Advertisement
ಬಹುತೇಕ ಸಾವಯವ ರೈತರು, ಸಿರಿಧಾನ್ಯಗಳ ವ್ಯಾಪಾರಿಗಳು ಹಾಗೂ ವಿವಿಧ ಸಹಕಾರ, ಮಹಿಳಾ ಸಂಘಗಳ ಸದಸ್ಯರು ಮೇಳದಲ್ಲಿ ಕಂಡುಬಂದರು. ಸುಮಾರು 70ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಿದ್ದು, ಎಲ್ಲರಿಗೂ ಉಚಿತವಾಗಿಮಳಿಗೆ ನೀಡಲಾಗಿತ್ತು. ಇದರಿಂದ ಎಲ್ಲ ಮಳಿಗೆಗಳು ಭರ್ತಿಯಾಗಿದ್ದವು.
Related Articles
ಮೇಳದ ನಿಮಿತ್ತ ರವಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಝಿ ಸರಿಗಮಪ ಖ್ಯಾತಿ ಗಾಯಕರಾದ ಸುನೀಲ್, ಇಂಪನಾ, ಬಸಪ್ಪ ಹಲವು ಹಾಡುಗಳನ್ನು ಹಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ರಂಜಿಸಿದರು.
Advertisement
ಸುನೀಲ್ ಭಕ್ತಿಗೀತೆ, ಸಿನಿಮಾ ಹಾಡುಗಳನ್ನು ಹಾಡಿದರೆ, ಇಂಪನಾ ಯುವಕರನ್ನು ಆಕರ್ಷಿಸುವಂಥ ಟಪ್ಪಂಗುಚ್ಚಿ ಹಾಡುಗಳನ್ನೇ ಹಾಡಿದರು. ಇನ್ನು ಬಸಪ್ಪ ಹಳೆ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಕೊನೆಯಲ್ಲಿ ಇಂಪನಾ ಹಾರ್ಟ್ ಅನ್ನೊ ಅಡ್ಡದಲ್ಲಿ ಹಾಡಿದರೆ, ಸುನೀಲ್ ಅಲ್ಲಾಡ್ಸ ಅಲ್ಲಾಡ್ಸು ಹಾಡು ಹಾಡಿ ಯುವಕ ಯುವತಿಯರನ್ನು ಕುಣಿಯುವಂತೆ ಮಾಡಿದರು. ಕೊನೆಯಲ್ಲಿ ವಿವಿಯ ವಿದ್ಯಾರ್ಥಿನಿಯರು, ಯುವಕರು ಕುಣಿದು ಕುಪ್ಪಳಿಸಿದರು. ಗಾಯಕರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮಾತ್ರ ಸಾಲುಗಟ್ಟಿದ್ದರು.
ಮಾಹಿತಿ ನೀಡುವವರೇ ಮಾಯ..!ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಎರಡನೇ ದಿನ ಸಂಜೆಗೆಲ್ಲ ಅಧಿಕಾರಿಗಳ್ಯಾರು ಮೇಳದಲ್ಲಿ ಕಾಣಿಸಲಿಲ್ಲ. ಮಾಹಿತಿಗಾಗಿ ನಿಗದಿ ಮಾಡಿದ್ದ ಮಳಿಗೆಗಳು ಕೂಡ ಖಾಲಿಯಾಗಿದ್ದವು. ರವಿವಾರ ಮತ್ತು ಸೋಮವಾರ ರಜೆ ಇರುವ ಕಾರಣ 2ನೇ ದಿನ ಸಂಜೆ ಕೂಡ ಹೆಚ್ಚು ಜನ ಆಗಮಿಸಿದ್ದರು. ಆದರೆ, ಮಾಹಿತಿ ನೀಡಲು ಇಲಾಖೆ ಸಿಬ್ಬಂದಿಯೇ ಇರಲಿಲ್ಲ. ಅಲ್ಲದೇ, ಮಳಿಗೆಗಳನ್ನು ಬೇಗನೇ ಖಾಲಿ ಮಾಡುವಂತೆ ತಾಕೀತು ಮಾಡಿದ್ದಲ್ಲದೇ, ಮಳಿಗೆಗಳಿಗೆ ವಿದ್ಯುತ್ ಕಡಿತಗೊಳಿಸಲಾಯಿತು. ಇದಕ್ಕೆ ವರ್ತಕರು ಬೇಸರ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಗಳು
ಸಿರಿಧಾನ್ಯ ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮೂರು ಜಿಲ್ಲೆಗಳಿಂದ ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು. ವಿಜೇತರಿಗೆ ಸಮಾರೋಪದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿರಿ ರಂಗೋಲಿ ಸ್ಪರ್ಧೆಯಲ್ಲಿ ರಾಯಚೂರಿನ ಪ್ರೀತಿ ನಿಜಾಂಕರಿ ಪ್ರಥಮ, ಲತಾ ದ್ವಿತೀಯ, ಹಾಗೂ ಜಯಲಕ್ಷ್ಮೀ ಅವರು ತೃತೀಯ ಸ್ಥಾನ ಪಡೆದರು. ಸಿರಿಪಾಕ ಸ್ಪರ್ಧೆಯಲ್ಲಿ ಮಿಶ್ರಧಾನ್ಯಗಳ ಹಲ್ವ ತಯಾರಿಸಿದ ರಾಯಚೂರಿನ ಪ್ರೀತಿ ಪ್ರಥಮ ಸ್ಥಾನ ಗಳಿಸಿದರೆ, ನವಣೆ ಅಕ್ಕಿ ಹಲ್ವ ತಯಾರಿಸಿದ ಸರಸ್ವತಿ ಪಾಟೀಲ್ ದ್ವಿತೀಯ ಸ್ಥಾನ ಹಾಗೂ ನವಣೆ ಹೋಳಿಗೆ ತಯಾರಿಸಿದ ಶಿಲ್ಪಾ ತೃತೀಯ ಸ್ಥಾನಗಳಿಸಿದ್ದಾರೆ. ಕಿರುಧಾನ್ಯಗಳ ಖಾರದ ಅಡುಗೆ ಸ್ಪರ್ಧೆಯಲ್ಲಿ ಬಾತ್ ಮೊಸರನ್ನ ತಯಾರಿಸಿದ ರಾಯಚೂರಿನ ನಿರ್ಮಲಾ ಪ್ರಥಮ, ಬರಗು ವೆಜ್ ಬಿರಿಯಾನಿ ತಯಾರಿಸಿದ ಜಯಲಕ್ಷ್ಮೀ ದ್ವಿತೀಯ ಸ್ಥಾನ ಗಳಿಸಿದರು. ಕೊರಲೆ ಬಿಸಿ ಬೇಳೆ ಬಾತ್ ತಯಾರಿಸಿದ್ದ ಎಸ್. ಆರತಿ ತೃತೀಯ ಸ್ಥಾನ ಪಡೆದರು.