Advertisement

ಬೇಡ್ತಿ- ವರದಾ ನದಿ ಜೋಡಣೆ ಸರಕಾರ ಹಿಂದಕ್ಕೆ ಪಡೆಯಬೇಕು: ಎ.ರವೀಂದ್ರ ನಾಯ್ಕ

01:33 PM Jun 20, 2022 | Team Udayavani |

ಶಿರಸಿ: ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಬೇಡ್ತಿ- ವರದಾ ನದಿ ಜೋಡಣೆಯು ಜನಪರ ಯೋಜನೆಯಾಗದೇ, ಸರಕಾರಕ್ಕೆ ಹಣಭಾರ ಯೋಜನೆಯಾಗಿದೆ. ಅವೈಜ್ಞಾನಿಕ, ಜಿಲ್ಲೆಯ ಜನತೆಗೆ ಪ್ರಯೋಜನವಿಲ್ಲದ ಯೋಜನೆಯನ್ನು ಸರಕಾರ ಹಿಂದಕ್ಕೆ ಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ ಎ.ರವೀಂದ್ರ ನಾಯ್ಕ ಸರಕಾರವನ್ನು ಅಗ್ರಹಿಸಿದ್ದಾರೆ.

Advertisement

ರಾಷ್ಟ್ರೀಯ ಭಾವನೆ ಅಡಿಯಲ್ಲಿ ರಾಷ್ಟ್ರ, ರಾಜ್ಯದ ಯೋಜನೆಗಳಿಗೆ ಜಿಲ್ಲೆ ತ್ಯಾಗ ಮಾಡುವುದಾಗಿದೆ ವಿನಃ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನತೆಗೆ ಪೂರಕವಾದ ಯೋಜನೆಗಳು ಬರದೇ ಇರುವುದು ವಿಷಾದಕರ ಎಂದು ಹೇಳಿದ್ದಾರೆ.

ಎರಡು ಸಾವಿರದ ಎರಡುನೂರು ಕೋಟಿ ರೂಪಾಯಿ ವೇಚ್ಚದ ನದಿ ಜೋಡಣೆಯು ನೈಸರ್ಗಿಕ ವಿರೋಧಿ, ಅವೈಜ್ಞಾನಿಕ ಮತ್ತು ಪ್ರಾಯೋಗಿಕವಾಗಿ ಚಿಂತಿಸಿದಾಗ ಯಶಸ್ವಿ ಯೋಜನೆ ಆಗಲಾರದು. ಬೇಡ್ತಿಯಿಂದ ಯಲ್ಲಾಪುರ ನಗರಕ್ಕೆ ಕುಡಿಯುವ ನೀರಿನ ಯೋಜನೆಯೇ ನೆನೆಗುಂದಿಗೆ ಬಿದ್ದಿರುವಂತಹ ಹಿನ್ನೆಲೆಯಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಡಿ.ಪಿ.ಆರ್ ಸಿದ್ಧಪಡಿಸಿಕೊಂಡಿರುವುದು ಸರಕಾರದ ಜನವಿರೋಧಿ ನೀತಿಯಾಗಿದೆ. ಸರಕಾರ ಪಕ್ಷ ಅಧಿಕಾರದಲ್ಲಿ ಇರದ ಸಂದರ್ಭದಲ್ಲಿ ತೋರಿಸುವ ಪರಿಸರ ಪ್ರೇಮ, ಉತ್ಸಾಹ ಹಾಗೂ ಇಚ್ಛಾಶಕ್ತಿ ತಮ್ಮ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರ ಇದ್ದಾಗಲೂ ಪೂರ್ಣ ಪ್ರಮಾಣದಲ್ಲಿ ಹೋರಾಟದಲ್ಲಿ ಭಾಗವಹಿಸಿ ನದಿ ಜೋಡಣೆ ಯೋಜನೆ ಹಿಂದಕ್ಕೆ ಪಡೆಯಬೇಕು ಎಂದು ಜಿಲ್ಲೆಯ ಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.

ಸ್ವಾಮೀಜಿಯವರಿಗೆ ಬೆಂಬಲ
ಬೇಡ್ತಿ- ವರದಾ ನದಿ ಜೋಡಣೆಗೆ ವಿರೋಧಿ ನೇತೃತ್ವ ವಹಿಸಿರುವ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಜರಗುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವದಾಗಿ ತಿಳಿಸಿದ್ದಾರೆ.

ಜಿಲ್ಲೆಯ ಸಚಿವ ಅರೇಬೈಲ್ ಶಿವರಾಮ್ ಹೆಬ್ಬಾರ್, ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ ಹೆಗಡೆ ಹಾಗೂ ಇತರ ಜನಪ್ರತಿನಿಧಿಗಳು ಮುಕ್ತ ಮನಸ್ಸಿನಿಂದ ಸ್ವಾಮೀಜಿಯವರ ನೇತೃತ್ವದ ಹೋರಾಟಕ್ಕೆ ಬೆಂಬಲಿಸಲು ಹಿಂದೆಟು ಹಾಕದೇ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತಪಡಿಸಬೇಕು ಎಂದೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next