ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ವಾರಣಾಸಿಯ ಫಾಸ್ಟ್ಟ್ರ್ಯಾಕ್ ಕೋರ್ಟ್ ನ.17ಕ್ಕೆ ಕಾಯ್ದಿರಿಸಿದೆ.
ಸಿವಿಲ್ ನ್ಯಾ. ಮಹೇಂದ್ರ ಪಾಂಡೆ ಅವರು ಅರ್ಜಿಯ ವಿಚಾರಣೆ ನಡೆಸಿದ್ದು, ತೀರ್ಪು ದಿನಾಂಕವನ್ನು ಮುಂದೂಡಿದರು.
ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯವು, ಈ ಹಿಂದೆ ನ.8ರಂದು ತೀರ್ಪು ಕಾಯ್ದಿರಿಸಿತ್ತು. ನಂತರ ಪುನಃ ನ.14ರಂದು ಮುಂದೂಡಿತು. ಈಗ ಪುನಃ 17ಕ್ಕೆ ತೀರ್ಪು ಮುಂದೂಡಿದೆ.
ಜ್ಞಾನವಾಪಿ ಮಸೀದಿ ಆವರಣಕ್ಕೆ ಮುಸ್ಲಿಮರ ಪ್ರವೇಶ ನಿರ್ಬಂಧಿಸುವಂತೆ ಹಾಗೂ ಸನಾತನ ಸಂಘಕ್ಕೆ ಆವರಣವನ್ನು ಹಸ್ತಾಂತರಿಸಿ, ಶಿವಲಿಂಗದ ಪೂಜೆಗೆ ಅವಕಾಶ ನೀಡಬೇಕೆಂದು ಕೋರಿ ವಿಶ್ವ ವೇದಿಕ್ ಸನಾತನ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಸಿಂಗ್ ಮೇ 24ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.