Advertisement

ಗ್ರಾಮವಾಸ್ತವ್ಯದ ಮಹತ್ವವನ್ನು ಅಧಿಕಾರಿಗಳೇ ಅರಿತಿಲ್ಲ: ಡಿಸಿ ಕಿಡಿ

10:11 PM Dec 17, 2022 | Team Udayavani |

ಬೆಳ್ತಂಗಡಿ: ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಇಲ್ಲದ ಗ್ರಾಮದ ಸ್ಥಳಗಳ ಪರಿಚಯ ವಿವರ, ಸಮಸ್ಯೆಗಳ ಕುರಿತು ಅರಿವಿಲ್ಲದ ಅಧಿಕಾರಿಗಳು ಸಭೆಗಳಲ್ಲಿ ಕಾಟಾಚಾರಕ್ಕೆ ಭಾಗವಹಿಸುತ್ತಿರುವುದು ವಿಷಾದನೀಯ ಎಂದು ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌. ಅವರು ಅಧಿಕಾರಿಗಳ ವಿರುದ್ಧವೇ ಗರಂ ಆದರು.

Advertisement

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಜಕ್ಕೆ ಹಿ.ಪ್ರಾ. ಶಾಲೆಯಲ್ಲಿ ಡಿ. 17ರಂದು ಜರಗಿದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಸಾರ್ವಜನಿಕರನ್ನು ಪದೆ ಪದೇ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ. ಅವರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆಯ ಜತೆ ಯೋಜನೆಗಳ ಕುರಿತು ಸರಿಯಾದ ಮಾಹಿತಿ ಒದಗಿಸುವಂತೆ ಖಡಕ್‌ ಸೂಚನೆ ನೀಡಿದರು. ಸಭೆಗೆ ಹಾಜರಾಗದ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಲವಂತಿಗೆಯಲ್ಲಿ ಕಂದಾಯ, ಅರಣ್ಯ ಇಲಾಖೆಯ ಜಾಗಗಳು ಅಕ್ಕ ಪಕ್ಕವೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ರೆಖ್ಯ ಗ್ರಾಮದ ಮಾದರಿಯಲ್ಲಿ ಜಿಪಿಎಸ್‌ ಆಧರಿತ ಡ್ರೋನ್‌ನಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ಹೇಳಿದರು.

ಎಲೆಚುಕ್ಕಿ ರೋಗಕ್ಕೆ ಎಕ್ರೆ ಆಧಾರದಲ್ಲಿ ಪರಿಹಾರ
ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆಗೆ ಬರುವಾಗ ತೋಟಗಳಲ್ಲಿ ಅಡಿಕೆ ಮರಗಳು ಇಲ್ಲದ ಸ್ಥಿತಿ ಇದ್ದು ಸರಿಯಾದ ಮೌಲ್ಯಮಾಪನ ಸಿಗದೇ ಪರಿಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಎಕ್ರೆ ಆಧಾರದಲ್ಲಿ ಪರಿಹಾರ ನೀಡುವ ಯೋಜನೆ ಬಗ್ಗೆ ಸರಕಾರದ ಗಮನ ಸೆಳೆಯುವ ಕುರಿತು ಅಭಿಪ್ರಾಯ ವ್ಯಕ್ತವಾಯಿತು.

ಎಳನೀರಿನಲ್ಲಿ ಪ್ರಾ.ಆ. ಉಪಕೇಂದ್ರದಲ್ಲಿ ಆರೋಗ್ಯ ಸಹಾಯಕರು ಇಲ್ಲದೆ ಜನರು ದೂರದ ಕಳಸಕ್ಕೆ ತೆರಳುವ ಸ್ಥಿತಿ ಇದೆ ಎಂದು ಗ್ರಾಮಸ್ಥರು ದೂರಿದರು. ರವಿವಾರ ನೂತನ ಸಿಬಂದಿ ನೇಮಕ ಪ್ರಕ್ರಿಯೆ ನಡೆಯಲಿದ್ದು ಮುಂದಿನ ವಾರದೊಳಗೆ ಸಿಬಂದಿ ನೇಮಿಸಿ ಎರಡು ತಿಂಗಳ ತರಬೇತಿ ಬಳಿಕ ಕಳುಹಿಸಿಕೊಡಲಾಗುವುದು ಎಂದು ಡಿಎಚ್‌ಒ ಭರವಸೆ ನೀಡಿದರು.

ಮಲವಂತಿಗೆ ಭಾಗಕ್ಕೆ ಪಿಯು ಕಾಲೇಜು ನಿರ್ಮಾಣವಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕೊಲ್ಲಿ ಅಂಗನವಾಡಿಗೆ ಕಾರ್ಯಕರ್ತೆ ನೇಮಕ, ನರೇಗಾ ಮೂಲಕ ಗ್ರಾಮದ ಅಭಿವೃದ್ಧಿ ಕಾಮಗಾರಿ ನಡೆಸಲು, ನನೆಗುದಿಗೆ ಬಿದ್ದಿರುವ ಕಡತಗಳ ಶೀಘ್ರ ವಿಲೇವಾರಿ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಆದೇಶ ನೀಡಿದರು.

Advertisement

ಗ್ರಾಮದ ಸಮಸ್ಯೆಗೆ ಒತ್ತು ನೀಡಿದ ಡಿಸಿ
ಅಕ್ರಮ ಸಕ್ರಮ ಯೋಜನೆಯಲ್ಲಿ 1992ರಲ್ಲಿ ಕಳೆಂಜ ಗ್ರಾಮದ ಮಾಣಿಗೇರಿಯ ಸುಮಾರು 40 ಕುಟುಂಬಗಳಿಗೆ ಜಾಗ ಮಂಜೂರಾಗಿದ್ದು ಅರಣ್ಯ ಇಲಾಖೆಯ ಎನ್‌ಒಸಿ ಸಿಕ್ಕರೂ ಅಗತ್ಯ ದಾಖಲೆಗಳನ್ನು ನೀಡಲು ಕಂದಾಯ ಇಲಾಖೆ ಸತಾಯಿಸುತ್ತಿರುವ ಕುರಿತು ಗ್ರಾಮಸ್ಥರು ಡಿಸಿ ಗಮನಕ್ಕೆ ತಂದು ಅಗತ್ಯ ದಾಖಲೆ ಒದಗಿಸಿದರು. ಸ್ಥಳದ ಸಮಸ್ಯೆ ಅಲ್ಲದಿದ್ದರೂ ಅಲ್ಲಿನ ಜನರ ಮನವಿ ಮೇರೆಗೆ ದಾಖಲೆ ಪರಿಶೀಲಿಸಿ ಒಂದು ವಾರದೊಳಗೆ ಹಕ್ಕುಪತ್ರ ನೀಡಲು ಆದೇಶ ನೀಡಿದರು.

ಮಲೆಕುಡಿಯ ಸಮುದಾಯ ಭವನ ಪ್ರಸ್ತಾವ
ಜಾಗದ ಸಮಸ್ಯೆಯಿಂದ ಶಿಥಿಲಾವಸ್ಥೆ ತಲುಪಿದ್ದ ದಿಡುಪೆಯ ಮಲೆಕುಡಿಯ ಸಮಾಜ ಮಂದಿರದ ಹಳೆ ಕಟ್ಟಡ ಸ್ಥಳದ ಕುರಿತು ಉದಯವಾಣಿ ಸುದಿನದಲ್ಲಿ ಬೆಳಕು ಚೆಲ್ಲಿತ್ತು. ಸ್ಥಳೀಯರು ಡಿಸಿ ಗಮನಕ್ಕೆ ತಂದಾಗ ಮಲವಂತಿಗೆ ಪಂಚಾಯತ್‌ ಕಟ್ಟಡಕ್ಕೆ ಕಾಯ್ದಿರಿಸಿ ಉಳಿದ ಸ್ಥಳವನ್ನು ಮಲೆಕುಡಿಯ ಸಮುದಾಯ ಭವನಕ್ಕೆ ಕಾಯ್ದಿರಿಸಬೇಕು. ಕುಮ್ಕಿ ಜಾಗದಲ್ಲಿರುವ ಈ ಸ್ಥಳವನ್ನು ಕುಮ್ಕಿ ರಹಿತವಾಗಿ ಸೋಮವಾರ ಆದೇಶ ಮಾಡುವುದಾಗಿ ಡಿಸಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next