Advertisement

ಸರಕಾರದಿಂದ ಒಬ್ಬ ಸರಕಾರಿ ಶಾಲಾ ವಿದ್ಯಾರ್ಥಿಗೆ 2 ಲ.ರೂ. ಖರ್ಚು!

11:52 AM May 31, 2022 | Team Udayavani |

ಕುಂದಾಪುರ: ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳ ಕಾರಣದಿಂದ ಸರಕಾರ ಒಬ್ಬ ವಿದ್ಯಾರ್ಥಿಗೆ ಶಿಕ್ಷಣಕ್ಕಾಗಿ ವಾರ್ಷಿಕ 2 ಲಕ್ಷ ರೂ.ವರೆಗೆ ವ್ಯಯಿಸುತ್ತಿದೆ! ಎಂಜಿನಿಯರಿಂಗ್‌ ಶಿಕ್ಷಣಕ್ಕಿಂತಲೂ ದುಬಾರಿಯಾಗಿದೆ ಪ್ರಾಥಮಿಕ ಶಾಲಾ ಶಿಕ್ಷಣದ ವೆಚ್ಚ.

Advertisement

ಕುಂದಾಪುರ ಶೈಕ್ಷಣಿಕ ವಲಯದಲ್ಲಿ ಕಳೆದ ವರ್ಷ 16,580 ವಿದ್ಯಾರ್ಥಿಗಳು, 142 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 34 ಪ್ರೌಢಶಾಲೆಗಳಿವೆ. ಬೈಂದೂರು ವಲಯದಲ್ಲಿ 15,705 ವಿದ್ಯಾರ್ಥಿಗಳು, 181 ಪ್ರಾಥಮಿಕ, 41 ಪ್ರೌಢಶಾಲೆಗಳಿವೆ. ಕುಂದಾಪುರದಲ್ಲಿ 25 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ, ಬೈಂದೂರಿನಲ್ಲಿ 46 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರು.

ಕಡಿಮೆ ದಾಖಲಾತಿ

ಕುಂದಾಪುರದಲ್ಲಿ 15ಕ್ಕಿಂತ ಕಡಿಮೆ ದಾಖಲಾತಿಯ ಶಾಲೆಗಳೆಂದರೆ ಮಡಾಮಕ್ಕಿಯ ಹಂಜ, ಸಿದ್ದಾಪುರದ ಬೆಚ್ಚಳ್ಳಿ, ಹೊಸಂಗಡಿಯ ಭಾಗಿಮನೆ (7), ಹೊಳೆಬಾಗಿಲು ಮಚ್ಚಟ್ಟು, ಬಳ್ಮನೆ (12), ಕೇಳ (14), ಶಾನ್ಕಟ್ಟು ಅಂಪಾರು (10), ಮರಾತೂರ್‌ ಮೊಳಹಳ್ಳಿ (13), ಕುಂದಾಪುರ ಖಾರ್ವಿಕೇರಿ (11), ಬಾಳೆಜಡ್ಡು ಹೊಸಂಗಡಿ (12). ಬೈಂದೂರಿನಲ್ಲಿ ಯಡ್ನಳ್ಳಿ ಆಜ್ರಿ, ಗೋಳಿಹೊಳೆ ಉರ್ದು (7), ರಮಣಕೊಡ್ಲು ಆಜ್ರಿ, ಹೊಸಬಾಳು ಹಳ್ಳಿಹೊಳೆ, ಆಜ್ರಿಗದ್ದೆ, ಕುಳ್ಳಂಬಳ್ಳಿ, ಬಸ್ರಿಬೇರು (14), ದೇವರಬಾಳು ಹಳ್ಳಿಹೊಳೆ, ಹಾಲಾಡಿ ಕೆರಾಡಿ (6), ಆರ್ಗೋಡು (2), ಯೋಜನಾನನಗರ, ಕರ್ಕುಂಜೆ, ಹಂದಕುಂದ ಕರ್ಕುಂಜೆ (13), ಮಾವಿನಕಾರು, ಮಾವಿನಗುಳಿ (11), ಹಾಲ್ಕಲ್‌ (5), ಬೆಳ್ಕಲ್‌ (12), ಹಡವು (2), ಹೆನ್‌ಬೇರು (5), ಹೊಸಕೋಟೆ, ಅತ್ರಾಡಿ, ಮೂಡುಮಂದ (9).

ಕಡಿಮೆ ಶಿಕ್ಷಕರು

Advertisement

ಕುಂದಾಪುರದಲ್ಲಿ ಪ್ರಾಥಮಿಕದಲ್ಲಿ 119, ಪ್ರೌಢಶಾಲೆಯಲ್ಲಿ 16 ಶಿಕ್ಷಕರ ಕೊರತೆಯಿದೆ. ಒಟ್ಟು ಶಿಕ್ಷಕರ ಮಂಜೂರಾತಿ ಪ್ರಾಥಮಿಕಕ್ಕೆ 402, ಪ್ರೌಢಶಾಲೆಗೆ 233. ಈ ವರ್ಷ 56 ಅತಿಥಿ ಶಿಕ್ಷಕರನ್ನು ಒದಗಿಸಲಾಗಿದೆ. ಶೈಕ್ಷಣಿಕ ವರ್ಷದ ಆರಂಭವೇ ಅತಿಥಿ ಶಿಕ್ಷಕರು ದೊರೆತದ್ದು ಇಲಾಖೆಯ ಈ ಬಾರಿಯ ಸಾಧನೆ. ಈ ವರ್ಷದ ಆಗಸ್ಟ್‌ನಲ್ಲಿ 24 ಮಂದಿ ವಯೋನಿವೃತ್ತಿ ಹೊಂದಲಿದ್ದಾರೆ!.

 2 ಲಕ್ಷ ರೂ.

ಶಿಕ್ಷಕರ ಅಸಮರ್ಪಕ ನಿಯೋಜನೆ ಯಿಂದಾಗಿ ಸರಕಾರಕ್ಕೆ ಒಬ್ಬ ವಿದ್ಯಾರ್ಥಿಗೆ ಶಿಕ್ಷಕರ ವೇತನಕ್ಕೆ 2 ಲಕ್ಷ ರೂ. ವೆಚ್ಚವಾದಂತಾಗುತ್ತದೆ. ಲಭ್ಯ ಮಾಹಿತಿ ಪ್ರಕಾರ 32 ವಿದ್ಯಾರ್ಥಿಗಳು ಇರುವ ಶಾಲೆಯೊಂದರ ಶಿಕ್ಷಕರ ವಾರ್ಷಿಕ ವೇತನವೇ 72 ಲಕ್ಷ ರೂ. ಆಗಿದೆ. ಇನ್ನುಳಿದಂತೆ ಬಿಸಿಯೂಟ ಸಾಮಗ್ರಿ, ಸಿಬಂದಿ ವೇತನ ಪ್ರತ್ಯೇಕ. ಬರಿದೆ ಶಿಕ್ಷಕರ ವೇತನವೇ ಒಬ್ಬ ವಿದ್ಯಾರ್ಥಿಗೆ 2 ಲಕ್ಷ ರೂ.ದಷ್ಟಾಗುತ್ತದೆ.

ಇತರ ಶಾಲೆಗಳಲ್ಲೂ ಸರಕಾರಕ್ಕೆ ಸರಿಸುಮಾರು 42 ಸಾವಿರ ರೂ. ಒಬ್ಬ ವಿದ್ಯಾರ್ಥಿಗಾಗಿ ವೆಚ್ಚವಾಗುತ್ತದೆ. ಅದೇ ಸರಕಾರ ಯಾವುದೇ ವಿದ್ಯಾರ್ಥಿ ಖಾಸಗಿ ಶಾಲೆಗೆ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಹೋದರೆ ಪಾವತಿಸುವುದು 16 ಸಾವಿರ ರೂ. ಮಾತ್ರ! ಅಕ್ಕಪಕ್ಕದಲ್ಲೇ ಕಡಿಮೆ ವಿದ್ಯಾರ್ಥಿ ಸಂಖ್ಯೆಯ ಶಾಲೆಗಳು ಬೋಧನೆ ನಿರತವಾಗಿರುವ ಉದಾಹರಣೆಯೂ ಇದೆ. ಸರಕಾರ ಪಂಚಾಯತ್‌ ಗೊಂದು ಮಾದರಿ ಶಾಲೆ ಮಾಡಿದಾಗ ಇಂತಹ ತರತಮಗಳು ಸರಿಯಾಗಬಹುದು ಎನ್ನುವ ನಿರೀಕ್ಷೆ ಶಿಕ್ಷಣಾಭಿಮಾನಿಗಳದ್ದು.

ಅಸಮರ್ಪಕ ಹಂಚಿಕೆ

ಸರಕಾರದ ನಿಯಮಾವಳಿ ಪ್ರಕಾರ 40 ವಿದ್ಯಾರ್ಥಿಗೆ ಒಬ್ಬ ಶಿಕ್ಷಕರಂತೆ ಹುದ್ದೆ ಮಂಜೂರಾಗುತ್ತದೆ. ಕುಂದಾ ಪುರದಲ್ಲಿ 135 ಶಿಕ್ಷಕರ ಕೊರತೆಯಿದ್ದರೂ 27 ವಿದ್ಯಾರ್ಥಿಗೆ ಒಬ್ಬರು ಶಿಕ್ಷಕರಿದ್ದಾರೆ. ಅಸಮರ್ಪಕ ಹಂಚಿಕೆಯಿಂದಾಗಿ ಕಳೆದ ವರ್ಷ 9 ಕಡೆ ಶೂನ್ಯ ಶಿಕ್ಷಕರ ಶಾಲೆಗಳಿದ್ದವು. 20ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದರೂ ಅಲ್ಲಿಗೆ ಇಬ್ಬರು ಶಿಕ್ಷಕರನ್ನು ನೀಡ ಲಾಗುತ್ತದೆ. ಒಂದು ಶಾಲೆಯಲ್ಲಿ ಇಬ್ಬರೇ ವಿದ್ಯಾರ್ಥಿ ಗಳಿದ್ದಾಗಲೂ ಅಲ್ಲಿಗೆ 2 ಶಿಕ್ಷಕರು, ಬಿಸಿಯೂಟ ಸಿಬಂದಿಯನ್ನು ನೇಮಿಸಲಾಗುತ್ತದೆ. ಆಗ ಹೆಚ್ಚು ಮಕ್ಕಳಿರುವ ಶಾಲೆಗೆ ಶಿಕ್ಷಕರ ಕೊರತೆ ಉಂಟಾಗುತ್ತದೆ.

ಫ‌ಲಿತಾಂಶ

ಇಷ್ಟೆಲ್ಲ ಕೊರತೆ ಇದ್ದರೂ ಈ ಬಾರಿ ಎಸೆಸೆಲ್ಸಿಯಲ್ಲಿ ಸರಕಾರಿ ಶಾಲೆಗಳೇ ಅಧಿಕ ಫ‌ಲಿತಾಂಶ ದಾಖಲಿಸಿವೆ. 8 ಶಾಲೆಗಳು ಶೇ.100 ಫ‌ಲಿತಾಂಶ ದಾಖಲಿಸಿದ್ದು ಈ ಪೈಕಿ 5 ಶಾಲೆಗಳು ಸರಕಾರಿ. ಪೂರ್ಣಾಂಕ ಪಡೆದ ಇಬ್ಬರೂ ಸರಕಾರಿ ಶಾಲೆಯವರೇ ಎನ್ನುವುದು ಹೆಗ್ಗಳಿಕೆ. ಶೇ.80ಕ್ಕಿಂತ ಕಡಿಮೆ ಫ‌ಲಿತಾಂಶ ಒಂದೇ ಶಾಲೆಗೆ (ಶೇ.71) ಬಂದುದು ಎನ್ನುವುದು ಹೆಗ್ಗಳಿಕೆ. ಇದೆಲ್ಲ ಕಾರಣದಿಂದ ಈ ಬಾರಿಯೂ ಸರಕಾರಿ ಶಾಲೆಗಳತ್ತ ಪೋಷಕರು ಮನ ಮಾಡಿದ್ದಾರೆ. ಕಳೆದ ಬಾರಿಯೂ ಖಾಸಗಿ ಶಾಲೆ ಬಿಡಿಸಿ ಸರಕಾರಿ ಶಾಲೆಗೆ ದಾಖಲಿಸಿದ್ದರು. ಈ ವರ್ಷವೂ ಅಂತಹ ಪ್ರಕರಣ ಕೆಲವೆಡೆ ನಡೆಯುತ್ತಿದೆ. ಇದು ಸರಕಾರಿ ಶಾಲೆಗಳ ಮೇಲೆ ಜನರಿಗೆ ಮೂಡಿರುವ ವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು, ದಾನಿಗಳು ನಾನಾ ನಮೂನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ದಾಖಲಾತಿ ನಡೆಯುತ್ತಿದೆ ಶಾಲಾ ದಾಖಲಾತಿ ಪ್ರಕ್ರಿಯೆ ಕಳೆದ ವರ್ಷ ಕೆಲವು ತಿಂಗಳ ಕಾಲ ಎಂಬಂತೆ ನಡೆದಿದೆ. ಈ ವರ್ಷ ಜೂ.30ರವರೆಗೆ ಪೂರ್ಣಪ್ರಮಾಣದಲ್ಲಿ ನಡೆಯುತ್ತದೆ. ಬಳಿಕವೂ ದಾಖಲಾತಿಗೆ ನಿರಾಕರಣೆ ಇಲ್ಲ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸಲು ಮುಜುಗರ ಬೇಡ. ಉತ್ತಮ ಶಿಕ್ಷಣ ದೊರೆಯುತ್ತದೆ. ಅರುಣ್‌ಕುಮಾರ್‌ ಶೆಟ್ಟಿ ಶಿಕ್ಷಣಾಧಿಕಾರಿ, ಕುಂದಾಪುರ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next