Advertisement

ನೀತಿ ಆಯೋಗದ ಪಟ್ಟಿ : ಜಲ ನಿರ್ವಹಣೆ: ಕರ್ನಾಟಕ ನಂ.4 ; ಗುಜರಾತ್‌ ನಂ.1

05:00 AM Jun 15, 2018 | Team Udayavani |

ಹೊಸದಿಲ್ಲಿ: ಜಲ ನಿರ್ವಹಣೆಯಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ ಗಳಿಸಿಕೊಂಡಿದೆ. ಇದೇ ಮೊದಲ ಬಾರಿಗೆ ವಿವಿಧ ರಾಜ್ಯಗಳಲ್ಲಿನ ಸಮರ್ಪಕ ಜಲ ನಿರ್ವಹಣ ವ್ಯವಸ್ಥೆಯ ಆಧಾರದಲ್ಲಿ ನೀತಿ ಆಯೋಗ ರ್‍ಯಾಂಕಿಂಗ್‌ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಗುಜರಾತ್‌ ಅಗ್ರಸ್ಥಾನದಲ್ಲಿದ್ದು, ಮಧ್ಯಪ್ರದೇಶ ದ್ವಿತೀಯ, ಆಂಧ್ರಪ್ರದೇಶ ತೃತೀಯ ಸ್ಥಾನಗಳಲ್ಲಿವೆ. ಮಹಾರಾಷ್ಟ್ರ 5ನೇ ಸ್ಥಾನ ಅಲಂಕರಿಸಿದೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಗುರುವಾರ ಈ ಪಟ್ಟಿ ಬಿಡುಗಡೆ ಮಾಡಿದರು. ಪ್ರತೀ ವರ್ಷ ರಾಜ್ಯಗಳ ಪ್ರಗತಿಯ ಪಟ್ಟಿ ಬಿಡುಗಡೆ ಮಾಡಲು ಆಯೋಗ ನಿರ್ಧರಿಸಿದೆ.

Advertisement

ಶ್ರೇಯಾಂಕಕ್ಕೆ ಆಧಾರ: ಜಲ ನಿರ್ವಹಣೆಯ ಬಗ್ಗೆ ಎಲ್ಲ ರಾಜ್ಯಗಳನ್ನೊಳಗೊಂಡ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿರುವುದು ಇದೇ ಮೊದಲು. ಅಂತರ್ಜಲ, ಜಲ ಸಂಪನ್ಮೂಲಗಳಿಗೆ ಮರುಪೂರಣ ವ್ಯವಸ್ಥೆ, ವ್ಯವಸಾಯ ಮಾದರಿಗಳು, ಕೃಷಿಯಲ್ಲಿ ನೀರಿನ ವೈಜ್ಞಾನಿಕ ಬಳಕೆ, ಕುಡಿಯುವ ನೀರಿನ ಲಭ್ಯತೆ, ಜಲ ಸಂರಕ್ಷಣೆಗಾಗಿ ಆಯಾ ರಾಜ್ಯ ಸರಕಾರಗಳು ರೂಪಿಸಿರುವ ನೀತಿ, ಉತ್ತಮ ಜಲ ನಿರ್ವಹಣೆಗಿರುವ ಆಡಳಿತ ವ್ಯವಸ್ಥೆಗಳನ್ನು ಕೂಲಂಕಷ ಪರಿಶೀಲಿಸಿ ಈ ಪಟ್ಟಿಯನ್ನು ನೀತಿ ಆಯೋಗ ತಯಾರಿಸಿದೆ. ಶ್ರೇಯಾಂಕ ನೀಡುವ ಮುನ್ನ ರಾಜ್ಯಗಳನ್ನು ‘ಈಶಾನ್ಯ ಮತ್ತು ಹಿಮಾಚಲ ರಾಜ್ಯಗಳು’ ಹಾಗೂ ‘ಇತರ ರಾಜ್ಯಗಳು’ ಎಂಬ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಈಶಾನ್ಯ ಮತ್ತು ಹಿಮಾಚಲ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ ಮೊದಲ ಸ್ಥಾನ ಪಡೆದಿದ್ದರೆ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ಅನಂತರದ ಸ್ಥಾನದಲ್ಲಿವೆ. 2015-16ನೇ ಸಾಲಿನ ಜಲ ನಿರ್ವಹಣೆ ವ್ಯವಸ್ಥೆಗೆ ಹೋಲಿಸಿದರೆ, 2016-17ನೇ ಸಾಲಿನಲ್ಲಿ ಸುಧಾರಣೆ ತೋರಿರುವ ರಾಜ್ಯಗಳ ಪಟ್ಟಿಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನ ಗಳಿಸಿದೆ. 

ಝಾರ್ಖಂಡ್‌, ಹರಿಯಾಣದಲ್ಲಿ ಪರಿಸ್ಥಿತಿ ಕಠಿನ
ನೀರು ನಿರ್ವಹಣೆಯಲ್ಲಿ ಝಾರ್ಖಂಡ್‌, ಹರಿಯಾಣ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳ ಸಾಧನೆ ಏನೇನೂ ತೃಪ್ತಿಕರವಾಗಿಲ್ಲ ಎಂದು ಆಯೋಗ ಹೇಳಿದೆ. ಸದ್ಯ ಭಾರತದಲ್ಲಿ ಸುಮಾರು 60 ಕೋಟಿ ಮಂದಿಗೆ ನೀರಿನ ಸಂಪರ್ಕದ ಕೊರತೆ ಇದೆ. 2030ರ ವೇಳೆಗೆ ಈಗ ಅಗತ್ಯವಿರುವ ಎರಡು ಪಟ್ಟು ಹೆಚ್ಚು ನೀರಿನ ಅಗತ್ಯ ಉಂಟಾಗುತ್ತದೆ. ಜತೆಗೆ ಸದ್ಯ ಹಿಂದೆಂದೂ ಕಾಣದ ನೀರಿನ ಕೊರತೆ ದೇಶದ ಜನರಿಗೆ ಕಾಡುತ್ತಿದೆ ಎಂದಿದೆ ಆಯೋಗ.

Advertisement

Udayavani is now on Telegram. Click here to join our channel and stay updated with the latest news.

Next