Advertisement

ಶಿಕ್ಷಕರ ತ್ಯಾಗದಿಂದ ಶ್ರೇಷ್ಠ ಸಮಾಜ

01:25 PM May 27, 2018 | |

ಬೀದರ: ಉತ್ತಮ ಗುರುವಿನಿಂದ ವಿದ್ಯಾರ್ಥಿಯಾದವನು ನೈಜ ಸಮಾಜ ಜೀವಿಯಾಗಿ ಹೊರ ಹೊಮ್ಮಲು ಸಾಧ್ಯ. ಈ
ನಿಟ್ಟಿನಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧ ಕಪ್ಪೆ ಚಿಪ್ಪಿನಂತಿರಲಿ ಎಂದು ಸೃಜನಾತ್ಮಕ ಬೋಧನಾ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಜೋತ್ಸ್ನಾ ಅಯ್ಯಂಗಾರ್‌ ಹೇಳಿದರು.

Advertisement

ನಗರದ ಜನಸೇವಾ ಶಾಲೆಯಲ್ಲಿ ಸೃಜನಾತ್ಮಕ ಬೋಧನಾ ಸಂಸ್ಥೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆ
ಶಿಕ್ಷಕರಿಗಾಗಿ ಆಯೋಜಿಸಿರುವ ಮೂರು ದಿನಗಳ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,
ಶಿಕ್ಷಕ ನಿಜ ಶಿಲ್ಪಕಾರನು ಹೌದು. ಆತನ ಪ್ರಾಮಾಣಿಕ ಹಾಗೂ ಪಾರದರ್ಶಕ ತ್ಯಾಗದಿಂದ ಶ್ರೇಷ್ಠ ಸಮಾಜ
ರಚನೆ ಸಾಧ್ಯವಾಗಿದ್ದು, ವಿದ್ಯಾರ್ಥಿಗಳೇ ಶಿಕ್ಷಕನ ಪ್ರಧಾನ ಸಂಪತ್ತಾಗಬೇಕೆಂದು ಕರೆ ಕೊಟ್ಟರು.

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ, ಭಾವನಾತ್ಮಕ ಗುಣ, ನೈತಿಕ
ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಗುರುವಾಗಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿಗಳು ಬರೀ ಅಂಕ ಗಳಿಸುವ ಯಂತ್ರಗಳಾಗದೆ, ಸಮಾಜದ ನೈಜ ಆಸ್ತಿಯಾಗಬಲ್ಲರು ಎಂದು ಹೇಳಿದರು.

ಇಂದು ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆ ತೀರ ಕಂಡು ಬರುತ್ತಿದೆ. ಶಿಕ್ಷಣದ ಜೊತೆ ಜೊತೆಗೆ ಮಾನವೀಯ
ಮೌಲ್ಯ ಹಾಗೂ ಅಧ್ಯಾತ್ಮದ ತಿರುಳು ವಿದ್ಯಾರ್ಥಿಗಳಲ್ಲಿ ಉತ್ತಿ ಬಿತ್ತಿದಾಗ ಮಾದರಿ ಜೀವನ ಕಂಡುಕೊಂಡು ಜಗತ್ತಿಗೆ ತನ್ನದೆ ಆದ ವೈಶಿಷ್ಟ್ಯ ನೀಡಬಲ್ಲರು ಎಂದರು.

ಡಿಡಿಪಿಐ ಇನಾಯತ್‌ ಅಲಿ ಶಿಂಧೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಮೊಬೈಲ್‌ ದುನಿಯಾದಲ್ಲಿ
ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯನ್ನು ಗಾಳಿಗೆ ತೂರಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲರಾಗಿ
ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಕ್ಲಿಷ್ಟಕರವಾದ ದಾರಿ ಕಂಡುಕೊಳ್ಳುತ್ತಿರುವ ಯುವಜನತೆಗೆ ಶಿಕ್ಷಕರಾದವರು
ತಾಯಿಯ ರೂಪದಲ್ಲಿ ವಾತ್ಸಲ್ಯ ಕರುಣಿಸಿ, ಸ್ವತ್ಛ ಹಾಗೂ ಸುಂದರ ಯುವಕರನ್ನು ಸಮಾಜಕ್ಕೆ ಧಾರೆ ಎರೆಯಲು
ಕಂಕಣ ಬದ್ದರಾಗಬೇಕು ಎಂದರು. 

Advertisement

ಜ್ಞಾನ ಕಾರಂಜಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಭರಶೆಟ್ಟಿ ಮಾತನಾಡಿ, ನುರಿತ ಶಿಕ್ಷಕರಿಂದ ಪ್ರಬುದ್ಧ
ಸಮಾಜ ನಿರ್ಮಾಣ ಸಾಧ್ಯವಾಗಿದ್ದು, ಅಲ್ಲಿ ಜ್ಞಾನದ ಗಂಗೆ ನೆಲೆಸಬಲ್ಲಳು. ಅಂತಹ ವಾತಾವರಣದಲ್ಲಿ ಮಕ್ಕಳು
ಸಾಮಾಜಿಕ ಕಳಕಳಿಯುಳ್ಳುವರಾಗಿ ದೇಶಕ್ಕೆ ನೈಜ ಕೊಡುಗೆ ನೀಡಬಲ್ಲರು ಎಂದು ಅಭಿಪ್ರಾಯಪಟ್ಟರು.

ಶಾಲೆಯ ಆಡಳಿತ ಮಂಡಳಿ ಸದಸ್ಯ ಬಿ.ಎಸ್‌. ಕುದುರೆ ಮಾತನಾಡಿದರು. ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ
ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಮಲ್ಲಮ್ಮ ಚಾಮರೆಡ್ಡಿ ನಿರೂಪಿಸಿದರು. ಅಧ್ಯಕ್ಷ ಬಸವರಾಜ ಸ್ವಾಮಿ
ವಂದಿಸಿದರು. ಸುಧಾಕರ ದೇಶಪಾಂಡೆ, ಶಿವಶಂಕರ ತರನಳ್ಳಿ, ಯಶವಂತರಾವ್‌ ಬಿರಾದಾರ, ರವಿ ಶಂಭು ಸೇರಿದಂತೆ
ಜಿಲ್ಲೆಯ ಸುಮಾರು 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 48 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next