Advertisement

ವರುಣರಂಜಿತ ಕುಮಾರ ಪ್ರಮಾಣ

06:00 AM May 24, 2018 | |

ಬೆಂಗಳೂರು: ಭಾರೀ ಮಳೆಯ ನಡುವೆಯೂ ವಿಧಾನಸೌಧದ ಮುಂದೆ ಸೇರಿದ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ರಾಜ್ಯದ 25ನೇ ಮತ್ತು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಪದ ಗ್ರಹಣ ಮಾಡಿದರು. ಉಪಮುಖ್ಯ ಮಂತ್ರಿಯಾಗಿ ಡಾ.ಜಿ.ಪರಮೇಶ್ವರ್‌ ಪ್ರಮಾಣ ಸ್ವೀಕರಿಸಿದರು.

Advertisement

ವಿಧಾನಸೌಧದ ಮುಂಭಾಗ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಹಾಗೂ ಪರಮೇಶ್ವರ್‌ ಅವರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದರು.


ಮಳೆ ಆತಂಕದ ನಡುವೆಯೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕುಮಾರಸ್ವಾಮಿ ಅವರು ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಪರಮೇಶ್ವರ್‌ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ನಂತರ ಇಬ್ಬರೂ ಪ್ರಮಾಣವಚನಕ್ಕೆ ಸಹಿ ಮಾಡಿದರು. ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಮತ್ತು ಡಿಸಿಎಂ ಸೇರಿ ಸಚಿವ ಸಂಪುಟ ಸಭೆ ನಡೆಸಿದರು.


ಮೋದಿ ಸರ್ಕಾರದ ವಿರುದ್ಧ ರೂಪುಗೊಂಡಿರುವ ಮಹಾಘಟಬಂಧನದ ಘಟಾನುಘಟಿಗಳಾದ ಎಚ್‌.
ಡಿ.ದೇವೇಗೌಡ, ನಾಯಕಿ ಸೋನಿಯಾ ಗಾಂಧಿ,ರಾಹುಲ್‌ ಗಾಂಧಿ, ಅರವಿಂದ ಕೇಜ್ರಿವಾಲ್‌, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ವಿ.ನಾರಾಯಣ ಸ್ವಾಮಿ, ಶರದ್‌ ಪವಾರ್‌, ಶರದ್‌ ಯಾದವ್‌,ಮಾಯಾವತಿ, ಅಖೀಲೇಶ್‌ ಯಾದವ್‌ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಿದ್ದರು. 2019ರ ಲೋಕಸಭಾ ಚುನಾವಣೆಗೆ ಕಣ್ಣಿಟ್ಟಿರುವ ವಿವಿಧ ರಾಜ್ಯಗಳ ನಾಯಕರು ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು.


ಉಳಿದಂತೆ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನ‌ ಮಾಜಿ ಮುಖ್ಯಮಂತ್ರಿ ಗಳಾದ ಹೇಮಂತ್‌ ಸೊರೇನ್‌ ಮತ್ತು ಬಾಬೂಲಾಲ್‌ ಮರಾಂಡಿ, ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌, ಸಿಪಿಐನ ಸೀತಾರಾಂ ಯೆಚೂರಿ, ರಾಷ್ಟ್ರೀಯ ಲೋಕದಳದ ಸಂಸ್ಥಾಪಕ ಅಜಿತ್‌ ಸಿಂಗ್‌ ಹಾಜರಿದ್ದರು.

ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, ಕೇರಳದ ಸಚಿವ ಮ್ಯಾಥ್ಯೂ ಟಿ.ಥಾಮಸ್‌ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಎಚ್‌.ಡಿ.ರೇವಣ್ಣ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಸೇರಿದಂತೆ ವೇದಿಕೆಯಲ್ಲಿ ಹಲವು ಗಣ್ಯರು ಹಾಜರಿದ್ದುದು ವಿಶೇಷವಾಗಿತ್ತು.


ಇಂದು ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ವಿಧಾನಸಭೆ ಅಧ್ಯಕ್ಷ ಸ್ಥಾನದ ಆಯ್ಕೆ ಶುಕ್ರವಾರ ನಡೆಯಲಿದೆ. ಪ್ರಮುಖ ಸ್ಥಾನಕ್ಕೆ ಸದಸ್ಯರ ಹೆಸರನ್ನು
ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಸೂಚಿಸುವಂತೆ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ಹೇಳಿದ್ದಾರೆ. 
ಶುಕ್ರವಾರ ವಿಧಾನ ಸಭಾಧ್ಯಕ್ಷರ ಚುನಾವಣೆ ನಡೆಯಲಿದೆ. ಯಾರಾದರೂ ಒಬ್ಬ ಸದಸ್ಯರು ಇನ್ನೊಬ್ಬ ಸದಸ್ಯರನ್ನು ಸಭಾಧ್ಯಕ್ಷರಾಗಿ ಆಯ್ಕೆ ಮಾಡುವ ಬಗ್ಗೆ ಪ್ರಸ್ತಾವದ ಸೂಚನಾ ಪತ್ರವನ್ನು ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಲಿಖೀತವಾಗಿ ಕಾರ್ಯದರ್ಶಿಯವರಿಗೆ ಕೊಡಬಹುದು. ಈ ಪತ್ರಕ್ಕೆ ಮತ್ತೂಬ್ಬ ಸದಸ್ಯರ ಅನುಮೋದನೆ ಬೇಕು. 

ಅಲ್ಲದೆ, ಯಾರ ಹೆಸರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಲಾಗುತ್ತದೋ ಅವರು ಚುನಾಯಿತರಾದಲ್ಲಿ, ಸೇವೆ ಸಲ್ಲಿಸಲು ಇಷ್ಟವಿದೆ ಎಂಬ ಹೇಳಿಕೆಯೂ ಇರಬೇಕು. ಈಗಾಗಲೇ ರಮೇಶ್‌ಕುಮಾರ್‌ ಅವರನ್ನು ಕಾಂಗ್ರೆಸ್‌ ಸ್ಪೀಕರ್‌ ಅಭ್ಯರ್ಥಿ ಎಂದು ಘೋಷಿಸಿದೆ. ಜೆಡಿಎಸ್‌ನಲ್ಲಿ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಎ.ಟಿ.ರಾಮಸ್ವಾಮಿ, 
ಎಚ್‌.ಕೆ.ಕುಮಾರಸ್ವಾಮಿ  ಅಥವಾ ಎಚ್‌.ವಿಶ್ವನಾಥ್‌ ಅವರ ಹೆಸರು ಕೇಳಿಬರುತ್ತಿದೆ.


9 ನಿಮಿಷದ ಕಾರ್ಯಕ್ರಮ
ಸುಮಾರು 1ಲಕ್ಷ ಜನರ ಸಮ್ಮುಖದಲ್ಲಿ ನಡೆದ ಸಿಎಂ ಮತ್ತು ಡಿಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ ಕೇವಲ 9 ನಿಮಿಷಗಳಲ್ಲಿ ಮುಗಿಯಿತು.ಸಂಜೆ 4.28ಕ್ಕೆ ರಾಜ್ಯಪಾಲರು ವೇದಿಕೆಗೆ ಆಗಮಿಸಿದರು. 4.30ಕ್ಕೆ ಕುಮಾರ ಸ್ವಾಮಿ
ಪ್ರಮಾಣ ವಚನ ಸ್ವೀಕರಿಸಿ, ಸಹಿ ಮಾಡಿದರು.4.33ಕ್ಕೆ ಪರಮೇಶ್ವರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 4.37ಕ್ಕೆ ರಾಷ್ಟ್ರಗೀತೆಯೊಂದಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರೆ ಬಿತ್ತು.

ನಾಳೆ ವಿಶ್ವಾಸಮತ ಯಾಚನೆ
ಕುಮಾರ ಸ್ವಾಮಿ ಶುಕ್ರವಾರ ಮಧ್ಯಾಹ್ನದ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವರು. ಇದಕ್ಕಾಗಿ ಶುಕ್ರವಾರ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಶುಕ್ರವಾರ ಮಧ್ಯಾಹ್ನ 12.15ಕ್ಕೆ ವಿಧಾನಸಭೆ ಕಲಾಪ ಆರಂಭ ವಾಗಲಿದ್ದು, ಮೊದಲು ಸ್ಪೀಕರ್‌, ಡೆಪ್ಯೂಟಿ ಸ್ಪೀಕರ್‌ ಆಯ್ಕೆ ನಡೆಯಲಿದೆ. ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸುವ ಕುರಿತು ಪ್ರಸ್ತಾವ ಮಂಡಿಸುವರು. ಆನಂತರ ಮುಖ್ಯಮಂತ್ರಿಗಳು ಮಾತನಾಡಿ, ವಿಶ್ವಾಸಮತ ಯಾಚನೆ ನಡೆಯಲಿದೆ.

Advertisement

ಈ ಜವಾಬ್ದಾರಿ ನನ್ನ ಜೀವನದ ಹೊಸ ಸವಾಲು. ಒದೊಂದು ಹೆಜ್ಜೆಯನ್ನೂ ಸೂಕ್ಷ್ಮ ವಾಗಿ ಇಡಬೇಕಿದೆ. ಸಮ್ಮಿಶ್ರ ಸರ್ಕಾರದಲ್ಲಿ ದೇಶಕ್ಕೆ ಮಾದರಿಯಾಗುವ ರೀತಿ ಆಡಳಿತ ನೀಡುವ ಭರವಸೆ ಇದೆ. ಎಲ್ಲಾ ಭರವಸೆಗಳನ್ನು ಈಡೇರಿಸಲು ಸಮನ್ವಯ ಸಮಿತಿ ರಚಿಸಿ, ಚರ್ಚಿಸಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಇಂದು ನನಗೆ ತುಂಬಾ ಖುಷಿಯ ದಿನ. ಹೈಕಮಾಂಡ್‌ ಆಶೀರ್ವಾದದಿಂದ ಈ ಅವಕಾಶ ದೊರೆತಿದೆ. ಕೊರಟಗೆರೆ ಜನರ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಜನಪರ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಮೇ 25ರಂದು ಬಹುಮತ ಸಾಬೀತು ಪಡಿಸಿ, ದೆಹಲಿಗೆ ತೆರಳುತ್ತೇನೆ. ಖಾತೆಗಳ ಹಂಚಿಕೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ.
– ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next