Advertisement

ಮನೆಯ ಚಾವಡಿಯಲ್ಲಿ ಆರಂಭಗೊಂಡ ಸಂಸ್ಥೆ ಇದೀಗ ಮಾದರಿ ಸರಕಾರಿ ಕನ್ನಡ ಶಾಲೆ

09:44 AM Dec 04, 2019 | Team Udayavani |

ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1919 ಶಾಲೆ ಸ್ಥಾಪನೆ
ಇಂಗ್ಲಿಷ್‌ ಮಾಧ್ಯಮ ತೊರೆದು ಇಲ್ಲಿಗೆ ಸೇರ್ಪಡೆಗೊಳ್ಳುತ್ತಾರೆ

ಕೋಟ: ಊರ ಮಕ್ಕಳಿಗೆ ಹತ್ತಿರದಲ್ಲೇ ಶಿಕ್ಷಣ ನೀಡುವ ಸಲುವಾಗಿ ಮನೆಯ ಚಾವಡಿಯೊಂದರಲ್ಲಿ ಆರಂಭವಾದ ಸ.ಹಿ.ಪ್ರಾ.ಶಾಲೆ ಚಿತ್ರಪಾಡಿ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ ಹಾಗೂ ಗುಣಮಟ್ಟದ ಶಿಕ್ಷಣದಲ್ಲಿ ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲೇ ಮುಂಚೂಣಿಯಲ್ಲಿದೆ.

1919ರಲ್ಲಿ ಊರಿನ ಗಣ್ಯರಾದ ಗಣಪಯ್ಯ ಐತಾಳ, ನರಸಪ್ಪ ಉಪಾಧ್ಯ,ಯಜ್ಞನಾರಾಯಣ ಉಪಾಧ್ಯ, ರಾಮತುಂಗ, ವಾಸುದೇವ ಮಧ್ಯಸ್ಥ, ನರಸಿಂಹ ಮಧ್ಯಸ್ಥ, ನಾರಾಯಣ ಉಪಾಧ್ಯಯರು ಸಭೆ ಸೇರಿ ಶಾಲೆಯನ್ನು ಸ್ಥಾಪಿಸಿದ್ದರು. 1920ರಲ್ಲಿ ಇಲ್ಲಿನ ನರಸಿಂಹ ಮಧ್ಯಸ್ಥರ ಮನೆಯ ಚಾವಡಿಯಲ್ಲಿ 1ರಿಂದ 3ನೇ ತರಗತಿ ತನಕದ ಉಡುಪಿ ತಾಲೂಕು ಬೋರ್ಡ್‌ ಶಾಲೆ ಆರಂಭವಾಗಿತ್ತು. ಆಗ ಕೃಷ್ಣಯ್ಯ ಕಲ್ಕೂರರು ಎಕೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಅನಂತರ ಸ್ಥಳೀಯ ವೆಂಕಪ್ಪಯ್ಯ ನಾಯಕ್‌, ಗಣಪಯ್ಯ ಐತಾಳ ಮತ್ತು ನಾಗಮ್ಮನವರ ಕಟ್ಟಡದಲ್ಲಿ ಶಾಲೆ ಕಾರ್ಯಾಚರಿಸಿತ್ತು.

ಶಿಕ್ಷಕರು
1987ರಲ್ಲಿ ಸ್ಥಳೀಯ ಮಿತ್ರವೃಂದ ಸಂಸ್ಥೆ ನೇತೃತ್ವದಲ್ಲಿ ಈಗಿರುವ ಸ್ಥಳದ 10 ಸೆಂಟ್ಸ್‌ ಜಾಗ ಖರೀದಿಸಿ ಹೊಸಕಟ್ಟಡ ರಚಿಸಲಾಗಿತ್ತು. ಅನಂತರ ನಾರಾಯಣ ಮಾಸ್ತರ್‌, ಪಂಜು ಮಾಸ್ತರ್‌, ರಾಜೀವ ಶೆಟ್ಟಿ, ಶಶಿಧರ ಶೆಟ್ಟಿ, ಚಂದ್ರಶೇಖರ್‌ ಶೆಟ್ಟಿ, ಗುಣರತ್ನಾ, ಉಮಾಮಾಧವಿ ಹಾಗೂ ಪ್ರಸ್ತುತ ಜ್ಯೋತಿಯವರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯಶಿಕ್ಷಕ ಅಚ್ಲಾಡಿ ಸಿದ್ಧಯ್ಯ ಶೆಟ್ಟಿಯವರು ಶಾಲೆಯ ಬೆಳವಣಿಗೆಗೆ ವಿಶೇಷವಾಗಿ ಶ್ರಮಿಸಿದ್ದಾರೆ. ಜಿಲ್ಲೆಯ ಸರಕಾರಿ ಶಾಲೆಗಳಲ್ಲೇ ಪ್ರಥಮವೆಂಬಂತೆ ಮೂರು ಸ್ವಂತ ಶಾಲಾ ವಾಹನದ ವ್ಯವಸ್ಥೆ ಇಲ್ಲಿದ್ದು, ನಾಗರಾಜ್‌ ಗಾಣಿಗ ಅಧ್ಯಕ್ಷತೆಯ ಅಕ್ಷರ ರಥ ಸಮಿತಿ ಊರಿನವರ ನೆರವಿನೊಂದಿಗೆ ಇದನ್ನು ನಿರ್ವಹಣೆ ಮಾಡುತ್ತಿದೆ. ಹಳೆ ವಿದ್ಯಾರ್ಥಿ ರವೀಂದ್ರ ನಾಯಕ್‌ ವಾಹನದ ನಿರ್ವಹಣೆಗೆ ಪ್ರತಿ ತಿಂಗಳು 10ಸಾವಿರ ಮೊತ್ತದ ಕೊಡುಗೆ ನೀಡುತ್ತಿದ್ದಾರೆ.

Advertisement

ಆಂಗ್ಲ ಮಾಧ್ಯಮ ತೊರೆದು ಬರುವ ಮಕ್ಕಳು
ಆಧುನಿಕ ತಂತ್ರಜ್ಞಾನದ ಸ್ಮಾಟ್‌ ಕ್ಲಾಸ್‌, ಎಜ್ಯುಸೆಟ್‌, ಕಂಪ್ಯೂಟರ್‌ ತರಬೇತಿ, ಗ್ರಂಥಾಲಯ, 1ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಲಿಕೆ ವ್ಯವಸ್ಥೆ ಇದೆ. ಪ್ರಸ್ತುತ 294 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 10 ಶಿಕ್ಷಕರು, 3ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವನ್ನು ಮೆಚ್ಚಿ ಪ್ರತಿ ವರ್ಷ ಆಂಗ್ಲಮಾಧ್ಯಮವನ್ನು ತೊರೆದು ಐದಾರು ವಿದ್ಯಾರ್ಥಿಗಳು ಇಲ್ಲಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಸಾಧಕ ಹಳೆ ವಿದ್ಯಾರ್ಥಿಗಳು
ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಸುರೇಶ್‌ ತುಂಗ, ಇಸ್ರೋ ವಿಜ್ಞಾನಿ ಸೌಭಾಗ್ಯ, ಖ್ಯಾತ ಮೂಳೆತಜ್ಞ ಡಾ|ಜನಾರ್ಧನ ಐತಾಳ, ಖ್ಯಾತ ಹೃದಯ ತಜ್ಞೆ ಡಾ|ಪ್ರಭಾವತಿ, ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿ ಚಂದ್ರ ಪೂಜಾರಿ, ಭಾರ ಎತ್ತುವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಸೌಜನ್‌ ಕುಮಾರ್‌ ಮತ್ತು ವಿವಿಧ ರಂಗದ ಸಾಧಕರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಕಾರಂತರೊಂದಿಗೆ ನಂಟು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರು ಸಾಲಿಗ್ರಾಮದಲ್ಲಿ ನೆಲೆಸಿದ್ದಾಗ ಪ್ರತಿದಿನ ಈ ಮಾರ್ಗವಾಗಿ ವಾಯುವಿಹಾರಕ್ಕೆ ಬಂದು ಶಾಲೆಯ ಜಗಳಿಯಲ್ಲಿ ಕುಳಿತು ವಿಶ್ರಮಿಸುತ್ತಿದ್ದರು.

ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು, ಊರಿನವರು, ಅಕ್ಷರರಥ ಸಮಿತಿ, ಶಾಲಾಭಿವೃದ್ಧಿ ಸಮಿತಿ, ನಮ್ಮ ಶಿಕ್ಷಕವೃಂದ, ಸ್ಥಳೀಯ ಗಿರಿಫ್ರೆಂಡ್ಸ್‌ ಮತ್ತು ಸಂಘ-ಸಂಸ್ಥೆಗಳ ಸಹಕಾರ ಸಾಕಷ್ಟಿದೆ.
-ಜ್ಯೋತಿ, ಮುಖ್ಯ ಶಿಕ್ಷಕಿ

ನಾವು ಅಭ್ಯಾಸ ಮಾಡುತ್ತಿದ್ದ ಕಾಲದಲ್ಲೇ ಇಲಾಖೆ ಮಟ್ಟದಲ್ಲಿ ಇದು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿತ್ತು. ಇಂದು ಜಿಲ್ಲೆಯ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದಿರುವುದು ಹಳೆ ವಿದ್ಯಾರ್ಥಿಗಳಾದ ನಮಗೆ ಸಂತಸತಂದಿದೆ..
-ಮಂಜುನಾಥ ನಾೖರಿ, ಹಳೆ ವಿದ್ಯಾರ್ಥಿ

-  ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next