Advertisement

Governor ಅಭಿಯೋಜನೆ ತಿರುಗುಬಾಣ!: ಯಾರ ವಿರುದ್ಧ ಏನು ಪ್ರಕರಣ? 163ನೇ ವಿಧಿಯಲ್ಲಿ ಏನಿದೆ?

02:22 AM Aug 23, 2024 | Team Udayavani |

ಬೆಂಗಳೂರು: ಇತ್ತೀಚೆಗಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಎರಡು ಬಾರಿ ಸಭೆ ಸೇರಿದ ರಾಜ್ಯ ಸಚಿವ ಸಂಪುಟವು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಹಿತ ವಿಪಕ್ಷ ನಾಯಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತತ್‌ಕ್ಷಣ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ನಿರ್ಧರಿಸಿದೆ. ಮುಡಾ ಪ್ರಕರಣ ದಲ್ಲಿ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ಗೆ ಸರಕಾರ ಈ ಮೂಲಕ ತಿರುಗೇಟು ನೀಡಿದೆ. ಎರಡು ಸಭೆಗಳಲ್ಲಿ ಎರಡು ನಿರ್ಧಾರ ಕೈಗೊಳ್ಳಲಾಗಿದ್ದು, ಎರಡನ್ನೂ ಸಂವಿಧಾನದ 163ನೇ ವಿಧಿ ಅನ್ವಯ ತೆಗೆದುಕೊಳ್ಳಲಾಗಿದೆ.

Advertisement

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎರಡು ಪ್ರತ್ಯೇಕ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಸಿಎಂ ಗೈರಾಗಿದ್ದ ಮೊದಲ ಸಭೆಯಲ್ಲಿ ಆ. 1ರಂದು ನಡೆದ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಆಧರಿಸಿ ತನಿಖೆ ನಡೆಸುವುದಕ್ಕೆ ಪೂರ್ವಾನುಮೋದನೆ ನೀಡಬಾರದು ಎಂಬ 90 ಪುಟಗಳ ನಿರ್ಣಯವನ್ನು ದೃಢೀಕರಿಸಲಾಗಿದೆ. ಈ ಸಭೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಮುನ್ನಡೆಸಿದರು.
ಇನ್ನೊಂದು ಸಭೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅನುಮೋದನೆ ನೀಡುವಂತೆ, ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್‌ ನಿರಾಣಿ ಅವರ ವಿರುದ್ಧ ತನಿಖೆ ನಡೆಸುವುದಕ್ಕೆ ಪೂರ್ವಾನುಮತಿ ನೀಡುವಂತೆ ರಾಜ್ಯ ಪಾಲರಿಗೆ ಸಲಹೆ ರೂಪದ ಆಗ್ರಹ ವ್ಯಕ್ತಪಡಿಸಲಾಗಿದೆ.

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ಸಚಿವ ಸಂಪುಟ ಈ ನಿರ್ಣಯ ತೆಗೆದುಕೊಂಡಿದ್ದು ರಾಜಭವನದ ಜತೆಗೆ ಸರಕಾರ ನಡೆಸುತ್ತಿರುವ ಸಂಗ್ರಾಮ ಇದರೊಂದಿಗೆ ಇನ್ನೊಂದು ಮಜಲಿಗೆ ತಿರುಗಿದೆ.

ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ಈ ವಿಷಯ ತಿಳಿಸಿದ್ದು, ರಾಜ್ಯಪಾಲರ ಎದುರು ಹಲವಾರು ಪ್ರಕರಣಗಳು ನಿರ್ಣಯ ತೆಗೆದುಕೊಳ್ಳುವುದಕ್ಕೆ ಬಾಕಿ ಇದೆ. ತನಿಖಾಧಿಕಾರಿಗಳು, ಸರಕಾರ, ಮಾಧ್ಯಮದ ಮೂಲಕ ಇದಕ್ಕೆ ಸಂಬಂಧಪಟ್ಟ ಮಾಹಿತಿಗಳು ಈಗಾಗಲೇ ರಾಜ್ಯಪಾಲರ ಸಮಕ್ಷಮದಲ್ಲಿ ಇವೆ. ಜತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರಡಿ ತನಿಖಾ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳು ಬಾಕಿ ಇವೆ. ಇವುಗಳಲ್ಲಿ ಕೆಲವು ತನಿಖೆ ಬಳಿಕ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವ ಹಂತದಲ್ಲಿವೆ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 19, 17 (ಎ) ಭಾರತೀಯ ನ್ಯಾಯ ಸಂಹಿತೆ 197, 218ರ ಅನ್ವಯ ಅನುಮೋದನೆ ಹಾಗೂ ಪೂರ್ವಾನುಮೋದನೆ ನೀಡಿ, ನ್ಯಾಯಪಥವನ್ನು ಸುಗಮಗೊಳಿಸುವಂತೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಸಂಪುಟದ ಆಗ್ರಹವೇನು?
ಅನುಮೋದನೆ ಹಾಗೂ ಪೂರ್ವಾನುಮೋದನೆಗೆ ಬಾಕಿ ಇರುವ ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ನ್ಯಾಯದ ಪ್ರಕ್ರಿಯೆ ಸುಗಮಗೊಳಿಸಲು ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶವಿದೆ. ಅದನ್ನು ಬಳಸಿಕೊಂಡು ಸಲಹೆ ಕೊಡಲು ಸಚಿವ ಸಂಪುಟ ನಿರ್ಣಯಿಸಿದೆ. ಬಾಕಿ ಇರುವ ಪ್ರಕರಣದಲ್ಲಿ ಅನುಮೋದನೆ ಕೊಡಬೇಕು, ಪೂರ್ವಾನುಮತಿ ಕೊಡಬೇಕು ಎಂಬುದು ನಮ್ಮ ಆಗ್ರಹ. ರಾಜ್ಯಪಾಲರು ಈ ಸಲಹೆಯನ್ನು ಒಪ್ಪಬೇಕಾಗುತ್ತದೆ. ರಾಜ್ಯಪಾಲರ ವಿವೇಚನಾಧಿಕಾರ ಸೀಮಿತ ಎಂದು ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ.

Advertisement

ಯಾರ ವಿರುದ್ಧ ಏನು ಪ್ರಕರಣ? 163ನೇ ವಿಧಿಯಲ್ಲಿ ಏನಿದೆ?
 ಎಚ್‌.ಡಿ. ಕುಮಾರಸ್ವಾಮಿ
ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣದಲ್ಲಿ, 21-11-2023ರಲ್ಲಿ ಪಿಸಿ ಕಾಯ್ದೆ ಸೆಕ್ಷನ್‌ 19, ಬಿಎನ್‌ಎಸ್‌ 197ರ ಅನ್ವಯ ಅನುಮೋದನೆ ಕೋರಿಕೆ. ರಾಜ್ಯಪಾಲರಿಂದ ಸ್ಪಷ್ಟೀಕರಣ ಕೋರಿಕೆ. 8-8-2024ರಂದು ಎಸ್‌ಐಟಿಯಿಂದ ಸ್ಪಷ್ಟೀಕರಣ ಸಲ್ಲಿಕೆ.

ಶಶಿಕಲಾ ಜೊಲ್ಲೆ
ಮೊಟ್ಟೆ ಹಗರಣದಲ್ಲಿ 9-12-2021ರಲ್ಲಿ ಲೋಕಾಯುಕ್ತ ದಿಂದ ತನಿಖೆಗೆ ರಾಜ್ಯಪಾಲರ ಪೂರ್ವಾನುಮೋದನೆಯನ್ನು ಸೆಕ್ಷನ್‌ 17 (ಎ) ಅನ್ವಯ ಕೋರಿಕೆ

ಮುರುಗೇಶ್‌ ನಿರಾಣಿ
ನೇಮಕಾತಿ ಹಗರಣದಲ್ಲಿ 26-12-2023ರಂದು 17 (ಎ) ಅನ್ವಯ ಪೂರ್ವಾನುಮತಿ ಕೋರಿಕೆ

ಜನಾರ್ದನ ರೆಡ್ಡಿ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 13-5-2024ರಂದು ಆರೋಪ ಪಟ್ಟಿ ಸಲ್ಲಿಸಲು ಪೂರ್ವಾನುಮೋದನೆ ಕೋರಿಕೆ

163ನೇ ವಿಧಿಯಲ್ಲಿ ಏನಿದೆ?
ಸಂವಿಧಾನದ 163ನೇ ವಿಧಿಯ ಅನ್ವಯ ನ್ಯಾಯಾಧೀಶರ ನೇಮಕಾತಿ ಶಿಫಾರಸು, ಸಚಿವರ ಖಾತೆ ಹಂಚಿಕೆ, ಅಧಿವೇಶನ ಸಮಾವೇಶಗೊಳಿಸುವಿಕೆ, ಅಧಿವೇಶನ ಇಲ್ಲದ ವೇಳೆ ಅಧ್ಯಾದೇಶ ಹೊರಡಿಸುವುದಕ್ಕೆ ರಾಜ್ಯಪಾಲರಿಗೆ ಸಚಿವ ಸಂಪುಟ ಸಭೆ ಶಿಫಾರಸು ಮಾಡಬಹುದು ಅಥವಾ ಸಲಹೆ ನೀಡಬಹುದು.

ಖರ್ಗೆ, ರಾಹುಲ್‌ಗೆ ಇಂದು ವಿವರಣೆ
ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ಯನ್ನು ಭೇಟಿ ಮಾಡಲಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ತೆರಳಲಿದ್ದು, ಸಂಜೆ 4 ಗಂಟೆಗೆ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯ ಮಾನಗಳ ಬಗ್ಗೆ ಹೈಕಮಾಂಡ್‌ಗೆ
ಖುದ್ದು ವಿವರಣೆ ನೀಡಲಿರುವ ಉಭಯ ನಾಯಕರು ಸಚಿವ ಸಂಪುಟ ಸಭೆ ಹಾಗೂ ಶಾಸಕಾಂಗ ಸಭೆಯ ನಿರ್ಣಯದ ಪ್ರತಿಗಳನ್ನು ಸಲ್ಲಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಶಕ್ತಿ ತುಂಬಿದ ಶಾಸಕರು
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆ ಭೀತಿ ಎದುರಿಸುತ್ತಿರುವ ಮುಖ್ಯ
ಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ ಶಾಸಕರು, ನಾವು ನಿಮ್ಮೊಂದಿಗಿದ್ದೇವೆ, ಎದೆಗುಂದಬೇಡಿ ಎಂದು ಒಕ್ಕೊರಲ ಅಭಯ ನೀಡಿದ್ದಾರೆ. ಗುರುವಾರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಸಭೆಗೆ ಹಾಜರಾದ ಶಾಸಕರ ಸಮ್ಮುಖ ದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಪ್ರಕರಣಗಳ ಬಗ್ಗೆ ನಿವೇದನೆ ಮಾಡಿಕೊಂಡರು. ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ತೀರ್ಮಾನವನ್ನು ಖಂಡಿಸುವ ನಿರ್ಣಯವನ್ನು ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ ಮಂಡಿಸಿದರು. ಮಾಜಿ ಸಚಿವ ತನ್ವೀರ್‌ ಸೇಠ್ ಅನುಮೋದನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next