Advertisement

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ

11:39 PM Oct 12, 2024 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡದೇ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯಗಳಿಗೆ ಅನುದಾನ ನಿಗದಿಪಡಿಸುವುದು ಕೇಂದ್ರ ಸರಕಾರವಲ್ಲ, ಹಣಕಾಸು ಆಯೋಗ. ಆಯೋಗಕ್ಕೆ ಸಮರ್ಪಕ ದಾಖಲೆ ನೀಡದೇ ನಿರ್ಲಕ್ಷ್ಯ ತೋರಿ ಬಳಿಕ ಕಡಿಮೆ ಹಣ ನೀಡಿದೆ ಎಂದು ಕೇಂದ್ರವನ್ನು ದೂರುವುದು ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಚಾಳಿಯಾಗಿದೆ. ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿಯೇ ರಾಜ್ಯಕ್ಕೆ ಅನುದಾನ ಹೆಚ್ಚು ಬಂದಿದೆ.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 49,000 ಕೋಟಿ ರೂ. ಗ್ರ್ಯಾಂಟ್‌ ಇನ್‌ ಏಡ್‌ ಅನುದಾನ ಬಂದಿದ್ದರೆ, ಎನ್‌ಡಿಎ ಸರಕಾರದಲ್ಲಿ 3 ಲಕ್ಷ ಕೋಟಿ ರೂ. ಬಂದಿದೆ. ತೆರಿಗೆ ಬಾಬ್ತಿನಲ್ಲಿ ಯುಪಿಎ ಅವಧಿಯಲ್ಲಿ 63,000 ಕೋಟಿ ರೂ. ಬಂದಿದ್ದರೆ, ಎನ್‌ಡಿಎ ಅವಧಿಯಲ್ಲಿ 3.25 ಲಕ್ಷ ಕೋಟಿ ರೂ. ಬಂದಿದೆ ಎಂದರು. 2016-17ರಲ್ಲಿ ಹಣಕಾಸು ಆಯೋಗ ಅನುದಾನ ನಿಗದಿಪಡಿಸಿತ್ತು. ಆಗ ರಾಜ್ಯದಲ್ಲಿ ಇದೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಇತ್ತು. ಆಗ ಏಕೆ ಪ್ರಶ್ನಿಸಲಿಲ್ಲ ಎಂದು ಜೋಶಿ ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಕೊಟ್ಟಿತ್ತು: ಎಂಎಲ್‌ಸಿ ರವಿಕುಮಾರ್‌ ಪ್ರಶ್ನೆ
ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಹಣವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದರು ಎಂಬ ಅಂಕಿಅಂಶ ಬಿಡುಗಡೆ ಮಾಡಿ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ತಿರುಗೇಟು ನೀಡಿದ್ದಾರೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಹಣವನ್ನು ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ್ದೀರೆಂದು ಅಂಕಿಅಂಶ ಕೊಡಬೇಕು. ಮೋದಿ ನೇತೃತ್ವದ ನಮ್ಮ ಕೇಂದ್ರ ಸರಕಾರ ಎಷ್ಟು ಹಣಕಾಸು ನೀಡಿದೆ ಎಂಬುದನ್ನು ನಾವೂ ಬಿಡುಗಡೆಗೊಳಿಸಲು ಸಿದ್ಧ ಎಂದು ಸವಾಲು ಹಾಕಿದರು.

Advertisement

ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಾಂಗ್ರೆಸ್‌ ಅವಧಿಗಿಂತ ಹೆಚ್ಚು ಹಣವನ್ನು ಎನ್‌ಡಿಎ ನೀಡಿದೆ. ಯಾವುದೇ ಅನ್ಯಾಯ ಆಗಿಲ್ಲ. ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಕೊಡುವ ಹಣವನ್ನು ಹೋಲಿಸಿ ಡಿ.ಕೆ. ಸುರೇಶ್‌ ಅವರು ಪ್ರತ್ಯೇಕ ರಾಜ್ಯ ಕೇಳುವ ಮಾತನಾಡಿದ್ದಾರೆ. ಡಿ.ಕೆ. ಸುರೇಶ್‌ ಮಾಡುವ ಆರೋಪ ಸರಿಯಲ್ಲ. ಇದು ಖಂಡನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next