Advertisement

ಹಸಿರು ಮುನಿಯನ ಶುಭ ಶಕುನ

02:45 PM May 20, 2017 | |

ಇದು ಗುಬ್ಬಿ ಗಿಳಿ ಅಂತಲೇ ಜನಪ್ರಿಯ. ಇದರ ಗಾತ್ರ ಕೇವಲ 10 ಸೆಂ.ಮೀ. ಕಪ್ಪು ಮುನಿಯ, ಕೆಂಪು ಮುನಿಯ, ಕಾಡು ಮುನಿಯ, ಬಿಳಿ ಪಟ್ಟೆ ಬೆನ್ನಿನ ಮುನಿಯಧಿ- ಹೀಗೆ 6ಕ್ಕಿಂತ ಹೆಚ್ಚು ಬಣ್ಣದ ಗುಬ್ಬಿಗಳು ನಮ್ಮಲ್ಲಿವೆ.GREEN MUNIA ( Amandava  Formosa) R Sparrow ಅಮಂಡವಾ ಗುಂಪಿಗೆ ಈ ಸುಂದರ, ಚಿಕ್ಕ ಹಕ್ಕಿ ಸೇರಿದೆ. ಹಳದಿ ಮಿಶ್ರಿತ ಬಾಳೆ ಹಸಿರು ಮೈಬಣ್ಣ, ಕುತ್ತಿಗೆ ಕೆಳಗಡೆ ತಿಳಿ ಹಳದಿಯಿಂದ ಕೂಡಿದೆ. ಈ ಹಳದಿ ಬಣ್ಣ ಹೊಟ್ಟೆ ಹಾಗೂ ಪುಕ್ಕದವರೆಗೂ ವ್ಯಾಪಿಸಿದೆ. ಕುತ್ತಿಗೆ ಕೆಳಗೆ ತಿಳಿ ಹಳದಿ ಬಣ್ಣದಿಂದ ಕೂಡಿದ್ದು, ಬಾಲದ ಕಡೆ ಬಂದಂತೆ ಅಚ್ಚ ಹಳದಿ ಆವರಿಸುತ್ತದೆ. ರೆಕ್ಕೆ ಕೆಳಗೆ ಎರಡೂ ಪಾರ್ಶ್ವದಲ್ಲಿ ಅರ್ಧ ವರ್ತುಲಾಕಾರದ ಬೂದು ಬಣ್ಣದ ಗೆರೆ ಇದೆ. ಪುಕ್ಕದಲ್ಲಿ ಕಪ್ಪು ಬಣ್ಣ. ಕಾಲು ತಿಳಿ ಗುಲಾಬಿ, ಚುಂಚು ಕೇಸರಿ ಬಣ್ಣದಿಂದ ಕೂಡಿದೆ.

Advertisement

ಕಣ್ಣಿನ ಪಾಪೆ ಕಂದುಗಪ್ಪು ಬಣ್ಣ ಇದ್ದು, ಸುತ್ತಲೂ ಕೆಂಪು ಬಣ್ಣ ಇದೆ. ಹೀಗಾಗಿ ಇದನ್ನು ಕೆಂಪು ಮುನಿಯ, ಕಪ್ಪುತಲೆ ಮುನಿಯ, ಕಂದು ಬಣ್ಣದ ಮುನಿಯಾಗಳಿಗಿಂತ ಭಿನ್ನ ಎಂದು ಸುಲಭವಾಗಿ ಗುರುತಿಸಬಹುದು. ಇದು ಜನರ ಪಾಲಿಗೆ ಶುಭ ಶಕುನದ ಹಕ್ಕಿಯಂತೆ. ಮನೆಯ ಪಂಜರದಲ್ಲಿ ಸಾಕುವ ರೂಢಿಯೂ ಮಧ್ಯಭಾರತದಲ್ಲಿದೆ. ಮೈನಾ ಮತ್ತು ಗಿಳಿಗಳಂತೆ ಇದು ಒಂದು ಸಾಕು ಪಕ್ಷಿಯೂ ಹೌದು. ಇದರ ಜೊತೆ‌ ಫೋಜ ಪಿಂಚ್‌, ಚುಕ್ಕಿ ಮುನಿಯಾಗಳನ್ನು ಮನೆಯ ಬಾಗಿಲಿನಲ್ಲಿ ಪಂಜರದಲ್ಲಿಟ್ಟು ತೂಗು ಹಾಕುವುದರಿಂದ ಅಶುಭ ಮನೆಯ ಜನರಿಗೆ ತಟ್ಟುವುದಿಲ್ಲ ಎಂಬ ನಂಬಿಕೆಯಿದೆ.

ಮಹಾರಾಷ್ಟ್ರದಲ್ಲಿ ಈ ಪದ್ಧತಿ ಇನ್ನೂ ಉಳಿದಿದೆ. 1992-2000ದಲ್ಲಿ ಇಂಥ ಹಕ್ಕಿಗಳನ್ನು ಹಿಡಿಯುವುದು, ಮಾರುವುದು ಕಾನೂನು ಬಾಹಿರವಾಗಿತ್ತು! ಇದರ ಸಂತತಿ ಈಗ ಕಡಿಮೆ ಆಗುತ್ತಿದೆ ಎನ್ನುವುದು ಪಕಿ Òತಜ್ಞರ ಕಳವಳ. ಇದಕ್ಕೆ ಕಾರಣ ಮಾನವನ ದುರಾಸೆ. ಈ ಹಕ್ಕಿಗಳನ್ನು ಲಾಳದಂಥ ಬಲೆ ಬಳಸಿ ಹಿಡಿದು, ದೇಶ ವಿದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸಂಗತಿ ಪಕ್ಷಿ ಪ್ರೇಮಿಗಳನ್ನೇ ಬೆಚ್ಚಿ ಬೀಳಿಸಿತ್ತು.

ಮಧ್ಯಭಾರತ, ರಾಜಸ್ಥಾನದ ಹಿರೋಹಿಯಿಂದ ಹಿಡಿದು ಬಿಹಾರದ ಹಜಾರಿಭಾಗ್‌, ಆಂಧ್ರಪ್ರದೇಶ, ವಿಶಾಖಪಟ್ಟಣದ ವರೆಗೂ ಇದರ ನೆಲೆ ಇದೆ. ಇಂದಿಗೂ ಅಲ್ಲಿನ ಆದಿವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಇವುಗಳನ್ನು ಹಿಡಿದು, ಬೀದಿಗಳಲ್ಲಿ ಮಾರುವುದನ್ನು ಕಾಣಬಹುದು. ಶುಭ ಶಕುನದ ಹಕ್ಕಿಯೆಂಬ ಕಾರಣಕ್ಕೆ ಇದನ್ನು ಕೊಳ್ಳಲು ಜನ ಮುಗಿಬೀಳುತ್ತಾರೆ. ಇವುಗಳ ಮಾರಾಟ ತಡೆಯಲು ಮತ್ತು ಇವುಗಳನ್ನು ಸಂರಕ್ಷಿಸಲು ಖನ್ನಾದ ಪಕ್ಷಿಧಾಮ, ತಲ್‌ಚಪ್ಪರ್‌ ಅಭಯಾರಣ್ಯ, ಪಾಲಮ್‌ ರಾಷ್ಟ್ರೀಯವನ, ಗುರುಕುಲಮ್‌ ಅಭಯಾರಣ್ಯ, ಕರ್ನಾಟಕದ ಕಾರವಾರದ ಅಣಶಿ ಅಭಯಾರಣ್ಯಗಳನ್ನು ನಿರ್ಮಿಸಲಾಗಿದೆ. ಇಂಥ ಅಪರೂಪದ ಪಕ್ಷಿಗಳ ಮತ್ತು ಪ್ರಾಣಿಗಳ ಉಳಿವಿಗಾಗಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

 ಕರ್ನಾಟಕಕ್ಕೆ ಬ್ರೌನ್‌ ಹೆಡೆಡ್‌ಗಲ್‌, ಪಿನ್‌ ಟೇಲ್‌ ಡಕ್‌, ಬಾರ್‌ ಹೆಡೆಡ್‌ ಡ‌ಕ್‌ ಹಕ್ಕಿಗಳು ವಲಸೆ ಬರುತ್ತವೆ. ಇದಲ್ಲದೆ, ಅಪಾಯದ ಅಂಚಿನಲ್ಲಿರುವ ಪೆಲಿಕಾನ್‌, ಅಡ್ಜಟಂಟ್‌ ಕೊಕ್ಕರೆ, ಮಾರ್ಬಲ್‌ಟೇಲ್‌, ಸರಸ್‌ಕ್ರೇನ್‌, ಶಿಪ್ಟ ಪಕ್ಷಿಗಳು ಸಹ ಪಶ್ಚಿಮಘಟ್ಟದ ಚೆಲುವನ್ನು ಹೆಚ್ಚಿಸಿವೆ. ಹುಲ್ಲು ಬೆಳೆಯುವ ಪರ್ವತ ಪ್ರದೇಶ ಹಸಿರು ಮುನಿಯಾಗಳಿಗೆ ಅತ್ಯಂತ ಪ್ರಿಯ. ಅರಣ್ಯ ನಾಶ, ಹುಲ್ಲುಗಾವಲುಗಳ ನಾಶ ಕೂಡ ಇವುಗಳ ಕಣ್ಮರೆಗೆ ಕಾರಣಗಳಲ್ಲೊಂದು. ಈ ಹಕ್ಕಿಯ ಆಹಾರ, ಕಾಳು ಮತ್ತು ಹುಲ್ಲಿನ ಬೀಜ. ಕಾಡು ನಾಶದಿಂದ ಬಿದಿರಿನ ಮಳೆಯೂ ಕಡಿಮೆಯಾಗುತ್ತಿದೆ. 

Advertisement

ಅಕ್ಟೋಬರ್‌ನಿಂದ ಜನವರಿ ವೇಳೆಯಲ್ಲಿ ಇದು ಮರಿ ಮಾಡುತ್ತದೆ. ಆಗ ಹುಲ್ಲನ್ನು ಸುತ್ತಿ ಬಿಗಿಗೊಳಿಸಿ, ಕೆಲವು ಎಲೆಗಳನ್ನು ಸೇರಿಸಿ ಗೂಡನ್ನು ನಿರ್ಮಿಸುತ್ತದೆ. ಅದರಲ್ಲಿ ಮಧ್ಯೆ ಮೆತ್ತನೆ ಹಾಸನ್ನು ಮಾಡಿ, ಅದರ ಮೇಲೆ 5-6 ಮೊಟ್ಟೆ ಇಡುತ್ತದೆ. ಗಂಡು- ಹೆಣ್ಣು ಸೇರಿ ಕಾವು ಕೊಟ್ಟು ಮರಿ ಮಾಡುತ್ತವೆ. ಹಸಿರು ಗುಬ್ಬಿ ಗೂಡನ್ನು ಗಂಡು ಹೆಣ್ಣು ಸೇರಿ ಕಟ್ಟುವುದೋ, ಗಂಡು ಕಟ್ಟಿದ ಗೂಡನ್ನು ನೋಡಿ ತನ್ನ ಪ್ರಿಯಕರನನ್ನು ಹೆಣ್ಣು ಆರಿಸುವುದೋ? ಈ ವಿಷಯದಲ್ಲಿ ಹೆಚ್ಚಿನ ಅಂಶ ತಿಳಿದಿಲ್ಲ. ಹಸಿರು ಮುನಿಯನ ಆವಾಸತಾಣ, ಆಹಾರ- ವಿಹಾರಗಳ ಕುರಿತು ಅಧ್ಯಯನ ನಡೆದರೆ, ಇದರ ರಕ್ಷಣೆಗೆ ಅನುಕೂಲವಾಗುತ್ತದೆ.

ಪಿ.ವಿ.ಭಟ್‌ ಮೂರೂರು 

Advertisement

Udayavani is now on Telegram. Click here to join our channel and stay updated with the latest news.

Next