ಬೆಂಗಳೂರು: ಆಪರೇಷನ್ ಕಮಲ-ಹಸ್ತದ ಆತಂಕದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬ್ರೇಕ್ ಹಾಕಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಈಗಲೇ ಬಿಡುಗಡೆ ಮಾಡಿದರೆ ತಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಥವಾ ಬಿಜೆಪಿ
ಹೈಜಾಕ್ ಮಾಡಬಹುದು ಎಂಬ ಭೀತಿ ಇದಕ್ಕೆ ಕಾರಣ. ಖುದ್ದು ದೇವೇಗೌಡರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಮುಂದಿನ ವಿಧಾನ ಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದಟಛಿವಾಗಿದೆ. ಆದರೆ, ಬಿಡುಗಡೆಗೆ ಆತುರ ಬೇಡ ಎಂದು ನಾನೇ ಹೇಳಿದ್ದೇನೆ’ ಎಂದು ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಮಾತನಾಡಿದ ಅವರು, “ಎಚ್. ಡಿ. ಕುಮಾರಸ್ವಾಮಿ ಪಟ್ಟಿ ಸಿದ್ಧಪಡಿಸಿ ನನಗೆ ಕೊಟ್ಟಿದ್ದಾರೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಅಭ್ಯರ್ಥಿಗಳಿಗೂ ಕೆಲಸ ಪ್ರಾರಂಭಿಸಲು ಸೂಚಿಸಿದ್ದೇವೆ. ಆದರೆ, ಪಟ್ಟಿ ಪ್ರಕಟ ವಿಚಾರದಲ್ಲಿ ಸ್ವಲ್ಪ ತಾಳುವಂತೆ ಸಲಹೆ ನೀಡಿದ್ದೇನೆ’ ಎಂದು ಹೇಳಿದರು. “ಈ ಹಿಂದೆ ನಡೆದ ಆಪರೇಷನ್ ಕಮಲದ ಅನುಭವ ನಮಗೆ ಆಗಿದೆ. ಆಗ ಗೆದ್ದವರನ್ನೇ ಸೆಳೆದವರು ಈಗ ಬಿಡ್ತಾರಾ? ಹೀಗಾಗಿ, ನಿಧಾನ ಮಾಡು ಎಂದು ತಿಳಿಸಿದ್ದೇನೆ’ ಎಂದರು.
ಮತ್ತೂಂದು ಮೂಲಗಳ ಪ್ರಕಾರ, ಜೆಡಿಎಸ್ ಸೇರ್ಪಡೆ ಬಗ್ಗೆ ಒಲವು ಹೊಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು
ನಾಯಕರು ಪಟ್ಟಿ ಬಿಡುಗಡೆ ತಕ್ಷಣ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಎಚ್.ವಿಶ್ವನಾಥ್ ಸಹ ಕಾಂಗ್ರೆಸ್ನ ಕೆಲವು ನಾಯಕರಿಗೆ ಗಾಳ ಹಾಕಿ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇದಕ್ಕಾಗಿಯೇ ಗೌಡರು ಪಟ್ಟಿ ಬಿಡುಗಡೆ ಮಾಡದಂತೆ ತಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಶ್ರಾವಣಕ್ಕೆ ಪಟ್ಟಿ ಬಿಡುಗಡೆ ಅನುಮಾನ ಎಂದು ಹೇಳಲಾಗಿದೆ.