Advertisement

ಸಿದ್ದರಾಮಯ್ಯ ಅಪ್ಪಟ ಢೋಂಗಿವಾದಿ

09:49 AM Jul 29, 2017 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿಯೂ ಅಲ್ಲ. ಲೋಹಿಯವಾದಿಯೂ ಅಲ್ಲ. ಅಪ್ಪಟ ಢೋಂಗಿವಾದಿ ಎಂದು ಜೆಡಿಎಸ್‌ ಮುಖಂಡ ಎಚ್‌. ವಿಶ್ವನಾಥ್‌ ಲೇವಡಿ ಮಾಡಿದ್ದಾರೆ. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಮೈಸೂರಿಗೆ ಸಮಾಜವಾದಿ ಮುಖಂಡರಾದ ಜೆ.ಎಚ್‌. ಪಟೇಲ್‌, ಶಾಂತವೇರಿ ಗೋಪಾಲಗೌಡರನ್ನು ಕರೆದುಕೊಂಡು ಬಂದವನು. ಸಮಾಜವಾದಿ ಪಕ್ಷದ ಬಾವುಟ ಹಿಡಿದು ಓಡಾಡಿದವನು. ಒಮ್ಮೆಯೂ ಸಿದ್ದರಾಮಯ್ಯ ಸಮಾಜವಾದಿ ಬಾವುಟ ಹಿಡಿದಿದ್ದಾಗಲಿ, ಚಳವಳಿಯಲ್ಲಿ ಭಾಗವಹಿಸಿದ್ದಾಗಲಿ ನೋಡಿಯೇ ಇಲ್ಲ. ಅವರು ಸಮಾಜವಾದಿಯೂ ಅಲ್ಲ. ಲೋಹಿಯವಾದಿಯೂ ಅಲ್ಲ ಢೋಂಗಿವಾದಿ ಎಂದು ಮೂದಲಿಸಿದರು.

ಸಮಾಜವಾದಿಯಾಗಿದ್ದರೆ ಅಧಿಕಾರ ಕೊಟ್ಟಂತಹ ಜನರಿಗೆ ಮೋಸ ಮಾಡುವುದಿಲ್ಲ. ಸಮಾಜವಾದಿ ತತ್ವದ ಮುಖವೂ ಮುಗುಚಿ ಬೀಳುವುದಿಲ್ಲ. ಸಿದ್ದರಾಮಯ್ಯರನ್ನು ಮಂತ್ರಿ, ಉಪ ಮುಖ್ಯಮಂತ್ರಿ, ಜೆಡಿಎಸ್‌ ಅಧ್ಯಕ್ಷ ಮಾಡಿದ್ದು ದೇವೇಗೌಡರು. ಅಂತವರಿಗೆ ಮೋಸ ಮಾಡಿದರು. ಹಾಗಾಗಿ ನನಗೂ ಪ್ರಾರಂಭದಲ್ಲಿ ಸಿದ್ದರಾಮಯ್ಯ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅದಕ್ಕಾಗಿಯೇ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೋಮಾಂಚನಗೊಂಡಿದ್ದೆ. ಈಗ ಅವರು ಏನು ಎಂಬುದು ಗೊತ್ತಾಗಿದೆ. ಈಗ ಅವರದ್ದು ಅಧಿಕಾರದ ಕೊನೆಯ ದಿನಗಳು ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾಸು ನೋಡಿದ ಮೇಲೆಯೇ ಕೆಟ್ಟಿದ್ದು. ನಾನೇ ಒಮ್ಮೆ ಸಿದ್ದರಾಮಯನ್ನನ್ನೇ, ಎಲ್ಲಿ ಹೋದ ಆ ಡಿಸಿಎಂ ಆಗಿದ್ದ ಆ ಸಿದ್ದರಾಮಯ್ಯ… ಎಂದು ಕೇಳಿದ್ದೆ, ಸೋನಿಯಾ ಗಾಂಧಿ ಬಿಲ್‌ಕುಲ್‌ ಬೇಡ ಎಂದಾಗ ನಾನೇ ಅವರಿಗೆ ಮನವರಿಕೆ ಮಾಡಿ, ಕಾಂಗ್ರೆಸ್‌ಗೆ ಸೇರಿಸಿದೆ, ಮುಖ್ಯಮಂತ್ರಿಯಾಗಲು ಸಾಕಷ್ಟು ಪ್ರಯತ್ನವೂ ಪಟ್ಟೆ. ಆದರೆ, ಬೇಡವೆಂದರೂ ಕಾಂಗ್ರೆಸ್‌ಗೆ ಕರೆ ತಂದು, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆನೋ ಆತನಿಂದಲೇ ಕಾಂಗ್ರೆಸ್‌ ಬಿಡುವಂತಾಗಿದ್ದು ರಾಜಕೀಯ ಜೀವನದ ಅತ್ಯಂತ ನೋವಿನ ಮತ್ತು ಮಹತ್ತರ ತಿರುವಿನ ವಿಚಾರ ಎಂದು ಹೇಳಿದರು.

40 ವರ್ಷಗಳ ಕಾಲ ಕಾಂಗ್ರೆಸ್‌ ನನ್ನ ತಾಯಿ ಎಂದು ಹೇಳುತ್ತಾ ಆ ಪಕ್ಷದ ಪಥದಲ್ಲಿ ಸಾಗಿ ಬಂದವನು. ಎಂದಿಗೂ ಕಾಂಗ್ರೆಸ್‌ಗೆ ಸಣ್ಣ ದ್ರೋಹವನ್ನೂ ಮಾಡಿದವನಲ್ಲ. ಅಂತಹವನು ಪಕ್ಷ ಬಿಡಬೇಕಾಗಿ ಬಂದಿದ್ದು ಮನಸ್ಸಿಗೆ ಎಷ್ಟು ನೋವು ಉಂಟು ಮಾಡಿರಬಹುದು ಎಂದು ಜನರೇ ಯೋಚಿಸಬೇಕು ಎಂದು ಹೇಳಿದರು.  ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಮಾಧ್ಯಮದವರು ನನ್ನನ್ನು ಭೇಟಿ ಮಾಡಿ ಮೈಸೂರಿನಲ್ಲಿ ಸರ್ಕಾರಿ ಕಟ್ಟಡ ಕಟ್ಟಲು, ಜನರು ಮನೆ ಕಟ್ಟಿಕೊಳ್ಳಲೂ ಮರಳು ಸಿಗುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ನೀವು ಹೇಳಿದ್ದರಲ್ಲಿ ತಪ್ಪೇನು ಇಲ್ಲ… ಎಂಬ ಉತ್ತರ ನೀಡಿದ್ದೆ. ಅದನ್ನು ಯಾರೋ ಸಿದ್ದರಾಮಯ್ಯಗೆ ತಿಳಿಸಿದರು. ಹಿತ್ತಾಳೆ ಕಿವಿಯವರು ಎಲ್ಲಾ ಕೇಳಿದರು.  ಅಲ್ಲಿಂದಲೇ ನಮ್ಮಿಬ್ಬರ ಗೆಳೆತನದಲ್ಲಿ ಬಿರುಕು ಆರಂಭವಾಗಿ, ಕೊನೆಗೆ ಪಕ್ಷವನ್ನೇ ಬಿಡಬೇಕಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಕಾಂಗ್ರೆಸ್‌ ಬಿಟ್ಟ ನಂತರ ಖುದ್ದು ಯಡಿಯೂರಪ್ಪನವರೇ ಬಿಜೆಪಿ ಸೇರುವಂತೆ ಹೇಳಿದ್ದರು. ಹೈಕಮಾಂಡ್‌ನಿಂದಲೂ ಒತ್ತಡ ಇತ್ತು. ನಾನು ಅರಸುರವರ ಜೊತೆಗಿದ್ದ ಕಾಲದಿಂದಲೂ ಜಾತ್ಯತೀಯ ಮನೋಭಾವ ರೂಢಿಸಿಕೊಂಡು ಬಂದವನು. ಹಾಗಾಗಿಯೇ ಬಿಜೆಪಿಗೆ ಸೇರಲಿಲ್ಲ. ಜಾತ್ಯತೀತ ಮನೋಭಾವದ ಜೆಡಿಎಸ್‌ ಸೇರಿ, ಕಾಂಗ್ರೆಸ್‌ ಪಥ ಬಿಟ್ಟು ಈಗ ಕುಮಾರಪಥದಲ್ಲಿ ಸಾಗುತ್ತಿದ್ದೇನೆ ಎಂದು ತಿಳಿಸಿದರು.

ಹಿಂದಿ ಜನರು ಇರುವ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ ಇಲ್ಲಿನವರನ್ನ ಊಳಿಗದವರಂತೆ ನಡೆಸಿಕೊಂಡಿವೆ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡಳಿತ ನೀಡಲು ಬಿಡುವುದೇ ಇಲ್ಲ ಆ ಕಾರಣಕ್ಕೆ ರಾಜ್ಯದ ಭಾಷೆ, ನದಿ, ಗಡಿ ಉಳಿಸಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಬೇಕು ಎಂದು ಜೆಡಿಎಸ್‌ ಸೇರಿದ್ದೇನೆ. ಪ್ರಾದೇಶಿಕ ಪಕ್ಷಗಳ ಏಕೆ ಬಲಿಷ್ಟವಾಗಬೇಕು ಎಂಬ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಪರ್ಯಟನೆ ಪ್ರಾರಂಭಿಸಿದ್ದೇನೆ ಎಂದ ಅವರು ಹುಣಸೂರು ಕ್ಷೇತ್ರದಿಂದ ಕಣಕ್ಕೆ ಇಳಿಯುವೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ. ಬಸವರಾಜ್‌, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯೆ ಹೇಮಾವತಿ, ಯುವ ಜೆಡಿಎಸ್‌ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಟಿ. ದಾಸಕರಿಯಪ್ಪ, ಎಚ್‌.ಸಿ. ಗುಡ್ಡಪ್ಪ, ಗಣೇಶ್‌ ದಾಸಕರಿಯಪ್ಪ, ಕಡತಿ ತಿಪ್ಪೇಸ್ವಾಮಿ, ಟಿ. ಅಸರ್‌, ಶೀಲಾಕುಮಾರಿ, ಶ್ವೇತಾ ರಾಘವೇಂದ್ರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next