Advertisement

  ಈ “ಅಕ್ಷಯ ಕಲ್ಪ’ಗ್ರಾಮಾಭಿವೃದ್ಧಿಗೆ ಕಾಯ ಕಲ್ಪ 

04:16 PM Sep 17, 2018 | |

ತಿಪಟೂರಿನಿಂದ 12 ಕಿಮೀ ದೂರದ ಕೋಡಿಹಳ್ಳಿಯಲ್ಲಿದೆ ಅಕ್ಷಯಕಲ್ಪ ಫಾಮ್ಸ್‌ì ಅಂಡ್‌ ಫ‌ುಡ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಡೈರಿ ಉದ್ಯಮದ ಪ್ರಧಾನ ಕಚೇರಿ ಹಾಗೂ ಸಂಸ್ಕರಣಾ ಘಟಕ. ಇದು ಬೆಂಗಳೂರು ಹಾಗೂ ಇನ್ನಿತರ ನಗರಗಳಿಗೆ ಪ್ರತಿ ದಿನ 10,000 ಲೀಟರ್‌ ಹಾಲು ಸರಬರಾಜು ಮಾಡುವ ಡೈರಿ ಉದ್ಯಮ.

Advertisement

ಇತ್ತೀಚೆಗೆ ಅಲ್ಲಿಗೆ ಭೇಟಿಯಿತ್ತಾಗ, ಅಕ್ಷಯಕಲ್ಪ ಹೇಗೆ ಶುರುವಾಯಿತೆಂಬ ಮಾಹಿತಿ ನೀಡಿದವರು ಅದರ ಸಹ-ಸ್ಥಾಪಕ ಶಶಿಕುಮಾರ್‌. ವಿಪೊ› ಕಂಪೆನಿಯಲ್ಲಿ ಇಪ್ಪತ್ತು ವರುಷ ಕೆಲಸ ಮಾಡಿದ ನಂತರ, ನಮ್ಮ ರೈತರಿಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಮಾಡಬೇಕು ಅನ್ನಿಸಿತು. ಇದೇ ಆಶಯದಿಂದ 2010ರಲ್ಲಿ ನನ್ನ ಹಾಗೆ ಅಲ್ಲಿನ ಕೆಲಸ ಬಿಟ್ಟು ಬಂದವರು ಇನ್ನೂ ಎಂಟು ಸಹೋದ್ಯೋಗಿಗಳು: ಕೋಡಿಹಳ್ಳಿಯಲ್ಲಿ ಈ 24 ಎಕರೆ ಜಮೀನು ಖರೀದಿಸಿದಾಗ ಡೈರಿ ಉದ್ಯಮ ಶುರು ಮಾಡಬೇಕೆಂಬ ಕಲ್ಪನೆಯೂ ನಮಗೆ ಇರಲಿಲ್ಲ ಎಂದು ಮಾತಿಗೆ ಶುರುವಿಟ್ಟರು ಶಶಿಕುಮಾರ್‌. ರಂಜಿತ್‌ ಮುಕುಂದನ್‌, ವೆಂಕಟೇಶ ಶೇಷಷಾಯಿ, ರವಿಶಂಕರ್‌ ಶಿರೂರು, ರಾಮಕೃಷ್ಣ ಅದುಕುರಿ, ಪ್ರವೀಣ… ನಳೆ, ಗಿರಿಧರ ಭಟ್‌, ರಾಮಕುಮಾರ್‌ ಐಯ್ಯರ್‌, ಮೊಹಮ್ಮದ್‌ ಅಶ್ರಫ್ ಇವರೇ ಆ ಎಂಟು ಜೊತೆಗಾರರು.

ಅನಂತರ, ಇಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ದಿನದಿನವೂ ಆದಾಯ ತಂದುಕೊಡಬಲ್ಲ ಚಟುವಟಿಕೆ ಯಾವುದು ಅಂತ ಅಧ್ಯಯನ ಮಾಡಿದೆವು. ಕೊನೆಗೆ ನಾವು ಆಯ್ಕೆ ಮಾಡಿದ್ದು ಹಸುಗಳಸಾಕಣೆಯನ್ನು ಎನ್ನುತ್ತಾ ಅವರು ಡಾ.ಜಿ.ಎನ್‌. ಎಸ್‌. ರೆಡ್ಡಿಯವರ ಜೊತೆ ಸೇರಿ ಅಕ್ಷಯ ಕಲ್ಪಘಟಕ ಸ್ಥಾಪಿಸಿದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.

ದನಸಾಕಣೆ ಮೇಲ್ನೋಟಕ್ಕೆ ಸರಳ ಚಟುವಟಿಕೆ. ಆದರೆ ಅದರ ಸೂಕ್ಷ್ಮಗಳು ಹತ್ತುಹಲವು. ಏಕೆಂದರೆ, ಗ್ರಾಹಕರ ವಿಶ್ವಾಸ ಗಳಿಸಬೇಕಾದರೆ ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು. ಅದಕ್ಕಾಗಿ ದನ ಸಾಕುವ ರೈತರಿಗೆ ತರಬೇತಿ ನೀಡಲೇ ಬೇಕಾಗುತ್ತದೆ: ದನಗಳಿಗೆ ಪೋಷಕಾಂಶಭರಿತ ಆಹಾರಪೂರೈಕೆ, ದನಗಳ ಆರೈಕೆ, ರೋಗ ರುಜಿನಗಳ ನಿರ್ವಹಣೆ, ಗರ್ಭಧಾರಣೆ, ಕರು ಹಾಕುವುದು, ಕರುಗಳ ನಿರ್ವಹಣೆ, ಹಾಲು ಕರೆಯುವುದು, ಹಾಲಿನ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡುವ ಬಗ್ಗೆ. ಆ ತರಬೇತಿಗಾಗಿ ಸೂಕ್ತ ಸ್ಥಳ, ಪರಿಣತರು ಹಾಗೂ ಸಾಂಸ್ಥಿಕ ವ್ಯವಸ್ಥೆ ಅಗತ್ಯವಾಗಿತ್ತು. ಜೊತೆಗೆ, ರೈತರಿಂದ ಹಾಲು ಸಂಗ್ರಹಿಸಿ, ಗುಣಮಟ್ಟ ಪರೀಕ್ಷಿಸಿ, ಕನಿಷ್ಠ ಎರಡು ದಿನ ಕೆಟ್ಟುಹೋಗದ ರೀತಿಯಲ್ಲಿ ಪ್ಯಾಕ್‌ ಮಾಡಿ, ಗ್ರಾಹಕರಿಗೆ ತಲಪಿಸುವ ವ್ಯವಸ್ಥೆ ಮಾಡಬೇಕಾಗಿತ್ತು. ಇವೆಲ್ಲವನ್ನೂ ತಳಮಟ್ಟದಿಂದ ಶುರು ಮಾಡಿ ಬೆಳೆಸಲಿಕ್ಕಾಗಿ ರೂಪಿಸಿದ ಸಂಸ್ಥೆಯೇ ಅಕ್ಷಯ ಕಲ್ಪ ಎಂದು ವಿವರಿಸಿದರು ಶಶಿಕುಮಾರ್‌.

ಹೀಗೆ, ಅಕ್ಷಯ ಕಲ್ಪ ರೂಪುಗೊಳ್ಳುತ್ತಿದ್ದ ಸಮಯದಲ್ಲಿ ಅವರ ಎಂಟು ಸಹೋದ್ಯೋಗಿಗಳು ಸ್ಟೆಲ್‌-ಆಪ್ಸ್‌ ಟೆಕ್ನಾಲಜೀಸ್‌ ಪ್ರೈ. ಲಿಮಿಟೆಡ್‌ ಸ್ಥಾಪಿಸಿದರು. ಈಗ ಈ ಕಂಪೆನಿಯು ಸ್ವಯಂಚಾಲಿತ ಹಾಲು ಕರೆಯುವ ಯಂತ್ರಗಳನ್ನು ಅಕ್ಷಯಕಲ್ಪಕ್ಕೆ ಒದಗಿಸುತ್ತಿದೆ.

Advertisement

ಕಳೆದ ಏಳು ವರುಷಗಳಲ್ಲಿ ಹಲವು ರೈತರು 25 ಹಸುಗಳ ಡೈರಿ ಘಟಕ ಶುರು ಮಾಡಲು ಅಕ್ಷಯ ಕಲ್ಪ ಸಹಾಯ ಮಾಡಿದೆ. ಇಂಥ ಘಟಕಕ್ಕೆ ಬೇಕಾದ ಬಂಡವಾಳ ರೂ.21 ಲಕ್ಷ. ಈ ಘಟಕದಲ್ಲಿ ಸ್ವಯಂಚಾಲಿತ ಹಾಲು ಕರೆಯುವ ಯಂತ್ರ, ಜೈವಿಕ ಅನಿಲ ಸ್ಥಾವರ, ಮೇವಿನ ಹುಲ್ಲು ಕತ್ತರಿಸುವ ಯಂತ್ರ, ಹಾಲು ಶೀತಲೀಕರಣ ವ್ಯವಸ್ಥೆ ಮತ್ತು ಬಯೋ ಡೈಜೆಸ್ಟರ್‌ ಇರುತ್ತವೆ.

ರೈತರ ಈ ಡೈರಿಗಳಲ್ಲಿ ಸಾಕುವ ದನಗಳಿಗೆ ತಿನ್ನಿಸುವುದು ಅಪ್ಪಟ ಸಾವಯವ ಆಹಾರ. ಈ ದನಗಳಿಗೆ ಪಶುವೈದ್ಯರಿಂದ ನಿಯಮಿತ ತಪಾಸಣೆ. ಅವಕ್ಕೆ ಆಂಟಿಬಯೋಟಿಕ್‌ ಔಷಧ ಅಥವಾ ಹಾರ್ಮೋನುಗಳನ್ನು ಕೊಡುವುದೇ ಇಲ್ಲ. ಆದ್ದರಿಂದಲೇ ಇವುಗಳ ಹಾಲಿಗೆ ಸಾವಯವ ಹಾಲು ಎಂಬ ದೃಢೀಕರಣ. ದನದ ಹಟ್ಟಿಗಳನ್ನು ಶುಚಿಯಾಗಿಡುವುದು ಮತ್ತು ದನಗಳನ್ನು ಜಮೀನಿನಲ್ಲಿ ಹುಲ್ಲು ಮೇಯಲು ಬಿಡುವುದು ಕಡ್ಡಾಯ. ಪ್ರತಿಯೊಂದು ದನಕ್ಕೆ ಒಂದು ಗುರುತಿನ ಸಂಖ್ಯೆ ನೀಡಲಾಗಿದೆ. ಹಾಲು ಕರೆಯುವ ಯಂತ್ರವು ದನದ ಶರೀರದ ಉಷ್ಣತೆ, ಹಾಲಿನ ಪರಿಮಾಣ ಮತ್ತು ಕೆಚ್ಚಲಿನ ಸೋಂಕು ಬಗ್ಗೆ ಮಾಹಿತಿಯನ್ನು ಪ್ರಧಾನ ಕಚೇರಿಗೆ ರವಾನಿಸುತ್ತದೆ. ಅಲ್ಲಿ ಪರಿಣತರು ದನದ ಆರೋಗ್ಯದ ನಿಗಾ ವಹಿಸಲು ಇದರಿಂದ ಸಹಾಯವಾಗಿದೆ.  

ಅಕ್ಷಯ ಕಲ್ಪದ ನೆರವಿನಿಂದ ತಮ್ಮ ಡೈರಿ ನಡೆಸುತ್ತಿರುವ ರೈತರಲ್ಲಿ ತಿಪಟೂರು ತಾಲೂಕಿನ ಮಂಕಿಕೆರೆಯ ನಟರಾಜ… ಒಬ್ಬರು. 14 ಹಸುಗಳ ಘಟಕದಿಂದ ಪ್ರತಿ ತಿಂಗಳೂ ಸುಮಾರು ರೂ.30,000 ನಿವ್ವಳ ಲಾಭ ಗಳಿಸುತ್ತಿ¨ªಾರೆ. ಈಗ ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯಕನಹಳ್ಳಿ, ಕಡೂರು ಮತ್ತು ಹೊಳೆನರಸೀಪುರ ಪ್ರದೇಶದ ಇಂಥ 150 ರೈತಕುಟುಂಬಗಳ ಜಾಲವಾಗಿ ಬೆಳೆದಿದೆ ಅಕ್ಷಯ ಕಲ್ಪ. ಈವರೆಗೆ ಇದು ತನ್ನ ಡೈರಿ ಉದ್ಯಮದ ಅಭಿವೃದ್ಧಿಗಾಗಿ ಹೂಡಿಕೆ ಮಾಡಿರುವ ಹಣ 26 ಕೋಟಿ ರೂಪಾಯಿ. ಸುಮಾರು 2,000 ಹಸುಗಳ ಹಾಲನ್ನು ವಿವಿಧ ಸಂಗ್ರಹಣಾ ಕೇಂದ್ರಗಳಲ್ಲಿ ಸಂಗ್ರಹಿಸಿ, 4 ಡಿಗ್ರಿ ಸೆಲಿÒಯಸ್‌. ಉಷ್ಣತೆಗೆ ತಣಿಸಿ, ಕ್ಯಾನುಗಳಲ್ಲಿ ಕೋಡಿಹಳ್ಳಿಯ ಸಂಸ್ಕರಣಾ ಕೇಂದ್ರಕ್ಕೆ ತರಲಾಗುತ್ತದೆ. ಇಲ್ಲಿ ಹಾಲಿನ ಗುಣಮಟ್ಟ ಪರೀಕ್ಷಿಸಿ, ಪುನಃ ಅದೇ ಉಷ್ಣತೆಗೆ ತಣಿಸಿ, ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ತುಂಬಿ, ಏಜೆನ್ಸಿ ಮೂಲಕ ಗ್ರಾಹಕರಿಗೆ ರವಾನಿಸುವ ವ್ಯವಸ್ಥೆ ಮಾಡಿದ್ದಾರೆ.  ಬೆಣ್ಣೆ, ಮೊಸರು, ತುಪ್ಪ, ಪನೀರ್‌, ಚೀಸ್‌  ಇವನ್ನೂ ಸಂಸ್ಕರಣಾ ಕೇಂದ್ರದಲ್ಲಿ ತಯಾರಿಸಿ, ವಿತರಕರ ಮೂಲಕ ಮಾರಾಟ ಮಾಡುತ್ತಾರೆ.  

ಹಾಲು ನೀಡುವ ಹಸುಗಳ ಸುಮಾರು 60 ಕರುಗಳನ್ನು ಸಂಸ್ಕರಣಾ ಕೇಂದ್ರದ ಆವರಣದÇÉೇ ಸಾಕುತ್ತಿದ್ದಾರೆ.
ಹೀಗೆ, ಕಳೆದ ಮೂರು ವರ್ಷಗಳಿಂದ ಕೋಡಿಹಳ್ಳಿಯ ಸಂಸ್ಕರಣಾ ಕೇಂದ್ರದ ಜಮೀನಿನಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಯ ವಿವರ ನೀಡಿದರು ಶಶಿಕುಮಾರ್‌. ಕೃಷಿಯ ಮೂಲಕ ರೈತ ಕುಟುಂಬಗಳ ಆದಾಯ ಹೆಚ್ಚಳದ ಮಾದರಿ ರೂಪಿಸುವುದು ಇದರ ಉದ್ದೇಶ. ಅದಕ್ಕಾಗಿ, 13,000 ಚದರ ಅಡಿ (ಒಂದು ಎಕರೆಯ ಶೇ. 30) ಜಾಗದಲ್ಲಿ ಪ್ರಾತ್ಯಕ್ಷಿಕೆ. ಅಲ್ಲಿ ಒಂದಡಿ ಅಗಲದ ಕಡಪ ಕಲ್ಲುಗಳ ಮೂಲಕ ಸಮಾಂತರ ಏರುಮಡಿಗಳನ್ನು ನಿರ್ಮಿಸಲಾಗಿದೆ. ಆ ಏರುಮಡಿಗಳಲ್ಲಿ ಟೊಮೆಟೊ, ಈರುಳ್ಳಿ, ಬದನೆ, ಬೆಂಡೆ, ಅಲಸಂದೆ, ತೊಂಡೆ, ಹರಿವೆ ಇತ್ಯಾದಿ 20 ಬಗೆಯ ತರಕಾರಿಗಳ ಕೃಷಿ ಮಾಡುತ್ತಿದ್ದಾರೆ.  ಏರುಮಡಿಗಳ ಪಕ್ಕದಲ್ಲಿ ನಡೆಪ್‌ ಪದ್ಧತಿಯಲ್ಲಿ ಕಂಪೋಸ್ಟ್‌ ತಯಾರಿಸುತ್ತಾರೆ.  ಉತ್ತಮ ಫ‌ಸಲು ಗಳಿಸಲಿಕ್ಕಾಗಿ ತರಕಾರಿ ಸಸಿ/ ಬಳ್ಳಿಗಳಿಗೆ ಕಂಪೋಸ್ಟ್‌ ಹಾಗೂ ಜೀವಾಮೃತ ನೀಡುತ್ತಾರೆ. ಕೀಟ-ರೋಗ ಹತೋಟಿಗಾಗಿ ಬೆಳ್ಳುಳ್ಳಿ ಮತ್ತು ಶುಂಠಿ ಕಷಾಯ ಬಳಕೆ ಮಾಡುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ದೇಸಿ ಬೀಜಗಳ ಬಿತ್ತನೆ. ಈ ರೀತಿಯಲ್ಲಿ ಅಲ್ಲಿ ನಡೆದಿದೆ ಸಾವಯವ ವಿಧಾನದಲ್ಲಿ ತರಕಾರಿ ಕೃಷಿಯ ಪ್ರಯೋಗ.
ಹೀಗೆ ತರಕಾರಿ ಕೃಷಿ ಮಾಡಿದರೆ, ಒಂದು ಎಕರೆಯಿಂದ ತಿಂಗಳಿಗೆ ಸರಾಸರಿ ರೂ.30,000 ಆದಾಯ ಗಳಿಸಲು ಸಾಧ್ಯವೆಂದು ಅಕ್ಷಯ ಕಲ್ಪದ ಪ್ರಯೋಗ ತೋರಿಸಿಕೊಟ್ಟಿದೆ ಎಂದರು ಶಶಿಕುಮಾರ್‌. ಮುಂದಿನ ಹಂತದಲ್ಲಿ ಆಸಕ್ತ ರೈತ ಕುಟುಂಬಗಳಿಗೆ, ಕನಿಷ್ಠ ಶುಲ್ಕದಲ್ಲಿ ಈ ಬಗ್ಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ಅಕ್ಷಯ ಕಲ್ಪ ಈಗ ದಿನಕ್ಕೆ 10,000 ಲೀಟರ್‌ ಹಾಲನ್ನು ಲೀಟರಿಗೆ ರೂ.70 ದರದಲ್ಲಿ ಮಾರಾಟ ಮಾಡುವ ಹಂತಕ್ಕೆ ಬೆಳೆದಿದೆ. ಇದರ ಮಾಸಿಕ ವಹಿವಾಟು ಸುಮಾರು ರೂಪಾಯಿ ಎರಡು ಕೋಟಿ. ಈ ಮೊತ್ತದ ಬಹುಪಾಲು ಹಾಲು ಪೂರೈಸುವ ರೈತರಿಗೆ ಸಂದಾಯವಾಗುತ್ತಿದೆಯಂತೆ. ಗ್ರಾಮಾಭಿವೃದ್ಧಿಯನ್ನು, ಹೇಗೆ ಸಾಧಿಸಬಹುದೆಂದು ತೋರಿಸಿಕೊಟ್ಟಿರುವ ಮಾದರಿಯಾಗಿದೆ ಅಕ್ಷಯ ಕಲ್ಪ. (ಸಂಪರ್ಕ 9535388122)

ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next