Advertisement

ಮೀನಕಳಿ ಗ್ರಾಮಸ್ಥರ ಓಡಾಟಕ್ಕೆ ಗೂಡ್ಸ್‌ ರೈಲು ಹಳಿ ಅಡ್ಡಿ!

09:04 PM Oct 11, 2019 | mahesh |

ವಿಶೇಷ ವರದಿ: ಬೈಕಂಪಾಡಿ: ಮೀನಕಳಿ ಗ್ರಾಮವು ಬೈಕಂಪಾಡಿ ಹೆದ್ದಾರಿಯಿಂದ ಅನತಿ ದೂರದಲ್ಲಿದ್ದರೂ ಗೂಡ್ಸ್‌ ರೈಲು ಹಳಿಯಿಂದಾಗಿ ಇಲ್ಲಿನ ಗ್ರಾಮಸ್ಥರು ಸುಮಾರು ಎರಡು ಮೂರು ಕಿ.ಮೀ. ಸುತ್ತು ಬಳಸಿ ಓಡಾಟ ನಡೆಸಬೇಕಾದ ಅನಿವಾರ್ಯ ಉಂಟಾಗಿದೆ. ಶಾಲಾ ಮಕ್ಕಳು, ಮಹಿಳೆಯರ ಸಹಿತ ಪಾದಚಾರಿಗಳು ಗೂಡ್ಸ್‌ ರೈಲನ್ನು ಹತ್ತಿ ಇಳಿದು ಅಪಾಯಕಾರಿಯಾಗಿ ಬಸ್‌ ನಿಲ್ದಾಣ ತಲುಪುವಂತಾಗಿದೆ.

Advertisement

ನವಮಂಗಳೂರು ಬಂದರಿಗೆ ಭೂಮಿಯನ್ನು ಸ್ವಾ ಧೀನ ಪಡಿಸಿಕೊಳ್ಳುವ ಸಂದರ್ಭ ಮೀನಕಳಿಯ ಗ್ರಾಮ ಈ ಭಾಗದಲ್ಲೇ ಉಳಿದುಕೊಂಡಿದ್ದು ಮೂಲ ಸೌಕ ರ್ಯದಿಂದ ವಂಚಿತವಾಗಿದೆ. ಉಚಿತ ಬಸ್‌ ಓಡಾಟ ನಡೆಸುವ ಭರವಸೆ ಹಾಗೆಯೇ ಉಳಿದುಕೊಂಡಿದೆ. ಇನ್ನು ಪಾದಚಾರಿಗಳಿಗಾಗಿ ಮೇಲ್ಸೇತುವೆ ಮಾಡಿ ಕೊಡಿ ಎಂದು ಊರಿನ ಗ್ರಾಮಸ್ಥರು ಎನ್‌ಎಂಪಿಟಿ, ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸಾಧ್ಯವಾಗಿಲ್ಲ. ರೈಲ್ವೇ ಇಲಾಖೆಯ ವಿಳಂಬ ಧೋರಣೆ ಹಾಗೂ ಅನುಮತಿ ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ.

ಗ್ರಾಮದ ಭೌಗೋಳಿಕ ಹಿನ್ನೆಲೆ
ಪಣಂಬೂರು, ಬೈಕಂಪಾಡಿ ಬಸ್‌ ನಿಲ್ದಾಣದ ಕಡೆಗೆ ಹೋಗುವ ರಸ್ತೆಯು ಸುಮಾರು 60-70 ವರ್ಷಗಳಿಂದಲೂ ಇದೆ. ಜನರು ಈ ಮಾರ್ಗ ವಾಗಿಯೇ ವಾಹನದಲ್ಲಿ ಹಾಗೂ ಕಾಲ್ನಡಿ ಗೆಯಲ್ಲಿ ದಿನನಿತ್ಯ ಸಾಗುತ್ತಿದ್ದಾರೆ. ಈ ಊರಿನಲ್ಲಿ ಸಾವಿರದಷ್ಟು ಮನೆಗಳಿವೆ. 30 ಸಾವಿರಕ್ಕೂ ಮಿಗಿಲಾದ ಜನಸಂಖ್ಯೆ, ಎರಡು ಶಾಲೆ, 5 ಅಂಗನವಾಡಿ ಇದೆ. ಊರಿನ ಸಾವಿರಾರು ಮಕ್ಕಳು, ದುಡಿಯುವವರು, ಬೈಕಂಪಾಡಿ – ಪಣಂಬೂರು ಮಾರ್ಗವಾಗಿಯೇ ದಿನನಿತ್ಯ ಸಾಗುತ್ತಾರೆ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಸಂಬಂಧಪಟ್ಟ ರೈಲು ಹಳಿಗಳ ಮೇಲೆ ನಾಲ್ಕೈದು ತಾಸಿಗೂ ಮಿಗಿಲಾಗಿ ರಸ್ತೆಗೆ ಅಡ್ಡಲಾಗಿ ಗೂಡ್ಸ್‌ ರೈಲುಗಳು ನಿಂತು ಬಿಡುತ್ತವೆ. ಕೆಲವು ಬಾರಿ ಒಂದೆರಡು ದಿನವೂ ಇರುತ್ತದೆ. ಆಗ ಜನರು ವಿಧಿ  ಇಲ್ಲದೆ ಈ ರೈಲುಗಳ ಅಡಿ ಭಾಗದಿಂದ ಅಥವಾ ಹತ್ತಲು ಆಗುವವರು ಮೇಲಿನಿಂದ ಹತ್ತಿ ಹೋಗುತ್ತಿದ್ದಾರೆ. ಕೆಲವು ಬಾರಿ ಮಕ್ಕಳು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ.

ರಸ್ತೆ ಮುಚ್ಚಲು ನಿರ್ಧಾರ?
ನವಮಂಗಳೂರು ಬಂದರು ಖಾಸಗೀಕರಣಕ್ಕೆ ತೆರೆದುಕೊಳ್ಳುವ ಮುನ್ಸೂಚನೆ ಲಭಿಸಿದ್ದು, ಕೆಲವು ಬರ್ತ್‌ಗಳು ಖಾಸಗಿ ಪಾಲಾಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲ ನವಮಂಗಳೂರು ಬಂದರಿನಿಂದ ಸರಕುಗಳನ್ನು ಗೂಡ್ಸ್‌ ರೈಲು ಬೋಗಿಗಳಿಗೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಇದು ಚಾಲ್ತಿಗೆ ಬಂದಾಗ ಗೂಡ್ಸ್‌ ಓಡಾಟ ಅಧಿಕವಾಗಲಿದೆ. ಆಗ ಇಲ್ಲಿ ಸಾರ್ವಜನಿಕರ ಓಡಾಟ ಅಪಾಯಕಾರಿ ಎಂದು ಈ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗುತ್ತದೆ ಎನ್ನಲಾಗುತ್ತಿದೆ.

ಮೇಲ್ಸೇತುವೆಗಾಗಿ ಹೋರಾಟ
ಮೀನಕಳಿ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸ ಬೇಕೆಂಬುದು ಹಲವಾರು ವರ್ಷಗಳ ಬೇಡಿಕೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅದು ಕಡತದಲ್ಲೇ ಬಾಕಿಯಾಗಿದೆ. ಇದೀಗ ಸ್ಥಳೀಯರು ಮತ್ತೆ ಬಂದರು ಮಂಡಳಿಗೆ, ಸಂಸದರಿಗೆ, ಶಾಸಕರಿಗೆ ಮನವಿ ನೀಡಿದ್ದಾರೆ. ಶೀಘ್ರ ಮೇಲ್ಸೇತುವೆ ನಿರ್ಮಿಸಿ ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

Advertisement

ಶಾಶ್ವತ ಪರಿಹಾರಕ್ಕೆ ಪ್ರಯತ್ನ
ಇಲ್ಲಿನ ಜನರ ಬೇಡಿಕೆ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ನವಮಂಗಳೂರು ಬಂದರು ಅ ಧಿಕಾರಿಗಳ ಬಳಿ ಚರ್ಚಿಸಲಾಗಿದೆ. ರೈಲ್ವೇ ಇಲಾಖೆಯ ಅನುಮತಿಯೂ ಅಗತ್ಯವಿರುವುರಿಂದ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ನಡೆಸುತ್ತಿದ್ದೇನೆ.
 - ಡಾ| ಭರತ್‌ ಶೆಟ್ಟಿ ವೈ., ಶಾಸಕರು

ಅನುಮತಿ ಅಗತ್ಯ
ಮೀನಕಳಿಯ ಗ್ರಾಮದ ಜನರ ಓಡಾಟಕ್ಕೆ ಮೇಲ್ಸೇತುವೆ ಅಗತ್ಯವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಬಂದರು ಮಂಡಳಿ ಅ ಧಿಕಾರಿಗಳು, ಶಾಸಕರಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದೇನೆ. ರೈಲ್ವೇ ಇಲಾಖೆಯ ಅನುಮತಿಯೂ ಪಡೆದು ಶಾಶ್ವತ ವ್ಯವಸ್ಥೆ ಮಾಡಲಾಗುವುದು.
 - ನಳಿನ್‌ ಕುಮಾರ್‌ ಕಟೀಲು, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next