Advertisement

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

12:23 PM Apr 23, 2024 | Team Udayavani |

ಕೆನಡಾದ ಟೊರಂಟೊದಿಂದ ಸೋಮವಾರ ಬೆಳಗ್ಗೆ ಭಾರತಕ್ಕೊಂದು ಶುಭ ಸಮಾಚಾರ ಬಂತು. ಡಿ.ಗುಕೇಶ್‌ ಕ್ಯಾಂಡಿಡೇಟ್ಸ್‌ ಚೆಸ್‌ ಪ್ರಶಸ್ತಿಯನ್ನು ಗೆದ್ದು, ವಿಶ್ವಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. 2023ರಲ್ಲಿ ಆರ್‌.ಪ್ರಜ್ಞಾನಂದ ಚೆಸ್‌ ವಿಶ್ವಕಪ್‌ ಫೈನಲ್‌ಗೇರಿದ, ಭಾರತದ ಕೇವಲ 2ನೇ ಆಟಗಾರ ಎನಿಸಿಕೊಂಡಿದ್ದರು. ಆಗವರು ಫೈನಲ್‌ನಲ್ಲಿ ಚೆಸ್‌ ದಂತಕಥೆ ಮ್ಯಾಗ್ನಸ್‌ ಕಾರ್ಲ್ಸ್ ನ್ ವಿರುದ್ಧ ಸೋತಿದ್ದರು.‌

Advertisement

ಈ ವರ್ಷ ಗುಕೇಶ್‌ ಇನ್ನೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೆಸ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಅತ್ಯಂತ ಕಿರಿಯ ಎಂಬ ಸಾಧನೆ ಅವರದ್ದು. ಜೊತೆಗೆ ಭಾರತದ ಚೆಸ್‌ ದಂತಕಥೆ ವಿಶ್ವನಾಥನ್‌ ಆನಂದ್‌ ನಂತರ, ಫೈನಲ್‌ಗೇರಿದ ಮೊದಲನೇ ಆಟಗಾರನೂ ಹೌದು. ಪ್ರಜ್ಞಾನಂದ (ವಿಶ್ವಕಪ್‌) ಮತ್ತು ಗುಕೇಶ್‌ (ವಿಶ್ವಚಾಂಪಿಯನ್‌ಶಿಪ್‌) ಇಬ್ಬರೂ ತಮ್ಮದೇ ರೀತಿಯಲ್ಲಿ ಅಸಾಮಾನ್ಯ ಸಾಧನೆ ಮಾಡಿ, ಭಾರತದ ಚೆಸ್‌ ಜಗತ್ತನ್ನು ಬೆಳಗಿದ್ದಾರೆ.

ಪ್ರಜ್ಞಾನಂದ ಕೇವಲ 18ನೇ ವಯಸ್ಸಿನಲ್ಲಿ, ಗುಕೇಶ್‌ 17ನೇ ವಯಸ್ಸಿನಲ್ಲಿ ಇಡೀ ವಿಶ್ವವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದರ ನಡುವೆ 29 ವರ್ಷದ ವಿದಿತ್‌ ಗುಜ್ರಾತಿ ಎಂಬ ಇನ್ನೊಬ್ಬ ಆಟಗಾರನೂ ತಮ್ಮ ಪ್ರತಿಭೆಯಿಂದ ಮಿಂಚಿದ್ದಾರೆ. ಇನ್ನು ಮಹಿಳಾ ಕ್ಯಾಂಡಿಡೇಟ್ಸ್‌ ಚೆಸ್‌ನಲ್ಲೂ ಭಾರತಕ್ಕೆ ಅತ್ಯಂತ ಭರವಸೆಯ ಸುದ್ದಿಗಳು ಬಂದಿವೆ. ಕೊನೆರು ಹಂಪಿ 2ನೇ ಸ್ಥಾನಿಯಾಗಿ ಕೂಟ ಮುಗಿಸಿದ್ದರೆ, ಪ್ರಜ್ಞಾನಂದ ಅವರ ಸಹೋದರಿ ಆರ್‌.ವೈಶಾಲಿ ಸತತ 5 ಜಯ ಪಡೆದಿದ್ದಾರೆ.

ಈ ಅಷ್ಟೂ ಸಾಧನೆಗಳು ಭಾರತದಲ್ಲಿ ಚೆಸ್‌ ಕ್ರೀಡೆಯನ್ನು ಯುವಕರು ಗಂಭೀರವಾಗಿ ತೆಗೆದುಕೊಂಡಿದ್ದರ ಸಂಕೇತವಾಗಿದೆ. ಹಾಗೆಯೇ ಎಲ್ಲ ರೀತಿಯ ಕ್ರೀಡೆಗಳೂ ಭಾರತದಲ್ಲಿ ಬೆಳೆಯುತ್ತಿವೆ ಎನ್ನುವುದನ್ನೂ ಖಾತ್ರಿಪಡಿಸಿವೆ. ಈ ಹಿಂದೆ ಚೆಸ್‌ ಅಂದರೆ ವಿಶ್ವನಾಥನ್‌ ಆನಂದ್‌ ಎನ್ನುವ ಕಾಲವಿತ್ತು. ಪ್ರಸ್ತುತ ಅಂತಹ ಪರಿಸ್ಥಿತಿಯಿಲ್ಲ. ನೂರಾರು ಪ್ರತಿಭಾವಂತ ಆಟಗಾರರ ಹೆಸರು ಈ ವಿಭಾಗದಲ್ಲಿ ಕೇಳಿ ಬರುತ್ತಿದೆ. ಇವರೆಲ್ಲ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಸಾಧಾರಣ ಆಟವನ್ನು ಆಡುತ್ತಿದ್ದಾರೆ.

ಚೆಸ್‌ನಲ್ಲಿ ಭಾರತಕ್ಕೆ ಅದ್ಭುತ ಭವಿಷ್ಯವಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಗುಕೇಶ್‌ ಮಾಡಿರುವ ಸಾಧನೆ ಸಾಮಾನ್ಯವಾದದ್ದಲ್ಲ. ಅವರ ವಯಸ್ಸನ್ನು ಪರಿಗಣಿಸಿದರೆ, ಈ ಸಾಧನೆಗೆ ಮತ್ತಷ್ಟು ತೂಕ ಬರುತ್ತದೆ. ಈ ವರ್ಷಾಂತ್ಯದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಅವರು ಚೀನಾದ ಡಿಂಗ್‌ ಲಿರೆನ್‌ರನ್ನು ಸೋಲಿಸಿದರೆ, ವಿಶ್ವವಿಜೇತರೇ ಆಗಲಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ 17ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್‌ ಚೆಸ್‌ ಪ್ರಶಸ್ತಿಯನ್ನು ಗೆಲ್ಲುವಾಗ ಅವರು, ಫ್ಯಾಬಿ ಯಾನೊ ಕರುವಾನ (ವಿಶ್ವ ನಂ.2), ಹಿಕಾರು ನಕಮುರ (ವಿಶ್ವ ನಂ.3) ಎದುರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಎಲ್ಲ ಮಾಹಿತಿಗಳು ಗುಕೇಶ್‌ ಹಾದಿ ಸಲೀಸಾಗಿರಲಿಲ್ಲ ಎನ್ನುವುದನ್ನು ಸೂಚಿಸುತ್ತವೆ. ಪ್ರಶಸ್ತಿ ಜಯಕ್ಕೂ ಮುನ್ನ ದೊಡ್ಡ ಸವಾಲುಗಳನ್ನು ಅವರು
ದಾಟಿರುವುದು, ಭಾರತದ ಯುವಶಕ್ತಿಯ ಸಂಕೇತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next