Advertisement

ಕೋಟಿ ಕೋಟಿ ಸುರಿದರು ಸೋರುತ್ತಿದೆ ಆಸ್ಪತ್ರೆ ಸೂರು

05:29 PM Aug 31, 2021 | Team Udayavani |

ಸಿಂಧನೂರು: ಇಲ್ಲಿನ ನೂರು ಹಾಸಿಗೆ ಸಾರ್ವಜನಿಕ ಆಸ್ಪತ್ರೆಯ ನವೀಕರಣಕ್ಕಾಗಿ ಬರೋಬ್ಬರಿ 1 ಕೋಟಿ ರೂ. ಖರ್ಚಾಗಿದೆ. ಆದರೂ ಇಲ್ಲಿನ ಆಸ್ಪತ್ರೆ ಮಳೆ ಬಂದಾಗ ಸೋರುತ್ತಿರುವ ಪರಿಣಾಮ ಬಹುತೇಕ ವಾರ್ಡ್‌ಗಳಿಗೆ ಬೀಗ ಜಡಿಯಲಾಗಿದೆ.

Advertisement

ಇಲ್ಲಿನ ಸರಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಬಡವರ ಸೇವೆ ಅಣಿಗೊಳಿಸಲು ಶಾಸಕ ವೆಂಕಟರಾವ್‌ ನಾಡಗೌಡ ಅವರು ಶ್ರಮಿಸುತ್ತಿದ್ದರೆ, ಅದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿನ ನವೀಕರಣ ಕೆಲಸವನ್ನು ನಿಭಾಯಿಸಲಾಗಿದೆ. ಕಾಮಗಾರಿ ಪೂರ್ಣ ಎಂಬ ವರದಿಯನ್ನು ಸ್ವೀಕರಿಸಿ ಅಂದಿನ ಮುಖ್ಯ ವೈದ್ಯಾಧಿಕಾರಿ ಡಾ|ಸುರೇಶಗೌಡ ಹಸ್ತಾಂತರ ಮಾಡಿಕೊಂಡ ಬಳಿಕ ಗುತ್ತಿಗೆದಾರರು ಪಾರಾಗಿದ್ದಾರೆ. ಸ್ವಾರಸ್ಯ ಎಂದರೆ ಆ ಬಳಿಕ 1 ಕೋಟಿ ರೂ. ವೆಚ್ಚದ ಕಾಮಗಾರಿಯ ಕಡತವೂ ಕಾಣೆಯಾಗಿದೆ.

ಏನಿದು ಸ್ಥಿತಿಗತಿ: ಕಲಬರುಗಿ ಮೂಲದ ಗುತ್ತಿಗೆದಾರರು 1ಕೋಟಿ ರೂ. ವೆಚ್ಚದ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಆರಂಭದಲ್ಲಿ ಆಗಮಿಸಿ ನೆಲಹಾಸು ಕೆಲಸ ಮಾಡಿದ್ದಾರೆ. ನಂತರದಲ್ಲಿ ಕಿಟಕಿ, ಬಾಗಿಲು ದುರಸ್ತಿ ಮಾಡುವ ಕೆಲಸವನ್ನು ಅಲ್ಲಲ್ಲಿ ನಿಭಾಯಿಸಿದ್ದಾರೆ. ಇದರೊಟ್ಟಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಾಗ ಕೈಚಳಕ ತೋರಿದ್ದಾರೆ. ಜತೆಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಏನೇನು ಕೆಲಸ ಆಗಬೇಕಿತ್ತು
ಎಂಬುದನ್ನು ಯಾರೊಬ್ಬರೂ ನೋಡಿಲ್ಲ. ಅಲ್ಲಲ್ಲಿ ಹೊಸ ಡೋರ್‌, ಕಿಟಕಿಗಳಿಗೆ ಕರ್ಟನ್‌-ನೆಲಹಾಸು ಮಾತ್ರ ಇಲ್ಲಿನ ಆಸ್ಪತ್ರೆಯಲ್ಲಿ ನೋಡಬಹುದು. ಇವೆಲ್ಲ 1 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಬಂದಿವೆ ಎನ್ನುವ ವೈದ್ಯರು ಕೂಡ ಅಚ್ಚರಿಯನ್ನೇ ವ್ಯಕ್ತಪಡಿಸುತ್ತಾರೆ

ಬಹುತೇಕ ವಾರ್ಡ್‌ ಬಂದ್‌
ಸರಕಾರಿ ಆಸ್ಪತ್ರೆಯಿಂದ ಶೌಚಾಲಯ ಸೇರಿದಂತೆ ಇತರೆ ಕಡೆಯಿಂದ ನೀರು ಹೊರ ‌ಹೋಗಲು ಹಾಕಿದ ಪೈಪ್‌ಲೈನ್‌ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ ಬಹುತೇಕ ಕಡೆ ಬಾಗಿಲುಗಳೇ ಇಲ್ಲ. ಹಳೇ ಬಾಗಿಲುಗಳನ್ನೇ ಪುನರ್‌ ಜೋಡಿಸಿ ಕೈಚಳಕ ತೋರಿಸಲಾಗಿದೆ. ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರವಿರುವ ವಿಶೇಷ ವಾರ್ಡ್‌ ಮಳೆ ನೀರಿನ ಸೋರಿಕೆ ಭೀತಿಯಿಂದ ಬಂದ್‌ ಮಾಡಲಾಗಿದೆ. ಮಳೆ ಬಂದಾಗ ಇಲ್ಲಿನ
ಮಕ್ಕಳು ನೀರಲ್ಲಿ ತೋಯ್ದು ತೊಪ್ಪೆಯಾಗುವ ಆತಂಕ ‌ ಕಾಡಿದೆ. ಇನ್ನು ಮಕ್ಕಳ ವಾರ್ಡ್‌ (ಕೋವಿಡ್‌ ಸಂದರ್ಭದ ವಿಶೇಷ ವಾರ್ಡ್‌)ಗೂ ಬೀಗ ಹಾಕಲಾಗಿದೆ. ಕಾರಣ ಮಳೆಬಂದಾಗ ಸೋರುವ ಭೀತಿ ಎನ್ನುತ್ತಾರೆ ವೈದ್ಯರು. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಆಗಮಿಸುವ ‌ ರೋಗಿಗಳನ್ನು ದಾಖಲಿಸುವ ಜನರಲ್‌ ವಾರ್ಡ್‌ಗೂ ಕೂಡ ಬೀಗ ಬಿದ್ದಿದೆ. ಅದು ಕೂಡ ಅಲ್ಲಿನ ದುರಾವಸ್ತೆ ಕಾರಣ ಎನ್ನಲಾಗುತ್ತಿದೆ. ಎಲ್ಲ ವಾರ್ಡ್‌ಗೂ ಬೀಗ ‌ಹಾಕಿ, ಅನಿವಾರ್ಯಕ್ಕೆ ಎಂಬಂತೆ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ

ಇದನ್ನೂ ಓದಿ:ಆತ್ಮರಕ್ಷಣೆಗೆ ಮಹಿಳೆಯರಿಗೆ ಬಂದೂಕು ಲೈಸನ್ಸ್ ಕೊಡಿ: ಆನಂದ್ ಸಿಂಗ್

Advertisement

ಏನೂ ಕೇಳಬೇಡಿ ಅಂತಾರೆ
ಇಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನು ಈ ಬಗ್ಗೆ ವಿಚಾರಿಸಿದಾಗ, ಗುತ್ತಿಗೆದಾರರು ಒಳಚರಂಡಿಗೆ ನೀರು ಹಾಕಿ ಹೊರ ಹೋಗುವುದನ್ನು
ತೋರಿಸಲಾಗಿದೆ. ಮತ್ತೆ ಏನನ್ನೂ ಕೇಳಬೇಡಿ. ನಮ್ಮ ಬಳಿ ಪೂರಕ ಚಿತ್ರಗಳಿವೆ ಎನ್ನುತ್ತಿದ್ದಾರೆ. ಗಮನಾರ್ಹ ಎಂದರೆ ವಾಸ್ತವದಲ್ಲಿ ಯಾವ ಒಳಚರಂಡಿಯೂ ಕೂಡ ಸಂಪರ್ಕ ಹೊಂದಿಲ್ಲ. ಚಾವಣಿ ಮೇಲಿನ ನೀರು ಬಿದ್ದಾಗ ಹೊರ ಹೋಗಲಿಕ್ಕೂ ಸಂಪರ್ಕ ಕಲ್ಪಿಸಿಲ್ಲ. ಈ ಎಲ್ಲ ವಿಷಯ ಗಳು ಶಾಸಕ ವೆಂಕಟರಾವ್‌ ನಾಡಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಕೇಳಿ ಬಂದಿವೆ. ಕೋಟಿ ರೂ. ಬಿಲ್‌ ಪಡೆದವರು ಮಾತ್ರ ದಾಖಲಾತಿಯಲ್ಲಿ ವಿಜಯೋತ್ಸವ ಸಾಧಿಸಿದ್ದು, ಆಸ್ಪತ್ರೆಯನ್ನು ಅಧೋಗತಿಗೆ ತಳ್ಳಿದ್ದಾರೆ. ಆಸ್ಪತ್ರೆ ಮಳೆ ಬಂದಾಗ ಸೋರಿಕೆಯಾಗುತ್ತಿರುವುದ ರಿಂದ ವೈದ್ಯರು ಪಾಲಿಗೆ ಬಂದಷ್ಟು ಕಟ್ಟಡ ಮಾತ್ರ ಬಳಸುತ್ತಿರುವುದು ವಿಪರ್ಯಾಸ.

ಈ ದುರಸ್ತಿ ಕೆಲಸವಾದರೂ ಏನು?
ಯಾವುದೇ ತಾಂತ್ರಿಕ ಉಪಕರಣಗಳ ಖರೀದಿಯನ್ನು1 ಕೋಟಿ ರೂ. ವೆಚ್ಚದಕೆಲಸದಲ್ಲಿ ಸೇರಿಲ್ಲ. ಈಗಾಗಲೇ ಇರುವ ಸಾರ್ವಜನಿಕಆಸ್ಪತ್ರೆ ಯನ್ನು ನವೀಕರಣ ಮಾಡುವುದು ಮಾತ್ರ ಈ ಕೆಲಸದ ವ್ಯಾಪ್ತಿಗೆ ಒಳಪಟ್ಟಿದೆ. ಹೀಗಿರುವಾಗಲೂ ಬಹುತೇಕ ಕಡೆ ಕಿಟಕಿಯಿಲ್ಲ, ಬಾಗಿಲಿಲ್ಲ. ಗಮನಾರ್ಹ ಎಂದರೆ ಐಸಿಯು ಘಟಕಕಟ್ಟಡವೂ ದುರ್ಬಲಗೊಂಡಿದೆ. ಚಾವಣಿ ಪದರು,ಕಟ್ಟಡ ಶಿಥಿಲಗೊಂಡಿದ್ದರೂ ಅಲ್ಲಿ ಕನಿಷ್ಠ ತೇಪೆ ಕೆಲಸವೂ ನಡೆದಿಲ್ಲ. ನೆಲಹಾಸು, ಮೂರ್‍ನಾಲ್ಕು ಡೋರ್‌,ಕರ್ಟನ್‌ಕಣ್ಣಿಗೆ ಬೀಳುತ್ತವೆ. ಇನ್ನು ಆಸ್ಪತ್ರೆಯಿಂದ ತ್ಯಾಜ್ಯ ಹೊರ ಸಾಗಿಸಲು ಅಳವಡಿಸಿದ ಒಳಚರಂಡಿಗೂ ಸಂಪೂರ್ಣ ಸಂಪರ್ಕ ಕಲ್ಪಿಸಲಾಗಿಲ್ಲ. ಆಸ್ಪತ್ರೆ ಹಿಂಬದಿಯಲ್ಲೇ ನೀರು ಶೇಖರಣೆಯಾಗುತ್ತಿದೆ. ಯಾವತ್ತೋ ನಿರ್ಮಿಸಿದ ಚರಂಡಿ ಫೋಟೋಗಳನ್ನೇ ಈ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವ ದೂರುಕೇಳಿ ಬರುತ್ತಿದೆ.

ಕಾಮಗಾರಿ
ಪೂರ್ಣಗೊಳಿಸಿದಾಗ ಮುಖ್ಯ ವೈದ್ಯಾಧಿಕಾರಿ ನೋಡಬೇಕಿತ್ತು. ಏನೂ ನೋಡದೇ ಹಸ್ತಾಂತರ ಮಾಡಿಕೊಂಡಿದ್ದು, ತಪ್ಪು. ಸಂಬಂಧಿಸಿದ ಎಇಇಗೆ ಬರಲುಹೇಳಿರುವೆ. ಅಗತ್ಯಕೆಲಸ ಪೂರ್ಣಗೊಳಿಸಲು ಮತ್ತೊಮ್ಮೆ ಸೂಚನೆ ನೀಡುತ್ತೇನೆ.
-ವೆಂಕಟರಾವ್‌ ನಾಡಗೌಡ
ಶಾಸಕರು, ಸಿಂಧನೂರು

ಕೋಟಿ ರೂ.ನಕಾಮಗಾರಿ ಕಡತ ಕಳೆದು ಹೋಗಿಲ್ಲ. ನನ್ನ ಬಳಿಯಿದೆ. ಬೇಕಾದಾಗ ಕೊಡುವೆ. ಆರೋಗ್ಯ ಇಲಾಖೆಯ ತಾಂತ್ರಿಕ ವಿಭಾಗ ಫೈನಲ್‌ ಮಾಡಿದ ವರದಿ ಆಧರಿಸಿ,ಹಸ್ತಾಂತರ ಮಾಡಿಕೊಂಡಿರುವೆ.
-ಡಾ|ಸುರೇಶಗೌಡ ನೇತ್ರ ತಜ್ಞರು

ನನಗೇನು ಗೊತ್ತಿಲ್ಲ.ಹಿಂದೆ ಏನಾಗಿತ್ತೋ. ಆ ಕಡತವನ್ನು ನಾನುಕೂಡ ನೋಡಿಲ್ಲ. ಈ ಬಗ್ಗೆ ಸಂಬಂಸಿದವರ ಗಮನಕ್ಕೆ ಈಗಾಗಲೇ ತರಲಾಗಿದೆ.
-ಡಾ|ಹನುಮಂತರೆಡ್ಡಿ, ಮುಖ್ಯ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next