Advertisement

ಬರೀ ಪದವಿ ಸಾಲದು ಗುಣಮಟ್ಟದ ಶಿಕ್ಷಣ ಮುಖ್ಯ

09:38 AM Nov 10, 2018 | Team Udayavani |

ಕಲಬುರಗಿ: ಬರೀ ಪದವಿ ಪಡೆದರೆ ಸಾಲದು, ಗುಣಮಟ್ಟದ ಶಿಕ್ಷಣದೊಂದಿಗೆ ಹೊರ ಬಂದರೆ ಮಾತ್ರ ಸಾರ್ಥಕತೆ ಹೊಂದಲು ಸಾಧ್ಯ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌)ಯ ಐದು ದಿನಗಳ ಸುವರ್ಣ ಮಹೋತ್ಸವ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವಕ್ಕೆ ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ನೀಡೋದು ಬಹಳ ಮುಖ್ಯವಾದ ಕೆಲಸ. ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಶೇ. ನೂರರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯವಾಗಿದೆ. ಅದೇ ರೀತಿ ನಮ್ಮ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಬೋಧನೆಯಲ್ಲಿ ಗುಣ ಮಟ್ಟತೆ ಕಾರ್ಯಾನು ಷ್ಠಾನದಿಂದ ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಅದೇ ರೀತಿ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಗುಣಮಟ್ಟತೆ ಇರುವುದರಿಂದಲೇ ಪ್ರತಿ ವರ್ಷ 200 ವಿದ್ಯಾರ್ಥಿಗಳು ವೈದ್ಯಕೀಯ, ನೂರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್‌ಗೆ ಪ್ರವೇಶಾತಿ ಪಡೆಯುತ್ತಿದ್ದಾರೆ. ಒಟ್ಟಾರೆ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿರುವ ಸಂಸ್ಥೆಗೆ ಈ ಐದು ದಿನಗಳ ಸಮ್ಮೇಳನವೇ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರು ದೇಶದ ಹಲವಾರು ಉತ್ತಮ ಶಾಲೆಗಳನ್ನು ಸಂದರ್ಶಿಸಿ ಗುಣಮಟ್ಟವನ್ನು ಅಳವಡಿಸಿದ್ದಾರೆ. ಶಾಲೆಯೊಂದರಲ್ಲಿಯೇ ಈ ಹಿಂದೆ ಶಿಕ್ಷಣ ಪಡೆದು ಹೊರ ಹೋಗಿರುವ ಹತ್ತು ಸಾವಿರ ವಿದ್ಯಾರ್ಥಿಗಳು ಹಾಗೂ ಪ್ರಸಕ್ತವಾಗಿ ಓದುತ್ತಿರುವ ಹತ್ತು ಸಾವಿರ ವಿದ್ಯಾರ್ಥಿಗಳು ಸೇರುತ್ತಿರುವ ಈ ಸಮ್ಮೇಳನ ಒಂದು ಅಮೃತ ಘಳಿಗೆ ಎಂದರು.

ಮುಖ್ಯ ಅತಿಥಿಯಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನವನ್ನು ರೂಪಿಸಲಾಗುತ್ತದೆ. ಮುಖ್ಯವಾಗಿ ತಾವೂ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು, ಶಿಸ್ತು, ಕಲಿಕೆ ಹಾಗೂ ಸಂಸ್ಕಾರ ಕಲಿಯಲು ಕಾರಣವಾಗಿದೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶರಣಬಸವ ವಿವಿ ಕುಲಾಧಿಪತಿಗಳಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಆಶೀರ್ವಚನ ನೀಡಿ, ತಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಾ ಬಂದಿದ್ದೇವೆ. ಜತೆಗೆ ಸ್ವತಂತ್ರವಾಗಿ ವಿಚಾರ ಮಾಡುವುದು, ಸ್ವತಂತ್ರವಾಗಿ ಬರೆಯುವುದು ಹಾಗೂ ಸ್ವತಂತ್ರವಾಗಿ ಮಾತನಾಡುವುದನ್ನು ಕಲಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆ ಬೆಳೆಯಲು ಕಾರಣವಾಗಿದೆ. ಜ್ಞಾನದ ಗುಣಮಟ್ಟತೆಗೆ ಜಗತ್ತಿನಲ್ಲಿ ಬೆಲೆ ಇದೆ ಎನ್ನುವುದು ಈ ಮೂಲಕ ಸಾಬೀತು ಆಗಿದೆ ಎಂದರು.

Advertisement

ಎಸ್‌ಬಿಆರ್‌ ಶಾಲೆಯ ಗುಣಮಟ್ಟತೆ ಉಳಿದ ಸಂಸ್ಥೆಗಳಲ್ಲೂ ಬರಬೇಕು. ಹೊಟ್ಟೆಯಲ್ಲಿ ಹುಟ್ಟುವ ಮಗು ಸಹ ಎಸ್‌ಬಿಆರ್‌ ಶಾಲೆಯಲ್ಲಿಯೇ ಪ್ರವೇಶಾತಿ ಪಡೆಯಬೇಕು ಎನ್ನುವ ಮಟ್ಟಿಗೆ ಶಾಲೆ ಖ್ಯಾತಿ ಪಡೆದಿದೆ. ಕಳೆದ ವರ್ಷವೇ ಆರಂಭವಾಗಿರುವ ಶರಣಬಸವ ವಿವಿಯಲ್ಲಿ ಏಕಕಾಲಕ್ಕೆ 22 ಕೋರ್ಸುಗಳು ಆರಂಭವಾಗಿರುವುದು ಶಿಕ್ಷಣ ಗುಣಮಟ್ಟತೆಗೆ ಹಿಡಿದ ಕನ್ನಡಿಯಾಗಿದೆ ಎಂದು ನುಡಿದರು.

ಬಿಡುಗಡೆ: ಹಿರಿಯ ಪತ್ರಕರ್ತ ಹಾಗೂ ಶರಣಬಸವ ವಿವಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ. ಶಿವಾನಂದನ್‌ ಅವರು ಎಸ್‌ಬಿಆರ್‌ ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ಬರೆದ ಟೆಂಪಲ್‌ ಆಫ್‌ ನಾಲೆಜ್‌ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
 
ಮಾಜಿ ಸಂಸದ ಡಾ| ಬಸವರಾಜ ಪಾಟೀಲ ಸೇಡಂ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವೇಶ್ವರ ವಸತಿ ಶಾಲೆಯ ಪ್ರಾಚಾರ್ಯ ಪ್ರೊ| ಎನ್‌.ಎಸ್‌. ದೇವರಕಲ್‌, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ, ಕುಲಸಚಿವ ಪ್ರೊ| ಅನೀಲಕುಮಾರ ಬಿಡವೆ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಪ್ರಮುಖರಾದ ಉದಯಶಂಕರ ನವಣಿ, ವಿನಾಯಕ ಮುಕ್ಕಾ ಮುಂತಾದವರಿದ್ದರು.

ಎಸ್‌ಬಿಆರ್‌ ಶಾಲೆಯಲ್ಲಿ ಶಿಕ್ಷಣ ಪಡೆದು ದೇಶ- ದೇಶಗಳಲ್ಲಿರುವ ಸಾವಿರಾರು ಗಣ್ಯರು-ಪ್ರಮುಖರು ಸಮ್ಮೇಳನದಲ್ಲಿ ಪಾಲ್ಗೋಂಡಿದ್ದರು. ಎಸ್‌ಬಿಆರ್‌ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ| ಭರತ ಕೋಣಿನ್‌ ಸ್ವಾಗತಿಸಿದರು, ಶಿಕ್ಷಕ ಶಂಕರಗೌಡ ಪಾಟೀಲ ನಿರೂಪಿಸಿದರು.

ವೈದ್ಯಕೀಯ ಪ್ರವೇಶಾತಿಗೆ ಈಗ ಜಾರಿಗೆ ತಂದಿರುವ ನೀಟ್‌ ಪದ್ಧತಿ ಅಷ್ಟು ಸಮಂಜಸವೆನಿಸುತ್ತಿಲ್ಲ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಇನ್ನು ಉತ್ತಮ ಶಿಕ್ಷಣ ನೀಡುವ ವಾತಾವರಣವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅವಕಾಶ ಕಲ್ಪಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿದ ನಂತರ ನೀಟ್‌ ಜಾರಿಗೆ ತನ್ನಿ. ಹೀಗಾದಲ್ಲಿ ಗ್ರಾಮೀಣರು ವಂಚಿತರಾಗುವ ಅವಕಾಶ ಎದುರಾಗುವುದಿಲ್ಲ. ಎಸ್‌ಎಸ್‌ ಎಲ್‌ಸಿ-ಪಿಯುಸಿ ಅಂಕಗಳ ಆಧಾರದ ಮೇಲೆಯೇ ಪ್ರವೇಶಾತಿ ನಡೆಯಲಿ.
 ಡಾ| ಶರಣಬಸವಪ್ಪ ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
 
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ರಾಜ್ಯಕ್ಕೆ ಅತ್ಯುತ್ತಮ ಫಲಿತಾಂಶ ಬರುತ್ತದೆ. ಅದಕ್ಕೆ ಅಲ್ಲಿರುವ ಶಿಕ್ಷಕರು ಮೈಗೂಡಿಸಿಕೊಂಡಿರುವ ಶೈಕ್ಷಣಿಕ ಬದ್ಧತೆಯೇ ಕಾರಣವಾಗಿದೆ. ನಮ್ಮ ಶಿಕ್ಷಕರಲ್ಲೂ ಈ ಗುಣ ಬಂದರೆ ಫಲಿತಾಂಶ ಸುಧಾರಣೆಗೆ ನಾಂದಿ ಹಾಡಬಹುದಾಗಿದೆ. ಹೇಗೆ ಆ ಭಾಗದ ಶಿಕ್ಷಕರು ಸ್ಥಳೀಯವಾಗಿದ್ದು, ಶಿಕ್ಷಣ ಸುಧಾರಣೆಗೆ ಕೈ ಜೋಡಿಸುತ್ತಾರೆಯೋ ಅದೇ ರೀತಿ ನಮ್ಮ ಭಾಗದ
ಶಿಕ್ಷಕರಲ್ಲೂ ಆ ಗುಣ ಬರಲಿ ಎನ್ನುವ ಉದ್ದೇಶದಿಂದ 371ನೇ (ಜೆ) ವಿಧಿಗೆ ತಿದ್ದುಪಡಿ ತಂದು ಶೇ. 75ರಷ್ಟು ನಮ್ಮ ಶಿಕ್ಷಕರೇ ನೇಮಕಗೊಂಡು ಇಲ್ಲೇ ಶಿಕ್ಷಣ ಕಲಿಸಲಿ ಎನ್ನುವ ಕ್ರಮ ಕೈಗೊಳ್ಳಲಾಗಿದೆ.
ಡಾ| ಮಲ್ಲಿಕಾರ್ಜುನ ಖರ್ಗೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next