Advertisement

ಗೌಡರಿಗೆ ಮತ್ತೆ ತೆರೆದ ‘ಬಾಗಿಲು’ಕೋಟೆ

12:06 PM May 24, 2019 | pallavi |

ಬಾಗಲಕೋಟೆ/ಗುಳೇದಗುಡ್ಡ: ಸತತ ಮುನ್ನಡೆ ಕಾಯ್ದುಕೊಂಡು ಪಿ.ಸಿ.ಗದ್ದಿಗೌಡರ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು. ಮತ ಎಣಿಕೆ ಕೇಂದ್ರದ ಎದುರೇ ಬಿಜೆಪಿ ಕಾರ್ಯಕರ್ತರು ಗುಲಾಲು ಎರಚಿಕೊಂಡು ಸಂಭ್ರಮಿಸಿದರು.

Advertisement

ಗುರುವಾರ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮತ ಎಣಿಕೆ ಆರಂಭಗೊಂಡದಾಗಿನಿಂದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡು ಬಂದು ಗೆಲುವಿನ ನಗೆ ಬಿರಿದರು. ಮತ ಎಣಿಕೆ ಕೇಂದ್ರದ ಎದುರು ಗದ್ದಿಗೌಡರ ಸತತ ಮುನ್ನಡೆ ಕಾಯ್ದುಕೊಂಡಿದ್ದರಿಂದ ಮಧ್ಯಾಹ್ನ 12ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಲು ಮುಂದಾದರು.ಪರಸ್ಪರ ಗುಲಾಲು ಎರಚಿಕೊಂಡು ವಿಜಯೋತ್ಸವ ಆಚರಿಸಿದರು.

ಬಾಗಲಕೋಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ, ವಿದ್ಯಾಗಿರಿ ಕಾಲೇಜು ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಮೋದಿ ಮೋದಿ, ಹರ್‌ ಹರ್‌ ಮೋದಿ, ಗದ್ದಿಗೌಡರ ಹಾಗೂ ಬಿಜೆಪಿ ಪರ ಘೋಷಣೆ ಕೂಗುತ್ತ ಜೈಕಾರ ಕೂಗಿದರು.

ಫಲಿತಾಂಶ ವಿಳಂಬ ಊರ ಕಡೆ ಹೆಜ್ಜೆ: ಬೆಳಿಗ್ಗೆ 9ಗಂಟೆಯ ನಂತರ ನಿಧಾನವಾಗಿ ಮತ ಎಣಿಕೆ ಕೇಂದ್ರದ ಎದುರು ಜನರು ಆಗಮಿಸುತ್ತಿದ್ದರು. ಮಧ್ಯಾಹ್ನ 12ಗಂಟೆಯ ನಂತರ ಜನರ ಸಂಖ್ಯೆಯಲ್ಲಿ ಏರಿಕೆ ಕಂಡಿತು. ಮಧ್ಯಾಹ್ನ 3ಗಂಟೆಯಾದರೂ ಫಲಿತಾಂಶ ಬಾರದಿರುವುದರಿಂದ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಸತತ ಮುನ್ನಡೆ ಕಾಯ್ದುಕೊಂಡಿದ್ದು, ಇನ್ನೂ ಅಂತಿಮ ಫಲಿತಾಂಶವೊಂದೇ ಬಾಕಿಯಿದ್ದು, ಈಗಾಗಲೇ ಗದ್ದಿಗೌಡರ ಅವರು ಗೆಲುವು ಸಾಧಿಸಿದ್ದಾರೆ ಎಂದು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸುತ್ತ ಜೈಕಾರ ಕೂಗುತ್ತ ತಮ್ಮ ತಮ್ಮ ಊರುಗಳ ಕಡೇ ಹೆಜ್ಜೆ ಹಾಕಿದರು.

ಫಲಿತಾಂಶಕ್ಕೂ ಮುನ್ನವೇ ಸಂಭ್ರಮಾಚರಣೆ: ಮಧ್ಯಾಹ್ನ 3ಗಂಟೆಯಾದರೂ ಗದ್ದಿಗೌಡರ ಅವರು ಸತತ ಮುನ್ನಡೆ ಕಾಯ್ದುಕೊಂಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಗದ್ದಿಗೌಡರ ಗೆಲುವು ಸಾಧಿಸಿದ್ದಾರೆ ಎಂದು ಗುಲಾಲು ಎರಚಿಕೊಂಡು ಸಂಭ್ರಮಿಸಿ ಕೇಕೆ ಹಾಕಿದರು.

Advertisement

ಬೇಸರ: ಮತ ಎಣಿಕೆ ಕಾರ್ಯ ಆರಂಭವಾಗಿ ಎರಡು ಗಂಟೆ ಕಳೆದರೂ ಮೈಕ್‌ ಮೂಲಕ ಅಭ್ಯರ್ಥಿಗಳು ಪಡೆದಿರುವ ಮತಗಳ ಬಗ್ಗೆ ಮಾಹಿತಿ ನೀಡದಿರುವುದಕ್ಕೆ ಸೇರಿದ್ದ ಜನ ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆ 10:30ಗಂಟೆಯಾದರೂ ಮೈಕ್‌ ಮೂಲಕ ಫಲಿತಾಂಶ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದು ಎಷ್ಟು ಸರಿ. ಮಾಹಿತಿ ನೀಡದಿದ್ದರೇ ಏಕೆ ಮೈಕ್‌ ಅಳವಡಿಸಬೇಕೆಂಬ ಮಾತುಗಳು ಕೇಳಿ ಬಂದವು.

ಮಂಡ್ಯ-ತುಮಕೂರ ಹವಾ: ಮತ ಎಣಿಕೆ ಕೇಂದ್ರದ ಎದುರು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಬಹುತೇಕ ಜನರ ಬಾಯಿಯಲ್ಲಿ ಮಂಡ್ಯ, ತುಮಕೂರದ್ದೇ ಚಿಂತೆ. ಯಾರೇ ಕೇಳಿದರೂ ಸರ್‌ ಮಂಡ್ಯ, ತುಮಕೂರದ್ದು ಏನಾಯಿತು. ಅಷ್ಟೇ ಏಕೆ ತಮಗೆ ಪರಿಚಯವಿರುವ ಸ್ನೇಹಿತರಿಗೆ ಬಂಧುಗಳಿಗೆ ಪೋನ್‌ ಮಾಡಿ ಮಂಡ್ಯ, ತುಮಕೂರ ಕ್ಷೇತ್ರ ಫಲಿತಾಂಶ ಏನು ಆಯಿತು ಎಂದು ಕೇಳುತ್ತಿದ್ದು ಸಾಮಾನ್ಯವಾಗಿತ್ತು.

ಮೊಬೈಲ್ ಮೊರೆ: ಬಾಗಲಕೋಟೆ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಸರಿಯಾಗಿ ಮಾಹಿತಿ ಸಿಗದಿರುವದರಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಜನರು ಆಗಾಗ ಮೊಬೈಲ್ ಪೋನ್‌ಗಳ ಮೂಲಕ ಬಾಗಲಕೋಟೆ ಹಾಗೂ ರಾಜ್ಯದ ಇತರ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು ಕಂಡುಬಂತು.

ಎರಡ್ಮೂರು ದಿನಗಳಲ್ಲಿ ರಾಜ್ಯಸರ್ಕಾರ ಪತನ: ಕಾರಜೋಳ
ಬಾಗಲಕೋಟೆ: ರಾಜ್ಯ ಸಮ್ಮಿಶ್ರ ಸರ್ಕಾರ 2ರಿಂದ 3ದಿನಗಳಲ್ಲಿ ಪತನವಾಗಲಿದ್ದು, ಕರ್ನಾಟಕ ಸೇರಿ ದೇಶದ 3 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ನ ಹಲವು ಶಾಸಕರು ಮುಂದಿನ ರಾಜಕೀಯ ಭವಿಷ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಪ್ರಯತ್ನದಲ್ಲಿ ರಮೇಶ ಜಾರಕಿಹೋಳಿ ಸೇರಿದಂತೆ ಹಲವರ ಪಾತ್ರವಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ದೇಶದ 22 ರಾಜ್ಯಗಳಲ್ಲಿ ಖಾತೆಯನ್ನೇ ತೆರೆದಿಲ್ಲ. ಹೀಗಾಗಿ ಆ ಪಕ್ಷ ಮುನ್ನಡೆಸುವ ರಾಹುಲ್ ಗಾಂಧಿ, ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಹಿಂದೆ 1971ರಲ್ಲಿ ವೀರೇಂದ್ರ ಪಾಟೀಲ, 1984ರಲ್ಲಿ ರಾಮಕೃಷ್ಣ ಹೆಗಡೆ ಪಕ್ಷ ಸೋತಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಹೀನಾಯ ಸೋಲು ಕಂಡಿದ್ದು, ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮೋದಿ ಆಡಳಿತ ಮೆಚ್ಚಿದ ಜನ: ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ಜನಾದೇಶ ನೀಡಿದ್ದಾರೆ. ನಾನು ಚುನಾವಣೆಗೂ ಮುಂಚೆ ದೇಶದಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳಿಗೆ ಗೆಲ್ಲುತ್ತೇವೆಂದು ಹೇಳಿದ್ದೆ. ನನ್ನ ನಿರೀಕ್ಷೆಗೂ ಮೀರಿ ಸ್ಥಾನಗಳು ಬಂದಿವೆ ಎಂದರು.

ಮಹಾಲಿಂಗಪುರ: ಕಾರ್ಯಕರ್ತರಿಂದ ಬೈಕ್‌ ರ್ಯಾಲಿ-ಮೆರವಣಿಗೆ

ಮಹಾಲಿಂಗಪುರ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.ಬಿಜೆಪಿ ಮುಖಂಡರು, ಕಾರ್ಯಕರ್ತರು ಪರಸ್ಪರ ಕೇಸರಿ ಬಣ್ಣ ಎರಚಿಕೊಂಡು, ವಿವಿಧ ರಸ್ತೆಗಳಲ್ಲಿ ಮೋದಿ ಭಾವಚಿತ್ರದೊಂದಿಗೆ ಬಿಜೆಪಿ ಧ್ವಜದೊಂದಿಗೆ ಬೈಕ್‌ ರ್ಯಾಲಿ ಮತ್ತು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಮಹಾಲಿಂಗ ಕುಳ್ಳೋಳ್ಳಿ, ಯುವ ಘಟಕದ ಅಧ್ಯಕ್ಷ ರವಿ ಜವಳಗಿ, ಪುರಸಭೆ ಸದಸ್ಯರಾದ ರಾಜು ಚಮಕೇರಿ, ಬಸವರಾಜ ಹಿಟ್ಟಿನಮಠ, ಚನಬಸು ಯರಗಟ್ಟಿ, ಶೇಖರ ಅಂಗಡಿ, ಚನ್ನಪ್ಪ ಗೌಡಪ್ಪಗೋಳ, ರವಿ ಜವಳಗಿ, ಬಿಜೆಪಿ ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ಅಶೋಕಗೌಡ ಪಾಟೀಲ, ಚನಬಸು ಹುರಕಡ್ಲಿ, ಈರಪ್ಪ ದಿನ್ನಿಮನಿ, ಜಿ.ಎಸ್‌.ಗೊಂಬಿ, ಪ್ರಕಾಶ ಅರಳಿಕಟ್ಟಿ, ಶಿವಲಿಂಗ ಘಂಟಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಶಂಕರಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಶಿವಾನಂದ ಹುಣಶ್ಯಾಳ, ಬಸವರಾಜ ಗಿರಿಸಾಗರ, ನಾಗೇಶ ನಾಯಕ, ವಿರೂಪಾಕ್ಷ ಬಾಟ, ಭೀಮಸಿ ಗೌಂಡಿ, ಗುರುಪಾದ ಅಂಬಿ, ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ, ಶಿವಾನಂದ ಅಂಗಡಿ, ಸಂಜು ಅಂಬಿ ಭಾಗವಹಿಸಿದ್ದರು.

ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಬಾದಾಮಿ: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಸಂಸದ ಪಿ.ಸಿ.ಗದ್ದಿಗೌಡರ ಪುನರಾಯ್ಕೆಯಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ, ಗುಲಾಲು ಎರಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.ಬಾದಾಮಿಯ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ. ಗದ್ದಿಗೌಡರ ಮುನ್ನಡೆ ಸಾಧಿಸುತ್ತಿದ್ದಂತೆಯೇ ಗುಲಾಲು, ಪಟಾಕಿ ಸಿಡಿಸಿದರು. ಯುವಕರು ಮೋದಿ ಘೋಷಣೆ ಕೂಗಿದರು. ಬಾದಾಮಿ ನಗರ ಮತ್ತು ಗ್ರಾಮೀಣ ಭಾಗಗಳಾದ ಬೇಲೂರ, ಜಾಲಿಹಾಳ, ಹೆಬ್ಬಳ್ಳಿ, ಕಿತ್ತಲಿ, ಮುತ್ತಲಗೇರಿ, ಖ್ಯಾಡ, ಕಾತರಕಿ, ನೀಲಗುಂದ, ಬೆಳವಲಕೊಪ್ಪ, ಕುಟುಕನಕೇರಿ, ಹಂಸನೂರ, ತೋಗುಣಸಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿಜಯೋತ್ಸವ ಆಚರಿಸಿದರು.

ಅಭಿಮಾನಿಗಳಿಂದ ವಿಜಯೋತ್ಸವಬನಹಟ್ಟಿ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವಳಿ ನಗರಾದ್ಯಂತ ವಿಜಯೋತ್ಸವ ಆಚರಿಸಿದರು.ರಾಜು ಬಾಣಕಾರ, ಭೀಮಶಿ ಹಂದಿಗುಂದ, ಶಿವಾನಂದ ಗಾಯಕವಾಡ, ಸಂಜಯ ತೆಗ್ಗಿ, ಶ್ರೀಶೈಲ ದಲಾಲ, ಮಹಾದೇವ ಕೋಟ್ಯಾಳ, ಬಸವರಾಜ ತೆಗ್ಗಿ, ಈಶ್ವರ ಪಾಟೀಲ, ರಾಜು ಅಂಬಲಿ, ಕುಮಾರ ಕದಂ, ಈರಣ್ಣ ಚಿಂಚಖಂಡಿ, ಶಂಕರ ಕುರಂದವಾಡ, ಮಹಾದೇವ ಚನಾಳ, ಪ್ರಭಾಕರ ಮೊಳೇದ, ರಾಜು ಆಳಗಿ, ಮಹಾನಿಂಗ ಅವರಾದಿ, ಗುರು ಶೀಲವಂತ, ಪ್ರವೀಣ ದಭಾಡಿ, ಶ್ರೀಶೈಲ ಬೀಳಗಿ, ಯಲ್ಲಪ್ಪ ಕಟಗಿ, ಬಸವರಾಜ ಅಥಣಿ, ಮಾರುತಿ ಗಾಡಿವಡ್ಡರ, ಪಿ. ಜಿ. ಕಾಕಂಡಕಿ, ಪ್ರಭು ಪೂಜಾರಿ, ಶಿವಾನಂದ ಮಠದ, ರಮೇಶ ಮಂಡಿ, ಕಾಡು ಕೊಣ್ಣೂರ, ಶಿವಾನಂದ ಇದ್ದರು.

ವಿಜಯೋತ್ಸವಕ್ಕೆ ತಟ್ಟಿದ ಬಿಸಿಲಿನ ತಾಪಬಾಗಲಕೋಟೆ/ಗುಳೇದಗುಡ್ಡ: ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ವಿಜಯೋತ್ಸವ ಮಾಡಲು ಬಿಸಿಲಿನ ತಾಪ ಅಡ್ಡಿಯಾಯಿತು. ಬಿಸಿಲಿನ ತಾಪಕ್ಕೆ ಮತ ಏಣಿಕೆ ಕೇಂದ್ರದ ಎದುರು ನಿಲಲ್ಲು ಆಗದೇ ನೆರಳಿನ ಆಶ್ರಯ ಪಡೆಯುವಂತಾಯಿತು. ಅಷ್ಟೇ ಅಲ್ಲದೇ ಎಷ್ಟೋ ಜನರು ಬಿಸಿಲಿಗೆ ಹೆದರಿ ಮತ ಎಣಿಕೆ ಕೇಂದ್ರದ ಎದುರು ಮುಖ ಮಾಡದೇ ಮನೆಯಲ್ಲಿಯೇ ಕುಳಿತು ಫಲಿತಾಂಶದ ಮಾಹಿತಿ ಪಡೆದುಕೊಂಡರು.ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಸಂಜೆ ಫಲಿತಾಂಶ ಹೊರಬಿದ್ದಿತು. ಬೆಳಗ್ಗೆ 10ಗಂಟೆಯಾದರೂ ಸಹ ಕೇಂದ್ರದ ಎದುರು ಜನರು, ಉಭಯ ಪಕ್ಷಗಳ ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು. ಬಿಸಿಲಿನ ತಾಪ ಹೆಚ್ಚಿದ್ದರಿಂದ ಈ ಬಾರಿಯ ಫಲಿತಾಂಶದ ದಿನ ಜಾಸ್ತಿ ಸಂಖ್ಯೆಯಲ್ಲಿ ಜನ ಕಂಡು ಬರಲಿಲ್ಲ.

ಬಾರದ ಜನ: ಲೋಕಸಭೆ ಚುನಾವಣೆಯಾಗಿರುವುದರಿಂದ ಸುಮಾರು ಎಂಟು ಮತಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಬೇಕಿತ್ತು. ಆದರೆ, ಬಿಸಿಲಿನ ತಾಪದಿಂದ ಜನ ಹೊರಗೆ ಬರಲು ಸಹ ಯೋಚನೆ ಮಾಡುವಂತಾಗಿತ್ತು. ಅಷ್ಟರ ಮಟ್ಟಿಗೆ ಬಿಸಿಲಿನ ತಾಪ ಹೆಚ್ಚಾಗಿತ್ತು. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮುನ್ನಡೆ ಕಾಯ್ದುಕೊಂಡಿದ್ದರಿಂದ ಮಧ್ಯಾಹ್ನ 12ಗಂಟೆ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಸಹ ಮತ ಎಣಿಕೆ ಕೇಂದ್ರದಿಂದ ದೂರ ಸರಿದು ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದರು.ನೆರಳಿಗೆ ಮೊರೆ ಹೋದ ಜನ: ಬೆಳಿಗ್ಗೆ 11ಗಂಟೆಯ ನಂತರ ಬಿಸಿಲಿನ ತಾಪ ಹೆಚ್ಚಿದ್ದರಿಂದ ಜನರು ಕೇಂದ್ರದ ಎದುರಿನ ಜಾಗದಲ್ಲಿ ಗಿಡಮರಗಳ ನೆರಳಿನ ಆಸರೆ ಪಡೆದರು. ಇನ್ನೂ ಕೆಲವರು ಲಾರಿ ಆಟೋಗಳಲ್ಲಿ ಕುಳಿತು ಬಿಸಿಲಿನ ತಾಪದಿಂದ ರಕ್ಷಣೆ ಪಡೆದುಕೊಂಡರು.

ತಂಪು ಪಾನೀಯಗಳ ಮೊರೆ: ಬಿಸಿಲಿನ ತಾಪದಿಂದ ಕೆಂಗೆಂಟಿದ್ದ ಜನತೆ ಮತ ಎಣಿಕೆ ಕೇಂದ್ರದ ಎದುರು ಮಾರಾಟ ಮಾಡುತ್ತಿದ್ದ ಐಸ್‌ಕ್ರೀಂ, ಕಲ್ಲಂಗಡಿ, ಸೋಡಾ, ಸೇರಿದಂತೆ ತಂಪು ಪಾನೀಯ ಸೇವಿಸಿ, ಬಾಯಾರಿಕೆ ನಿಗಿಸಿಕೊಂಡರು. ಬಿಜೆಪಿ ಕಾರ್ಯಕರ್ತರು ಬಿಸಿಲಿನ ತಾಪದಲ್ಲಿಯೇ ವಿಜಯೋತ್ಸವ ಆಚರಿಸುವಂತಾಯಿತು.

ಲೋಕಾಪುರ: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವಲೋಕಾಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸುತ್ತಿದ್ದಂತೆ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಶಾಸಕ ಗೋವಿಂದ ಕಾರಜೋಳ ಅವರಿಗೆ ಜೈಕಾರ ಘೋಷಣೆ ಕೂಗಿದರು. ವಿಜಯೋತ್ಸವದಲ್ಲಿ ಸ್ಥಳೀಯರಾದ ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಬಿ.ಎಲ್.ಬಬಲಾದಿ, ವಿ.ಎಂ.ತೆಗ್ಗಿ, ಸಿ.ಎ.ಪಾಟೀಲ, ಹೊಳಬಸಪ್ಪ ದಂಡಿನ, ಮಲ್ಲಪ್ಪ ಅಂಗಡಿ, ವಿರೂಪಾಕ್ಷಪ್ಪ ಮುದಕವಿ, ಅಡಿವೆಪ್ಪ ಕೃಷ್ಣಗೌಡರ, ಹೊಳಬಸಪ್ಪ ದಂಡಿನ, ಸಿಂಧೂರ ತಳವಾರ, ಕೃಷ್ಣಾ ಸಾಳುಂಕಿ, ನಾಗರಾಜ ಕುಲಕರ್ಣಿ, ಜಾಕೀರ ಅತ್ತಾರ, ಸೈಯದ ಜೀರಗಾಳ, ಬೀರಪ್ಪ ಮಾಯಣ್ಣವರ, ದೀಪಕ ದೇಸಾಯಿ, ಕಾಂತು ನರಟ್ಟಿ, ಸೈಯದ್‌ ಜೀರಗಾಳ, ವಿನೋದ ಗಂಗಣ್ಣವರ, ಭೀಮಶಿ ಅವರಾದಿ, ಅನಿಲ ಹಂಚಾಟೆ, ಗುರು ಘಾಟಗೆ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇಳಕಲ್ಲದಲ್ಲಿ ಬೈಕ್‌ ರ್ಯಾಲಿಇಳಕಲ್ಲ: ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿದರು.ಪಟ್ಟಣದ ಎಸ್‌.ಆರ್‌. ಕಂಠಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ದಿ| ಎಸ್‌.ಆರ್‌. ಕಂಠಿ ಪುತ್ಥಳಿಗೆ ಹೂಮಾಲೆ ಹಾಕಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು. ಬಿಜೆಪಿ ಧ್ವಜ ಹಿಡಿದು ಮೋದಿ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್ಯಾಲಿ ನಡೆಸಿದರು.

ಮತ್ತೂಮ್ಮೆ ಮೋದಿ ಘೋಷಣೆ ಜಮಖಂಡಿ: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬಿಜೆಪಿಯ ಬಾವುಟ, ಕೇಸರಿ ಧ್ವಜದೊಂದಿಗೆ ಮತ್ತೂಮ್ಮೆ ಮೋದಿ ಸರ್ಕಾರ ಘೋಷಣೆ ಕೂಗಿದರು. ಜಗದೀಶ ಗುಡಗುಂಟಿ, ನಾಗಪ್ಪ ಸನದಿ, ಡಾ| ವಿಜಯಲಕ್ಷ್ಮೀ ತುಂಗಳ, ನಗರಸಭೆ ಸದಸ್ಯೆ ಪೂಜಾ ವಾಳ್ವೇಕರ, ಮಾಜಿ ನಗರಸಭೆ ಅಧ್ಯಕ್ಷ ವಿಜಯಲಕ್ಷ್ಮೀ ಉಕಮನಾಳ, ಈಶ್ವರ ಆದೆಪ್ಪನ್ನವರ, ಕಾಶೀ ಬಾಯಿ ಹೂಗಾರ, ಬಸವರಾಜ ಸಿಂಧೂರ, ಏಗಪ್ಪ ಸವದಿ ಇದ್ದರು.

ಮೋದಿ- ಅಮಿತ್‌ ಶಾ ಜೈಕಾರತೇರದಾಳ: ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಬಿಜೆಪಿ ಬಾವುಟಗಳನ್ನು ಹಿಡಿದು ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಜೈಕಾರ ಹಾಕಿದರು. ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಅನೇಕರು ಕಾರ್ಯಕರ್ತರಿಗೆ ಉಚಿತ ಪೇಡಾ, ಲಡ್ಡು ಹಾಗೂ ಚಹಾ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next