Advertisement

ಬಿಸಿಯೂಟ ಪಡಿತರ ವಿತರಣೆಗೆ ಸರ್ಕಾರ ತಡೆ

03:43 PM Nov 03, 2020 | Suhan S |

 

Advertisement

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಕಾರಣದಿಂದ ಶಾಲೆಗಳು ಮುಚ್ಚಿರುವ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಅಕ್ಕಿ ಮತ್ತು ಬೇಳೆಯನ್ನು ಮೇ ತಿಂಗಳವರೆಗೆ ವಿತರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಜೂನ್‌ ತಿಂಗಳಿಂದ ಬಿಸಿಯೂಟದ ಪಡಿತರ ವಿತರಣೆ ಮಾಡಿಲ್ಲ.

ಶಾಲೆಗಳು ತೆರೆಯದ ಕಾರಣ, ಸರ್ಕಾರಿ ಮತ್ತುಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಮನೆಗಳಿಗೆ ಅವರ ಪಾಲಿನ ಅಕ್ಕಿ ಮತ್ತು ಬೇಳೆಯನ್ನು ಶಾಲೆಗಳು ವಿತರಣೆ ಮಾಡಿವೆ. ಮಾರ್ಚ್‌ 22 ರವರೆಗೂಶಾಲೆಗಳು ನಡೆದಿವೆ. ಅಂದಿನಿಂದ ಮೇ 31ರವರೆಗಿನ ಅಕ್ಕಿ, ಬೇಳೆ ಹಾಗೂ ತರಕಾರಿ ಬದಲಿಗೆ ಅಷ್ಟೇ ಮೌಲ್ಯದ ಬೇಳೆಯನ್ನು ಶಾಲೆಗಳು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ.

ಈ ನಡುವೆ, ರಾಜ್ಯ ಸರ್ಕಾರ ಒಂದು ಆದೇಶ ಹೊರಡಿಸಿದ್ದು, ಈಗಾಗಲೇ ಬಿಪಿಎಲ್‌ ಕುಟುಂಬ ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಹಾರಇಲಾಖೆಯಿಂದ ಪಡಿತರ ನೀಡುತ್ತಿರುವುದರಿಂದ, ಅದೇ ಕುಟುಂಬಗಳಿಗೆ ಮತ್ತೆ ಶಾಲೆಯ ಪಡಿತರ ವನ್ನೂ ನೀಡುವುದರಿಂದ ಒಂದೇ ಕುಟುಂಬಕ್ಕೆ ಎರಡೆರಡು ಪಡಿತರ ನೀಡಿದಂತಾಗುತ್ತದೆ. ಇದನ್ನು ಪರಿಶೀಲಿಸುವ ಅಗತ್ಯವಿರುವುದರಿಂದ ಬಿಸಿಯೂಟದ ಪಡಿತರ ನೀಡಿಕೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದಿದೆ. ಹೀಗಾಗಿ ಜೂನ್‌ ನಿಂದ ಜಿಲ್ಲೆಯಲ್ಲಿ ಬಿಸಿಯೂಟದ ಪಡಿತರ ವಿತರಣೆ ಆಗಿಲ್ಲ.

ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳಿಗೆ ಜೂನ್‌, ಜುಲೈ ತಿಂಗಳ ಬೇಳೆ, ಅಕ್ಕಿ ಬಂದಿದೆ. ಅದನ್ನು ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಸರ್ಕಾರದ ಆದೇಶದ ಕಾರಣ ಶಾಲೆಗಳಿಗೆ ವಿತರಿಸಿಲ್ಲ ಎಂದು ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಗುರುಲಿಂಗಯ್ಯ “ಉದಯವಾಣಿ’ಗೆ ತಿಳಿಸಿದರು.

Advertisement

ಜಿಲ್ಲೆಯಲ್ಲಿ 81,474 ಮಕ್ಕಳಿಗೆ ಬಿಸಿಯೂಟ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 81,474 ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದಾರೆ. 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ 100 ಗ್ರಾಂ ಅಕ್ಕಿ, 20 ಗ್ರಾಂ ತೊಗರಿಬೇಳೆಯುಳ್ಳ ಬಿಸಿಯೂಟ ನೀಡಲಾಗುತ್ತಿದೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ ಹಾಗೂ 30 ಗ್ರಾಂ ಬೇಳೆ ಪ್ರಮಾಣದ ಅನ್ನ ಸಾರು ನೀಡಲಾಗುತ್ತಿದೆ.

25 ಸಾವಿರ ಕ್ವಿಂಟಲ್‌ ಅಕ್ಕಿ: ಇಷ್ಟು ವಿದ್ಯಾರ್ಥಿಗಳಿಗೆ ಪಡಿತರ ವಿತರಿಸಲು, ಜಿಲ್ಲೆಯಲ್ಲಿ ತಿಂಗಳಿಗೆ ಅಂದಾಜು 2500 ಕ್ವಿಂಟಲ್‌ ಅಕ್ಕಿ ಮತ್ತು 600 ಕ್ವಿಂಟಲ್‌ ತೊಗರಿ ಬೇಳೆಯನ್ನು ಸರ್ಕಾರದಿಂದ ನೀಡಲಾಗುತ್ತದೆ. ಈ ಪಡಿತರ ಆಹಾರ ಇಲಾಖೆಯ ಉಗ್ರಾಣಗಳಲ್ಲಿ ಸಂಗ್ರಹವಾಗುತ್ತದೆ. ಪ್ರತಿ ತಿಂಗಳೂ ಶಾಲೆಗಳಿಗೆ ರವಾನೆಯಾಗುತ್ತದೆ. ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳ ಪಾಲಿನ ಅಕ್ಕಿ ಮತ್ತು ಬೇಳೆ ಗೋದಾಮಿನಲ್ಲಿದೆ. ಸರ್ಕಾರದ ಆದೇಶದ ಕಾರಣ ಶಾಲೆಗಳಿಗೆ ಕಳುಹಿಸಿಲ್ಲ. ಚಾಮರಾಜನಗರ, ಗುಂಡ್ಲುಪೇಟೆ,ಯಳಂದೂರು ತಾಲೂಕುಗಳಿಗೆ ಜೂನ್‌ನಿಂದ ಸರ್ಕಾರದಿಂದಲೇ ಪಡಿತರ ಕಳುಹಿಸಿಲ್ಲ. ಮೇ 31ರವರೆಗೆ ಬಂದಿರುವ ಪಡಿತರವನ್ನುಜಿಲ್ಲೆಯ ಎಲ್ಲಾ ಶಾಲೆಗಳೂ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ. ವಿದ್ಯಾರ್ಥಿಗಳು ರಜೆಗೆಂದು ಬೇರೆಡೆ ಹೋಗಿರುವ ಪ್ರಕರಣಗಳಲ್ಲಿ ಪ್ಯಾಕ್‌ ಮಾಡಿ ಮನೆಗಳಿಗೆ ವಿತರಿಸಲಾಗಿದೆ.

ಮೇ 31ರವರೆಗೂ ಜಿಲ್ಲೆಯ ಶಾಲೆಗಳ ಮೂಲಕ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಬದಲು ಅಷ್ಟೇ ಪ್ರಮಾಣದ ಪಡಿತರವನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶ ದನ್ವಯ ಜೂನ್‌ನಿಂದ ಜಿಲ್ಲೆಗೆ ಹನೂರು ಮತ್ತು ಕೊಳ್ಳೇಗಾಲ ತಾಲೂಕು ಹೊರತು ಪಡಿಸಿ ಪಡಿತರ ಬಂದಿಲ್ಲ. ಸರ್ಕಾರದ ಆದೇಶದಂತೆ ಮುಂದಿನ ಕ್ರಮ ವಹಿಸಲಾಗುವುದು.- ಗುರುಲಿಂಗಯ್ಯ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

ಅಕ್ಷರ ದಾಸೋಹ ಕಚೇರಿಯಿಂದ ಶಾಲೆಗಳಿಗೆ ತಲುಪಿದೆ. ಶಾಲೆಯಿಂದ ನೇರವಾಗಿ ಮಕ್ಕಳಿಗೆ ತಲುಪಿಸಲಾಗಿದೆ. 8,9,10 ವಿದ್ಯಾರ್ಥಿಗಳಿಗೆ ತಲುಪಿಸಿದ್ದೇವೆ. ಮೇ 31ರ ವರೆಗೆ ನೀಡಿದ್ದೇವೆ. ನಂತರ ಸರ್ಕಾರದಿಂದ ಪಡಿತರ ಬಂದಿಲ್ಲ. ಕುಮಾರ್‌, ಮುಖ್ಯ ಶಿಕ್ಷಕರು, ಬಿಸಲವಾಡಿ

ಜೂನ್‌ವರೆಗೆ ಶಾಲೆಯ ಎಲ್ಲಾ  ಮಕ್ಕಳಿಗೂ ಬಿಸಿಯೂಟದ ಬದಲು ಪಡಿತರ ವಿತರಿಸಲಾಗಿದೆ. ಜೂನ್‌ ನಂತರ ವಿತರಿಸಿಲ್ಲ. ಈ ಬಗ್ಗೆ ವಿಚಾರಿಸ ದರೆ ಸರ್ಕಾರದ ಆದೇಶ ಬಂದಿಲ್ಲ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಮಣಿ, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನೂರು

 

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next