Advertisement

ಸರ್ಕಾರಿ ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ 

06:00 AM Jul 04, 2018 | Team Udayavani |

ವಿಧಾನಮಂಡಲ: ಸರ್ಕಾರಿ ಇಲಾಖೆಗಳಲ್ಲಿ ತುಂಬಿ ತುಳುತ್ತಿರುವ ಭ್ರಷ್ಟಾಚಾರ ಕುರಿತಾದ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಪ್ರಸ್ತಾಪವಾಯಿತು. ಕೆರೆಗಳ ಹೂಳೆತ್ತುವುದು ಸೇರಿದಂತೆ ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಎಂಬುದಾಗಿ ಸಮ್ಮಿಶ್ರ ಸರ್ಕಾರದ ಪಕ್ಷವಾದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಅವರೇ ವಿಧಾನಪರಿಷತ್‌ನಲ್ಲಿ ಗಂಭೀರ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸದ ಸ್ಯರು ಸಹಮತ ವ್ಯಕ್ತಪಡಿಸಿದರು. ಈ ಮಧ್ಯೆ, ವಿಧಾನಸಭೆಯಲ್ಲಿ ಮಾತ  ನಾಡಿದ ಜೆಡಿಎಸ್‌ ಸದಸ್ಯ ಎ.ಟಿ.ರಾಮ ಸ್ವಾಮಿ, ಭೂ ಮಾಫಿಯಾದ ಬಗ್ಗೆ ಬೆಳಕು ಚೆಲ್ಲುವ ಮೂಲಕ ಭ್ರಷ್ಟಾಚಾರ ಪಿಡುಗಿನ ವಿರುದ್ಧ ಹರಿಹಾಯ್ದರು. 

Advertisement

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಲ್ಲಿ ತೀವ್ರ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು. ಆಗ ಬಿಜೆಪಿಯ ಸದಸ್ಯರು, ಮಟ್ಟೂರ ಅವರು ನಿಜವನ್ನೇ ಹೇಳುತ್ತಿದ್ದಾರೆ ಎಂದು ಆಡಳಿತದ ಪಕ್ಷದ ಕಾಲೆಳೆದರು. ಮಾತು ಮುಂದುವರಿಸಿದ ಮಟ್ಟೂರ, ಕೊಪ್ಪಳದಲ್ಲಿ 38 ಕೋಟಿ ರೂ. ದುರ್ಬಳಕೆಯಾಗಿದೆ. ನಾನು ಆಧಾರವನ್ನಿಟ್ಟುಕೊಂಡೇ ಮಾತನಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಲು ಮುಂದಾದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಶರಣಪ್ಪ ಮಟ್ಟೂರ ಅವರು ಕುಳಿತುಕೊಳ್ಳುವಂತೆ ತಾಕೀತು ಮಾಡಿದ್ದು ಸಹ ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. 

ಬಿಜೆಪಿಯ ತೇಜಸ್ವಿನಿ ಗೌಡ ಮಾತನಾಡಿ, ಕೆರೆ ಹೂಳೆತ್ತುವ ಕಾರ್ಯಕ್ಕೆ ವಿನಿಯೋಗಿಸುವ ಹಣದಲ್ಲಿ ಹೊಸದಾಗಿ ಕೆರೆಯನ್ನೇ ನಿರ್ಮಿಸಬಹುದು. ಹೂಳೆತ್ತುವ ಕಾರ್ಯದಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ. ರಾಮನಗರ, ನಂದಿಬೆಟ್ಟ ಇತರೆಡೆ ಅವೈಜ್ಞಾನಿಕ, ಅಕ್ರಮವಾಗಿ ಗಣಿಗಾರಿಕೆ
ನಡೆಸಲಾಗುತ್ತಿದೆ ಎಂದು ದೂರಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಎಸ್‌. ಪುಟ್ಟರಾಜು, ಕೊಪ್ಪಳ ಮತ್ತು ರಾಯಚೂರಿನಲ್ಲಿ 38 ಕೋಟಿ ರೂ.ದುರ್ಬಳಕೆ ಆರೋಪ ಪ್ರಕರಣ ವನ್ನು ಹಿಂದಿನ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಅದರಂತೆ 26 ಮಂದಿ ಅಧಿಕಾರಿಗಳು ಅಮಾನತುಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಸಿಐಡಿ ಆರೋಪ ಪಟ್ಟಿ ಕೂಡ ಸಲ್ಲಿಸಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದಿಟಛಿ ಇಲಾಖೆ ವ್ಯಾಪ್ತಿಯಲ್ಲಿ 3695 ಕೆರೆಗಳಿದ್ದು, ಈ ಪೈಕಿ 391 ಕೆರೆಗಳ ಸರ್ವೆ ಅಗತ್ಯವಿಲ್ಲ. 2501 ಕೆರೆಗಳ ಸರ್ವೆ ಕೈಗೊಳ್ಳಲಾಗಿದ್ದು, 1150 ಕೆರೆಗಳಲ್ಲಿ 5791 ಹೆಕ್ಟೇರ್‌
ಒತ್ತುವರಿಯಾಗಿದೆ. ಇದರಲ್ಲಿ 1058 ಕೆರೆಗಳ 5383 ಹೆಕ್ಟೇರ್‌ನಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 92 ಕೆರೆಗಳ ಒತ್ತುವರಿ ತೆರವು
ಬಾಕಿ ಇದೆ ಎಂದು ತಿಳಿಸಿದರು.

ಕೇವಲ ಇಬ್ಬರು ಭೂಮಾಪಕರು: ಇಲಾಖೆಯಡಿ 51 ಪ್ರಥಮ ದರ್ಜೆ ಭೂಮಾಪಕರು ಹಾಗೂ 1 ದ್ವಿತೀಯ ದರ್ಜೆ ಭೂಮಾಪಕರ ಹುದ್ದೆ ಮಂಜೂರಾಗಿದ್ದು, ಕೇವಲ ಎರಡು ಹುದ್ದೆಗಳಷ್ಟೇ ಭರ್ತಿಯಾಗಿವೆ. ಖಾಲಿಯಿರುವ ಭೂಮಾಪಕರ ಹುದ್ದೆಗಳನ್ನು ಎರವಲು ಸೇವೆ ಮೇಲೆ ನಿಯೋಜಿಸುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಸರ್ಕಾರದ ನಾನಾ ಇಲಾಖೆಗಳ ಅಧೀನದಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರುವ ಸಂಬಂಧ ಕಾಯ್ದೆಗೆ ತಿದ್ದುಪಡಿಯಾಗಿದ್ದು, ನಿಯಮಾವಳಿ ರಚನೆ ಸಂಬಂಧ ಕಾನೂನು ಇಲಾಖೆಯಿಂದ ಮಾಹಿತಿ
ಕೋರಲಾಗಿದೆ ಎಂದು ಹೇಳಿದರು. ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿಯ ವೈ.ಎ.ನಾರಾಯಣ  ಸ್ವಾಮಿ, ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ, ಶ್ರೀಕಾಂತ್‌ ಗೋಕ್ಲೃಕರ್‌, ಬಸವರಾಜ ಪಾಟೀಲ್‌ ಇಟಗಿ, ಜೆಡಿಎಸ್‌ನ ಬೋಜೇಗೌಡ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ: ರಾಮಸ್ವಾಮಿ 
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾನಿರ್ಣಯ ಅನುಮೋದಿಸಿ ಮಾತನಾಡಿದ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ, ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಿದರೆ ನಗರ ಪ್ರದೇಶಗಳಲ್ಲಿ ಭೂಮಿ ಸಿಗದೆ ಸಮಸ್ಯೆ ಎದುರಿಸುತ್ತಿರುವ ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬಹುದು. ಆದರೆ, ಈ ನುಂಗಣ್ಣ ಭೂಮಾಫಿಯಾ ಅದಕ್ಕೆ ಅವಕಾಶ ನೀಡುತ್ತಿಲ್ಲ. ಆಡಳಿತವನ್ನೇ ನಿಯಂತ್ರಿಸುವ ಈ ಮಾಫಿಯಾ ಎಷ್ಟೊಂದು ಬಲಾಡ್ಯವಾಗಿದೆ ಎಂದರೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಮನೆಗೇ ಹೋಗಿ ತಮ್ಮ ಪರ ತೀರ್ಪು
ನೀಡಲು ಹಣ ಕೊಡುವಷ್ಟರ ಮಟ್ಟಿಗೆ ಇದೆ ಎಂದರು. ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಭೂಗಳ್ಳರ ಕೈಯ್ಯಲ್ಲಿದೆ. ಹೀಗಿರುವಾಗ ವಸತಿ ಯೋಜನೆಗೆ ಭೂಮಿ ಹೇಗೆ ಸಿಗಬೇಕು. ಈ ಬಗ್ಗೆ ಸದನ ಸಮಿತಿ, ನಿವೃತ್ತ ಐಎಎಸ್‌ ಅಧಿಕಾರಿ ಬಾಲಸುಬ್ರಮಣಿಯನ್‌ ನೇತೃತ್ವದ ಸಮಿತಿಗಳನ್ನು ರಚಿಸಿ, ವರದಿಗಳನ್ನು ಪಡೆದುಕೊಂಡಿದ್ದರೂ ಇದುವರೆಗೆ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಎಸ್‌.ಕೆ.ಮುಖರ್ಜಿ ಅವರು ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿ ಯಾಗಿದ್ದಾಗ ಅವರ ಮನೆಗೆ ಹೋಗಿ ತಮ್ಮ ಪರ ತೀರ್ಪು ನೀಡಿ ಎಂದು ಹಣ ಕೊಡಲು ಮುಂದಾಗುತ್ತಾರೆ. ಇದನ್ನು ಮುಖ್ಯನ್ಯಾಯಮೂರ್ತಿಗಳೇ ಬಹಿರಂಗಪಡಿಸಿದ್ದಾರೆ. ಆದರೆ, ಅಂಥವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲವೋ ಗೊತ್ತಿಲ್ಲ. ಹಿಂದೆ ಪೊಲೀಸ್‌ ಆಯುಕ್ತರಾಗಿದ್ದವರೇ ಎಂಟು ಎಕರೆ ದರ್ಖಾಸು ಜಮೀನು ಕಬಳಿಸಿದ್ದಾರೆ. ಆ ಅಧಿಕಾರಿ ಎಷ್ಟು ಕತರ್ನಾಕ್‌ ಎಂದರೆ, ಪಹಣಿ ಮೇಲೆ ಹೈಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿದೆ ಎಂದು ನಕಲಿ ಸೂಲ್‌ ಹಾಕಿಕೊಳ್ಳುತ್ತಾರೆ. ಅವರ ವಿರುದ್ಧ ರಾಜ್ಯ, ಕೇಂದ್ರ ಸರ್ಕಾರಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next