಥಾಲಯಕ್ಕಿಲ್ಲ ಸೂರು

12:07 PM Nov 11, 2019 | Team Udayavani |

ಬಾಗಲಕೋಟೆ: ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಲಕ್ಷಾಂತರ ಅತ್ಯುತ್ತಮ ಗ್ರಂಥಗಳನ್ನು ಹೊಂದಿರುವ “ಜಿಲ್ಲೆಯ ಅತ್ಯಂತ ಹಳೆಯ ಗ್ರಂಥಾಲಯ’ ಎಂದೇ ಖ್ಯಾತಿ ಹೊಂದಿದ ಜಿಲ್ಲಾ ಗ್ರಂಥಾಲಯದ ಹಳೆಯ ನಗರದ ಶಾಖಾ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಮಳೆ ಬಂದರೆ ಈಗಿರುವ ಕಟ್ಟಡ ಸೋರುತ್ತಿದ್ದು, ಇದರಿಂದ ಲಕ್ಷಾಂತರ ಮೊತ್ತದ ಪುಸ್ತಕಗಳು ಹಾಳಾಗುವ ಭೀತಿ ಎದುರಾಗಿದೆ.

Advertisement

ಅಖಂಡ ವಿಜಯಪುರ ಜಿಲ್ಲಾ ಕೇಂದ್ರವಾಗಿದ್ದಾಗ ಇಲ್ಲಿನ ಸರ್ವೋದಯ ವಾಚನಾಲಯದಲ್ಲಿ ಆರಂಭಗೊಂಡಿದ್ದ ಈ ಗ್ರಂಥಾಲಯ ಬಳಿಕ ಪ್ರತ್ಯೇಕವಾಗಿ ನಗರದ ಹಳೆಯ ಎಸಿ ಕಚೇರಿ ಎದುರಿನ ಜೆಡಿಎಸ್‌ ಕಚೇರಿ ಆವರಣದ ಹಳೆಯ ಕಟ್ಟಡದಲ್ಲೇ ನಡೆಯುತ್ತಿತ್ತು. ಬಳಿಕ ಎಂ.ಜಿ. ರಸ್ತೆಯ ಜನತಾ ಬಜಾರ್‌ ಬಳಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಹಳೆಯ ನ್ಯಾಯಾಲಯ ಸಂಕೀರ್ಣದ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲೇ ನಡೆಯುತ್ತಿದೆ.

ಜಿಲ್ಲೆಯ ಅತ್ಯಂತ ಹಳೆಯ ಗ್ರಂಥಾಲಯಗಳಲ್ಲಿ ಒಂದಾದ ಈ ಗ್ರಂಥಾಲಯ ಈವರೆಗೆ ನಾಲ್ಕೈದು ಕಟ್ಟಡಗಳಿಗೆ ಸ್ಥಳಾಂತರ ಗೊಂಡಿದ್ದಾಗಿದೆ. ಇದೀಗ ಜಿಲ್ಲಾ ನ್ಯಾಯಾಲಯ ಕಚೇರಿಗಳನ್ನು ನವನಗರಕ್ಕೆ ಸ್ಥಳಾಂತರಿಸಿದ ಬಳಿಕ ಖಾಲಿ ಉಳಿದಿದ್ದ ಲೋಕೋಪಯೋಗಿ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಲೋಕೋಪಯೋಗಿ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಈ ಕಟ್ಟಡವನ್ನು ಹಸ್ತಾಂತರಿಸಿಲ್ಲ. ಹೀಗಾಗಿ ತಾತ್ಕಾಲಿಕವಾಗಿಯೇ ನಡೆದಿದೆ.

ಹಲವು ಸಮಸ್ಯೆಗಳಿವೆ: ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕಿಂತಲೂ ಹೆಚ್ಚು ಓದುಗರನ್ನು ಆಕರ್ಷಿಸುವ ಈ ಗ್ರಂಥಾಲಯಕ್ಕೆ ಹಲವು ಸಮಸ್ಯೆಗಳಿವೆ. ನಾಲ್ವರು ಸಿಬ್ಬಂದಿ ಇರಬೇಕಾದ ಇಲ್ಲಿ ಮೂವರು ಸಿಬ್ಬಂದಿ ಇದ್ದಾರೆ. ಒಬ್ಬರು ಗ್ರಂಥಪಾಲಕರು, ಓರ್ವ ಅಟೆಂಡರ್‌ ಹಾಗೂ ಓರ್ವ ತಾತ್ಕಾಲಿಕ ಸಿಪಾಯಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ ಕಟ್ಟಡ ಇದಾಗಿದ್ದು, ಕಲ್ಲಿನಿಂದ ಕಟ್ಟಿದ ಸುಂದರ ಕಟ್ಟಡಗಳಿವೆ. ಈ ಕಟ್ಟಡದ ಕೆಳಗೆ ಸಮಾಜ ಕಲ್ಯಾಣ ಇಲಾಖೆ ತಾಲೂಕು ಕಚೇರಿ ಇದೆ. ಪಕ್ಕದಲ್ಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿದೆ. ಮುಖ್ಯವಾಗಿ ಹಳೆಯ ನಗರದಲ್ಲಿ ಈ ಗ್ರಂಥಾಲಯ ಇರುವುದರಿಂದ ವಸತಿ ನಿಲಯ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಿವಿವಿ ಸಂಘದ ಹಲವು ಕಾಲೇಜು ವಿದ್ಯಾರ್ಥಿಗಳು ಇಲ್ಲಿ ನಿತ್ಯವೂ ಓದಲು ಬರುತ್ತಾರೆ. ಸಾವಿರಾರು ವಿದ್ಯಾರ್ಥಿಗಳಿಗೆ, ನಿಯತಕಾಲಿಕೆ ಓದಲು ಹಲವು ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ ವೇದಿಕೆ ಇದಾಗಿದೆ.

ಸಾವಿರಾರು ಜನರಿಗೆ ಓದುಗರ ವೇದಿಕೆಯಾದ ಈ ಗ್ರಂಥಾಲಯದಲ್ಲಿ ಎರಡು ಕೊಠಡಿಗಳಿದ್ದು, ಒಂದು ಪತ್ರಿಕೆ ವಿಭಾಗ, ಇನ್ನೊಂದು ಪುಸ್ತಕಗಳ ವಿಭಾಗ ಮಾಡಲಾಗಿದೆ. ಆದರೆ ಪತ್ರಿಕೆಗಳ ವಿಭಾಗದಲ್ಲೂ ವಿದ್ಯಾರ್ಥಿಗಳು ಓದಲು ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಮುಖ್ಯವಾಗಿ ಹಳೆಯ ಕಟ್ಟಡ ಇದಾಗಿದ್ದರಿಂದ ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ. ಇದನ್ನು ದುರಸ್ತಿಗೊಳಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಅನುದಾನ ಬಂದಿಲ್ಲ. ಅನುದಾನ ಬರಬೇಕಾದರೆ ಸ್ವಂತ ಕಟ್ಟಡ ಇರಬೇಕು. ಪಿಡಬ್ಲ್ಯೂಡಿ ಇಲಾಖೆ, ಕಟ್ಟಡ ಹಸ್ತಾಂತರಿಸಿಲ್ಲ. ಹೀಗಾಗಿ ಹಲವು ಇಕ್ಕಟ್ಟುಗಳ ಮಧ್ಯೆಯೇ ಗ್ರಂಥಾಲಯ ಮುನ್ನಡೆದಿದೆ.

Advertisement

12 ಗಂಟೆ ಕಾರ್ಯ ನಿರ್ವಹಣೆ; 4514 ಜನ ಓದುಗ ಸದಸ್ಯರನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ 1.35 ಲಕ್ಷ ಗ್ರಂಥಗಳಿವೆ. ಇಲಾಖೆ ನಿಯಮ ಪ್ರಕಾರ, ಗ್ರಂಥಗಳ ವರ್ಗೀಕರಣ ಹಾಗೂ ಸೂಚೀಕರಣ ಮಾಡಬೇಕು. ಅದು ಇಲ್ಲಿ ಮಾಡಲಾಗಿಲ್ಲ. ವಿಷಯವಾರು ಗ್ರಂಥಗಳನ್ನು ಒಂದೆಡೆ ಹೊಂದಿಸಿಟ್ಟರೆ, ಓದುಗರಿಗೆ ಅನುಕೂಲ. ಓದುಗರ ಬಯಸುವ ಗ್ರಂಥಗಳು, ಒಂದೆಡೆ ಕೈ ಹಾಕಿದ ತಕ್ಷಣ ದೊರೆಯುತ್ತವೆ. ಆದರೆ ಸ್ಥಳಾವಕಾಶ ಕೊರತೆಯಿಂದ ವರ್ಗೀಕರಣ ಮಾಡಲಾಗಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ: ಗ್ರಂಥಾಲಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಓದಿಗೆ ಇದು ಬಹಳಷ್ಟು ಅನುಕೂಲವಾಗಿದೆ. ಇಬ್ಬರು ಸಿಬ್ಬಂದಿ ಪಾಳಿ ಲೆಕ್ಕದಲ್ಲಿ ಇಲ್ಲಿ ಕೆಲಸ ಮಾಡಬೇಕು. ಆದರೆ ಗ್ರಂಥಾಲಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬೆಲ್ಲ ವಿಚಾರಗಳಿದ್ದರೂ ಅದು ಸಾಧ್ಯವಾಗಿಲ್ಲ. ಸಿಬ್ಬಂದಿ ಹಾಗೂ ಸ್ವಂತ ಕಟ್ಟಡವಿಲ್ಲದ ಕಾರಣ, ಹಲವು ಸಮಸ್ಯೆ ಅನುಭವಿಸುತ್ತಿದೆ.

ನಮ್ಮ ಇಲಾಖೆಯ ಬಜೆಟ್‌ ಸಭೆ ಈಚೆಗೆ ಆಗಿದ್ದು, ಸಣ್ಣ-ಪುಟ್ಟ ದುರಸ್ತಿ ಕಾರ್ಯಕ್ಕೆ ಅನುದಾನ ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ಸೋರುತ್ತಿರುವ ಮಾಳಿಗೆ ದುರಸ್ತಿ, ಸುಣ್ಣ-ಬಣ್ಣ ಮಾಡಿಸಿ ಓದುಗರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಯೋಜನೆ ಇದೆ. ಖಜಾನೆ-2 ಸಮಸ್ಯೆಯಿಂದ ಸಿಪಾಯಿ ವೇತನ ವಿಳಂಬವಾಗಿದೆ. ಈವರೆಗೆ ಓಚರ್‌ ಅಡಿಯಲ್ಲಿ ವೇತನ ಕೊಡಲಾಗುತ್ತಿತ್ತು. ಇನ್ನು ಕೆ-2 ಮೂಲಕ ಅವರ ಖಾತೆಗೆ ಜಮೆಯಾಗಲಿದೆ. ಹೀಗಾಗಿ ತಡವಾಗಿದೆ. ಎಚ್‌.ಆರ್‌.ಜಾನನ್ನವರ, ಗ್ರಂಥಾಲಯ ಮೇಲ್ವಿಚಾರಕ, ಹಳೆಯ ನಗರ ಶಾಖೆ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next