Advertisement

ಮಧ್ಯಾಹ್ನ ಬಿಸಿಯೂಟ ಮಾಹಿತಿ ನೀಡದಿದ್ರೆ ಅನುದಾನ ಕಟ್‌

06:56 AM Nov 09, 2018 | |

ಚಿತ್ರದುರ್ಗ: ಮಧ್ಯಾಹ್ನ ಬಿಸಿಯೂಟಕ್ಕೆ ಹಾಜರಾದ ಮಕ್ಕಳ ಸಂಖ್ಯೆಯನ್ನು ಎಸ್‌ಎಂಎಸ್‌ ಮಾಡದಿರುವ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿ ಮುಟ್ಟಿಸಿದೆ. ಆಯಾ ದಿನದ ಬಿಸಿಯೂಟದ ಅನುದಾನವನ್ನು ಭರಿಸುವಂತೆ ಕಟ್ಟುನಿಟ್ಟಿನ
ಸೂಚನೆ ನೀಡಿದೆ. ಬಿಸಿಯೂಟ ಮಾಹಿತಿಯನ್ನು ಕೆಲವು ಮುಖ್ಯಶಿಕ್ಷಕರು ಸಮರ್ಪಕವಾಗಿ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ರಾಜ್ಯದ ಎಲ್ಲ ಬಿಸಿಯೂಟ ಅಧಿ ಕಾರಿಗಳಿಗೆ ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ನ. 2 ರಂದು ಎಚ್ಚರಿಕೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಮಕ್ಕಳ ಹಾಜರಾತಿಗೆ ತಕ್ಕಂತೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಮಧ್ಯಾಹ್ನದ ಬಿಸಿಯೂಟಕ್ಕೆ ಶೇ. ನೂರರಷ್ಟು ಅನುದಾನ ಪಡೆಯುತ್ತಿದ್ದರು. ಆದರೆ ಇಡೀ ರಾಜ್ಯದಲ್ಲಿ ಶೇ.40 ರಿಂದ 45ರಷ್ಟು ಶಾಲಾ ಮಕ್ಕಳ ಹಾಜರಾತಿಯನ್ನಷ್ಟೇ ಎಸ್‌ಎಂಎಸ್‌ ಮೂಲಕ
ಶಿಕ್ಷಣ ಇಲಾಖೆಗೆ ಕಳುಹಿಸಲಾಗುತ್ತಿತ್ತು. ಶೇ. ನೂರರಷ್ಟು ಪ್ರಗತಿ ಸಾಧಿಸುವಂತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೇಲಾಧಿಕಾರಿಗಳು ಸೂಚನೆ ನೀಡಿ ದ್ದರು. ಆದರೂ ಮುಖ್ಯಶಿಕ್ಷಕರು ಕಿವಿಗೊಟ್ಟಿರಲಿಲ್ಲ. ಮಧ್ಯಾಹ್ನದ ಬಿಸಿಯೂಟ ನೀಡುವ ಬಗ್ಗೆ ಎಸ್‌ ಎಂಎಸ್‌ ಮೂಲಕವೇ ಮೇಲ್ವಿಚಾರಣೆ ಮಾಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಾಜರಾತಿ ತಿಳಿದುಕೊಳ್ಳಲಾಗುತ್ತದೆ. ಇದರ ಆಧಾರದ ಮೇರೆಗೆ ಬಿಸಿಯೂಟ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 18 ತಿಂಗಳಿನಿಂದ ಎಸ್‌ ಎಂಎಸ್‌ ಪದಟಛಿತಿ ಅಳವಡಿಕೆ ಮಾಡಲಾಗಿತ್ತು. ಪ್ರತಿ ದಿನ ಶಾಲೆಗೆ ಹಾಜರಾದ ಮಕ್ಕಳ ಮಾಹಿತಿಯನ್ನು ಸ್ಪಷ್ಟ ಹಾಗೂ ನಿಖರವಾಗಿ ಎಸ್‌ಎಂಎಸ್‌ ಕಳುಹಿಸಬೇಕಿದೆ. ಒಂದೊಮ್ಮೆ ಮುಖ್ಯಶಿಕ್ಷಕರು, ನೋಡಲ್‌ ಶಿಕ್ಷಕ ಎಸ್‌ಎಂಎಸ್‌ ಕಳುಹಿಸದಿದ್ದರೆ ಸಿಆರ್‌ಪಿ ಮತ್ತು ಶಿಕ್ಷಕರಿಗೆ ಎಸ್‌ಎಂಎಸ್‌ ಕಳುಹಿಸಿಲ್ಲ ಎನ್ನುವ ಸಂದೇಶ ಸ್ವಯಂಚಾಲಿತವಾಗಿ ಬರುತ್ತಿತ್ತು. ಮಕ್ಕಳ ಹಾಜರಾತಿ ಆಧರಿಸಿ ಬಿಸಿಯೂಟಕ್ಕೆ ಅನುದಾನ ಬಿಡುಗಡೆಯಾಗುತ್ತಿತ್ತು.

ಏನಿದು ಎಸ್‌ಎಂಎಸ್‌ ಪದ್ಧತಿ?: ಮಧ್ಯಾಹ್ನ ಬಿಸಿಯೂಟಕ್ಕೆ ಹಾಜರಾಗುವ ಮಕ್ಕಳ ಹಾಜರಾತಿ ವಿವರವನ್ನು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರು ಮತ್ತು ನೋಡಲ್‌ ಸಹಾಯಕ ಶಿಕ್ಷಕರು ಕಡ್ಡಾಯವಾಗಿ ಪ್ರತಿ ದಿನ ಸಂಜೆ 4 ಗಂಟೆಯೊಳಗೆ ಉಚಿತ ಟೋಲ್‌ಫ್ರಿ ಸಂಖ್ಯೆ 15544ಕ್ಕೆ ಎಸ್‌ಎಂಎಸ್‌ ಮೂಲಕ ಕಳುಹಿಸಬೇಕು. ಈ ಹಂತದಲ್ಲಿ ತಲೆದೋರುವ ಸಮಸ್ಯೆಗಳಿಗೆ ಟೋಲ್‌ಫ್ರಿ ಸಂಖ್ಯೆ 1800-425-20007ಕ್ಕೆ ಉಚಿತ ಕರೆ ಮಾಡಿ ಪರಿಹಾರ ಕಂಡುಕೊಳ್ಳುವ
ವ್ಯವಸ್ಥೆ ಜಾರಿಯಲ್ಲಿದೆ.

ಮುಖ್ಯಶಿಕ್ಷಕರು ಮತ್ತು ನೋಡಲ್‌ ಶಿಕ್ಷಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ ನೋಂದಣಿಯಾಗಿರುತ್ತದೆ. ಈ ಇಬ್ಬರು ಶಿಕ್ಷಕರು ರಜೆ ಹೋಗಿದ್ದರೆ ಅವರನ್ನು ಹೊರತುಪಡಿಸಿ ಬೇರೆ ಯಾವ ಶಿಕ್ಷಕರೂ ಎಸ್‌ಎಂಎಸ್‌ ಕಳುಹಿಸಲು ಬರುವುದಿಲ್ಲ. ದಿನಕ್ಕೆ ಒಂದು ಸಲ ಮಾತ್ರ ಎಸ್‌ಎಂಎಸ್‌ ಕಳುಹಿಸಬೇಕು. ಆಯಾ ದಿನದ ಮಾಹಿತಿಯನ್ನು ಮಾರ್ಪಾಟು ಮಾಡಲು ಸಾಧ್ಯವಿಲ್ಲ. ಮಧ್ಯಾಹ್ನ ಬಿಸಿಯೂಟ
ಬಡಿಸುವ ಸಂದರ್ಭದಲ್ಲಿ ಹಾಜರಿದ್ದ ತರಗತಿವಾರು ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆಯನ್ನು ಎಎಂಎಸ್‌ (ಆಟೋಮೆಟೆಡ್‌ ಮಾನಿಟರಿಂಗ್‌ ಸಿಸ್ಟಂ) ಮೂಲಕ ಎಸ್‌ಎಂಎಸ್‌ ಕಳುಹಿಸಬೇಕು. ಬೇರೊಂದು ಶಾಲೆಗಳಿಗೆ ಮಕ್ಕಳನ್ನು ಟ್ಯಾಗ್‌ ಮಾಡಿದ್ದರೂ ಕೇಂದ್ರ
ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳ ಬಿಸಿಯೂಟ ಹಾಜರಾತಿ ಕಳುಹಿಸುವುದು ಕಡ್ಡಾಯ.

ಮುಖ್ಯಶಿಕ್ಷಕರು ಸಮರ್ಪಕವಾಗಿ ಎಸ್‌ಎಂಎಸ್‌ ಕಳುಹಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮುಖ್ಯ ಶಿಕ್ಷಕರಿಗೆ ಚುರುಕು ಮುಟ್ಟಿಸಲು ಮುಂದಾಗಿದೆ. ಇದು ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. 

Advertisement

58 ಲಕ್ಷ ಫಲಾನುಭವಿಗಳು 
ರಾಜ್ಯದ ಒಟ್ಟು 54,839 ಶಾಲೆಗಳಿಂದ 58,20,526 ಮಕ್ಕಳು ಬಿಸಿಯೂಟ ಮಾಡುತ್ತಿದ್ದಾರೆ. ಇದರಲ್ಲಿ 21,209 ಸರ್ಕಾರಿ
ಪ್ರಾಥಮಿಕ ಶಾಲೆಗಳು, 22270 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು, 4592 ಸರ್ಕಾರಿ ಪ್ರೌಢಶಾಲೆಗಳು, 27 ಬಾಲ ಕಾರ್ಮಿಕ
ಶಾಲೆಗಳಾಗಿವೆ. ಅನುದಾನಕ್ಕೊಳಪಟ್ಟ 225 ಪ್ರಾಥಮಿಕ, 2666 ಹಿರಿಯ ಪ್ರಾಥಮಿಕ, 3813 ಪ್ರೌಢಶಾಲೆಗಳು, 37 ಮದರಸಾಗಳಿವೆ.

ಆಯಾ ದಿನದ ಬಿಸಿಯೂಟದ ಹಾಜರಾತಿ ಎಸ್‌ಎಂಎಸ್‌ ಕಳುಹಿಸದಿದ್ದಲ್ಲಿ ಮುಖ್ಯ ಶಿಕ್ಷಕರೇ ಆ ದಿನದ ಅನುದಾನ ಭರಿಸಬೇಕೆಂದು
ಸರ್ಕಾರ ಆದೇಶ ನೀಡಿದೆ. ರಾಜ್ಯದಲ್ಲಿ ಸರಾಸರಿ 40 ರಿಂದ 45ರಷ್ಟು ಫಲಾನುಭವಿ ವಿದ್ಯಾರ್ಥಿಗಳ ಹಾಜರಾತಿ ಕಳುಹಿಸಲಾಗುತ್ತಿದೆ.
● ದ್ವಾರಕೇಶ್‌, ಜಿಲ್ಲಾ ಬಿಸಿಯೂಟ ಅಧಿಕಾರಿ

● ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next