Advertisement

ಬಜೆಟ್‌ನಲ್ಲಿ ಹಸಿರು ಮೈಸೂರು, ಹಸಿರು ಅಂಗಡಿ

06:56 AM Feb 27, 2019 | |

ಮೈಸೂರು: ಹಸಿರು ಕರ್ನಾಟಕ ಪರಿಕಲ್ಪನೆಯಂತೆ ಹಸಿರು ಮೈಸೂರು ಯೋಜನೆ…, ಮಳೆ ನೀರು ಕೊಯ್ಲು ನಿರ್ವಹಣೆಗೆ ಥೀಮ್‌ ಪಾರ್ಕ್‌ ನಿರ್ಮಾಣ…, ಹೆಣ್ಣು ಮಕ್ಕಳ ಜನನ ಪ್ರೋತ್ಸಾಹಿಸಲು ಮೈಸೂರು ಯೋಗ ಲಕ್ಷ್ಮೀ ಯೋಜನೆ…, ಮಹಿಳೆಯರು -ವಿದ್ಯಾರ್ಥಿನಿಯರಿಗಾಗಿ ಪಿಂಕ್‌ ಶೌಚಾಲಯಗಳ ನಿರ್ಮಾಣ… ಸೇರಿದಂತೆ ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಮಹಾ ನಗರಪಾಲಿಕೆಯ 2019-20ನೇ ಸಾಲಿನ ಆಯವ್ಯಯ ಮಂಡಿಸಲಾಗಿದೆ.

Advertisement

ಮಂಗಳವಾರ 2019-20 ನೇ ಸಾಲಿನ ಆಯವ್ಯಯ ಮಂಡಿಸಿದ, ಪಾಲಿಕೆಯ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ಈ ಸಾಲಿನಲ್ಲಿ 780,25,84 ಕೋಟಿ ರೂ.ಗಳ ಗಾತ್ರದ 5.20 ಕೋಟಿ ಉಳಿತಾಯ ಆಯವ್ಯಯ ಮಂಡಿಸಿದ್ದಾರೆ.

ಈ ಸಾಲಿನ ಪ್ರಮುಖ ಯೋಜನೆಗಳು
ಫೋಟೋ ಬಿಲ್ಲಿಂಗ್‌: 
ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ವತಿಯಿಂದ ಮೈಸೂರು ನಗರ ಹಾಗೂ ಹೊರ ವಲಯದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರಸ್ತುತ ಸಾಮಾನ್ಯ ರೀತಿಯಲ್ಲಿ ಬಿಲ್ಲಿಂಗ್‌ ಮಾಡಲಾಗುತ್ತಿದೆ. ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣ, ಮೀಟರ್‌ ರೀಡರ್‌ರ ಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ಗ್ರಾಹಕರಿಗೆ ಪಾರದರ್ಶಕ ಬಿಲ್‌ ವಿತರಿಸುವ ದೃಷ್ಟಿಯಿಂದ ಈ ಸಾಲಿನಲ್ಲಿ ಫೋಟೋ ಬಿಲ್ಲಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಯೋಜಿಸಲಾಗಿದೆ. ಇದರಿಂದ ನೀರು ಸರಬರಾಜು ಪ್ರಮಾಣದ ಬಿಲ್ಲಿಂಗ್‌ ನೀಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮಾತ್ರವಲ್ಲದೆ ಮಾಪಕದ ರೀಡಿಂಗ್‌ ಬಗೆಗಿನ ನ್ಯೂನತೆಗಳನ್ನು ಕಡಿಮೆ ಮಾಡಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಬಹುದಾಗಿದೆ.

ಕೈಗಾರಿಕೆಗಳಿಗೆ ಸ್ಮಾರ್ಟ್‌ ಮೀಟರ್‌: ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜುವತಿಯಿಂದ ಸುಮಾರು 260 ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರಸ್ತುತ ಸಾಮಾನ್ಯ ಮಾಪಕಗಳ ಮೂಲಕ ನೀರಿನ ಬಳಕೆಯನ್ನು ಅಳೆಯಲಾಗುತ್ತಿದೆ. ಇದರ ಬದಲಾಗಿ ಮಾಪಕ ವ್ಯವಸ್ಥೆಯಲ್ಲಿ ಆಧುನೀಕರಣ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಮುಂಬರುವ ಸಾಲಿನಿಂದ ಎಲ್ಲಾ ಕೈಗಾರಿಕಾ ಬಳಕೆದಾರರಿಗೆ ಸ್ಮಾರ್ಟ್‌ ಮೀಟರ್‌ನ್ನು ಪಾಲಿಕೆಗೆ ಯಾವುದೇ ಹೊರೆಯಾಗದಂತೆ ಬಳಕೆದಾರರೇ ವೆಚ್ಚ ಭರಿಸುವ ಮೂಲಕ ಅಳವಡಿಸಲು ಯೋಜಿಸಲಾಗಿದೆ. ಸ್ಮಾರ್ಟ್‌ ಮೀಟರ್‌ ಅಳವಡಿಕೆಯ ವೆಚ್ಚವನ್ನು ಬಳಕೆದಾರರ ಬಿಲ್ಲಿಂಗ್‌ನಲ್ಲಿ ಕಂತಿನ ರೂಪದಲ್ಲಿ ಪಡೆಯಲು ಉದ್ದೇಶಿಸಲಾಗಿದೆ. ಪ್ರತಿ ಸ್ಮಾರ್ಟ್‌ ಮೀಟರ್‌ಗಳಿಗೆ ಸುಮಾರು 40 ಸಾವಿರ ವೆಚ್ಚ ಉಂಟಾಗುವ ಸಾಧ್ಯತೆ ಇದ್ದು, ಇದನ್ನು ಬಳಕೆದಾರರ ತಿಂಗಳ ಬಿಲ್‌ನಲ್ಲಿ ಕಡಿತಗೊಳಿಸಲು  ಯೋಜಿಸಲಾಗಿದೆ.

ನೀರಿನ ಶುಲ್ಕ ಇ-ಪಾವತಿ: ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ವತಿಯಿಂದ ಪ್ರಸ್ತುತ ಸುಮಾರು 1,56,000 ಗ್ರಾಹಕರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರಸ್ತುತ ನೀರಿನ ಶುಲ್ಕವನ್ನು ಗ್ರಾಹಕರು ವಾಣಿ ವಿಲಾಸ ನೀರು ಸರಬರಾಜಿನ 16 ಸೇವಾ ಕೇಂದ್ರಗಳು ಹಾಗೂ ಮೈಸೂರು ಒನ್‌ ಮೂಲಕ ಪಾವತಿಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ವಾಣಿ ವಿಲಾಸ ನೀರು ಸರಬರಾಜು ಸಂಸ್ಥೆಗೆ ನೀರಿನ ಶುಲ್ಕವನ್ನು ಗ್ರಾಹಕರು ಇ-ಪಾವತಿ/ ಆನ್‌ಲೈನ್‌ ಪಾವತಿ ವ್ಯವಸ್ಥೆ ಮೂಲಕ ಪಾವತಿ ಮಾಡಲು ಅನುವಾಗುವಂತೆ ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಂ ರವರ ಪೋರ್ಟಲ್‌ ಮೂಲಕ ಪಾವತಿಸಲು ಸುಧಾರಣೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಕಂದಾಯ ಬಡಾವಣೆಗಳಲ್ಲಿ ನಿರ್ಮಾಣಗೊಂಡಿರುವ ಆಸ್ತಿಗಳಿಂದಲೂ ಬರಬೇಕಾದ ವಿವಿಧ ತೆರಿಗೆ ಹಾಗೂ ಶುಲ್ಕಗಳಾದ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಮತ್ತು ನೀರಿನ ಶುಲ್ಕಗಳನ್ನು ಕಡ್ಡಾಯವಾಗಿ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ.

Advertisement

ಬಹುಮಹಡಿ ವಾಹನ ನಿಲುಗಡೆ: ಶರವೇಗದಲ್ಲಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಾಹನ ನಿಲುಗಡೆ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ವಾಹನ ದಟ್ಟಣೆ ಇರುವ ಸಬ್‌ ಅರ್ಬನ್‌ ಬಸ್‌ ನಿಲ್ದಾಣ ಹಾಗೂ ಗಾಡಿ ಚೌಕದ ಹತ್ತಿರ ಬಹುಮಹಡಿ ವಾಹನ ನಿಲುಗಡೆ ತಾಣ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 10 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.

ಅರಸು ರಸ್ತೆ ಅಭಿವೃದ್ಧಿ: ಮೈಸೂರಿನ ಸೌಂದರ್ಯ ವೃದ್ಧಿ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಡಿ.ದೇವರಾಜ ಅರಸು ರಸ್ತೆಯನ್ನು ಅಂತಾರಾಷ್ಟ್ರೀಯ ಮಟ್ಟದ ರಸ್ತೆಯನ್ನಾಗಿ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 

ಥೀಮ್‌ ಪಾರ್ಕ್‌: ಮನೆ ನಿರ್ಮಾಣ ಹಂತದಲ್ಲಿಯೇ ಮಳೆ ನೀರು ಕೊಯ್ಲಿನ ಅಳವಡಿಕೆ ಬಗ್ಗೆ ಅರಿವು ಮೂಡಿಸಲು ಪ್ರಾಯೋಗಿಕವಾಗಿ ಒಂದು ಸುಸಜ್ಜಿತವಾದ ಮಳೆ ನೀರು ಕೊಯ್ಲು ನಿರ್ವಹಣೆಯ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಯೋಜನೆಗೆ ಖಾಸಗಿ ಸಂಸ್ಥೆಗಳ ಸಿಎಸ್‌ಆರ್‌ ಅನುದಾನವನ್ನು ಸಂಗ್ರಹಿಸಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು.

ಪಿಂಕ್‌ ಶೌಚಾಲಯ: ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಇರುವ ಆಯ್ದ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳೆಯರಿಗಾಗಿಯೇ ಅಗತ್ಯಕ್ಕೆ ಅನುಗುಣವಾಗಿ ಪಿಂಕ್‌ ಶೌಚಾಲಯಗಳನ್ನು ನಿರ್ಮಾಣ ಮಾಡಲು 10 ಲಕ್ಷ ರೂ. ಅನುದಾನ ಕಾಯ್ದಿರಿಸಿದೆ.

ಸ್ವತ್ಛ ಮೈಸೂರು: ನಗರದ ಸರ್ಕಾರಿ ಬಸ್‌ಗಳು ಹಾಗೂ ಆಟೋ ರಿಕ್ಷಾಗಳಲ್ಲಿ ಸಾರ್ವಜನಿಕರಲ್ಲಿ ಸ್ವತ್ಛತೆಯ ಅರಿವು ಮೂಡಿಸುವ ಮಾಹಿತಿಯೊಂದಿಗೆ ಡಸ್ಟ್‌ಬಿನ್‌ ಅಳವಡಿಸುವ ಸಲುವಗಿ 25 ಲಕ್ಷ ರೂ. ಕಾಯ್ದಿರಿಸಿದೆ. ಪ್ರತಿ ತಿಂಗಳು ಪ್ರತಿ ವಾರ್ಡ್‌ಗಳಲ್ಲಿ ಬೀದಿ ನಾಟಕಗಳ ಮೂಲಕ ಒಂದು ದಿನದ ಸ್ವತ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವುಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 5 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. 

ಹಸಿರು ಮೈಸೂರು: ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ಜಾಗ ಹಾಗೂ ರಸ್ತೆ ಬದಿಗಳಲ್ಲಿ ರಾಜ್ಯ ಸರ್ಕಾರದ ಹಸಿರು ಕರ್ನಾಟಕದ ಪರಿಕಲ್ಪನೆಯಂತೆ ಸುಮಾರು 50 ಸಾವಿರ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಗೆ 10 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅನುದಾನದಡಿ ಪ್ರತಿ ವಾರ್ಡ್‌ನಲ್ಲಿ 15 ಲಕ್ಷ ವೆಚ್ಚದಲ್ಲಿ ಮಾದರಿ ಉದ್ಯಾನ ಅಭಿವೃದ್ಧಿಪಡಿಸಿ, ಈ ಉದ್ಯಾನಗಳಲ್ಲಿ ವಾಕಿಂಗ್‌ ಮತ್ತು ಜಾಗರ್ ಟ್ರ್ಯಾಕ್‌ಗಳ ನಿರ್ಮಾಣ, ಓಪನ್‌ ಜಿಮ್‌ ಅಳವಡಿಕೆ ಮತ್ತು ಮಕ್ಕಳ ಆಟಿಕೆಗಳನ್ನು ಅಳವಡಿಸಿ ಎಲ್ಲಾ ವಯೋಮಾನದ ಜನರಿಗೆ ಉಪಯೋಗವಾಗುವಂತಹ ಮಾದರಿ ಉದ್ಯಾನಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಉದ್ಯಾನಗಳಲ್ಲಿ ಇ/ಬಯೋ ಶೌಚಾಲಯ ಅಳವಡಿಸಲು ಉದ್ದೇಶಿಸಿದೆ.

ಮೈಸೂರು ಯೋಗಲಕ್ಷ್ಮೀ: ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿ ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ತಲಾ 25 ಸಾವಿರ ರೂ.ಗಳನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬಾಂಡ್‌ ರೂಪದಲ್ಲಿ ಠೇವಣಿ ಇರಿಸಲು ಯೋಜಿಸಲಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ 2.5 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಯೋಜನೆಯನ್ನು 2019ರ ಏಪ್ರಿಲ್‌ 1 ರಿಂದ ಜಾರಿಗೊಳಿಸಲಾಗುವುದು. ಪ್ರಾರಂಭಿಕವಾಗಿ 2019-20ನೇ ಸಾಲಿನಲ್ಲಿ ಒಂದು ಸಾವಿರ ಹೆಣ್ಣು ಮಕ್ಕಳಿಗೆ ಈ ಯೋಜನೆಯಡಿ 25 ಸಾವಿರ ರೂ. ಮೊತ್ತದ ಬಾಂಡ್‌ ನೀಡಲು ಉದ್ದೇಶಿಸಲಾಗಿದೆ. 

ಹಸಿರು ಅಂಗಡಿ: ಮೈಸೂರು ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ತಯಾರಿಸುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ, ಪೇಪರ್‌ನಿಂದ ತಯಾರಿಸಿರುವ ವಸ್ತುಗಳನ್ನು ಬಳಕೆ ಮಾಡಲು ಸಾರ್ವಜನಿಕರಿಗೆ ಒದಗಿಸಲು ಉತ್ತೇಜನ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಸಿರು ಅಂಗಡಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next