Advertisement

ಗುಬ್ಬಿ ವೀರಣ್ಣ ಮರಿ ಮೊಮ್ಮಗನ ಸಿನಿ ಎಂಟ್ರಿ

11:43 AM Oct 05, 2019 | mahesh |

ಗುಬ್ಬಿ ವೀರಣ್ಣ… ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟ ಮೇರು ವ್ಯಕ್ತಿ ಇವರು. ಇವರ ನಾಟಕ ಕಂಪೆನಿ ಮೂಲಕ ಹಲವು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಅವರ ರಂಗಭೂಮಿಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ, ಬಣ್ಣದ ಲೋಕಕ್ಕೆ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಈಗಾಗಲೇ ಗುಬ್ಬಿ ವೀರಣ್ಣ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಗುರುತಿಸಿ­ಕೊಂಡಿದ್ದಾರೆ. ಈಗ ಅವರ ಕುಟುಂಬದ ಮತ್ತೂಂದು ಪ್ರತಿಭೆ ಗಾಂಧಿನಗರಕ್ಕೆ ಕಾಲಿಡುತ್ತಿದೆ.

Advertisement

ಹೌದು, ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಈಗ ಸಿನಿಮಾವೊಂದರ ನಾಯಕ. ಹೆಸರು ಬೆನಕ ಗುಬ್ಬಿ ವೀರಣ್ಣ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸಿನಿಮಾಗೆ ಕಾಲಿಡುವ ಮುನ್ನ, ಬೆನಕ ಹೀರೋಗೆ ಏನೆಲ್ಲಾ ಅರ್ಹತೆ ಇರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಬಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನಿಮಾ’ಶಾಲೆಯಲ್ಲಿ ನಟನೆ ತರಬೇತಿ ಪಡೆದು, ಕಳೆದ ಎರಡು ವರ್ಷಗಳಿಂದಲೂ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಈಗ ಗಾಂಧಿನಗರದತ್ತ ಜಿಗಿದಿದ್ದಾರೆ. ಚಿಕ್ಕಂದಿನಿಂದಲೂ ಬೆನಕ ಗುಬ್ಬಿವೀರಣ್ಣ, ಡ್ಯಾನ್ಸ್‌ ಆಸಕ್ತಿ ಬೆಳೆಸಿಕೊಂಡವರು. ಈಗ ಸಿನಿಮಾಗೆ ಕಾಲಿಟ್ಟಿದ್ದಾರೆ. ಅಂದಹಾಗೆ, “ರಮೇಶ್‌ ಸುರೇಶ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ “00.1′ ಚಿತ್ರದಲ್ಲೂ ಬೆನಕ ನಟಿಸುತ್ತಿದ್ದಾರೆ.

ತಮ್ಮ “ರಮೇಶ್‌ ಸುರೇಶ್‌’ ಚಿತ್ರದ ಬಗ್ಗೆ ಹೇಳುವ ಬೆನಕ ಗುಬ್ಬಿವೀರಣ್ಣ,”ಇದೊಂದು ಹಾಸ್ಯಮಯ ಚಿತ್ರ. ಇಲ್ಲಿ ನಾನು ಸೋಮಾರಿ ಹುಡುಗನ ಪಾತ್ರ ಮಾಡುತ್ತಿದ್ದೇನೆ. ಕೆಲಸವಿಲ್ಲದ ಆಲೆಮಾರಿ ಪಡ್ಡೆಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ಕಥೆಯೇ ಹೀರೋ. ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಇದೆ. ನಮ್ಮಂತಹ ಹೊಸಬರನ್ನು ನಂಬಿ, ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಶಂಕರ್‌ ಹಾಗು ಕೃಷ್ಣ ಅವರು ಅವಕಾಶ ಕೊಟ್ಟಿದ್ದಾರೆ. ನಮ್ಮಲ್ಲಿ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೆಲಸ ಮಾಡಿಸುತ್ತಿದ್ದಾರೆ ಅವರಿಗೆ ಥ್ಯಾಂಕ್ಸ್‌’ ಎನ್ನುತ್ತಾರೆ ಬೆನಕ.

Advertisement

Udayavani is now on Telegram. Click here to join our channel and stay updated with the latest news.

Next