Advertisement

‘ಅಲೆ ಬುಡಿಯೆರ್‌… !’: ‘ಕಂಬಳ’ಕ್ಕೆ ಹಸಿರು ನಿಶಾನೆ

09:15 PM Jul 03, 2017 | Karthik A |

ನವದೆಹಲಿ: ತುಳುನಾಡಿನ ಸಾಂಪ್ರದಾಯಿಕ ಜಾನಪದ ಸಾಹಸ ಕ್ರೀಡೆ ‘ಕಂಬಳ’ವನ್ನು ಯಥಾ ಪ್ರಕಾರ ಮುಂದು ವರಿಸುವ ರಾಜ್ಯ ಸರಕಾರದ ‘ಕಂಬಳ ತಿದ್ದುಪಡಿ ಮಸೂದೆ’ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆ ಮತ್ತು ಗೊಂದಲ ನಿವಾರಣೆಯಾಗಿದ್ದು, ರಾಷ್ಟ್ರಪತಿಗಳು ಕಂಬಳ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವ ಮೂಲಕ ತುಳುನಾಡಿನ ಈ ಜಾನಪದ ಕ್ರೀಡೆಗೆ ಮತ್ತೆ ಚಾಲನೆ ದೊರಕಿದಂತಾಗಿದೆ. ಕಳೆದ ತಿಂಗಳು ಕೇಂದ್ರ ಕಾನೂನು ಸಚಿವರಾಗಿರುವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ ಹಾಗೂ ಕಂಬಳ ಸಮಿತಿಯ ಅಶೋಕ್‌ ಕುಮಾರ್‌ ರೈ ಅವರು ಈ ವಿಶೇಷ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.

Advertisement

ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರಕಾರವು ಸಚಿವ ಸಂಪುಟದ ಒಪ್ಪಿಗೆ ಪಡೆದು ಕೆಲವು ಪರಿಷ್ಕರಣೆಯೊಂದಿಗೆ 2ನೇ ಸಲ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ‘ಕಂಬಳ ತಿದ್ದುಪಡಿ ಮಸೂದೆ’ಗೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಇತ್ತೀಚೆಗಷ್ಟೇ ಸಹಿ ಹಾಕಿದ್ದರು. ಆ ಮೂಲಕ ಕಾನೂನು ಇಲಾಖೆಯಿಂದ ಹಲವು ತಿಂಗಳಿನಿಂದ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ. ಇದರೊಂದಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು, ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ಈ ‘ಕಂಬಳ ತಿದ್ದುಪಡಿ ಮಸೂದೆ’ಗೆ ಈಗ ಅರಣ್ಯ ಮತ್ತು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಕೇವಲ ಅರಣ್ಯ ಹಾಗೂ ಸಂಸ್ಕೃತಿ ಸಚಿವಾಲಯದಿಂದಷ್ಟೇ ಒಪ್ಪಿಗೆ ಲಭಿಸಿತ್ತು. ಆದರೆ, ವಿಧೇಯಕದಲ್ಲಿನ ಕೆಲವು ಪದ ಬಳಕೆಗೆ ಕಾನೂನು ಸಚಿವಾಲಯ ಆಕ್ಷೇಪವೆತ್ತಿದ್ದ ಕಾರಣ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳುಹಿಸಲಾಗಿತ್ತು.

ಕಂಬಳ ತಿದ್ದುಪಡಿ ವಿಧೇಯಕಕ್ಕೆ ಶೀಘ್ರವೇ ರಾಷ್ಟ್ರಪತಿಯವರ ಅಂಕಿತ ಬೀಳುವ ಸಾಧ್ಯತೆಗಳ ಕುರಿತಾಗಿ ‘ಉದಯವಾಣಿ’ ಕಳೆದ ಜೂನ್‌ ತಿಂಗಳಿನಲ್ಲಿ ಒಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. (ಕಂಬಳ : ರಾಷ್ಟ್ರಪತಿ ಅಂಗಳದತ್ತ: ತಿದ್ದುಪಡಿ ಮಸೂದೆಗೆ ಕೊನೆಗೂ ಒಪ್ಪಿಗೆ)

ಕಂಬಳ ವಿಧೇಯಕದ ಹಿನ್ನೆಲೆ

ಪ್ರಾಣಿ ಹಿಂಸೆಯ ನೆಪವೊಡ್ಡಿ ಕಂಬಳ ಸಹಿತ ಇದೇ ರೀತಿಯ ಕ್ರೀಡೆಗಳನ್ನು ರದ್ದುಪಡಿಸುವಂತೆ ಪ್ರಾಣಿದಯಾ ಸಂಘದವರು 2014ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅನಂತರ ನ್ಯಾಯಾಲಯವು ಈ ರೀತಿಯ ಆಚರಣೆಗಳಿಗೆ ತಡೆಯಾಜ್ಞೆ ನೀಡಿತ್ತು. ಮುಂದೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಉಳಿಸಲು ಬೃಹತ್‌ ಆಂದೋಲನ ನಡೆದು ಸರಕಾರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅನಂತರ 2016ರಲ್ಲಿ ಕಂಬಳದ ಪರ ಜನರ ಹೋರಾಟ ಜೋರಾದಾಗ ರಾಜ್ಯ ಸರಕಾರವೇ ಅದಕ್ಕೆ ಪೂರಕವಾಗಿ ಕಾನೂನು ರೂಪಿಸಲು ಮುಂದಾಯಿತು. ಅದರಂತೆ ‘ಪ್ರಾಣಿ ಹಿಂಸೆ‌ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ ಅನ್ನು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಫೆ.7ರಂದು ರಾಜ್ಯಪಾಲರ ಒಪ್ಪಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ಫೆ.23ರಂದು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. ಅಲ್ಲಿಂದ ಈ ವಿಧೇಯಕ ಗೃಹ ಸಚಿವಾಲಯಕ್ಕೆ ಬಂದಿದ್ದು, ಅನಂತರ ಅದನ್ನು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಅದರಂತೆ ಪರಿಸರ ಮತ್ತು ಸಂಸ್ಕೃತಿ ಇಲಾಖೆ ತನ್ನ ಒಪ್ಪಿಗೆ ಸೂಚಿಸಿತ್ತು. ಆದರೆ, ಪ್ರಾಣಿ ಹಿಂಸೆ ವಿಚಾರವಾಗಿ ವಿಧೇಯಕದಲ್ಲಿ ಬಳಸಿದ ಪದವೊಂದು ಸೂಕ್ತವಲ್ಲದ ಕಾರಣ ಕಾನೂನು ಸಚಿವಾಲಯ ವಿಧೇಯಕಕ್ಕೆ ತನ್ನ ಒಪ್ಪಿಗೆ ನೀಡಿರಲಿಲ್ಲ. 

ಈ ವಿಧೇಯಕವನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಕೇಂದ್ರವು ಎ.23ಕ್ಕೆ ರಾಜ್ಯಕ್ಕೆ ವಾಪಸು ಕಳುಹಿಸಿತ್ತು. ಮುಂದೆ ರಾಜ್ಯವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲ ಮಾರ್ಪಾಡುಗಳೊಂದಿಗೆ ಮೇ 8ರಂದು ಮತ್ತೆ ಗೃಹ ಸಚಿವಾಲಯಕ್ಕೆ ರವಾನಿಸಿತ್ತು. ಆದರೆ ಈ ವಿಧೇಯಕಕ್ಕೆ ಇತ್ತೀಚೆಗಷ್ಟೇ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ ಸಹಿ ಮಾಡಿದ್ದರು. ಅವರು ಕ್ಯಾಬಿನೆಟ್‌ ದರ್ಜೆ ಸಚಿವರಲ್ಲದ ಕಾರಣ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಕೂಡ ಸಹಿ ಮಾಡಬೇಕಿತ್ತು. ಈ ಎಲ್ಲ ಕಾರಣಗಳಿಂದ ಇಷ್ಟು ದಿನ ಬಾಕಿಯಾಗಿತ್ತು. 

Advertisement

ಮತ್ತೆ ಸದನದ ಒಪ್ಪಿಗೆ ಬೇಡ
‘ಕಂಬಳ ಮಸೂದೆ ಈಗಾಗಲೇ ಉಭಯ ಸದನಗಳ ಒಪ್ಪಿಗೆ ಪಡೆದಿರುವ ಕಾರಣ ಮತ್ತೆ ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸುವ ಅಗತ್ಯವಿಲ್ಲ. ಗೃಹ ಸಚಿವಾಲಯದಿಂದ ನೇರವಾಗಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿಕೊಡಲಾಲಾಗಿತ್ತು. ಹೀಗಾಗಿ ಕಂಬಳ ಮಸೂದೆಯನ್ನು ಕಾನೂನಾಗಿ ಜಾರಿಗೊಳಿಸುವುದಕ್ಕೆ ಇನ್ನು ಕೇಂದ್ರ ಅಥವಾ ರಾಜ್ಯ ಸರಕಾರದ ಮಟ್ಟದಲ್ಲಿ ಯಾವುದೇ ಅಡೆತಡೆಗಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next