Advertisement

ದೀಪಾಗೆ ಗಾಯವೇ ವೈರಿ

10:21 AM Feb 24, 2018 | |

ಬಡತನದಿಂದ ಬೆಳೆದ ಕ್ರೀಡಾ ಪ್ರತಿಭೆಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಬೇಕು, ಒಲಿಂಪಿಕ್ಸ್‌ ಪದಕ ಗೆಲ್ಲಬೇಕು ಅನ್ನುವ ಕನಸನ್ನು ಹೊತ್ತು ಹಗಲಿರುವ ಶ್ರಮಪಡುತ್ತಾರೆ. ಇಂಥ ಕನಸನ್ನು ಹೊತ್ತ ಕ್ರೀಡಾಪ್ರತಿಭೆಗಳಿಗೆ ಒಬ್ಬ ದೊಡ್ಡ ವೈರಿ ಇದ್ದಾನೆ. ಆತನ ಕೆಂಗಣ್ಣು ಬಿದ್ದರೆ, ಎಂತಹ ದಿಗ್ಗಜ ಕ್ರೀಡಾಪಟುಗಳಾದರೂ ಹಣ್ಣು ಕಾಯಿ ನೀರು ಕಾಯಿ ಆಗುತ್ತಾರೆ.
ಅಷ್ಟಕ್ಕೂ ಆತ ಯಾರು? ಬಡತನವೂ ಅಲ್ಲ, ಸಹ ಸ್ಪರ್ಧಿ, ಎದುರಾಳಿ ಕ್ರೀಡಾಪಟುಗಳೂ ಅಲ್ಲ. ಕ್ರೀಡಾಪಟುಗಳು ಅಭ್ಯಾಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಂತೆ, ಬಿಡುವಿಲ್ಲದೇ ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಕಾಟ ನೀಡುವ ಆ ವೈರಿಯೇ “ಗಾಯ’. ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಎಂಥ ಕ್ರೀಡಾಪಟುವಿಗೂ ಸುಲಭವಲ್ಲ. ಗಾಯದಿಂದ ಎಷ್ಟೋ ಕ್ರೀಡಾಪ್ರತಿಭೆಗಳ ವೃತ್ತಿ ಜೀವನವೇ ಅಂತ್ಯವಾಗಿದೆ. ಸದ್ಯ ಭಾರತದ ಜಿಮ್ನಾಸ್ಟಿಕ್‌ ತಾರೆ ದೀಪಾ ಕರ್ಮಾಕರ್‌ ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

Advertisement

ಅಲೆ ಸೃಷ್ಟಿಸಿದ ದೀಪಾ
ಭಾರತದಲ್ಲಿ ಜಿಮ್ನಾಸ್ಟಿಕ್‌ ಅಲೆಯನ್ನು ಸೃಷ್ಟಿಸಿದವರೇ ದೀಪಾ ಕರ್ಮಾಕರ್‌. ಅದು 2016ರ ರಿಯೋ ಒಲಿಂಪಿಕ್ಸ್‌. ಜಿಮ್ನಾಸ್ಟಿಕ್‌ ಕೂಟದಲ್ಲಿ ಪಾಲ್ಗೊಂಡ ಭಾರತದ ಏಕೈಕ ಸ್ಪರ್ಧಿ ದೀಪಾ ಆಗಿದ್ದರು. ಲೀಗ್‌ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 8ನೇಯವರಾಗಿ ಫೈನಲ್‌ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದರು. ದುರಾದೃಷ್ಟವಶಾತ್‌ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿದ್ದರಿಂದ 4ನೇ ಸ್ಥಾನಕ್ಕೆ ತೃಪ್ತರಾದರು. ಆದರೆ ಭಾರತೀಯರ ಹೃದಯ ಗೆಲ್ಲುವಲ್ಲಿ ದೀಪಾ ಯಶಸ್ವಿಯಾದರು.

ರಿಯೋ ಒಲಿಂಪಿಕ್ಸ್‌ನಲ್ಲಿ ದೀಪಾ ನೀಡಿದ ಪ್ರದರ್ಶನ ಭಾರತದಲ್ಲಿ ಜಿಮ್ನಾಸ್ಟಿಕ್‌ ಅಲೆಯನ್ನು ಸೃಷ್ಟಿಸಿದೆ. ದೇಶಾದ್ಯಂತ ವಿದ್ಯಾರ್ಥಿಗಳು ಜಿಮ್ನಾಸ್ಟಿಕ್‌ ತರಬೇತಿ ಸೇರ್ಪಡೆಯಾಗುತ್ತಿದ್ದಾರೆ. ಕ್ರೀಡಾಲೋಕದಲ್ಲಿ ಇಂಥದೊಂದು ಹೊಸ ಅಲೆಗೆ ಕಾರಣರಾದ ದೀಪಾ ಮೊಣಕಾಲು ಗಾಯದಿಂದ ತತ್ತರಿಸಿದ್ದಾರೆ. ಕಳೆದ ವರ್ಷವೇ ಶಸ್ತ್ರಚಿಕಿತ್ಸೆಗೆ ತುತ್ತಾಗಿದ್ದು, ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹೊರಗುಳಿಯಬೇಕಾಗಿದೆ.

2020ರ ಒಲಿಂಪಿಕ್ಸ್‌ಗೆ ಸಿದ್ಧರಾಗುತ್ತಾರಾ?
ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಕೈ ತಪ್ಪಿದಾಗ  ದೀಪಾಗೆ ಮುಂದಿನ ಕನಸು ಇದ್ದದ್ದು, ಟೊಕಿಯೋ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವ ಕನಸು. ಇದನ್ನು ಆಕೆ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ, “ಗಾಯ’ ದೀಪಾಳನ್ನು ಕಾಡಿಸುತ್ತಿದೆ. ಹೀಗಾಗಿ  ದೀಪಾ ಟೊಕಿಯೋ ಒಲಿಂಪಿಕ್ಸ್‌ಗೆ ಸಿದ್ಧರಾಗುತ್ತಾರಾ? ಎಂಬುದ ಹಲವರ ಪ್ರಶ್ನೆ. ಆಕೆಯ ಕೋಚ್‌ ಬಿಶ್ವೇಶ್ವರ ನಂದಿ, ದೀಪಾ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವರ್ಷ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿಯೇ ಸ್ಪರ್ಧೆ ನಡೆಸಲಿದ್ದಾರೆ ಎಂದಿದ್ದಾರೆ. ಅವರ ಮಾತು ನಿಜವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next