Advertisement

10ದಿನದಲ್ಲಿ ಮೂವರಿಗೆ ಗುಂಡೇಟು

01:25 AM Jun 26, 2019 | Lakshmi GovindaRaj |

ಬೆಂಗಳೂರು: ಉತ್ತರ ಭಾರತದವರನ್ನೇ ಗುರಿಯಾಗಿಸಿಕೊಂಡು ದರೋಡೆ, ಸುಲಿಗೆ ಮಾಡುತ್ತಿದ್ದ ರೌಡಿಶೀಟರ್‌ಗೆ ಬಾಣಸವಾಡಿ ಪೊಲೀಸರು ಮಂಗಳವಾರ ಗುಂಡೇಟಿನ ರುಚಿ ತೋರಿಸಿದ್ದಾರೆ. ಈ ಘಟನೆಯಿಂದ 10 ದಿನದಲ್ಲಿ ಒಟ್ಟು ಮೂರು ಗುಂಡೇಟು ಪ್ರಕರಣಗಳು ಜರುಗಿದಂತಾಗಿದೆ.

Advertisement

ಬಾಗಲೂರು ನಿವಾಸಿ ಅಶೋಕ್‌ ಅಲಿಯಾಸ್‌ ಅರ್ಜುನ್‌(22) ಎಂಬಾತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆತನ ದಾಳಿಯಿಂದ ಹಲ್ಲೆಗೊಳಗಾದ ಕಾನ್‌ಸ್ಟೆಬಲ್‌ ಸೌದಾಗರ್‌ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ಕೈದು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಅಶೋಕ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು. 2016ರಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದ.

ಪರಿಣಾಮ ಇಬ್ಬರು ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆತನ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ಕೂಡ ತೆರೆಯಲಾಗಿತ್ತು.

ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ಭಾನುವಾರ ಮಧ್ಯಾಹ್ನ ಲಿಂಗಾರಾಜಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ನೆಹರ್‌ ಆಲಿ ಎಂಬುವರ ಮನೆಗೆ ನುಗ್ಗಿ ಚಾಕು ತೋರಿಸಿ ಒಂದು ಮೊಬೈಲ್‌, ಆರು ಸಾವಿರ ರೂ. ಕಸಿದುಕೊಂಡು, ಹೊರಭಾಗದಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು.

Advertisement

ನಂತರ ಮನೆ ಮಾಲೀಕರನ್ನು ಕೂಗಿ ಬಾಗಿಲು ತೆರೆಸಿಕೊಂಡಿದ್ದ ನೆಹರ್‌ ಅಲಿ, ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಬಾಸಣವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು.

ಈ ವೇಳೆ ಅರವಿಂದ್‌ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಅಶೋಕ್‌ ಬಗ್ಗೆ ಹೇಳಿಕೆ ನೀಡಿದ್ದ. ಈ ಸಂಬಂಧ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ಆರೋಪಿಯ ಬಲಗಾಲಿಗೆ ಗುಂಡು: ಎರಡು ದಿನಗಳಿಂದ ಆರೋಪಿ ಚಲವಲನಗಳ ಮೇಲೆ ನಿಗಾವಹಿಸಿದ್ದ ವಿಶೇಷ ತಂಡ ಸೋಮವಾರ ರಾತ್ರಿ 11.30ರ ಸುಮಾರಿಗೆ ಪುಲಕೇಶಿನಗರದ ಗಜೇಂದ್ರ ನಗರದಲ್ಲಿ ಅಡಗಿರುವ ಮಾಹಿತಿ ಸಂಗ್ರಹಿಸಿತ್ತು.

ನಂತರ ಇನ್‌ಸ್ಪೆಕ್ಟರ್‌ ವಿರೂಪಾಕ್ಷಸ್ವಾಮಿ ನೇತೃತ್ವದ ಎರಡು ತಂಡಗಳು ಆರೋಪಿಯನ್ನು ಬಂಧಿಸಲು ಹೋಗಿದ್ದು, ಪೊಲೀಸರನ್ನು ಕಂಡ ಆರೋಪಿ ಬೈಕ್‌ ಏರಿ ತಪ್ಪಿಸಿಕೊಂಡು ಓಡುತ್ತಿದ್ದ. ನಂತರ ಪೊಲೀಸ್‌ ವಾಹನದಲ್ಲಿ ಆರೋಪಿಯನ್ನು ಬೆನ್ನಟ್ಟಿದ್ದರು.

ಮಾರ್ಗ ಮಧ್ಯೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ವರ್ತುಲ ರಸ್ತೆಯಲ್ಲಿ ವೇಗವಾಗಿ ಬೈಕ್‌ ಚಾಲನೆ ಮಾಡುತ್ತಿದ್ದ ಆತ, ನಿಯಂತ್ರಣ ಕಳೆದುಕೊಂಡು ಕಸ್ತೂರಿನಗರ ಸಮೀಪದ ಮಣ್ಣಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಆಗ ಕಾನ್‌ಸ್ಟೆಬಲ್‌ ಸೌದಾಗರ್‌ ಆತನನ್ನು ಹಿಡಿಯಲು ಮುಂದಾಗಿದ್ದು,

ಆರೋಪಿ ತನ್ನ ಬಳಿಯಿದ್ದ ಡ್ಯಾಗರ್‌ನಿಂದ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಇನ್‌ಸ್ಪೆಕ್ಟರ್‌ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆತನಿಗೆ ಸೂಚಿಸಿದ್ದಾರೆ. ಆದರೂ ಆತ ಮತ್ತೂಮ್ಮೆ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪಿಐ ವಿರೂಪಾಕ್ಷಸ್ವಾಮಿ ಅಶೋಕನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಹಿಂದಿ ಭಾಷಿಕರೇ ಟಾರ್ಗೆಟ್‌: ಆರೋಪಿ ಅಶೋಕ್‌ ಹಿಂದಿ ಭಾಷಿಗರನ್ನೇ ಗುರಿಯಾಗಿಸಿಕೊಂಡು ದರೋಡೆ, ಸುಲಿಗೆ ಮಾಡುತ್ತಿದ್ದ. ಹಿಂದಿ ಮಾತನಾಡುವವರನ್ನು ಸುಲಿಗೆ ಮಾಡಿದರೆ ದೂರು ನೀಡುವುದಿಲ್ಲ ಎಂಬ ನಂಬಿಕೆ ಮೇಲೆ ಕೃತ್ಯ ಎಸಗುತ್ತಿದ್ದ. ಆದರೆ, ನೆಹರ್‌ ಅಲಿ ಮನೆ ಮಾಲೀಕರು ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೂವರು ರೌಡಿ ಶೀಟರ್‌ಗಳು: ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅಧಿಕಾರವಧಿಯಲ್ಲಿ ಬರೋಬರಿ 43ಕ್ಕೂ ಅಧಿಕ ಆರೋಪಿಗಳಿಗೆ ಗುಂಡೇಟಿನ ರುಚಿ ತೋರಿಸಿದ್ದ ನಗರ ಪೊಲೀಸರು, ಅಲೋಕ್‌ ಕುಮಾರ್‌ ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೇವಲ 10 ದಿನಗಳಲ್ಲೇ ಮೂವರು ರೌಡಿಶೀಟರ್‌ಗಳು, ಸುಲಿಗೆ ಹಾಗೂ ದರೋಡೆಕೋರರಿಗೆ ಗುಂಡಿನ ರುಚಿ ತೋರಿಸುತ್ತಿದ್ದಾರೆ.

ಜೂನ್‌ 23(ಭಾನುವಾರ) ಸಿಸಿಬಿ ಪೊಲೀಸರು ಶಿವಾಜಿನಗರ ರೌಡಿಶೀಟರ್‌ ಅಮಿರ್‌ ಖಾನ್‌, ಜೂನ್‌ 24(ಸೋಮವಾರ) ಬ್ಯಾಟರಾಯನಪುರರ ಪೊಲೀಸರಿಂದ ಸುಲಿಗೆ, ದರೋಡೆಕೋರ ರಾಹುಲ್‌ ಹಾಗೂ ಜೂನ್‌ 25(ಮಂಗಳವಾರ) ಬಾಣಸವಾಡಿ ಪೊಲೀಸರಿಂದ ಅಶೋಕ್‌ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next