Advertisement

ಪಬ್‌ ದಾಳಿ ಪ್ರಕರಣದ ಆರೋಪಿಗಳ ಖುಲಾಸೆ ವಿರುದ್ಧ ಮೇಲ್ಮನವಿ : ರೆಡ್ಡಿ

10:50 AM Mar 16, 2018 | Karthik A |

ಬೆಂಗಳೂರು: ಮಂಗಳೂರು ಪಬ್‌ ದಾಳಿ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದರ ವಿರುದ್ಧ ಅಡ್ವೊಕೇಟ್‌ ಜನರಲ್‌ ಅವರ ಜತೆ  ಚರ್ಚಿಸಿ ಮೇಲ್ಮನವಿ ಸಲ್ಲಿಸಲಾಗುವುದೆಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು ಘಟನೆ ಬಗ್ಗೆ  ಕೆಲವರು ಸಾಕ್ಷಿಗಳನ್ನು ಸರಿಯಾಗಿ ಹೇಳದಿದ್ದರಿಂದ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಪಬ್‌ ದಾಳಿ ಕುರಿತ ವೀಡಿಯೋ ಫ‌ುಟೇಜನ್ನು ಸರ್ಟಿಫೈಡ್‌ ಮಾಡದಿರುವುದರಿಂದ ಕೋರ್ಟ್‌ ಅದನ್ನು ಪರಿಗಣಿಸಲಿಲ್ಲ. ಇವೆಲ್ಲವುಗಳಿಂದ ಪ್ರಾಸಿಕ್ಯೂಶನ್‌ಗೆ ಪ್ರಕರಣದಲ್ಲಿ ಹಿನ್ನೆಡೆಯಾಯಿತೆಂದು ಹೇಳಿದರು.

Advertisement

ಪಬ್‌ ದಾಳಿ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕಿತ್ತು. 9 ವರ್ಷಗಳ ಕಾಲ ವಿಚಾರಣೆ ನಡೆದಿರುವುದು, ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳಾದ ಮೂವರು ಹೆಣ್ಣು ಮಕ್ಕಳು ಸಾಕ್ಷಿ ಹೇಳಲು ಬಾರದಿರುವುದು ಸಹ ತೀರ್ಪಿನ ಮೇಲೆ ಪರಿಣಾಮ ಬೀರಿತೆಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಪ್ರಾಸಿಕ್ಯೂಶನ್‌ ನಿರ್ದೇಶಕರಿಂದ ತರಿಸಿಕೊಂಡು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ಮೇಲ್ಮನವಿ ಸಲ್ಲಿಸಲಾಗುವುದೆಂದು ಹೇಳಿದರು.

ಜನವಾದಿ ಸಂಘಟನೆಯಿಂದ ಮನವಿ : ಮಂಗಳೂರು ಪಬ್‌ ದಾಳಿ ಕುರಿತಂತೆ ಮರು ವಿಚಾರಣೆ ನಡೆಸಬೇಕು ಹಾಗೂ ಆರೋಪಿಗಳನ್ನ ಖುಲಾಸೆಗೊಳಿಸಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಜನವಾದಿ ಮಹಿಳಾ ಸಂಘಟನೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. 

ಆರ್ಡರ್ಲಿ ಪದ್ಧತಿ ರದ್ದಾಗಿಲ್ಲ
ರಾಜ್ಯದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಮನೆಯಲ್ಲಿ ಜಾರಿಯಲ್ಲಿರುವ ಆರ್ಡರ್ಲಿ ಪದ್ಧತಿಯನ್ನು ಡಾ| ಜಿ. ಪರಮೇಶ್ವರ್‌ ಅವರು ಗೃಹ ಸಚಿವರಾಗಿದ್ದಾಗ ರದ್ದು ಪಡಿಸಲಾಗಿತ್ತಾದರೂ ಅದಿನ್ನೂ ಮುಂದುವರಿದಿದೆ. ಪರ್ಯಾಯ ನೇಮಕಾತಿ ಮುಗಿದ ತಕ್ಷಣ ಆರ್ಡರ್ಲಿ ವ್ಯವಸ್ಥೆ ರದ್ದುಪಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಪೊಲೀಸ್‌ ಅಧಿಕಾರಿ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆರ್ಡರ್ಲಿಗಳಿದ್ದರೆ ವಾಪಸ್‌ ಪಡೆಯಲಾಗುವುದು  ಎಂದು ರಾಮಲಿಂಗಾ ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next