Advertisement

ಕೃಷಿಕರ ಪ್ರಾಣ ಹಿಂಡುತ್ತಿದೆ ಗಜಹಿಂಡು

03:35 PM Dec 30, 2017 | Team Udayavani |

ಸುಬ್ರಹ್ಮಣ್ಯ : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಉಪಟಳ ಮತ್ತೆ ಹೆಚ್ಚಾಗಿದ್ದು, ತೋಟದ ಬೆಳೆ ಬೆಳೆಗಾರರ ಕೈಗೆ ಸಿಗದಂತಾಗಿದೆ. ಅಲ್ಪ ಬೆಳೆಯನ್ನು ಕಳೆದುಕೊಳ್ಳುವ ಆತಂಕದ ಜತೆಗೆ ಪ್ರಾಣ ಭಯವೂ ಉಂಟಾಗಿದೆ. ಆದರೆ ಅರಣ್ಯ ಇಲಾಖೆ ಇನ್ನೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ.

Advertisement

ಕೋತಿ, ಕಡವೆ, ಕಾಡುಹಂದಿ ಕಾಟದ ಜತೆಗೆ ಇತ್ತೀಚೆಗಂತೂ ಕಾಡಾನೆ ಹಾವಳಿ ತೀವ್ರವಾಗಿದೆ. ಆನೆಗಳು ಹಗಲಿನಲ್ಲೂ
ಕಾಣಿಸಿಕೊಳ್ಳುತ್ತಿದ್ದು, ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷ ಕಾಡಾನೆ ಹಾವಳಿ ಮಿತಿ ಮೀರಿತ್ತು. ಬಳಿಕ ಸ್ವಲ್ಪ ಕ್ಷೀಣಿಸಿತ್ತು. ಇದೀಗ ಕಾಡಾನೆಗಳು ದಿಢೀರನೆ ಕೃಷಿಕರ ತೋಟಗಳಿಗೆ ನುಗ್ಗಿ ಫ‌ಸಲು ಹಾಳು ಮಾಡುತ್ತಿವೆ.

ಕಂದಕ ನಿರ್ಮಾಣ
ಆನೆ ದಾಳಿಗೆ ಆನೆ ಕಂದಕ ನಿರ್ಮಾಣವನ್ನು ಅರಣ್ಯ ಇಲಾಖೆ ಅಲ್ಲಲ್ಲಿ ಮಾಡಿದ್ದರೂ ಆನೆ ಹಾವಳಿಯೇನೂ ಕಡಿಮೆಯಾಗಿಲ್ಲ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ ಉಪಟಳ ಕಡಿಮೆ ಇದ್ದ ಕಾರಣ, ಕೃಷಿಕರು ಕೊಂಚ ಸಮಾಧಾನದಿಂದ ಇದ್ದರು. ಆನೆ ದಾಳಿಯನ್ನು ತಡೆಯುವ ಕಂದಕ ನಿರ್ಮಾಣ ಇನ್ನೂ ಹಲವೆಡೆ ಬಾಕಿ ಇದೆ.

ಮಳೆ ವಿಪರೀತವಾದಲ್ಲಿ ಕಂದಕ ಜರಿದು ಮುಚ್ಚಿ ಹೋಗುತ್ತದೆ. ಜತೆಗೆ ನೀರಿನ ಝರಿಯ ಹರಿವಿನಿಂದ ಕಂದಕದ ಬದಿ ಕೊಚ್ಚಿ ಹೋಗುತ್ತದೆ. ಬಳಿಕ ಅದನ್ನು ನಿರ್ವಹಣೆ ಮಾಡದಿರುವುದರಿಂದ ಸಮಸ್ಯೆ ಯಾಗುತ್ತಿದೆ. ಹೊಳೆ ಅಂಚಿನಲ್ಲಿ ಕಂದಕ ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ. ಇಂಥ ಜಾಗಗಳಲ್ಲಿ ಹಾಗೂ ಕಂದಕ ಮಾಡದ ಸ್ಥಳಗಳಲ್ಲಿ ಆನೆಗಳು ನಾಡಿಗೆ ನುಗ್ಗುತ್ತಿವೆ.

ಕೆಲವು ಗ್ರಾಮಗಳಲ್ಲಿ ಏಕಾಂಗಿಯಾಗಿ ಆನೆಗಳು ಕಾಣಿಸಿಕೊಂಡರೆ, ಇನ್ನು ಕೆಲವು ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತಿವೆ. ಆನೆಗಳು ಹಿಂದೆ ಶಬ್ದಕ್ಕೆ, ಬೆಂಕಿಗೆ ಹೆದರುತ್ತಿದ್ದವು. ಈಗ ಅವುಗಳಿಗೂ ಹೆದರದಿರುವುದು ಕೃಷಿಕರ ನೆಮ್ಮದಿಯನ್ನು ಕೆಡಿಸಿದೆ.

Advertisement

ಕೃಷಿಕರೇ ಎಚ್ಚರ
ರಾತ್ರಿ ಹೊತ್ತು ಕೃಷಿ ತೋಟಕ್ಕೆ ನೀರು ಹಾಯಿಸಲು ಅಥವಾ ನೀರುಣಿಸುವ ಯಂತ್ರ ಜೆಟ್‌ ಬದಲಾಯಿಸುವ ಇತ್ಯಾದಿ ಚಟುವಟಿಕೆಗೆ ತೆರಳುವ ವೇಳೆ ಪ್ರಕಾಶಮಾನವಾದ ಬೆಳಕಿನ ಸಾಧನ ಬಳಸಬೇಕು. ಸಾಕಷ್ಟು ಎಚ್ಚರಿಕೆ ವಹಿಸಬೇಕು. ಯಾಕೆಂದರೆ ತೋಟದಲ್ಲಿ ಜನಸಂಚಾರ ಅರಿವಿಗೆ ಬಂದಾಗ ಆನೆಯು ತೀರಾ ಮೌನವಾಗಿರುತ್ತದೆ. ಬಳಿಕ ಮೈಮೇಲೆ ಎರಗುವ ಸಾಧ್ಯತೆ ಇರುತ್ತದೆ. ಮೂರು ವರ್ಷದ ಹಿಂದೆ ದೇವಚಳ್ಳ ಗ್ರಾಮದಲ್ಲಿ ಕೃಷಿಕ ರಾಮ್‌ ಭಟ್‌ ಎಂಬವರನ್ನು ಆನೆ ತೋಟದಲ್ಲಿ ತುಳಿದು ಸಾಯಿಸಿತ್ತು.

ಗಮನ ಹರಿಸುತ್ತೇವೆ
ಸುಬ್ರಹ್ಮಣ್ಯ ವಿಭಾಗ ಅರಣ್ಯ ರೇಂಜಿನಲ್ಲಿ ಈಗಾಗಲೆ 19 ಕಿ.ಮೀ ನಷ್ಟು ದೂರ ಆನೆ ಕಂದಕ ನಿರ್ಮಿಸಲಾಗಿದೆ. ದೇವಚಳ್ಳ, ಕರಂಗಲ್ಲು ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಿದ್ದು ಈ ಬಗ್ಗೆ ಗಮನಹರಿಸಲಾಗುವುದು.
ತ್ಯಾಗರಾಜ್‌, ಆರ್‌ಎಫ್ಒ
  ಸುಬ್ರಹ್ಮಣ್ಯ ಅರಣ್ಯ ವಿಭಾಗ

ಕಂದಕ ವಿಸ್ತರಿಸಿ
ಹಗಲು ಹೊತ್ತಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿರುವುದು ಭೀತಿ ತರುವಂತಹದು. ಶಾಲೆಮಕ್ಕಳಿಗೆ, ನಾಗರಿಕರಿಗೆ ಎಲ್ಲರಿಗೂ ಸಂಚಾರದ ವೇಳೆ ಇದರಿಂದ ಅಪಾಯವೇ ಹೆಚ್ಚು. ಅರಣ್ಯ ಇಲಾಖೆ ಆನೆಕಂದ ವಿಸ್ತರಣೆಗೆ ಕ್ರಮಜರಗಿಸಬೇಕು.
– ಪುರುಷೋತ್ತಮ ಕರಂಗಲ್ಲು, ಉಪನ್ಯಾಸಕ

ಎಲೆಲ್ಲಿ ಹೆಚ್ಚು ?
ತಾಲೂಕಿನ ಕಾಡಾಂಚಿನ ಗ್ರಾಮಗಳಾದ ಕಲ್ಮಕಾರು, ಕೊಲ್ಲಮೊಗ್ರು, ದೇವಚಳ್ಳ, ಹರಿಹರಪಳ್ಳತ್ತಡ್ಕ, ಬಾಳುಗೋಡು,
ಸುಬ್ರಹ್ಮಣ್ಯ, ಐನಕಿದು, ಮಡಪ್ಪಾಡಿ, ಸಂಪಾಜೆ, ಅರಂತೋಡು, ಮಂಡೆಕೋಲು, ಪಂಜ, ಮರ್ಕಂಜ, ಕಲ್ಲುಗುಂಡಿ, ಆಲೆಟ್ಟಿ, ಬಳಿನೆಲೆ, ಕೈಕಂಬ ಮುಂತಾದ ಕಡೆಗಳಲ್ಲಿ ಕಾಡಾನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ನಗರದತ್ತ ಆನೆ ಹಿಂಡು
ಸುಳ್ಯ : ನಗರದ ಭಸ್ಮಡ್ಕಕ್ಕೆ ಕಾಡಾನೆ ನುಗ್ಗಿ ಆತಂಕ ಸೃಷ್ಟಿಸಿ ಕೆಲವೆ ದಿನಗಳಾಗಿದ್ದವು. ಇದರ ಬೆನ್ನಲ್ಲೇ ಇದೀಗ ಮತ್ತೆ ಹಿಂಡಾನೆಗಳು ನಗರಕ್ಕೆ ಸಮೀಪ ಇರುವ ಕೆಲವು ಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ಗುರುವಾರ ನಾರ್ಕೋಡು ಭಾಗದ ಕಾಡಿ
ನಿಂದ ಬಂದ ಆನೆಗಳು ರಬ್ಬರ್‌ ತೋಟದಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸಿದ್ದವು. ಮರುದಿನ ಮತ್ತೆ ಅದೇ ಸ್ಥಳದಲ್ಲಿ ಆನೆಗಳ ಹಿಂಡು ಕಂಡುಬಂದಿದ್ದು, ಅಲ್ಲಿಂದ ಆಲೆಟ್ಟಿಯತ್ತ ಹಿಂಡಾನೆ ಗುಂಪು ತೆರಳುವ ಮಧ್ಯೆ ಕೃಷಿ ಪ್ರದೇಶಗಳತ್ತ ಹಾದು ಹೋಗಿದೆ. ಅಲ್ಲಲ್ಲಿ ಕೃಷಿ ತೋಟಗಳಿಗೆ ಹಾನಿಯುಂಟಾಗಿದೆ. ಇದು ಸಹಜವಾಗಿ ಆ ಭಾಗದ ಕೃಷಿಕರಿಗೆ
ಭಯವನ್ನುಂಟು ಮಾಡಿದೆ.

ಎಂಟಾನೆಗಳ ಹಿಂಡು
ಎರಡು ಮರಿ ಆನೆ ಸೇರಿದಂತೆ ಎಂಟು ಆನೆಗಳು ಗುಂಪಿನಲ್ಲಿವೆ. ಇದನ್ನು ಕಂಡ ಊರವರು, ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳೊಂದಿದೆ ಸೇರಿ ಊರರು ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.
ಆದರೆ ಅವುಗಳು ಅಲ್ಲಿಂದ ಕದಡಲಿಲ್ಲ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರವೂ
ಗಜಪಡೆಯನ್ನು ಕಾಡಿಗೆ ಅಟ್ಟುವ ಸಾಹಸ ಮುಂದುವರಿದಿದೆ. 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next