ಬೆಂಗಳೂರು: ಶ್ರೀರಾಮನ ಭವ್ಯ ದೇಗುಲ ನಿರ್ಮಾಣವಾಗಿರುವ ಅಯೋಧ್ಯೆಗೆ ಕರ್ನಾಟಕದಿಂದ ಭಾರೀ ಪ್ರಮಾಣದಲ್ಲಿ ಯಾತ್ರಿಗಳು ತೆರಳುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರಕಾರ ಅಯೋಧ್ಯೆಯಲ್ಲಿ 100 ಕೋಟಿ ರೂ. ಮೊತ್ತದ ವಸತಿಗೃಹ ನಿರ್ಮಿಸಲು ಚಿಂತನೆ ನಡೆಸಿದೆ.
ರಾಜ್ಯ ಸರಕಾರ ಹಳೆಯ ಪ್ರಸ್ತಾವ ವೊಂದಕ್ಕೆ ಜೀವ ನೀಡುವ ಮೂಲಕ, ರಾಮಭಕ್ತರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಉತ್ತರ ಪ್ರದೇಶ ಸರಕಾರ ಒಪ್ಪಿದರೆ ಅಯೋಧ್ಯೆಯಲ್ಲಿ ತಿರುಪತಿ ಮಾದರಿ ಬೃಹತ್ ಅತಿಥಿಗೃಹ ನಿರ್ಮಾಣದ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾವಿಸಲು ಯೋಜಿಸಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ ಕಾರ ಅಧಿಕಾರದಲ್ಲಿದ್ದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ನಿರ್ಮಾಣಕ್ಕೆ ಜಾಗ ನೀಡುವಂತೆ ಪತ್ರ ಬರೆಯ ಲಾಗಿತ್ತು. ಆದರೆ ಅದಕ್ಕೆ ಸ್ಪಂದನೆ ಸಿಗದೇ ಇದ್ದ ಹಿನ್ನೆಲೆಯಲ್ಲಿ ರಾಜ್ಯದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮತ್ತೂಮ್ಮೆ ಉತ್ತರಪ್ರದೇಶ ಸರ ಕಾರಕ್ಕೆ ಪತ್ರ ಬರೆದು, 175 ಕೊಠಡಿಗಳು ಹಾಗೂ ಕರ್ನಾಟಕ ಶೈಲಿಯ ಕ್ಯಾಂಟೀನ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು.
ಈ ಪತ್ರಕ್ಕೆ ಅಂಗೀಕಾರ ನೀಡುವಂತೆ ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರನ್ನು ಕಳುಹಿಸಿ ಒಪ್ಪಿಗೆ ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಜತೆಗೆ ಈ ಬಾರಿಯ ಬಜೆಟ್ನಲ್ಲಿ ಸುಮಾರು 100 ಕೋಟಿ ರೂ.ಗಳನ್ನು ಈ ಉದ್ದೇಶಕ್ಕಾಗಿ ಮುಜರಾಯಿ ಇಲಾಖೆಗೆ ನಿಗದಿ ಮಾಡುವಂತೆ ಸಿಎಂ ಅವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿರುವ ಸುಮಾರು 100 ಹಳೆಯ ಶ್ರೀರಾಮ ಮಂದಿರಗಳ ಪುನರುಜ್ಜೀವನಕ್ಕಾಗಿ 100 ಕೋಟಿ ರೂ. ಮೀಸಲಿಡುವಂತೆಯೂ ಬಜೆಟ್ನಲ್ಲಿ ಪ್ರಸ್ತಾವಿಸುವುದಕ್ಕೆ ಇಲಾಖೆ ಮುಂದಾಗಿದೆ.
ಇದರೊಂದಿಗೆ ಕಾಂಗ್ರೆಸ್ ರಾಮವಿರೋಧಿ ಎಂಬ ಭಾವನೆಯನ್ನು ಹೊಡೆದು ಹಾಕುವುದಕ್ಕೂ ಸರಕಾರದ ಕೆಲವು ಸಚಿವರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದರು.