Advertisement

ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ : ಶಾಸಕ ಎಚ್‌.ಕೆ. ಪಾಟೀಲ

08:50 PM May 27, 2021 | Team Udayavani |

ರಾಣಿಬೆನ್ನೂರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್‌.ಕೆ.ಪಾಟೀಲ ಗಂಭೀರ ಆರೋಪ ಮಾಡಿದರು.

Advertisement

ನಗರದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭ ದಿಂದಲೂ ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕೊರೊನಾ ಉಲ್ಬಣವಾಗುತ್ತಿದ್ದಂತೆ ನಿಯಂತ್ರಣಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಲ್ಲೂ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಆಕ್ಸಿಜನ್‌, ವೆಂಟಿಲೇಟರ್‌ ಬೆಡ್‌ಗಳಿಲ್ಲದೇ ಜನರು ಕೊರೊನಾ ಸೋಂಕಿನಿಂದ ಸರತಿ ಸಾವು ಕಾಣುವಂತಾಯಿತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿದೇಶಗಳಿಗೆ ಆಕ್ಸಿಜನ್‌ ರಪು¤ ಮಾಡಿದ್ದು ದೇಶದ ದುರಂತಕ್ಕೆ ಎಡೆ ಮಾಡಿಕೊಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ, ಲಾಕ್‌ಡೌನ್‌ ನಿಯಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ಸರ್ಕಾರ ಬಹಳ ನಿಷ್ಕಾಳಜಿ ವಹಿಸಿದೆ. ಇದರಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ ಎಂದರು.

ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹಳಷ್ಟು ಇಳಿಮುಖವಾಗಿದ್ದು, ಇದೀಗ ಸಾವಿನ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವುದು ಖೇದಕರ ಸಂಗತಿಯಾಗಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ 23 ವೆಂಟಿಲೆಟರ್‌ಗಳು ಕಾರ್ಯನಿರ್ವಹಿಸದೆ ಮೂಲೆಗುಂಪಾಗಿವೆ. ಜಿಲ್ಲೆಯಲ್ಲಿ 721 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೂಕ್ತ ಚಿಕಿತ್ಸೆ ಇಲ್ಲದೇ ಮಕ್ಕಳು ಪರದಾಡುವಂತಾಗಿದೆ ಎಂದರು.

ಔರಂಗಬಾದ್‌ ತಜ್ಞರು ಕೇಂದ್ರದಿಂದ ಖರೀದಿಸಲಾದ ವೆಂಟಿಲೆಟರ್‌ಗಳು ಹಾಗೂ ಅದರ ಪರಿಕರಗಳು ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಿದರೂ ಸಹ ಸರ್ಕಾರ ಅವುಗಳ ಬಳಕೆ ಮಾಡಿದೆ. ಅಲ್ಲದೇ, ಅವುಗಳು ಕಳಪೆ ಮಟ್ಟದ್ದಾಗಿದ್ದು, ಕೊರೊನಾ ಸೋಂಕಿತರ ಸಾವು ಹೆಚ್ಚಾಗಲು ಕಾರಣವಾಗಿವೆ ಎಂದು ಹೇಳಬಹುದು. ಈ ವೆಂಟಿಲೆಟರ್‌ಗಳನ್ನು ಆಸ್ಪತ್ರೆಯಲ್ಲಿ ಡಬ್ಬಿಗಳನ್ನು ಇಟ್ಟಂತೆ ಇಡಲಾಗಿದೆ. ಇಲ್ಲಿಯವರೆಗೂ ರೋಗಿಗಳ ಆರೋಗ್ಯ ರಕ್ಷಣೆಗೆ ಬಳಕೆಯಾಗಿಲ್ಲ. ಇದೂ ಸಹ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದೀಗ ಸೋಂಕಿತರ ಪರೀಕ್ಷೆ ಮಾಡಿಸುವಲ್ಲಿ ಸರ್ಕಾರ ಮಹಾ ನಾಟಕ ಮಾಡಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

Advertisement

ಸರ್ಕಾರ ಇನ್ನು ಮುಂದಾದರೂ ಜನರ ಜತೆ ಹಾಗೂ ಸೋಂಕಿತರ ಜೀವನದ ಜತೆಗೆ ಚಲ್ಲಾಟವಾಡುವುದನ್ನು ಕೈಬಿಡಬೇಕು. ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ಸೋಂಕಿತರಿಗೆ ಅಗತ್ಯ ಔಷ ಧಗಳನ್ನು ಕಲ್ಪಿಸಬೇಕು. ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್‌ ನಿಯಂತ್ರಿಸಲು ಹಳ್ಳಿಗಳಲ್ಲಿಯೇ ಪರೀಕ್ಷೆಗಳನ್ನು ನಡೆಸಬೇಕು. ಅಂದಾಗ ಮಾತ್ರ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದರು. ಪಿಕೆಕೆ ಇನ್ಸಿಟಿವ್‌ ಸಂಸ್ಥೆ ಅಧ್ಯಕ್ಷ ಪ್ರಕಾಶ ಕೋಳಿವಾಡ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ವಿಪ ಸದಸ್ಯೆ ಶ್ರೀನಿವಾಸ ಮಾನೆ, ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ.ಹಿರೇಮಠ, ಡಾ|ಆರ್‌.ಎಂ.ಕುಬೇರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next