Advertisement

Gudibande: ಅವ್ಯವಸ್ಥೆಯ ಆಗರವಾದ ಬ್ರಾಹ್ಮಣರ ಹಳ್ಳಿ

05:09 PM Oct 27, 2023 | Team Udayavani |

ಗುಡಿಬಂಡೆ: ತಾಲೂಕಿನ ಬ್ರಾಹ್ಮಣರಹಳ್ಳಿ ಗ್ರಾಮ ಪಟ್ಟಣಕ್ಕೆ ಸಮೀಪ ಇದ್ದರೂ ಸಹ ಮೂಲ ಸೌಲಭ್ಯಗಳಿಂದ ವಂಚಿವತಾಗಿ ಅವ್ಯವಸ್ಥೆಯ ಸರಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ತಾಲೂಕಿನ ಉಲ್ಲೋಡು ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು ಶೇ.90 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗ, ಶೇ.10 ರಷ್ಟು ಒಕ್ಕಲಿಗ, ಬಲಿಜ, ಸೇರಿದಂತೆ ಇತರೆ ಜನಾಂಗದ ಜನರು ವಾಸವಿದ್ದಾರೆ.

Advertisement

ಸುಮಾರು 800ಕ್ಕೂ ಹೆಚ್ಚು ಜನಸಂಖ್ಯೆ ಹಾಗೂ 480 ಕ್ಕೂ ಹೆಚ್ಚು ಮತದಾರರು ಈ ಗ್ರಾಮದಲ್ಲಿದ್ದು, ಹೆಚ್ಚು ಕೂಲಿ ಕೆಲಸ ಮತ್ತು ವ್ಯವಸಾಯವನ್ನು ಅವಲಂಬಿಸಿ ಜೀವನ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಜೀವಂತವಿದ್ದು, ರಿಪೇರಿಯಾದ ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ ಸ್ವಚ್ಛಗೊಳಿಸದ ಕಾರಣ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಹಲವಾರು ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಸ್ಪಂದಿಸದೆ ಇರುವುದು ದುರಂತದ ಸಂಗತಿಯಾಗಿದೆ.

ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕ: ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ ನಾಲ್ಕು ವರ್ಷಗಳೇ ಕಳೆಯುತ್ತಿದೆ. ಆದರೆ, ಆ ಸಮಯದಲ್ಲಿ ಕೇವಲ ಕಾಟಾಚಾರಕ್ಕೆ ಎಂಬಂತೆ ಒಂದೆರಡು ದಿನ ಮಾತ್ರ ನೀರು ಬಂದಿತೇ ಆದರೂ ಸಹ ಇಂದಿಗೂ ಸಹ ಈ ನೀರಿನ ಘಟಕ ಕೆಲಸಕ್ಕೆ ಬರುತ್ತಿಲ್ಲ, ಗ್ರಾಪಂನವರನ್ನು ಕೇಳಿದರೆ ಅದು ನಮ್ಮ ಸುಪರ್ಥಿಯಲ್ಲಿ ಇಲ್ಲ ಎಂದು ಕೈ
ತೊಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೇವಲ ಸರ್ಕಾರಿ ಖಜಾನೆ ಮಾಡಲಷ್ಟೆ ಇಲ್ಲಿ ನೀರಿನ ಘಟಕ ಸ್ಥಾಪನೆ ಮಾಡಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.

ಗಬ್ಬು ನಾರುತ್ತಿರುವ ಚರಂಡಿಗಳು: ಗ್ರಾಮದಲ್ಲಿ ಇರುವ ಎಲ್ಲಾ ಚರಂಡಿಗಳು ಗಬ್ಬುನಾರುತ್ತಿವೆ, ಚರಂಡಿಗಳ ಸ್ವಚ್ಛತೆಯ ಗೋಜಿಗೆ ಉಲ್ಲೊಡು ಗ್ರಾಪಂ ಅಧಿಕಾರಿಗಳು ಬರುತ್ತಿಲ್ಲ, ಚರಂಡಿಗಳು ಸ್ವತ್ಛತೆ ಇಲ್ಲದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಭೀತಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಸಿ.ಸಿ.ರಸ್ತೆಗಳನ್ನು ಅಳವಡಿಸಿ: ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗ ಇರುವ ಗ್ರಾಮಕ್ಕೆ ಸಿ.ಸಿ.ರಸ್ತೆಗಳನ್ನು ಅಳವಡಿಸುವಂತೆ ಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ಅನುದಾನಗಳು ಎಲ್ಲಿಗೆ ಹೋಗುತ್ತವೆಂದು ತಿಳಿಯದಂತಾಗಿದ್ದು, ಕೆಲ ಜನರು ಮಾತ್ರ ಎಸ್‌ಸಿ ಮತ್ತು ಎಸ್‌ಟಿ ಸಮುದಾಯ ಇರುವ ಗ್ರಾಮಗಳಿಗೆ ಹೆಚ್ಚು
ಅನುದಾನಗಳು ಬರುತ್ತವೆಂದು ಹೇಳುತ್ತಾರೆ, ಆದರೆ ವಾಸ್ತವವಾಗಿ ಅನುದಾನಗಳು ಎಲ್ಲಿ ಹೋಗುತ್ತವೆ ತಿಳಿಯದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

Advertisement

ಅಂಬೇಡ್ಕರ ಭವನ ಶಂಕು ಸ್ಥಾಪನೆಗೆ ಸೀಮಿತ:
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗ ಇರುವ ಗ್ರಾಮದಲ್ಲಿ ಅಂಬೇಡ್ಕರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಶಾಸಕರು, ಮುಖಂಡರು ಶಂಕು ಸ್ಥಾಪನೆ ಮಾಡಿದ್ದಾರೆಯೇ ಹೊರತು, ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕ ಅನುಕೂಲಕ್ಕೆ ಒದಗಿಸಿಕೊಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಸಾರಿಗೆಯನ್ನೇ ನೋಡದ ಗ್ರಾಮ: ಬ್ರಾಹ್ಮಣರಹಳ್ಳಿ ಗ್ರಾಮ ಪಟ್ಟಣಕ್ಕೆ ಸುಮಾರು ಮೂರು ನಾಲ್ಕು ಕಿ.ಮೀ ದೂರದಲ್ಲಿದ್ದರೂ, ಸರಿಯಾದ ರಸ್ತೆ ಸಂಪರ್ಕ ಇದ್ದರೂ ಸಹ ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಕೆಂಪು ಸಾರಿಗೆ ಅನ್ನುವುದೇ ಈ ಗ್ರಾಮದ ಇಲ್ಲಿವರೆಗೂ ಕಂಡಿಲ್ಲ,

ಪ್ರಗತಿ ಕಾಣದ ಆದರ್ಶಗ್ರಾಮ ಯೋಜನೆ: ಸರ್ಕಾರದಿಂದ ಆದರ್ಶ ಗ್ರಾಮ ಯೋಜನೆಯಲ್ಲಿ ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಆದರೆ ಈ ಯೋಜನೆ ಯಡಿಯಲ್ಲಿ ಸಮಪರ್ಕವಾಗಿ ಸಾರ್ವಜನಿಕರಿಗೆ ಅನುಕೂಲಕರ ರೀತಿಯಲ್ಲಿ ಕಾಮಗಾರಿ ಮಾಡದೇ, ರಸ್ತೆಗಿಂತ ಎತ್ತರದಲ್ಲಿ ಚರಂಡಿಗಳ ನಿರ್ಮಾಣ ಮಾಡಿದ್ದಾರೆ, ಕೆಲವು ಕಡೆ ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.

32 ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು: ಇನ್ನೂ ಶಿಕ್ಷಣದ ವಿಚಾರಕ್ಕೆ ಬಂದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೂ 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ 32 ಜನ ವಿದ್ಯಾರ್ಥಿಗಳಿಗೂ ಸಹ ಸುಮಾರು ವರ್ಷಗಳಿಂದಲೂ ಇಬ್ಬರೇ ಶಿಕ್ಷಕರೇ ಇದ್ದು, ಕಿರಿದಾದ ಕಟ್ಟಡಗಳಲ್ಲೇ ಪಾಠ ಪ್ರವಚನಗಳು ನಡೆಯುತ್ತಿದೆ.

ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿನ ಆದರ್ಶ ಗ್ರಾಮ ಯೋಜನೆಗಳ ತೊಂದರೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ
ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಹಾಗೂ ಅಂಬೇಡ್ಕರ ಭವನ ನಿರ್ಮಾಣಕ್ಕೆ ಅನುದಾನ ಕೊರತೆ ಇದ್ದು, ಅನುದಾನ ಬಂದ ಕೂಡಲೇ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.
●ಜಯಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

ಗ್ರಾಮದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಇಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆದರ್ಶ ಗ್ರಾಮ ಯೋಜನೆಯಲ್ಲಿನ ಕಾಮಗಾರಿಗಳು ಸಹ ವ್ಯವಸ್ಥಿತವಾಗಿ ನಡೆಯುತ್ತಿಲ್ಲ.
●ನರಸಿಂಹಮೂರ್ತಿ, ಬಿಜೆಪಿ ಮುಖಂಡ, ಬ್ರಾಹ್ಮಣರಹಳ್ಳಿ

ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿನ ನೀರಿನ ಘಟಕ ಇನ್ನು ಪಂಚಾಯಿತಿ ವ್ಯಾಪ್ತಿಗೆ ಬಂದಿರುವುದಿಲ್ಲ, ನಮ್ಮ ಸುಪರ್ಥಿಗೆ ಕೊಟ್ಟರೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುತ್ತೇವೆ, ಗ್ರಾಮದಲ್ಲಿ ಸ್ವತ್ಛತೆಯನ್ನು ಕಾಪಾಡಲು ಕ್ರಮ ತೆಗೆದುಕೊಳ್ಳುತ್ತೇವೆ.
●ನರಸಿಂಹಮೂರ್ತಿ, ಪಿಡಿಒ ಉಲ್ಲೋಡು

ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಇಲ್ಲದೇ ನೀರು ತರಲು ಮೂರು ನಾಲ್ಕು ಕಿ.ಮೀ ದೂರದಲ್ಲಿರುವ ಗುಡಿಬಂಡೆಗೆ ಹೋಗಿ
ಬರಬೇಕು. ಗ್ರಾಮದಲ್ಲಿ ನೀರಿನ ಘಟಕ ಇದ್ದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ.
●ನವೀನ್‌ ಕುಮಾರ್‌ ಬ್ರಾಹ್ಮಣರಹಳ್ಳಿ ನಿವಾಸಿ

*ಎನ್‌.ನವೀನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next