Advertisement

ವಿದ್ಯುತ್‌ ದೀಪ ಅಳವಡಿಸಲು ಅನುದಾನ 

05:19 PM Jun 24, 2018 | Team Udayavani |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಚಿಕ್ಕೋಡಿ ಪಟ್ಟಣ, ನಿಪ್ಪಾಣಿ, ನಾಗರಮುನ್ನೋಳ್ಳಿ ಮತ್ತು ಕಬ್ಬೂರ ಗ್ರಾಮದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿರುವ ವಿಭಜಕಕ್ಕೆ ಸೆಂಟರ್‌ ಸ್ಟ್ರೀಟ್‌ ಲೈಟ್‌ ಅಳವಡಿಸಲು ರಾಜ್ಯ ಸರ್ಕಾರ 4.82 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಭಿವೃದ್ಧಿ ಕಾಮಗಾರಿಯ ಆದೇಶ ಪತ್ರ ವಿತರಿಸಿದ ಅವರು, ಪಟ್ಟಣದ ಮಿನಿ ವಿಧಾನಸೌಧದಿಂದ ಹುಡ್ಕೋ ಕಾಲೋನಿಯವರಿಗೆ ಇರುವ ರಸ್ತೆ ವಿಭಜಕಕ್ಕೆ ಸ್ಟ್ರೀಟ್‌ ಲೈಟ್‌ ಅಳವಡಿಸಲು 1.34 ಕೋಟಿ ರೂ, ನಿಪ್ಪಾಣಿ ನಗರದಲ್ಲಿ ವಿಭಜಕ ರಸ್ತೆಗೆ ಲೈಟ್‌ ಅಳವಡಿಸಲು 1.93 ಕೋಟಿ ರೂ. ಪಟ್ಟಣಕುಡಿ ಮತ್ತು ಕುಠಾಳಿ ಗ್ರಾಮ ವ್ಯಾಪ್ತಿ ಹಾಗೂ ರಾಯಬಾಗ ಕ್ಷೇತ್ರದ ನಾಗರಮುನ್ನೋಳ್ಳಿ ಹಾಗೂ ಕಬ್ಬೂರ ಗ್ರಾಮದಲ್ಲಿ ಲೈಟ್‌ ಅಳವಡಿಸಲು 45 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೂಡಲೇ ಕೆಶಿಪ್‌ ಅಧಿಕಾರಿಗಳು ಟೆಂಡರ್‌ ಕರೆದು ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಮೊರಾರ್ಜಿ ಕಾಲೇಜು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ 240 ಸಂಖ್ಯಾಬಲದ ಹೆಣ್ಣು ಮಕ್ಕಳ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ. ಪುರಸಭೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಪಟ್ಟಣದ ಸೂಕ್ತ ಸ್ಥಳದಲ್ಲಿ ಜಾಗ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳು ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕು. ಅದರಂತೆ ಚಿಕ್ಕೋಡಿ ಮತ್ತು ಸದಲಗಾ ಪಟ್ಟಣಗಳಲ್ಲಿ 300 ಸಂಖ್ಯಾಬಲದ 6 ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆಯುವ ಮಕ್ಕಳಿಗೆ ರಾಜ್ಯ ಸರ್ಕಾರ ಮೌಲಾನಾ ಆಜಾದ್‌ ಶಾಲೆಗಳನ್ನು ಮಂಜೂರು ಮಾಡಿದೆ ಎಂದರು.

ಅಧಿಕಾರಿಗಳಿಗೆ ಸೂಚನೆ: ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಸಂಸದರು. ಚಿಕ್ಕೋಡಿ ನಗರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೀರಿನ ಯೋಜನೆ ರೂಪಿಸಿದೆ. ಆದರೆ ಕೆಲವೊಂದು ಕಡೆಗಳಲ್ಲಿ ಕಾಮಗಾರಿ ಉಳಿದುಕೊಂಡಿದೆಯೆಂದು ಸಾರ್ವಜನಿಕರು ದೂರು ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಜುಲೈ ಒಳಗಾಗಿ ಪಟ್ಟಣದ ಎಲ್ಲ ಜನರಿಗೆ ನೀರಿನ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಆರತಿ ಮುಂಡೆ, ಸದಸ್ಯರಾದ ನಾಗೇಶ ಕಿವಡ, ಪ್ರಭಾಕರ ಕೋರೆ, ನರೇಂದ್ರ ನೇರ್ಲೆಕರ, ಗುಲಾಬ ಬಾಗವಾನ, ಸುರೇಶ ಕಟ್ಟಿಕರ, ರಾಮಾ ಮಾನೆ, ಮುಖ್ಯಾಧಿಕಾರಿ ಜಗದೀಶ ಹುಲಗಜ್ಜಿ, ಎಸ್‌.ಬಿ. ಬಣಕಾರ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next