Advertisement

ಸದ್ದಿಲ್ಲದೆ ಬಂದು ನಾಮಪತ್ರ ಸಲ್ಲಿಸಿದ ಹಾಲಾಡಿ

07:05 AM Apr 21, 2018 | Team Udayavani |

ಕುಂದಾಪುರ: ಮಾಜಿ ಶಾಸಕ, ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಗೆದ್ದಿರುವ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶುಕ್ರವಾರ ಕುಂದಾಪುರದ ಮಿನಿ ವಿಧಾನಸೌಧದದಲ್ಲಿ ಸದ್ದಿಲ್ಲದೆ ಬಂದು ಚುನಾವಣಾಧಿಕಾರಿ ಟಿ. ಭೂಬಾಲನ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಯಾವುದೇ ಅಬ್ಬರವಿಲ್ಲದೆ, ಹಾಲಾಡಿಯ ಮನೆಯಿಂದ ಕಾರಿನಲ್ಲಿ ನೇರವಾಗಿ ಬಂದ ಶ್ರೀನಿವಾಸ ಶೆಟ್ಟರು 5 ನೇ ಬಾರಿಗೆ ಚುನಾವಣೆಗೆ ನಿಂತಿದ್ದು, ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೆ ಮಿನಿ ವಿಧಾನಸೌಧಕ್ಕೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ನಾಯಕರು ಆಗಮಿಸಿದರು.

Advertisement

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಾಡಿಯವರು, ಕಾರ್ಯಕರ್ತರ ಒತ್ತಾಸೆಯಂತೆ ಮತ್ತೆ ಬಿಜೆಪಿ ಪಕ್ಷ ಸೇರಿ, ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈವರೆಗೆ ನಡೆದ ಪ್ರಚಾರ ಸಭೆಗಳಲ್ಲಿ ಯಾರೂ ಕೂಡ ಈ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ದೂರು ನೀಡಿಲ್ಲ. ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಸರಕಾರವಿದ್ದಾಗ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಈಗಿನ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರದ ಜನಪರ ಕೆಲಸಗಳ ಕುರಿತು ಜನರಿಗೆ ಕಾರ್ಯಕರ್ತರು ತಿಳಿಸುವಂತ ಕಾರ್ಯ ಮಾಡಿ ಎಂದು ಕರೆ ನೀಡಿದರು.

ಮೊದಲ ನಾಮಪತ್ರ ಸಲ್ಲಿಕೆ
ಎ. 17 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶಗಳಿದ್ದರೂ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಮೂಲಕ ಶುಕ್ರವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next