Advertisement

ಗುಂಡ್ಲುಪೇಟೆ :ಮೀಟರ್ ಬಡ್ಡಿ ಕಿರುಕುಳ; ಯುವಕ ನೇಣಿಗೆ ಶರಣು

04:37 PM Jul 09, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಮೀಟರ್ ಬಡ್ಡಿ ಕಿರುಕುಳಕ್ಕೆ ಹೆದರಿ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ನಡೆಸಿದೆ.

Advertisement

ಪಟ್ಟಣದ ನಿವಾಸಿ ಕಾರ್ತಿಕ್(31) ಮೀಟರ್ ಮಾಫಿಯಾಗೆ ಸಿಲುಕಿ ನೇಣಿಗೆ ಶರಣಾದ ಯುವಕ. ಈತ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ.

ಘಟನೆ ವಿವರ
ಮೃತ ಕಾರ್ತಿಕ್ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಹಿನ್ನೆಲೆ ಮೀಟರ್ ಬಡ್ಡಿದಾರರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಹಣಕ್ಕಿಂತಲೂ ದುಪ್ಪಟ್ಟು ಬಡ್ಡಿ ಏರಿದ ಕಾರಣಕ್ಕೆ ಹಣ ಕೊಡುವಂತೆ ಶುಕ್ರವಾರ ರಾತ್ರಿ ಈತನ ಮನೆಯ ಮುಂದೆ ಬಂದು ಸಾಲ ನೀಡಿದವರು ತಗಾದೆ ತೆಗೆದು ಗಲಾಟೆ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಬೇಸತ್ತ ಯುವಕ ಕಾರ್ತಿಕ್ ಮನನೊಂದು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಡೆತ್ ನೋಟ್ ಆಧಾರ ಹಾಗೂ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ಪ್ರದೀಪ್, ರವಿ, ಸುಭಾಷ್, ನಂದಿ ಎಂಬ ನಾಲ್ವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂರು ಮಂದಿ ತಲೆ ಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಕಾರ್ತಿಕ್ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next