Advertisement

ಹೈನುಗಾರರ ಕೈ ಹಿಡಿದ ಗುಜರಾತ್‌ ಮಾದರಿಯ ಕ್ಷೀರ ಕ್ರಾಂತಿ

01:40 AM Feb 21, 2020 | Sriram |

ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಅವರ ಮೂಲಕವಾಗಿ ಗುಜರಾತ್‌ನಲ್ಲಿ ಹಾಲು ಉದ್ಯಮ ಯಶಸ್ವಿಯಾಗಿ ಬೆಳೆಯುತ್ತಿದ್ದ ಕಾಲವದು. ಅಲ್ಲಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದ ಸ್ಥಳೀಯ ದೇವದಾಸ್‌ ಶೆಟ್ಟಿ ಅವರು ತನ್ನೂರಿನಲ್ಲೂ ಹೈನುಗಾರಿಕೆಯನ್ನು ಬೆಳೆಸುವ ಉದ್ದೇಶವನ್ನು ಇಟ್ಟುಕೊಂಡು ಸಮಾನ ಮನಸ್ಕರನ್ನು ಸೇರಿಸಿಕೊಂಡು, ಕಟ್ಟಿ ಬೆಳೆಸಿದ ಸಂಸ್ಥೆಯೇ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ.

Advertisement

ಕಾಪು: ಮೂರು ದಶಕಗಳ ಹಿಂದೆ ಮೂಳೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೈನುಗಾರರು ಸೈಕಲ್‌ನವರಿಗೆ ಕಡಿಮೆ ದರದಲ್ಲಿ ಹಾಲು ಪೂರೈಸುತ್ತಿದ್ದರು. ಅಂದು ಹಾಲು ಉತ್ಪಾದಕರಿಗೆ ಸರಿಯಾದ ಪ್ರತಿಫಲ ಸಿಗುತ್ತಿಲವಲ್ಲ ಎನ್ನುವ ಕೊರಗು ಹೈನುಗಾರರ ಶ್ರಮವನ್ನು ಅರಿತಿದ್ದ ಕೆಲವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದೇವದಾಸ ಶೆಟ್ಟಿ ಅವರು ಊರಿನ ಜನರನ್ನು ಒಟ್ಟುಗೂಡಿಸಿ ಗುಜರಾತ್‌ ಮಾದರಿಯಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸುವ ಛಲ ಹೊತ್ತು ಎಂ. ಮನೋಹರ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ, ಹಿರಿಯರಾದ ಗ್ಯಾಬ್ರಿಯಲ್‌ ಅಮ್ಮನ್ನ ಮತ್ತು ಸಮಾನ ಮನಸ್ಕರನ್ನು ಸೇರಿಸಿಕೊಂಡು 1989 ಜು. 1 ರಂದು ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಿದರು.

ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡ ಸಂಘವು 2002ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ಸ್ವಾವಲಂಬಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಸಿ ತಳಿಯ ಜಾನುವಾರುಗಳ ಸಾಕಣೆಯೊಂದಿಗೆ ಹೈನುಗಾರಿಕೆಯ ಮೂಲಕ ಜನರ ಆರ್ಥಿಕಾಭಿವೃದ್ಧಿಗೆ ಕಾರಣವಾಗಿ ಜನರನ್ನು ಸ್ವಾವಲಂಬಿಗಳಾಗಿಸುವ ಉದೇªಶ ಹೊಂದಿ ಪ್ರಾರಮಭಗೊಂಡ ಸೊಸೈಟಿ ಇಂದು ಲಾಭದಾಯಿಕ ಸಂಸ್ಥೆಯಾಗಿ ಬೆಳೆದು ಬಂದಿದೆ. ಆ ಮುಲಕ ಗ್ರಾಮೀಣ ಜನರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಕಾಮಧೇನುವಾಗಿದೆ.

ಲಾಭದಲ್ಲಿ ಪ್ರತಿ ವರ್ಷ ಬೋನಸ್‌
ಸದಸ್ಯರಿಗೆ ಪ್ರತೀ ವರ್ಷವೂ ಲಾಭದಲ್ಲಿ ಬೋನಸ್‌, ಪ್ರೋತ್ಸಾಹ ಧನ, ಡಿವಿಡೆಂಡ್‌ ಹಾಗೂ ಹೆಚ್ಚು ಹಾಲು ಪೂರೈಸಿದ ಮೂರು ಜನರಿಗೆ ಸಮ್ಮಾನ, ಸದಸ್ಯರು ಬಯಸಿದಲ್ಲಿ ಹೈನುಗಾರಿಕೆ ಸಾಲವನ್ನು 3% ಬಡ್ಡಿಯಲ್ಲಿ ಕಾಪು ಸಿ.ಎ. ಸಂಘದ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಸಂಘದ ಸದಸ್ಯರು ಮೃತಪಟ್ಟಲ್ಲಿ, ರಾಸು ಮೃತಪಟ್ಟಲ್ಲಿ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್‌ನ ಮುಖಾಂತರ ಪರಿಹಾರ ಧನವನ್ನು ಒದಗಿಸಿಕೊಡಲಾಗುತ್ತದೆ.

ಲವಣ ಮಿಶ್ರಣ ಪಶು ಆಹಾರವನ್ನು ಉತ್ಪಾದಕರಿಗೆ ಪೂರೈಸಲಾಗುತ್ತಿದೆ. ಸದಸ್ಯರು ಮಿನಿ ಡೈರಿ ಪ್ರಾರಂಭಿಸಿದಲ್ಲಿ ಹಾಲು ಕರೆಯುವ ಯಂತ್ರ, ಹಟ್ಟಿ ತೊಳೆಯುವ ಯಂತ್ರ, ರಬ್ಬರ್‌ ಮ್ಯಾಟ್‌ಗಳಿಗೆ ಒಕ್ಕೂಟದ ಸಹಾಯಧನ ದೊರಕಿಸಿಕೊಡಲಾಗುತ್ತದೆ. ಹುಲ್ಲು ಬೆಳೆಸಲು ಸಹಾಯಧನ ನೀಡಲಾಗುತ್ತದೆ. ಜೋಳದ ಬೀಜ, ಹಸಿರುಹುಲ್ಲಿನ ತುಂಡುಗಳನ್ನು ನೀಡಲಾಗುತ್ತದೆ. ರಾಸುಗಳ ಬಂಜೆತನ ನಿವಾರಣೆ ಶಿಬಿರ, ಅಸೌಖ್ಯ ದನಗಳಿಗೆ ಚಿಕಿತ್ಸೆಯನ್ನು ಸದಸ್ಯರ ಮನೆ ಭೇಟಿ ಮೂಲಕ ಒಕ್ಕೂಟದ ಪಶುವೈದ್ಯರು ನೀಡುತ್ತಾರೆ. 6 ತಿಂಗಳಿಗೊಮ್ಮೆ ಕಾಲು ಬಾಯಿ ಜ್ವರ ಲಸಿಕೆ, ಜಂತುಹುಳ ಔಷಧವಿತರಣೆ ಮಾಡಲಾಗುತ್ತಿದೆ.

Advertisement

ಮೂರು ಜನರಿಂದ ಆರಂಭಗೊಂಡು 3-4 ಲೀಟರ್‌ ಹಾಲಿನಿಂದ ಪ್ರಾರಂಭಗೊಂಡು ಈಗ 600 ಲೀಟರ್‌ ಹಾಲು ಶೇಖರಣೆಯಾಗುತ್ತದೆ. ಪ್ರಸ್ತುತ 151 ಜನ ಸದಸ್ಯರಿದ್ದು ಮೂಳೂರು ಮಾತ್ರವಲ್ಲದೇ ಬೆಳಪು ಮತ್ತು ಉಚ್ಚಿಲ ಪರಿಸರದ ಸದಸ್ಯರನ್ನೂ ಸೇರಿಸಿಕೊಂಡು ಮೂರು ಉಪಕೇಂದ್ರಗಳ ಮೂಲಕವಾಗಿ ಕಾರ್ಯ ನಿರ್ವಹಿಸುತ್ತಾ ಲಾಭದಾಯಿಕವಾಗಿ ಮಾದರಿ ಸಂಘವಾಗಿ ಬೆಳೆದು ಬಂದಿದೆ. ಸರ್ವ ಸದಸ್ಯರ ಸಹಕಾರದೊಂದಿಗೆ 2014ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದೆ.

ಪ್ರಶಸ್ತಿ -ಪುರಸ್ಕಾರ
ಆಡಿಟ್‌ ವರದಿಯಲ್ಲಿ ಸಂಘವು ಎ ಗ್ರೇಡ್‌ ದರ್ಜೆಯನ್ನು ಪಡೆದಿದ್ದು, ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದೆ. ಗುಣಮಟ್ಟದ ಹಾಲು ಪೂರೈಕೆಗಾಗಿ 5 ಸಲ ಒಕ್ಕೂಟದಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇಲ್ಲಿ ವರ್ಷವೊಂದಕ್ಕೆ ಸರಾಸರಿ 1,88,695 ಲೀ. ಹಾಲು ಸಂಗ್ರಹವಾಗುತ್ತದೆ.ಸಂಘ ವಾರ್ಷಿಕ 1 ಕೋ. ರೂ.ಗೂ ಮೀರಿದ ವಹಿವಾಟು ನಡೆಸುತ್ತಿದೆ.

ಗ್ರಾಮೀಣ ಜನರಲ್ಲಿ ಸಂಘಟನಾ ಶಕ್ತಿಯ ಅರಿವನ್ನು ಮೂಡಿಸುವಲ್ಲಿ ಸಂಘವು ಶಕ್ತಿಮೀರಿ ಶ್ರಮಿಸುತ್ತಿದೆ. ಹೈನುಗಾರಿಕೆಯ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದ ಸಂಘದ ಸ್ಥಾಪಕರುಗಳ ಆಶಯಕ್ಕೆ ಅನುಗುಣವಾಗಿ ಸಂಘವನ್ನು ಮುನ್ನಡೆಸಲಾಗುತ್ತಿದೆ. ಹೈನುಗಾರರ ಅಭಿವೃದ್ಧಿಗೆ ಸಂಘ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದು, ಹಿಂದಿನ ಹೆಸರನ್ನು ಉಳಿಸಿಕೊಂಡು ಮತ್ತೆ ಇನ್ನಷ್ಟು ಕೀರ್ತಿ ಗಳಿಸಿಕೊಡಲು ಶ್ರಮಿಸುತ್ತಿದ್ದೇವೆ.
-ಯೋಗೀಶ್‌ ಪೂಜಾರಿ ಬೆಳಪು
ಅಧ್ಯಕ್ಷರು

ಅಧ್ಯಕ್ಷರು
ಎಂ. ಮನೋಹರ ಶೆಟ್ಟಿ (ಸ್ಥಾಪಕ ಅಧ್ಯಕ್ಷರು), ಗ್ಯಾಬ್ರಿಯಲ್‌ ಅಮ್ಮನ್ನ, ಎಂ.ಎಚ್‌.ಬಿ. ಮಹಮ್ಮದ್‌, ಮನ್ಸೂರ್‌ ಅಹಮ್ಮದ್‌, ಅನಿಲ್‌ ಶೆಟ್ಟಿ, ಯೋಗೀಶ್‌ ಪೂಜಾರಿ (ಹಾಲಿ)
ಕಾರ್ಯದರ್ಶಿಸೀತಾರಾಮ ಪೂಜಾರಿ (ಸ್ಥಾಪನೆಯಾದಂದಿನಿಂದಲೂ ಕಾರ್ಯ ನಿರ್ವಹಣೆ)

- ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next