ಮೈಸೂರು: ಈಗ ರಾಜ್ಯ ಸಚಿವ ಸಂಪುಟ ಹೆಚ್ಚು ಕಡಿಮೆ ಪರಿಪೂರ್ಣವಾಗಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು.
ಈಗ ಏನಿದ್ದರೂ ಎಲ್ಲರೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿಯಬೇಕಾದ ಪರ್ವಕಾಲವಾಗಿದೆ. ಎಲ್ಲರೂ ರಾಜ್ಯದ ಅಭಿವೃದ್ಧಿಗೆ ದುಡಿಯಲಿ ಎಂದು ವಿಶ್ವನಾಥ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲ ನಾಯಕರು ಗೈರಾದ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ಬರದಿರುವವರನ್ನು ಕೇಳಿ. ಗಂಡ ಹೆಂಡತಿಯೇ ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ.ಯಾವಾಗಲೂ ತಬ್ಬಿಕೊಂಡೇ ಇರಲು ಆಗುತ್ತದೆಯಾ? ಎಂದು ಪ್ರಶ್ನಿಸಿದರು.
ಮಂತ್ರಿ ಪದವಿ ಬಗ್ಗೆ ಮಾತನಾಡಿದ ಅವರು, ನಾನು ಅನುಭವ ಪಡೆದಿದ್ದೇನೆ ಬಳಸಿಕೊಳ್ಳಿ ಎಂದು ಹೇಳಲು ಆಗುವುದಿಲ್ಲ. ನನ್ನ ಅನುಭವವನ್ನು ಮಂತ್ರಿಯಾಗಿ ಅಲ್ಲದೆಯೂ ಬಳಸಿಕೊಳ್ಳಬಹುದು. ಅನುಭವ ಏನಿದೆ ಎಂದು ಅವರು ಕರೆದು ಕೇಳಿದರೆ ಹೇಳಬಹುದು. ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರದಲ್ಲಿ ಅನುಭವ ಪಡೆದಿರುವವರನ್ನು ಬಳಸಿಕೊಳ್ಳಬೇಕು ಎಂದರು.
ಚುನಾವಣೆಯಲ್ಲಿ ಗೆದ್ದಿರುವ ಅನರ್ಹ ಶಾಸಕರು ಈಗಲೂ ಅನರ್ಹರೇ ಎಂಬ ಮಾಜಿ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಯಿಸಿದ ಅವರು, ಎಲ್ಲರೂ ಸಂವಿಧಾನದ ಅನುಸಾರವಾಗಿಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಜನರಿಂದ ಆದೇಶ ಪಡೆದು ಗೆದ್ದ ನಂತರವೇ ಮಂತ್ರಿಗಳಾಗಿದ್ದಾರೆ. ವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಪ್ರತಿಯೊಂದನ್ನು ಟೀಕೆ ಮಾಡುವುದಲ್ಲ. ಈ ರೀತಿ ಟೀಕಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರ ಮಾಡಿದಂತೆ ಎಂದ ಅವರು, ಎಲ್ಲರೂ ಹಣ ನೀಡಿ ಗೆದ್ದು ಬಂದಿದ್ದಾರೆಂಬುದರ ಅರ್ಥವೇನು? ಹಾಗಾದರೆ ಇವರೂ ಕೂಡ ಹಣ ನೀಡಿಯೇ ಗೆದ್ದು ಬಂದಿದ್ದಾರಾ ಎಂದು ಸಿದ್ದರಾಮಯ್ಯರನ್ನು ವಿಶ್ವನಾಥ್ ಪ್ರಶ್ನಿಸಿದರು.