Advertisement

ಸರ್ಕಾರಗಳು ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು : ಡಾ.ಜಿ.ಪರಮೇಶ್ವರ್

01:32 PM May 31, 2022 | Team Udayavani |

ಕೊರಟಗೆರೆ: ದೇಶದ ಎಲ್ಲಾ ಸರ್ಕಾರಗಳು ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈರೇನಹಳ್ಳಿ ಕ್ರಾಸ್ ಬಳಿ ಕೃಷಿ ಇಲಾಖೆ, ತಾಲೂಕು ಪಂಚಾಯಿತಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ದಿ ನಿಗಮ ಹಾಗೂ ತಾಂಡ ಅಭಿವೃದ್ದಿ ನಿಗಮದಿಂದ ಫಲಾನುಭವಿಗಳಿಗೆ ವಿವಿಧ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಗೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡುವ ಮೂಲಕ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಲು ಕಾರಣವಾಗಿದ್ದು ಆಹಾರದ ಕೊರತೆ ನೀಗಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಬಡ ಜನತೆಗೆ 5 ಕೆ.ಜಿ.ಉಚಿತ ಅಕ್ಕಿ ವಿತರಣೆ ಪ್ರಾರಂಭಿಸಿ ಪ್ರಸ್ತುತ ಒಬ್ಬರಿಗೆ 7 ಕೆ.ಜಿ. ನೀಡುತ್ತಿದ್ದು ಮುಂದಿನ ದಿನಗಳಲ್ಲಿ 10 ಕೆ.ಜಿ.ಗೆ ಹೆಚ್ಚಿಸುವ ಯೋಜನೆ ಇದೆ ಎಂದರು.

ಕೊರಟಗೆರೆ ತಾಲೂಕಿನಲ್ಲಿ ಬಹುತೇಕ ಮಳೆ ಆಶ್ರಯ ಕೃಷಿಯಾಗಿದ್ದು ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಎತ್ತಿನಹೊಳೆ ನೀರಾವರಿ ಯೋಜನೆ ಜಾರಿಗೊಳಿಸಿದ್ದು ಈ ಯೋಜನೆಯಿಂದ ತಾಲೂಕಿನ 109 ಕೆರೆಗಳಿಗೆ ನೀರು ಹರಿಯಲ್ಲಿದೆ ಎಂದು ಹೇಳಿದರು.

ಕೃಷಿ ಇಲಾಖೆ, ತಾಲೂಕು ಪಂಚಾಯಿತಿ,ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮಿಕಿ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ದಿ ನಿಗಮ ಹಾಗೂ ತಾಂಡ ಅಭಿವೃದ್ದಿ ನಿಗಮಗಳು ಒಟ್ಟಿಗೆ ಸೇರಿ 43 ಮಂದಿ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 16 ಕೊಳವೆ ಬಾವಿಗಳ ಫಲಾನುಭವಿಗಳಿಗೆ 96 ಲಕ್ಷ ರೂಗಳ ವೆಚ್ಚದಲ್ಲಿ ಪಂಪು ಮೋಟಾರು ವಿತರಣೆ ಹಾಗೂ ಕೃಷಿ ಇಲಾಖೆಯಿಂದ 8 ಲಕ್ಷ ಸಹಾಯಧನದಲ್ಲಿ 10 ಲಕ್ಷ ರೂಗಳ ವೆಚ್ಚದಲ್ಲಿ ಸಮೃದ್ದಿ ಸಂಜೀವಿನಿ ಒಕ್ಕೂಟಕ್ಕೆ ಟ್ರ್ಯಾಕ್ಟರ್, ರೋಟಾವೇಟರ್,ಕೃಷಿಯಂತ್ರೋಪಕರಗಳನ್ನು ವಿತರಿಸಿದರು.

Advertisement

ಸಮಗ್ರ ಕೃಷಿ ಅಭಿಯಾನ 2022 ರಲ್ಲಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಮಾಹಿತಿ ನೀಡಲು ಮುಂಗಾರು ಹಂಗಾಮಿನ ಕೃಷಿ ರಥ ಸಂಚಾರದಿಂದ ಕೃಷಿ ವಿಚಾರಗಳ ಅರಿವು ಮೂಡಿಸಿ ಆಹಾರ ಉತ್ಪಾದನೆ ಹೆಚ್ಚಳಕ್ಕೆ ತಾಂತ್ರಿಕತೆಗಳ ಮನವರಿಕೆ ಮಾಡಲಾಗಿದ್ದು ರಾಜ್ಯದಲ್ಲಿಯೇ ಕೃಷಿ ಪರಿಕರಗಳು ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮ ಕೊರಟಗೆರೆ ತಾಲೂಕು ಮಾದರಿ ತಾಲೂಕು ಆಗಿದೆ ಎಂದು ಇಲಾಖಾ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ತಾಲೂಕಿನಲ್ಲಿ ಪ್ರಸ್ತುತ ವರ್ಷ 29295 ಹೆಕ್ಟೇರ್ ಜಮೀನುಗಳಲ್ಲಿ ಬಿತ್ತನೆ ಗುರಿಯನ್ನು ಹೊಂದಿದ್ದು ಮೇ ತಿಂಗಳಲ್ಲಿ ಬಿದ್ದ ಮಳೆಯಿಂದ ರೈತರು ಶೇ.15 ರಷ್ಟು ಉಳುಮೆ ಕಾರ್ಯ ಮುಗಿದಿದ್ದು ಉಳಿದ ಉಳುಮೆ ಕಾರ್ಯ ಭರದಿಂದ ಸಾಗಿದ್ದು ತಾಲೂಕಿನಲ್ಲಿ ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ರಾಗಿ, ತೋಗರಿ, ಮುಸುಕಿನಜೋಳ, ಅಲಸಂದಿ ಮತ್ತು ನೆಲಗಡಲೆ ಸೇರಿದಂತೆ ವಿವಿಧ ಕೃಷಿ ಬೆಳೆಗಳ 1666 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಈ ವರ್ಷ 6390 ಮೆಟ್ರಿಕ್ ಟನ್ ನಷ್ಟು ರಸಗೊಬ್ಬರ ಸಿದ್ದ ಪಡಿಸುವ ಗುರಿ ಹೊಂದಿದ್ದು ಹಾಲಿ ತಾಲೂಕಿನಲ್ಲಿ 1718 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು ರೈತರಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೊರಟಗೆರೆ ತಾಲೂಕಿನಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆ ವಿಫಲವಾಗಿದ್ದು ತಾಲೂಕಿನ ವಾತಾವರಣ ಉತ್ತಮವಾಗಿದ್ದು ಹೂವು ಮತ್ತು ಹಣ್ಣುಗಳ ಬೆಳೆಗೆ ಉತ್ತಮ ಫಲವತ್ತಾದ ಭೂಮಿಯಿದ್ದು ತಾಲೂಕಿನ ತೋಟಗಾರಿಕಾ ಅಧಿಕಾರಿ ರೈತರಿಗೆ ಮಾಹಿತಿ ಮತ್ತು ಸವಲತ್ತು ನೀಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗೆ ಹೆಚ್ಚು ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ, ಅರಣ್ಯ ಇಲಾಖೆಯಿಂದ ರೈತರಿಗೆ ದೊರೆಯುವ ಕೃಷಿ ಪರಿಕರಗಳ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ತಹಶೀಲ್ದಾರ್ ನಹೀದಾ ಜಮ್ ಜಮ್, ಕೃಷಿಇಲಾಖಾ ಆಡಳಿತಾಧಿಕಾರಿ ದೀಪಶ್ರೀ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ದೊಡ್ಡಸಿದ್ದಯ್ಯ, ಗ್ರಾ.ಪಂ.ಅಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ಪುಟ್ಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಕೃಷಿ ಅಧಿಕಾರಿ ನಾಗರಾಜು, ಬಾಲಕೃಷ್ಣ, ಆದಿಜಾಂಭವ ನಿಗಮದ ಅಧಿಕಾರಿಗಳಾದ ಬಾಲಕೃಷ್ಣ, ಗಿರೀಶ್,  ಜಯರಾಮ್, ಮಧುಸೂದನ್, ಸುಹಾಸ್, ಕೃಷಿ ಅಧಿಕಾರಿಗಳಾದ ನರಸಿಂಹಮೂರ್ತಿ, ಹೆಚ್.ಆರ್.ನಾಗರಾಜು, ತಾ.ಪಂ.ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಗ್ರಾ.ಪಂ.ಸದಸ್ಯ ವೆಂಕಟೇಗೌಡ, ಕವಿತಾ ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next