Advertisement

ಇನ್ನೂ ಸಿಕ್ಕಿಲ್ಲ ಸರಕಾರದ ಸಹಾಯ ಧನ !

11:41 PM Jun 20, 2020 | Sriram |

ಮಹಾನಗರ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದು, ಅದರಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿಗಳು 5,000 ರೂ. ಸಹಾಯಧನ ಇತ್ತೀಚೆಗೆ ಬಿಡುಗಡೆ ಮಾಡಿದ್ದರೂ, ದ.ಕ. ಜಿಲ್ಲೆಯ ಶೇ.90ರಷ್ಟು ಚಾಲಕರಿಗೆ ಇನ್ನೂ ಸಹಾಯಧನ ದೊರೆತತಿಲ್ಲ.

Advertisement

ಮುಖ್ಯಮಂತ್ರಿ ಸಹಾಯಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 22 ಸಾವಿರಕ್ಕೂ ಮಿಕ್ಕಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಸುಮಾರು 18 ಸಾವಿರ ಮಂದಿ ಆಟೋ ಚಾಲಕರಿದ್ದು, ಮಂಗಳೂರು ನಗರದಲ್ಲಿಯೇ ಸುಮಾರು 9 ಸಾವಿರ ಮಂದಿ ಚಾಲಕರಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ 5 ಸಾವಿರ ಮಂದಿ ಟ್ಯಾಕ್ಸಿ ಚಾಲಕರು ಫಲಾನುಭವಿಗಳಿದ್ದಾರೆ.ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸೇವಾ ಸಿಂಧೂ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈ ಸಮಯದಲ್ಲಿ ಅರ್ಜಿದಾರರಿಗೆ ಕೆಲವೊಂದು ಗೊಂದಲ ಉಂಟಾಗಿತ್ತು. ಕೆಲವು ಬಾರಿ ಪೋರ್ಟಲ್‌ ಸರ್ವರ್‌ ಸಮಸ್ಯೆ ಉಂಟಾದರೆ, ಆಧಾರ್‌ ಕಾರ್ಡ್‌ ಮತ್ತು ಡ್ರೈವಿಂಗ್‌ ಲೈಸನ್ಸ್‌ನಲ್ಲಿ ಅರ್ಜಿದಾರರ ಹೆಸರಿನ ಪದ ಬೇರೆ ಬೇರೆ ಇದ್ದರೆ ಆ ಅರ್ಜಿ ಸ್ವೀಕೃತಗೊಳ್ಳುತ್ತಿರಲಿಲ್ಲ. ಇನ್ನು, ಮಾಹಿತಿಯೆಲ್ಲ ತುಂಬಿದ ಬಳಿಕ ಕೊನೆಗೆ ಸಲ್ಲಿಕೆ ಮಾಡುವ ವೇಳೆ ವೆಬ್‌ಸೈಟ್‌ನಲ್ಲಿ ಎರರ್‌ ಎಂದು ತೋರಿಸುತ್ತಿತ್ತು. ಈ ಕಾರಣಕ್ಕೆ ಕೆಲವು ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಹಾಯಧನ ಪಡೆಯಲು ವಂಚಿತರಾಗಿದ್ದರು.

ಫಲಾನುಭವಿಗಳಿಗೆ ಶೀಘ್ರ ಹಣ ತಲುಪಿಸಿ
ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ದಕ್ಷಿಣ ಕನ್ನಡ ಜಿಲ್ಲೆಯ ಶೇ.90ರಷ್ಟು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರದ ಸಹಾಯಧನ ಸಿಕ್ಕಿಲ್ಲ. ಈ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದ್ದು, ಕೂಡಲೇ ಫಲಾನುಭವಿಗಳಿಗೆ ಹಣ ತಲುಪಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next