Advertisement

ಅದ್ದೂರಿ ಶಿವ-ಬಸವ ಜಯಂತಿ ಶೋಭಾಯಾತ್ರೆ

11:54 AM May 10, 2022 | Team Udayavani |

ಚಿಕ್ಕೋಡಿ: ಶಿವ-ಬಸವ ಜಯಂತಿ ಅಂಗವಾಗಿ ಜೊಲ್ಲೆ ಉದ್ಯೋಗ ಸಮೂಹ ವತಿಯಿಂದ ನಿಪ್ಪಾಣಿ ನಗರದಲ್ಲಿ ಆಯೋಜಿಸಿದ್ದ ಭವ್ಯ ಶೋಭಾಯಾತ್ರೆ ಅಂಗವಾಗಿ ನಗರವು ಕೇಸರಿಮಯಗೊಂಡು ಕಂಗೊಳಿಸುತ್ತಿತ್ತು. ಈ ಅಭೂತಪೂರ್ವ ಮೆರವಣಿಗೆಗೆ ನಗರ ಮತ್ತು ಹಳ್ಳಿ ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಶಿವ-ಬಸವ ಭಕ್ತರು ಸಾಕ್ಷಿಯಾದರು. ಶೋಭಾಯಾತ್ರೆ ಹಿನ್ನಲೆಯಲ್ಲಿ ನಗರದ ಛತ್ರಪತಿ ಶಿವಾಜಿ ವೃತ್ತ ಮತ್ತು ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು.

Advertisement

ಭವ್ಯ ಶೋಭಾಯಾತ್ರೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಮ್ಯಾಗ್ನಮ್‌ ಟಫ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಶಿವ-ಬಸವ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ವಿಶೇಷ ಅಲಂಕೃತ ವಾಹನದಲ್ಲಿ ಸ್ಥಾಪಿಸಲಾಗಿದ್ದ ಶಿವ-ಬಸವ ಪ್ರತಿಮೆಗಳು ನೆರೆದವರ ಕಣ್ಮನ ಸೆಳೆದವು. ಆನೆ, ಕುದುರೆಗಳು ಮತ್ತು 20ಕ್ಕೂ ಅಧಿಕ ರೂಪಕಗಳ ಮೆರವಣಿಗೆ ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿ ನಗರದ ಜನತೆ ವೈಭವವನ್ನು ಕಣ್ತುಂಬಿಕೊಂಡು ಪುಷ್ಪವೃಷ್ಟಿ ಮಾಡಿದರು.

ಸುಮಾರು 200ಕ್ಕೂ ಅಧಿಕ ಮಹಿಳೆಯು ತಮ್ಮ ತಮ್ಮ ಮನೆಗಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಸ್ಥಳೀಯ ಸೇರಿದಂತೆ ರಾಜ್ಯ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಸ್ಥಬ್ಧಚಿತ್ರನಗಳು ಸೇರಿದಂತೆ ಚೆಂಡಿ ವಾದ್ಯ, ನವಿಲು ಕುಣಿತ, ಕುದುರೆ ಕುಣಿತ, ಪಾತರಗಿತ್ತಿ ಕುಣಿತ, ಝಾಂಜ ಪಥಕ, ಡೊಳ್ಳು ಪಥಕಗಳು ನೋಡುಗರ ಮನಸೂರೆಗೊಂಡವು. ಬಸವೇಶ್ವರ, ಅಕ್ಕಮಹಾದೇವಿ, ಶಿವಾಜಿ ಮಹಾರಾಜರ ರೂಪಕಗಳು ಸಹ ಗಮನ ಸೆಳೆದವು. ಮಹಾತ್ಮ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವೇಷಧರಿಸಿ ಆನೆ ಅಂಬಾರಿ ಮೇಲೆ ಸವಾರರಾಗಿದ್ದ ಪುಟಾಣಿಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

Advertisement

ಶೋಭಾಯಾತ್ರೆಯಲ್ಲಿ ವಿರುಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಸ್ಥಳಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್‌ ಚಂದ್ರಕಾಂತ ಕೋಠಿವಾಲೆ, ಮಲಗೊಂಡ ಪಾಟೀಲ, ರಾಮಗೋಂಡ ಪಾಟೀಲ, ಜ್ಯೋತಿಪ್ರಸಾದ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್‌ ರಾಜೇಂದ್ರ ಗುಂಡೆಶಾ ಮತ್ತು ಸದಸ್ಯರು, ಚಂದ್ರಕಾಂತ ತಾರಳೆ, ಸುರೇಶ ಶೆಟ್ಟಿ, ದೀಲಿಪ ಚವ್ಹಾಣ, ಪ್ರಣವ ಮಾನವಿ, ಬಂಡಾ ಘೋರ್ಪಡೆ ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next