Advertisement

ವಾಯವ್ಯ ಸಾರಿಗೆ ನೌಕರರಿಗೆ ಧಮಾಕಾ

10:03 AM Jun 15, 2022 | Team Udayavani |

ಹುಬ್ಬಳ್ಳಿ: ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ವಾಯವ್ಯ ಸಾರಿಗೆ ಸಂಸ್ಥೆ ನೌಕರರ ಮೇಲಿನ ಶಿಸ್ತು ಹಾಗೂ ಗೈರು ಹಾಜರಿ ಪ್ರಕರಣಗಳಿಗೆ ಏಕಕಾಲಕ್ಕೆ ಮುಕ್ತಿ ನೀಡಿದ್ದು, 15 ದಿನಗಳಲ್ಲಿ 5869 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಏಕಕಾಲಕ್ಕೆ ಇಷ್ಟೊಂದು ಪ್ರಕರಣಗಳನ್ನು ಏಕರೂಪದ ಕಡಿಮೆ ದಂಡ ವಿಧಿಸಿ ಇತ್ಯರ್ಥಗೊಳಿಸಿದ್ದು ಸಾರಿಗೆ ಸಂಸ್ಥೆ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ.

Advertisement

ಸಂಸ್ಥೆಯ ನೌಕರರ ಮಾನಸಿಕ ಆತ್ಮಸ್ಥೈರ್ಯ ಹೆಚ್ಚಿಸಿ ಆಡಳಿತ ವರ್ಗ ಹಾಗೂ ನೌಕರರ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದ ವಿಭಾಗ ಹಾಗೂ ಘಟಕ ಮಟ್ಟದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಮುಖವಾಗಿ ಸಂಸ್ಥೆಯ ನೌಕರರಲ್ಲಿ ದೊಡ್ಡ ಪಿಡುಗಾಗಿರುವ ಗೈರು ಹಾಜರಿಯ-3777 ಹಾಗೂ ಶಿಸ್ತು ಪ್ರಕರಣ-2092 ಸೇರಿ ಒಟ್ಟು 5869 ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಬಗೆಹರಿಸಲಾಗಿದೆ. ತರಬೇತಿ, ಪರೀಕ್ಷಾರ್ಥ, ಕಾಯಂ ನೌಕರರಿಗೆ ಈ ಸೌಲಭ್ಯ ದೊರೆತಿದೆ.

ಸೇವಾ ವಜಾ ಪ್ರಕರಣಗಳಿಗೂ ಮುಕ್ತಿ: ಸಂಸ್ಥೆಯ ವ್ಯಾಪ್ತಿಯ 9 ವಿಭಾಗಗಳು ಹಾಗೂ 54 ಘಟಕ, ಪ್ರಾದೇಶಿಕ ಕಾರ್ಯಾಗಾರ ಸೇರಿ ಚಾಲಕ, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿ ಸೇರಿ (ಅಧಿಕಾರಿಗಳನ್ನು ಹೊರತುಪಡಿಸಿ) ಗೈರು ಹಾಜರಿ ಪ್ರಕರಣಗಳಲ್ಲಿ ವಿಭಾಗ ಮಟ್ಟದಲ್ಲಿ 2870, ಘಟಕ ವ್ಯಾಪ್ತಿಯಲ್ಲಿ 1210 ಸೇರಿ 4080 ಪ್ರಕರಣಗಳಿದ್ದವು. ಶಿಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಭಾಗ ಮಟ್ಟದಲ್ಲಿ 2345 ಹಾಗೂ ಘಟಕ ವ್ಯಾಪ್ತಿಯಲ್ಲಿ 433 ಸೇರಿದಂತೆ ಒಟ್ಟು 2778 ಪ್ರಕರಣಗಳಿದ್ದವು. ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ನೌಕರರನ್ನು ಅಮಾನತು, ವಜಾಗೊಳಿಸಬಹುದಾಗಿತ್ತು. ಆದರೆ ನೌಕರರು ಹಾಗೂ ಸಂಸ್ಥೆಯ ಹಿತ ದೃಷ್ಟಿಯಿಂದ ಅತ್ಯಂತ ಕಡಿಮೆ ದಂಡ ವಿಧಿಸಿ ನೌಕರರಿಗೆ ಉತ್ತೇಜನ ನೀಡಲಾಗಿದೆ.

ಅತ್ಯಂತ ಕಡಿಮೆ ದಂಡದ ಶಿಕ್ಷೆ: ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ಕೆಲ ಪ್ರಕರಣಗಳಿಗೆ ಮುಕ್ತಿ ಕಂಡಿರಲಿಲ್ಲ. ಹೀಗಾಗಿ 6 ತಿಂಗಳಿಗಿಂತ ಕಡಿಮೆ ಅವಧಿಯ ಗೈರು ಹಾಜರಿ ಪ್ರಕರಣಗಳಿಗೆ 500 ರೂ. ಮೀರದಂತೆ, 6-9 ತಿಂಗಳ ಗೈರಿದ್ದರೆ 1500 ರೂ. ದಂಡ ವಿಧಿಸಿ ಆ ಅವಧಿಯನ್ನು ಗೈರು ಹಾಜರಿ ಎಂದು ಇತ್ಯರ್ಥಪಡಿಸಲಾಗಿದೆ. ನಿಯಮ-22ರಲ್ಲಿ ಶಿಸ್ತು ಪ್ರಕರಣಗಳನ್ನು ಘಟಕ ವ್ಯಾಪ್ತಿಯಲ್ಲಿ 100 ರೂ., ವಿಭಾಗ ಮಟ್ಟದಲ್ಲಿ 500 ರೂ. ಮೀರದಂತೆ ಏಕ ರೂಪದ ದಂಡ ವಿಧಿಸಿ ಪ್ರಕರಣಗಳನ್ನು ಕೈ ಬಿಡಲಾಗಿದೆ.

ಉಳಿದವಕ್ಕೂ ಕಾಲಮಿತಿ ನಿಗದಿ: ನ್ಯಾಯಾಲಯದಲ್ಲಿರುವ ಹಾಗೂ ಇಲಾಖೆ ವಿಚಾರಣೆ ಗಂಭೀರ ಸ್ವರೂಪದ ಪ್ರಕರಣಗಳು ಸೇರಿದಂತೆ ಗೈರು ಹಾಜರಿ-303 ಹಾಗೂ ಶಿಸ್ತು-703 ಪ್ರಕರಣಗಳು ಬಾಕಿ ಉಳಿದಿವೆ. ಕೋರ್ಟ್‌ನಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಸಂಸ್ಥೆಯ ನಿಯಮ-23ರ ಅಡಿಯ ಪ್ರಕರಣಗಳನ್ನು ವಿಚಾರಣೆ ಕೈಗೊಂಡು ನಿಯಮಾವಳಿ ಪ್ರಕಾರ ದಂಡ ವಿಧಿಸಿ ಜುಲೈ ಅಂತ್ಯದೊಳಗೆ ಬಗೆಹರಿಸಲು ಗಡುವು ನೀಡಲಾಗಿದೆ. ಈ ಕ್ರಮದಿಂದಾಗಿ ಈ ಪ್ರಕರಣಗಳ ಮೇಲೆ “ವ್ಯವಹಾರ’ ಕುದುರಿಸುವ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ಹಿನ್ನಡೆಯಾಗಿದೆ.

Advertisement

ಇತ್ಯರ್ಥಕ್ಕೂ ಕಾಲಮಿತಿ ಗಡುವು:

ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಶಿಸ್ತು ಪ್ರಕರಣಗಳನ್ನು ಬಾಕಿ ಉಳಿಸುವುದು, ಉದ್ದೇಶ ಪೂರ್ವಕವಾಗಿ ವಿಳಂಬ ಹಿಂದಿನಿಂದಲೂ ನಡೆದು ಬಂದ ಕೆಟ್ಟ ಸಂಪ್ರದಾಯ. ಪ್ರಕರಣದ ಹೆಸರಲ್ಲಿ ಪರೀಕ್ಷಾರ್ಥ ಹಾಗೂ ತರಬೇತಿ ಮುಂದೂಡುವುದು, ಬಡ್ತಿಗೆ ಕೊಕ್ಕೆ ಹಾಕುವಂತಹ ಇಂತಹ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಕೆಲವೊಮ್ಮೆ ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರುವಂತಹ ಪರಿಸ್ಥಿತಿ ನೌಕರರು ಹಾಗೂ ಅಧಿಕಾರಿಗಳು ಅನುಭವಿಸುತ್ತಿದ್ದರು. ಇದೀಗ ಈ ಕೆಟ್ಟ ಚಾಳಿಗೆ ತಿಲಾಂಜಲಿ ನೀಡಲು ಪ್ರಕರಣವನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸಲು ಕಾಲಮಿತಿ ವಿಧಿಸಲಾಗಿದೆ. ಉಲ್ಲಂಘಿಸಿದರೆ ಸಂಬಂಧಿಸಿದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ ಆದೇಶಿಸಿದ್ದಾರೆ.

ಅಧಿಕಾರಿಗಳಿಗೆ ಏಕಿಲ್ಲ?

ಸಂಸ್ಥೆಯ ನೌಕರರಿಗೆ ನೀಡಿರುವ ಈ ಅವಕಾಶ ಅಧಿಕಾರಿಗಳಿಗೆ ದೊರೆತಿಲ್ಲ. ಅಧಿಕಾರಿಗಳಲ್ಲಿಯೂ ಕೂಡ ನಿರ್ವಹಣೆ, ಮೇಲುಸ್ತುವಾರಿ ವೈಫಲ್ಯದ ಹೆಸರಲ್ಲಿ ಹಲವು ಪ್ರಕರಣಗಳಿವೆ. ಘಟಕ ವ್ಯವಸ್ಥಾಪಕರ ಮೇಲಂತೂ ಅತೀ ಹೆಚ್ಚು. ಸಣ್ಣ ಪ್ರಕರಣ ಇಟ್ಟುಕೊಂಡು ಇಂದಿಗೂ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡದ ಆರೋಪಗಳು ಕೂಡ ಇವೆ. ನೌಕರರ ಆತ್ಮಸ್ಥೈರ್ಯ ಹೆಚ್ಚಿಸಲು ಕೈಗೊಂಡಿರುವ ಈ ಕಾರ್ಯ ಅತ್ಯುತ್ತಮವಾಗಿದ್ದು, ಇದರಂತೆ ಅಧಿಕಾರಿಗಳ ಮೇಲೆ ಪ್ರಕರಣಗಳ ಅಧಿಕಾರಿಗಳ ಮೇಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂಬುವುದು ಅಧಿಕಾರಿಗಳ ಬೇಡಿಕೆಯಾಗಿದೆ.

ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರಣಕ್ಕೆ ಏಕಕಾಲಕ್ಕೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಯಾವುದೇ ಶಿಸ್ತು ಪ್ರಕರಣಗಳನ್ನು 6 ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಪ್ರಕರಣ ಪೂರ್ಣಗೊಳಿಸಲು 9 ತಿಂಗಳಿದ್ದು, ನಮ್ಮಲ್ಲಿ ಆರು ತಿಂಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ. ಗೈರು ಹಾಜರಿ ಪ್ರಕರಣಗಳನ್ನು ಕೂಡ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು. -ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ        

„ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next