Advertisement

ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ We Transfer ನಿಷೇಧಿಸಿದ ಭಾರತ ಸರ್ಕಾರ

09:20 AM May 31, 2020 | Mithun PG |

ನವದೆಹಲಿ: ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ ವಿ-ಟ್ರಾನ್ಸ್ ಫರ್ ಅನ್ನು  ಭಾರತೀಯ ದೂರ ಸಂಪರ್ಕ ಇಲಾಖೆ (ಡಿಓಟಿ) ನಿಷೇಧಿಸಿದೆ.  ರಾಷ್ಟ್ರೀಯ ಭದ್ರತೆ  ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಿ ನಿರ್ಬಂಧ ಹೇರಲಾಗಿದೆ ಇಂಡಿಯಾ ಟುಡೇ ವರದಿ ತಿಳಿಸಿದೆ.

Advertisement

ದೇಶಾದ್ಯಂತ 3 ಯುಆರ್ ಎಲ್ ಗಳನ್ನು ನಿಷೇಧಿಸುವಂತೆ ಡಿಒಟಿ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.  2 ಯುಆರ್ ಎಲ್ ಗಳಿಗೆ ಕೊಂಚ ವಿನಾಯಿತಿ ಇದ್ದು ವಿ-ಟ್ರಾನ್ಸ್ ಫರ್ ಯುಆರ್ ಎಲ್ ಅನ್ನು ಸಂಪೂರ್ಣ ನಿಷೇಧಿಸಿ ಎಂದು ಈ ನೋಟಿಸ್ ನಲ್ಲಿ ಆದೇಶ ನೀಡಲಾಗಿದೆ.

WeTransfer ಎಂಬುದು ಜನಪ್ರಿಯ ಫೈಲ್ ಹಂಚಿಕೆ ವೆಬ್‌ಸೈಟ್ ಆಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ.  ಕೋವಿಡ್- 19 ಲಾಕ್‌ಡೌನ್‌ ನಿಂದಾಗಿ ದೇಶದಲ್ಲಿ ಸಾವಿರಾರು ಮಂದಿ ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ಫೈಲ್ ಶೇರಿಂಗ್ ಮಾಡಲು ವಿಟ್ರಾನ್ಸ್‌ಫರ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲಸಕ್ಕೆ ಅಗತ್ಯವಾಗಿ ಕಚೇರಿ ಫೈಲು ಕಳುಹಿಸಲು ಮತ್ತು ಇತರ ಅಗತ್ಯಕ್ಕೆ ಕೂಡ ಲಾಕ್‌ಡೌನ್ ಅವಧಿಯಲ್ಲಿ ವಿಟ್ರಾನ್ಸ್‌ಫರ್ ಸೇವೆಯನ್ನು ಉಪಯೋಗಿಸುತ್ತಿದ್ದರು. ಈ ಕಾರಣದಿಂದ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು.

We Transfer ನಲ್ಲಿ ಪ್ರತ್ಯೇಕ ಖಾತೆಯನ್ನು ರಚಿಸುವ ಅಗತ್ಯವಿರಲಿಲ್ಲ.  ನೇರವಾಗಿ ಸ್ವೀಕರಿಸುವವರ ಇಮೇಲ್‌ಗೆ 2GB ವರೆಗೆ ಫೈಲ್‌ಗಳನ್ನು ಕಳುಹಿಸಲು ಅವಕಾಶವಿತ್ತು.  ಆದರೆ ವಿ-ಟ್ರಾನ್ಸ್‌ಫರ್ ಫೈಲ್ ಶೇರಿಂಗ್ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅದರಲ್ಲಿ ಸೂಕ್ಷ್ಮ ಮಾಹಿತಿಯನ್ನು ಕಳುಹಿಸಿದರೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವಾಲಯ ಅದರ ಸೇವೆ ಉಪಯೋಗಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಆದರೂ ಏಕೆ ನಿಷೇಧಿಸಲಾಗಿದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

WeTransfer ನೆದರ್ಲೆಂಡ್‌ನ ಅಮ್‌ಸ್ಟರ್‌ ಡಾಂನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರಲ್ಲಿ ಸಾಮಾನ್ಯ ಸೇವೆ ಉಚಿತವಾಗಿದ್ದು, ಹೆಚ್ಚಿನ ಗಾತ್ರದ ಫೈಲ್ ಕಳುಹಿಸುವ ಪ್ರೀಮಿಯಂ ಸೇವೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಉಚಿತ ಸೇವೆಗಾದರೆ 2 ಜಿಬಿ ಮಿತಿ, ಅದಕ್ಕಿಂತ ಹೆಚ್ಚಿನ ಫೈಲ್ ಗಾತ್ರವಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ, 20 ಜಿಬಿ ವರೆಗಿನ ಫೈಲ್ ಅನ್ನು ವಿ-ಟ್ರಾನ್ಸ್‌ಫರ್ ಬಳಸಿ ಕಳುಹಿಸಲು ಅವಕಾಶವಿತ್ತು.

Advertisement

ಭಾರತದಲ್ಲಿ URL ನಿಷೇಧಗಳು ಹೊಸತಲ್ಲ. ಭಾರತದಲ್ಲಿ ಅನೇಕ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ವಾಸ್ತವವಾಗಿ, 2019ರ ಲೋಕಸಭಾ ಅಧಿವೇಶನವೊಂದರಲ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತದಲ್ಲಿ ನಿರ್ಬಂಧಿಸಲಾದ ಯುಆರ್‌ ಎಲ್‌ ಗಳ ಸಂಖ್ಯೆಯಲ್ಲಿ ಶೇಕಡಾ 442 ರಷ್ಟು ಏರಿಕೆಯಾಗಿದೆ ಎಂದು ತೋರಿಸಿದೆ. ಈ URL ಗಳು ಮಾಲ್ವೇರ್ ಅಥವಾ ಯಾವುದೇ ರೀತಿಯ ಅಶ್ಲೀಲತೆಯನ್ನು ಪ್ರೋತ್ಸಾಹಿಸುವುದು ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವವುಗಳಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next