Advertisement

ಗಡಿ ಜಿಲ್ಲೆಯೊಂದಿಗಿತ್ತು ಉತ್ತಮ ಬಾಂಧವ್ಯ

01:03 PM Nov 13, 2018 | |

ಬೀದರ: ಕೇಂದ್ರ ಸಚಿವ ಅನಂತಕುಮಾರ್‌ ರಾಜ್ಯ ಕಂಡ ಅಪರೂಪದ ನಾಯಕ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ನಾಯಕರಲ್ಲಿ ಇವರು ಕೂಡ ಒಬ್ಬರಾಗಿದ್ದು, ಗಡಿ ಜಿಲ್ಲೆ ಬೀದರನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

Advertisement

1980ರಿಂದ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಅನಂತಕುಮಾರ್‌ ಕೂಡ ನಿರಂತರ ಸಾಥ್‌ ನೀಡಿ ಪಕ್ಷ ಬೆಳೆಸುವ ಕೆಲಸ ಮಾಡಿದ್ದಾರೆ. ಈ ಭಾಗದಲ್ಲಿ ಸೈಕಲ್‌ ಹಿಡಿದುಕೊಂಡು ಊರೂರು ಸುತ್ತಿ ಪಕ್ಷ ಸಂಘಟಿಸಿದ ಅವರು, ನೂರಕ್ಕು ಅಧಿಕ ಬಾರಿ ಈ ಭಾಗಕ್ಕೆ ಭೇಟಿ ನೀಡಿದ್ದಾರೆ.

ಹುಮನಾಬಾದ ಮಾಜಿ ಶಾಸಕ ಸುಭಾಷ ಕಲ್ಲೂರ್‌ ಅವರೊಂದಿಗೆ ಉತ್ತಮ ಸಂಪರ್ಕವಿತ್ತು. ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ಹುಮನಾಬಾದ ತಾಲೂಕಿಗೆ ಅನಂತಕುಮಾರ್‌ ಅವರು ಭೇಟಿ ನೀಡಿದ್ದಾರೆ. ಅಲ್ಲದೆ, ಕಳೆದ ವಿಧಾನ ಸಭೆ ಚುನಾವಣೆಗೂ ಮುನ್ನ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅವರು ಭಾಗವಹಿಸಿ ಭಾಷಣ ಮಾಡಿದ್ದರು.

ವಿಧಾನ ಸಭೆ ಚುನಾವಣೆ ಸಂದರ್ಭಲ್ಲಿ ಜಿಲ್ಲೆಯ ಪೈಕಿ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಚುನಾವಣೆ ಪ್ರಚಾರ ಮಾಡಿರುವುದನ್ನು ಸನ್ಮರಿಸಬಹುದಾಗಿದೆ. 

ಈ ಭಾಗದ ಅನೇಕ ವಿಧಾನ ಸಭೆ ಹಾಗೂ ಲೋಕ ಸಭೆ ಚುನಾವಣೆಯಲ್ಲಿ ಅನಂತಕುಮಾರ್‌ ಅವರು ಪ್ರಚಾರ ಮಾಡಿದ್ದಾರೆ. ಕೆಲಸ ಮಾಡಲಾಗದ ರಾಜಕಾರಣಿಗಳು ಜನಪ್ರತಿನಿಧಿಗಳಾಗಲು ನಾಲಾಯಕರು ಎಂಬ ಹರಿತವಾದ ಮಾತುಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಬಿಜೆಪಿಯ ಅನೇಕ ಮುಖಂಡರನ್ನು ಒಂದು ಕಡೆ ಸೇರಿಸಿ ಪಕ್ಷ ಸಂಘಟನೆಯ ಸಲಹೆಗಳನ್ನು ನೀಡಿ ಪಕ್ಷ ಬೆಳೆಸುವ ಕಾರ್ಯವನ್ನು ಮಾಡಿದ್ದಾರೆ. 

Advertisement

ಸಿಪೆಟ್‌ ಸಂಸ್ಥೆ ಮಂಜೂರು: ಇದೇ ವರ್ಷದ ಫೆಬ್ರವರಿ 20ರಂದು ಭಾಲ್ಕಿ ಪಟ್ಟಣದಲ್ಲಿ ಹೆದ್ದಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ನಿತಿನ್‌ ಗಡ್ಕರಿ ಅವರೊಂದಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಜಿಲ್ಲೆಯಲ್ಲಿ ಕೇಂದ್ರಿಯ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್‌) ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ನೂರು ಎಕರೆ ಭೂಮಿಯ ಪೈಕಿ ಕೇವಲ ಹತ್ತು ಎಕರೆ ಭೂಮಿ ರಾಜ್ಯ ಸರ್ಕಾರ ನೀಡಿದರೆ ಪ್ರಸಕ್ತ ವರ್ಷವೇ ಸಂಸ್ಥೆ ಪ್ರಾರಂಭಿಸುವ ಭರವಸೆ
ನೀಡಿದ್ದರು. ಇಲ್ಲಿ ತರಬೇತಿ ಪಡೆದವರು ವಿದೇಶದಲ್ಲೂ ಕೆಲ ಮಾಡಬಹುದಾದ ಯೋಜನೆ ಅವರದಾಗಿತ್ತು. ಈ ಭಾಗದ ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಈ ಸಂಸ್ಥೆ ಬೀದರ ಜಿಲ್ಲೆಯಲ್ಲಿ ಪ್ರಾರಂಭಿಸುವ ಕುರಿತು ಅಂದು ಅವರ ಭಾಷಣದಲ್ಲಿ ಹೇಳಿದ್ದರು.

ಕೇಂದ್ರ ಸಚಿವ ಅನಂತಕುಮಾರ್‌ ಅವರು ನನ್ನನ್ನು ತಮ್ಮನಂತೆ ಗುರುತಿಸಿದರು. ನಾನು ಮೊದಲನೇ ಸಲ ಸಂಸತ್ತಿಗೆ ಪ್ರವೇಶಿಸಿದ ಸಂದರ್ಭದಲ್ಲಿ ಸಂಸತ್ತಿನ ಪ್ರತಿ ಸಚಿವಾಲಯದ ಸಚಿವರಿಗೆ ಪರಿಚಯ ಮಾಡಿಸಿ, ಇವನು ನನ್ನ ತಮ್ಮ ಎಂದು ಪರಿಚಯ ಮಾಡಿಸಿದ್ದರು. ಅನೇಕ ಯೋಜನೆಗಳ ಕುರಿತು ಚರ್ಚೆಗಳನ್ನು ನಡೆಸಿದ ಸಂದರ್ಭಲ್ಲಿ ಅನಂತಕುಮಾರ ಅವರು ಉತ್ತಮ ಸ್ಪಂದನೆ ನೀಡುತ್ತಿದ್ದರು. ಗಡಿ ಜಿಲ್ಲೆಯ ಅಭಿವೃದ್ಧಿಗಾಗಿ ಅನೇಕ ರೀತಿಯ ಸಹಕಾರವನ್ನು ಅವರು ನೀಡಿದ್ದಾರೆ. ಬೀದರ ಜಿಲ್ಲೆಯ ಬಗ್ಗೆ ಅವರು ಹೆಚ್ಚು ಪ್ರೀತಿ ಹೊಂದಿದ್ದರು. ಕಾರಣ ಇಲ್ಲಿಯೇ ಸಿಪೆಟ್‌ ಸಂಸ್ಥೆ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು. ಇಂದು ಅವರ ನಿಧನದಿಂದ ಬಿಜೆಪಿಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
 ಭಗವಂತ ಖೂಬಾ, ಸಂಸದರು, ಬೀದರ

ಕೇಂದ್ರ ಸಚಿವ ಅನಂತಕುಮಾರ್‌ ನಿಧನ ಸುದ್ದಿ ನೋವುಂಟು ಮಾಡಿದೆ. ಬೆಂಗಳೂರು ದಕ್ಷಿಣದಿಂದ ಸತತವಾಗಿ ಲೋಕಸಭೆಗೆ ಆಯ್ಕೆ ಆಗುತ್ತಿರುವ ಪ್ರಭಾವಿ ಹಾಗೂ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಹಠಾತ್‌ ನಿಧನದಿಂದ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದೇವಿ ತುಳಜಾ ಭವಾನಿ ದುಃಖ ಭರಿಸುವ ಶಕ್ತಿ ನೀಡಲಿ.
 ಬಂಡೆಪ್ಪ ಖಾಶೆಂಪೂರ, ಜಿಲ್ಲಾ ಉಸ್ತುವಾರಿ, ಸಹಕಾರ ಸಚಿವರು

ಕೇಂದ್ರ ಸಚಿವ ಅನಂತಕುಮಾರ್‌ ಸರಳ, ಸಜ್ಜನಿಕೆಯ ವ್ಯಕ್ತಿ. ಬೀದರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರೊಂದಿಗೆ ಸಾಥ್‌ ನೀಡುತ್ತಿದ್ದರು. ಜಿಲ್ಲೆಯಲ್ಲಿ ಅತೀ ಹೆಚ್ಚು ಹುಮನಾಬಾದ ಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಅನೇಕ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಪಕ್ಷ ಸಂಘಟಿಸುವ ಕಾರ್ಯಕ್ಕೆ ಅವರ ಕೊಡುಗೆ ಇದೆ. ಎಲ್ಲ ರೀತಿಯ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕಂಡುಕೊಳ್ಳುವ ವ್ಯಕ್ತಿತ್ವ ಅವರದಾಗಿತ್ತು. 
 ಸುಭಾಷ ಕಲ್ಲೂರ್‌, ಮಾಜಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next